ರಮೇಶ್ ಜಾರಕಿಹೊಳಿಗೆ ಅಂದು ರಾತ್ರಿ ಸಿಎಂ ಯಡಿಯೂರಪ್ಪ ಕೊಟ್ಟಿರುವ ಭರವಸೆ ಏನು?
ಬೆಂಗಳೂರು, ಮಾ. 05: 'ಸಿಡಿ' ಬಾಂಬ್ ಸ್ಫೋಟದ ಬಳಿಕ ರಮೇಶ್ ಜಾರಕಿಹೊಳಿ ಅವರು ಸಚಿವಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಅವರು ರಾಜೀನಾಮೆ ಕೊಡಲು ಹಲವು ಕಾರಣಗಳಿದ್ದವು ಎಂಬ ಮಾಹಿತಿ ಬಿಜೆಪಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಜೊತೆಗೆ ಹೈಕಮಾಂಡ್ ಕೂಡ ರಮೇಶ್ ಜಾರಕಿಹೊಳಿ ಅವರಿಗೆ ಅದೊಂದು ಭರವಸೆಯನ್ನು ಕೊಟ್ಟಿದೆ ಎಂಬ ಮಾಹಿತಿ ಬಂದಿದೆ. ಅಷ್ಟಕ್ಕೂ ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ಕೊಡಲು ಸಿಡಿ ಮಾತ್ರ ಕಾರಣವಲ್ಲ. ಮಾರ್ಚ್ 2 ಹಾಗೂ 3 ರಂದು ಬೆಂಗಳೂರು ಹಾಗೂ ದೆಹಲಿಯಲ್ಲಿ ನಡೆದ ಬೆಳವಣಿಗೆಗಳೇನು? ಇಲ್ಲಿದೆ ಮಾಹಿತಿ...
ಮಾರ್ಚ್ 2 ರಂದು ಸಂಜೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ರಾಸಲೀಲೆಯ ಸಿಡಿ ಬಿಡುಗಡೆ ಮಾಡಿದ ಬಳಿಕ ರಮೇಶ್ ಜಾರಕಿಹೊಳಿ ಅವರು ಮೈಸೂರಿನಲ್ಲಿದ್ದರು ಎಂಬ ಮಾಹಿತಿ ಇತ್ತು. ಅದಾದ ಬಳಿಕ ಅವರು ಅಜ್ಞಾತ ಸ್ಥಳಕ್ಕೆ ತೆರಳಿದ್ದರು. ಬಳಿಕ ಅಂದೇ ರಾತ್ರಿ ಬೆಂಗಳೂರಿನ ಸರ್ಕಾರಿ ನಿವಾಸದಲ್ಲಿ ಕಾಣಿಸಿಕೊಂಡ ರಮೇಶ್ ಜಾರಕಿಹೊಳಿ ಅವರು ಮಾಧ್ಯಮಗಳಿಗೆ ತಮ್ಮ ಪ್ರತಿಕ್ರಿಯೆ ಕೊಟ್ಟಿದ್ದರು.
ನಾನೇನು ತಪ್ಪು ಮಾಡಿಲ್ಲ. ನಾನೇಕೆ ರಾಜೀನಾಮೆ ಕೊಡಬೇಕು ಎಂದು ಅವರು ಆಗ ಪ್ರಶ್ನೆ ಮಾಡಿದ್ದರು. ಜೊತೆಗೆ ಅದು ಫೇಕ್ ವಿಡಿಯೋ ಎಂದೂ ಹೇಳಿದ್ದರು. ಆದರೆ ಮರುದಿನ ಮಾರ್ಚ್ 3ರಂದು ದಿಢೀರ್ ತಮ್ಮ ನಿರ್ಧಾರ ಬದಲಿಸಿದ್ದ ರಮೇಶ್ ಜಾರಕಿಹೊಳಿ ಅವರು, ಸಹೋದರ ಬಾಲಚಂದ್ರ ಜಾರಕಿಹೊಳಿ ಅವರ ಕೈಯಲ್ಲಿ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕಳುಹಿಸಿದ್ದರು.
