ಖಾತೆ ಹಂಚಿಕೆ ಅಸಮಾಧಾನ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಮಹತ್ವದ ಹೇಳಿಕೆ!
ಬೆಂಗಳೂರು, ಜ. 21: ಸಂಪುಟ ಸಭೆಗೆ ಗೈರಾಗುವ ಮೂಲಕ ಖಾತೆ ಹಂಚಿಕೆ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದ ಸಚಿವರುಗಳಿಗೆ ಸಿಎಂ ಯಡಿಯೂರಪ್ಪ ತಮ್ಮ ಆಪ್ತರ ಮೂಲಕ ಖಡಕ್ ಸಂದೇಶ ರವಾನಿಸಿದ್ದಾರೆ. ಇಂದು (ಜನವರಿ 21) ರಂದು ನಡೆದ ಸಚಿವ ಸಂಪುಟ ಸಭೆಯಿಂದ ದೂರ ಉಳಿಯುವ ಮೂಲಕ ಸಿಎಂ ಯಡಿಯೂರಪ್ಪ ಅವರ ಖಾತೆ ಮರುಹಂಚಿಕೆ ನಿರ್ಧಾರವನ್ನು ಕೆಲವು ಸಚಿವರು ಪ್ರಶ್ನಿಸಿದ್ದರು. ಬೆಂಗಳೂರಿನಲ್ಲಿದ್ದರೂ ಸಂಪುಟ ಸಭೆಗೆ ಗೈರು ಹಾಜರಾಗುವ ಮೂಲಕ ಬಹಿರಂಗವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.
ತಮ್ಮ ಬೆಂಬಲಿಗ ಸಚಿವರ ಮೂಲಕ ಜಂಟಿ ಸುದ್ದಿಗೋಷ್ಠಿ ನಡೆಸುವ ಮೂಲಕ ಖಡಕ್ ಸಂದೇಶವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ರವಾನಿಸಿದ್ದಾರೆ. ಜೊತೆಗೆ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಎದುರಾಗಿದ್ದ ಸಂಕಷ್ಟವನ್ನು ಪರಿಹರಿಸಿದಂತೆ, ಖಾತೆ ಹಂಚಿಕೆಯ ಅಸಮಾಧಾನವನ್ನು ತಣ್ಣಗಾಗಿಸಿದ್ದಾರೆ. ಸಂಪುಟ ಸಭೆಗೆ ಗೈರಾಗಿದ್ದ ಸಚಿವರು ಹೇಳಿದ್ದೇನು? ಅದಕ್ಕೆ ಜಂಟಿ ಸುದ್ದಿಗೋಷ್ಠಿಯ ಮೂಲಕ ಸಿಎಂ ಯಡಿಯೂರಪ್ಪ ಅವರ ಬೆಂಬಲಿಗ ಸಚಿವರು ತಿರುಗೇಟು ಕೊಟ್ಟಿದ್ದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ!
ಬೆಂಬಲಿಗರಿಂದ ಶಕ್ತಿ ಪ್ರದರ್ಶನ
ಪ್ರತಿ ಸಲ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಸಚಿವ ಮಾಧುಸ್ವಾಮಿ ಅವರು ಮಾಧ್ಯಮಗಳಿಗೆ ಸಭೆಯ ನಿರ್ಣಯಗಳನ್ನು ತಿಳಿಸುತ್ತಿದ್ದರು. ಕಾನೂನು ಸಚಿವರಾಗಿರುವವರು ಸಂಪುಟ ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ಕೊಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಆದರೆ ಇವತ್ತು ಕಾನೂನು ಸಚಿವ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಸಚಿವರಾದ ಆರ್. ಅಶೋಕ್, ವಿ. ಸೋಮಣ್ಣ, ಎಸ್.ಟಿ. ಸೋಮಶೇಖರ್, ಬೈರತಿ ಬಸವರಾಜ್, ಎಸ್.ಟಿ. ಸೋಮಶೇಖರ್, ಬಿ.ಸಿ. ಪಾಟೀಲ್, ಲಕ್ಷ್ಮಣ ಸವದಿ ಸೇರಿದಂತೆ ಹಲವು ಸಚಿವರು ಜಂಟಿ ಸುದ್ದಿಗೋಷ್ಠಿ ನಡೆಸಿದರು. ಜೊತೆಗೆ ಸಿಎಂ ಯಡಿಯೂರಪ್ಪ ಅವರು ಕೊಟ್ಟಿದ್ದ ಸಂದೇಶವನ್ನು ಅತೃಪ್ತ ಸಚಿವರಿಗೆ ರವಾನಿಸಿದರು.
