ಯಡಿಯೂರಪ್ಪ ರಾಜೀನಾಮೆಯನ್ನು ವಿಶಿಷ್ಟವಾಗಿ ಆಚರಿಸಿಕೊಂಡ ಯತ್ನಾಳ್
ಬೆಂಗಳೂರು, ಜುಲೈ 28: ಕಳೆದ ಒಂದು ವಾರದ ಬಿರುಸಿನ ರಾಜಕೀಯ ಪ್ರಹಸನಕ್ಕೆ ತೆರೆಬಿದ್ದಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ ಮತ್ತು ಅವರ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದಾರೆ.
Recommended Video
ಬುಧವಾರ (ಜುಲೈ 28) ಬೆಳಗ್ಗೆ ಹನ್ನೊಂದು ಗಂಟೆಗೆ ಬೊಮ್ಮಾಯಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅಲ್ಲಿಗೆ, ಬಿಜೆಪಿಯ ಧೀಮಂತ ನಾಯಕ ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿಯಾಗಲಿದ್ದಾರೆ.
ನಿಯೋಜಿತ ಸಿಎಂ ಬಸವರಾಜ ಬೊಮ್ಮಾಯಿ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಮಾತು
ಒಟ್ಟಾರೆಯಾಗಿ, ಬಸವರಾಜ ಬೊಮ್ಮಾಯಿ ಆಯ್ಕೆಗೆ ಪಕ್ಷದಲ್ಲಿ ಸದ್ಯದ ಮಟ್ಟಿಗೆ ಹೆಚ್ಚಿನ ತಕರಾರೇನು ಶಾಸಕರಿಂದ ವ್ಯಕ್ತವಾಗಿಲ್ಲ. ಬೊಮ್ಮಾಯಿ ಆಯ್ಕೆಯ ಮೂಲಕ ಯಡಿಯೂರಪ್ಪನವರ ಕೈಮೇಲಾಗಿರುವುದು ಅತ್ಯಂತ ಸ್ಪಷ್ಟವಾಗಿದೆ.
ಅಲ್ಲಿಗೆ, ಯಡಿಯೂರಪ್ಪನವರನ್ನು ಟೀಕಿಸದೇ ರಾತ್ರಿ ಮಲಗದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಿರಾಳರಾಗಿದ್ದಾರೆ. ಬಿಎಸ್ವೈ ರಾಜೀನಾಮೆಯನ್ನು ಯತ್ನಾಳ್ ವಿಶಿಷ್ಟವಾಗಿ ಆಚರಿಸಿಕೊಂಡಿದ್ದಾರೆ.
ಹೊಸ ನಾಯಕನ ಆಯ್ಕೆಗಾಗಿ ಶಾಸಕಾಂಗ ಪಕ್ಷದ ಸಭೆ
ಶಾಸಕಾಂಗ ಪಕ್ಷದ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಯತ್ನಾಳ್, "ಬೊಮ್ಮಾಯಿ ಆಯ್ಕೆ ಮೂಲಕ ನಮ್ಮ ಬೇಡಿಕೆ ಈಡೇರಿದೆ. ಯಡಿಯೂರಪ್ಪನವರನ್ನು ಕೆಳಗಿಳಿಸಬೇಕಿತ್ತು, ಆ ಕೆಲಸ ನಡೆದಿದೆ. ಬೊಮ್ಮಾಯಿ ನೇತೃತ್ವದಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಲಿದ್ದೇವೆ"ಎಂದು ಅವರು ಹೇಳಿದ್ದಾರೆ.
ಯಡಿಯೂರಪ್ಪನವರ ಬಣದ ಮೇಲುಗೈ ಎನ್ನುವ ಪ್ರಶ್ನೆ ಉದ್ಭವಿಸುವುದಿಲ್ಲ
"ಇಲ್ಲಿ ಯಡಿಯೂರಪ್ಪನವರ ಬಣದ ಮೇಲುಗೈ ಎನ್ನುವ ಪ್ರಶ್ನೆ ಉದ್ಭವಿಸುವುದಿಲ್ಲ. ನಾವೆಲ್ಲರೂ ಬಿಜೆಪಿಯವರು. ಯಡಿಯೂರಪ್ಪನವರೇ ರಾಜೀನಾಮೆ ನೀಡಿದ್ದಾರಲ್ವಾ, ಇನ್ನೇನು ಮೇಲುಗೈ. ನಮ್ಮ ಡಿಮಾಂಡ್ ಅನ್ನು ಹೈಕಮಾಂಡ್ ಈಡೇರಿಸಿದ್ದಾರೆ"ಎಂದು ಯತ್ನಾಳ್ ಹೇಳಿದ್ದಾರೆ.
ಬಿಎಸ್ವೈ ರಾಜೀನಾಮೆ ನೀಡಿದ್ದಕ್ಕೆ ಗಡ್ಡ ಬೋಳಿಸಿಕೊಂಡಿದ್ದೇನೆ
ಬಿಎಸ್ವೈ ರಾಜೀನಾಮೆ ನಿಮಗೆ ಸಂತಸ ತಂದಿದೆಯಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಯತ್ನಾಳ್, "ಹೌದು, ಇದು ಬಹಳ ದಿನಗಳ ಹಿಂದೆಯೇ ಆಗಬೇಕಿತ್ತು. ಈಗ ವರಿಷ್ಠರು ಆ ಕೆಲಸವನ್ನು ಮಾಡಿದ್ದಾರೆ. ನೋಡಿ, ಬಿಎಸ್ವೈ ರಾಜೀನಾಮೆ ನೀಡಿದ್ದಕ್ಕೆ ಗಡ್ಡ ಬೋಳಿಸಿಕೊಂಡಿದ್ದೇನೆ"ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸ್ಥಾನ ಇರಲಿದೆಯೇ
ಗಡ್ಡ ಬೋಳಿಸುವ ಮೂಲಕ ಯತ್ನಾಳ್ ಅವರು ಯಡಿಯೂರಪ್ಪ ರಾಜೀನಾಮೆಯನ್ನು ಸಂಭ್ರಮಿಸಿದ್ದಾರೆ. ಮುಂದಿನ ಸಂಪುಟದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸ್ಥಾನ ಇರಲಿದೆಯೇ ಎನ್ನುವುದು ಸದ್ಯದಲ್ಲೇ ಗೊತ್ತಾಗಲಿದೆ.