ಬಿಜೆಪಿ ಹೈಕಮಾಂಡ್ ವಲಯದಲ್ಲೂ ಅತ್ಯಂತ ಪ್ರಭಾವಿ ಆಗಿರುವ ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ಕೊಡುವುದಿಲ್ಲ ಎಂದೇ ಎಲ್ಲರೂ ಭಾವಿಸಿದ್ದರು. ಆದರೂ ಅವರು ರಾಜೀನಾಮೆ ಕೊಡುವ ಮೂಲಕ ಕುತೂಹಲ ಮೂಡಿಸಿದ್ದರು. ಅದಕ್ಕೂ ಮೊದಲು ಸಿಎಂ ಯಡಿಯೂರಪ್ಪ ಹಾಗೂ ಹೈಕಮಾಂಡ್ ಜೊತೆಗೆ ರಮೇಶ್ ಅವರು, ಹಲವು ಸುತ್ತಿನ ಮಾತುಕತೆ ನಡೆಸಿದ್ದರು ಎಂಬ ಸ್ಫೋಟಕ ಮಾಹಿತಿ ಇದೀಗ ಬಹಿರಂಗವಾಗಿದೆ.
ಸಿಡಿ ಸ್ಫೋಟದ ಬಗ್ಗೆ ಮೊದಲೇ ಮಾಹಿತಿ ಇತ್ತಾ?
'ಸಿಡಿ' ಕುರಿತು ರಮೇಶ್ ಜಾರಕಿಹೊಳಿ ಅವರಿಗೆ ಮೊದಲೇ ಮಾಹಿತಿ ಬಂದಿತ್ತು ಎಂಬ ಮಾಹಿತಿಯಿದೆ. ಹೀಗಾಗಿ ಕಳೆದ ಸುಮಾರು 8-9 ತಿಂಗಳುಗಳ ಹಿಂದೆ ಮಾಡಲಾಗಿದ್ದ 'ಸಿಡಿ' ಸಂತ್ರಸ್ತೆಯನ್ನು ಭೇಟಿ ಮಾಡಲು ರಮೇಶ್ ಸತತ ಪ್ರಯತ್ನಗಳನ್ನು ನಡೆಸಿದ್ದರು. ಆದರೆ ಅದಾಗಲೇ 6 ತಿಂಗಳುಗಳ ಹಿಂದೆಯೇ ಆ ಯುವತಿ ದೇಶ ತೊರೆದಿದ್ದರು. ಅದೊಂದು ವ್ಯವಸ್ಥಿತ ಜಾಲ ತಮ್ಮನ್ನು ಟ್ರ್ಯಾಪ್ ಮಾಡಿದೆ ಎಂಬುದು ರಮೇಶ್ ಜಾರಕಿಹೊಳಿ ಅವರ ಅರಿವಿಗೆ ಬಂದಿತ್ತು. ಹೀಗಾಗಿ ಮಾನಸಿಕವಾಗಿ ಅವರು ಎಲ್ಲವನ್ನೂ ಎದುರಿಸಲು ಸಿದ್ಧವಾಗಿದ್ದರು ಎಂಬ ಮಾಹಿತಿಯಿದೆ. ಹೀಗಾಗಿ ಮಾರ್ಚ್ 2 ರಂದು ಸಿಡಿ ಬಿಡುಗಡೆ ಆದ ತಕ್ಷಣ ಸಹೋದರ ಬಾಲಚಂದ್ರ ಮೂಲಕ ಸಿಎಂ ಯಡಿಯೂರಪ್ಪ ಅವರನ್ನು ರಮೇಶ್ ಜಾರಕಿಹೊಳಿ ಸಂಪರ್ಕಿಸಿದ್ದರು.
ಜಾರಕಿಹೊಳಿಗೆ ಹೈಕಮಾಂಡ್ ಕೊಟ್ಟ ನಿರ್ದೇಶನ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೊಟ್ಟ ಭರವಸೆ ಹಾಗೂ ಸೂಚನೆ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಅವರು ಹೈಕಮಾಂಡ್ ಸಂಪರ್ಕಿಸಿದ್ದಾರೆ. ಆದರೆ ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ರಾಜೀನಾಮೆ ಕೊಡಬೇಕು ಎಂಬ ಸೂಚನೆಯನ್ನು ಹೈಕಮಾಂಡ್ ಕೊಟ್ಟಿದೆ. ಇದೇ ವಿಚಾರವನ್ನು ಐದೂ ರಾಜ್ಯಗಳಲ್ಲಿ ವಿರೋಧ ಪಕ್ಷಗಳು ಹುಯಿಲೆಬ್ಬಿಸುತ್ತವೆ. ಹೀಗಾಗಿ ತಕ್ಷಣ ರಾಜೀನಾಮೆ ಕೊಡಬೇಕು ಎಂಬ ಸೂಚನೆಯನ್ನು ಹೈಕಮಾಂಡ್ ಕೊಟ್ಟಿದೆ.
ಪಂಚ ರಾಜ್ಯಗಳ ಚುನಾವಣೆ ಹಾಗೂ 'ಸಿಡಿ'
ಐದು ರಾಜ್ಯಗಳಲ್ಲಿನ ಸಾರ್ವತ್ರಿಕ ಚುನಾವಣೆ ಹಾಗೂ ರಾಜ್ಯದಲ್ಲಿ ಒಂದು ಲೋಕಸಭೆ ಹಾಗೂ ಮೂರು ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಿದೆ. ಇದೇ ವಿಚಾರವನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಪ್ರಮುಖವಾಗಿ ಚುನಾವಣಾ ಅಸ್ತ್ರವಾಗಿ ಬಳಸಿಕೊಳ್ಳುತ್ತದೆ ಎಂದು ಹೈಕಮಾಂಡ್ ಖಡಾಖಂಡಿತವಾಗಿ ರಾಜೀನಾಮೆ ಕೊಡುವಂತೆ ಸೂಚಿಸಿದೆ. ಜೊತೆಗೆ ಸಿಎಂ ಯಡಿಯೂರಪ್ಪ ಅವರು ಕೊಟ್ಟಿದ್ದ ಭರವಸೆಯನ್ನೇ ಹೈಕಮಾಂಡ್ ಕೂಡ ರಮೇಶ್ ಜಾರಕಿಹೊಳಿ ಅವರಿಗೆ ಕೊಟ್ಟಿದೆ. ಹೀಗಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲು ರಮೇಶ್ ಜಾರಕಿಹೊಳಿ ಅವರು ಮಾರ್ಚ್ 2ರಂದು ರಾತ್ರಿ ತೀರ್ಮಾನ ಮಾಡಿದ್ದರು ಎಂಬ ಮಾಹಿತಿ ಇದೆ.
ರಮೇಶ್ ಜಾರಕಿಹೊಳಿಗೆ ಸಿಕ್ಕ ಭರವಸೆ ಏನು?
ಮುಜುಗರವನ್ನು ತಪ್ಪಿಕೊಳ್ಳುವುದು ಅಗತ್ಯವಾಗಿದೆ. ಹೀಗಾಗಿ ತಕ್ಷಣ ರಾಜೀನಾಮೆ ಕೊಡಿ. ನಿಮ್ಮ ಸಚಿವ ಸ್ಥಾನವನ್ನು ಖಾಲಿ ಇಡುತ್ತೇವೆ. ಯಾವುದೇ ಕಾರಣಕ್ಕೂ ನಿಮ್ಮ ಸಚಿವ ಸ್ಥಾನವನ್ನು ಬೇರೆ ಯಾರಿಗೂ ಕೊಡುವುದಿಲ್ಲ. ಬಜೆಟ್ ಅಧಿವೇಶನ, ಐದು ರಾಜ್ಯಗಳ ಚುನಾವಣೆ ಹಾಗೂ ರಾಜ್ಯದಲ್ಲಿನ ಉಪ ಚುನಾವಣೆ ಬಳಿಕ ಮತ್ತೆ ನೀವು ಪ್ರಮಾಣವಚನ ಸ್ವೀಕಾರ ಮಾಡಬಹುದು. ನಿನ್ನೆ ಖಾತೆಯನ್ನೇ ಖಾಲಿ ಇಡುತ್ತೇವೆ. ಹೀಗಾಗಿ ಯಾವುದೇ ಯೋಚನೆ ಬೇಡ ಎಂಬ ಭರಸವೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಮೇಶ್ ಜಾರಕಿಹೊಳಿ ಅವರಿಗೆ ಕೊಟ್ಟಿದ್ದಾರೆ ಎಂಬ ಮಾಹಿತಿಯಿದೆ.
ಜೊತೆಗೆ ಸಹೋದರರಾದ ಬಾಲಚಂದ್ರ ಜಾರಕಿಹೊಳಿ ಹಾಗೂ ಸತೀಶ್ ಜಾರಕಿಹೊಳಿ ಅವರು ಕೂಡ ಇದು ಷಡ್ಯಂತ್ರ ಎಂದು ಸಹೋದರನ ಬೆಂಬಲಕ್ಕೆ ನಿಂತಿದ್ದಾರೆ. ಹೀಗಾಗಿ ಕೆಲ ತಿಂಗಳುಗಳಲ್ಲಿಯೇ ಮತ್ತೆ ಸಚಿವ ಸ್ಥಾನ ಸಿಗುವ ಭರವಸೆ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ಕೊಟ್ಟಿದ್ದಾರೆ ಎಂಬ ಖಚಿತ ಮಾಹಿತಿಯಿದೆ.
Recommended Video