ಬಿ.ಎಸ್ ಯಡಿಯೂರಪ್ಪ ಸಚಿವ ಸಂಪುಟ: ಯಾರಿಗೆ ಯಾವ ಖಾತೆ? ಸಮಗ್ರ ಪಟ್ಟಿ
ಯಾವುದೇ ಅಸಮಾಧಾನವಿಲ್ಲ
ವಿಧಾನಸೌಧದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್ ಅವರು, ಅಸಮಾಧಾನಿತ ಸಚಿವರ ಗೈರು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಸಭೆಗೆ ಗೈರು ಹಾಜರಾಗಿರುವ ಸಚಿವರು ಸಿಎಂ ಯಡಿಯೂರಪ್ಪ ಅವರೊಂದಿಗೆ ಮಾತನಾಡಿದ್ದಾರೆ. ತಮಗೆ ಯಾವುದೇ ಅಸಮಾಧಾನವಿಲ್ಲ ಎಂದು ತಿಳಿಸಿದ್ದಾರೆ. ಬೇರೆ ಬೇರೆ ಕಾರಣಗಳಿಂದ ಅವರು ಕ್ಯಾಬಿನೆಟ್ಗೆ ಬಂದಿರಲಿಲ್ಲ. ಕೊನೆಗೆ ಕೆ.ಸಿ. ನಾರಾಯಣಗೌಡ ಅವರು ಬಂದಿದಿದ್ದಾರೆ. ಸಚಿವ ಎಂ.ಟಿ.ಬಿ. ನಾಗರಾಜ್ ಸೇರಿದಂತೆ ಉಳಿದವರು ಸಭೆಗೆ ಬರಲಿಲ್ಲ. ಆದರೆ ಅವರೆಲ್ಲರೂ ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ವಿವರಿಸಿದರು.
ಜೊತೆಗೆ ಖಾತೆಗಳನ್ನು ಬದಲಾವಣೆ ಮಾಡುವ ವಿಚಾರ ಸದ್ಯಕ್ಕಿಲ್ಲ ಎನ್ನುವ ಮೂಲಕ ಕೊಟ್ಟಿರುವ ಖಾತೆಗಳನ್ನು ನಿಭಾಯಿಸಿ ಎಂಬ ಸಂದೇಶವನ್ನು ಸಚಿವರಿಗೆ ಆರ್. ಅಶೋಕ್ ಅವರು ರವಾನಿಸಿದ್ದಾರೆ.
ಎಲ್ಲವೂ ಸರಿಯಾಗಿದೆ
ಸಚಿವ ಸಂಪುಟ ವಿಸ್ತರಣೆ ನಂತರ ಇಂದು ಖಾತೆಗಳ ಹಂಚಿಕೆ ಆಗಿದೆ. ಕೆಲವು ಖಾತೆಗಳು ಬದಲಾವಣೆಯಾಗಿದೆ. ಸಿಎಂ ಯಡಿಯೂರಪ್ಪ ಅವರು ನಿನ್ನೆ ಮತ್ತು ಇಂದು ತುಮಕೂರಿಗೆ ಹೋಗಿ ಬಂದ ನಂತರ ಸಚಿವರೊಂದಿಗೆ ಮಾತನಾಡಿದ್ದಾರೆ. ಅವರನ್ನು ಸಮಾಧಾನ ಪಡಿಸಿದ್ದಾರೆ. ಇಂದು ಸಚಿವ ಸಂಪುಟಕ್ಕೆ ಗೈರು ಹಾಜರಾದವರು ಪೂರ್ವಾನುಮತಿ ಪಡೆದಿದ್ದರು. ಎಲ್ಲವನ್ನು ಸಮರ್ಥವಾಗಿ ನಿಬಾಯಿಸುವ ಶಕ್ತಿ ಯಡಿಯೂರಪ್ಪ ಅವರಿಗೆ ಇದೆ.
ಹಿಂದೆಯೂ ಇಂತಹ ಸಂದರ್ಭಗಳಾಗಿವೆ. ಆಗಲೂ ಸಹ ಸಿಎಂ ಕರೆಸಿ ಮಾತುಕತೆ ನಡೆಸಿದ್ದರು. ಈಗಲೂ ಮಾತುಕತೆ ಆಡಿ ಸರಿ ಮಾಡುತ್ತಾರೆ. ಕೆಲವು ಸಂದರ್ಭಗಳಲ್ಲಿ ಖಾತೆಗಳ ಬದಲಾವಣೆ ಆಗುತ್ತದೆ. ರಾಜಕಾರಣದಲ್ಲಿ ಮಾತುಕತೆ ವಿಚಾರ ವಿನಿಮಯ ಸಮಯ ಸಂದರ್ಭಾನುಸಾರ ಆಗುತ್ತಲೇ ಇರುತ್ತದೆ. ಈಗಲೂ ಮಾತುಕತೆ ಮೂಲಕ ಸಿಎಂ ಎಲ್ಲವನ್ನೂ ಸರಿಪಡಿಸುತ್ತಾರೆ ಎಂದು ಸಂಪುಟ ಸಭೆಯ ಬಳಿಕ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದರು.
ಇದು ಸುಲಭದ ಕೆಲಸವಲ್ಲ: ಯಡಿಯೂರಪ್ಪ
ಇನ್ನು ಸಂಪುಟ ಸಭೆಗೂ ಮೊದಲು ಮಾತನಾಡಿದ್ದ ಸಿಎಂ ಯಡಿಯೂರಪ್ಪ ಅವರು ಅತೃಪ್ತರಿಗೆ ಖಡಕ್ ಸಂದೇಶ ರವಾನಿಸಿದ್ದರು. ಸಚಿವರಾದ ಜೆ.ಸಿ. ಮಾಧುಸ್ವಾಮಿ, ಕೆ. ಗೋಪಾಲಯ್ಯ ಎಲ್ಲರೂ ಸಮಾಧಾನವಾಗಿದ್ದಾರೆ. ಯಾರಿಗೂ ಅಸಮಾಧಾನವಾಗಿಲ್ಲ. ಸ್ವಲ್ಪ ಸಣ್ಣಪುಟ್ಟ ಅಸಮಾಧಾನವಿರಬಹುದು. ಅವರೆಲ್ಲರನ್ನೂ ಕರೆದು ನಾನು ಮಾತನಾಡುತ್ತೇನೆ. ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಸುಲಭವಲ್ಲ. ಅವರು ಸ್ವಲ್ಪ ದಿವಸ ಕೆಲಸ ಮಾಡಲಿ. ಸರಿ ಹೋಗಲಿಲ್ಲ ಅಂದರೆ ಆಮೇಲೆ ಉತ್ತಮ ಖಾತೆ ನೀಡೋಣ. ಸ್ವಲ್ಪ ದಿವಸ ಆದಮೇಲೆ ಒಳ್ಳೆ ಖಾತೆ ನೀಡೋಣ ಎಂದು ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದರು.