ನೆರೆ ಸಂತ್ರಸ್ತರ ಗಾಯದ ಮೇಲೆ ಬರೆ ಎಳೆದ ರಾಜ್ಯ ಸರ್ಕಾರ
ಬೆಂಗಳೂರು, ಜನವರಿ 14: ಕೇಂದ್ರ ಸರ್ಕಾರವು ನಿರೀಕ್ಷಿತ ಪ್ರಮಾಣದಲ್ಲಿ ಸಹಾಯ ಧನ ನೀಡದ ಕಾರಣ ನೆರೆ ಸಂತ್ರಸ್ತರಿಗೆ ಘೋಷಿಸಿದ್ದ ಪರಿಹಾರ ಹಣದಲ್ಲಿ ಕಡಿತಗೊಳಿಸುವ ಚಿಂತನೆಯಲ್ಲಿದೆ.
ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಎ, ಬಿ ಮತ್ತು ಸಿ ಕೆಟಗೆರಿಯಲ್ಲಿ ಅನುದಾನ ನೀಡುವ ಘೋಷಣೆ ಮಾಡಲಾಗಿತ್ತು. ಸೂಕ್ತ ಮೊತ್ತವನ್ನೂ ಘೋಷಿಸಲಾಗಿತ್ತು. ಆದರೆ ಈಗ ಪರಿಹಾರದ ಮೊತ್ತವನ್ನು ಪರೀಷ್ಕರಿಸುವ ನಿರ್ಣಯ ತೆಗೆದುಕೊಳ್ಳಲಾಗಿದೆ.
ಕೇಂದ್ರದ ನೆರೆ ಪರಿಹಾರ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ: ಸಿದ್ದರಾಮಯ್ಯ
ಶೇ.75 ರಷ್ಟು ಮನೆ ಕುಸಿದುಬಿದ್ದಿದ್ದರೆ ಎ ಕೆಟಗರಿಗೆ 5 ಲಕ್ಷ, ಶೇ.50ರಷ್ಟು ಹಾನಿಯಾಗಿದ್ದರೆ 5 ಲಕ್ಷ ಹಾಗೂ ಶೇ.25ಕ್ಕಿಂತ ಕಡಿಮೆ ಹಾನಿಯಾಗಿದ್ದರೆ ಒಂದು ಲಕ್ಷ ಪರಿಹಾರವನ್ನು ನೀಡುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಈ ಪರಿಹಾರದ ಮೊತ್ತದಲ್ಲಿ ಕಡಿತ ಆಗುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಉಂಟಾಗಿದ್ದ ನೆರೆ ಇಂದಾಗಿ ಸುಮಾರು 35 ಸಾವಿರ ಕೋಟಿ ನಷ್ಟವಾಗಿತ್ತು. ಆದರೆ ಕೇಂದ್ರ ಸರ್ಕಾರ ಈವರೆಗೆ ನೀಡಿರುವುದು 1869 ಕೋಟಿ ಮಾತ್ರ. ಇದು ಅತ್ಯಲ್ಪ ಮೊತ್ತವಾಗಿದ್ದು, ಇನ್ನೂ ಸಾಕಷ್ಟು ಹಣ ಸರ್ಕಾರಕ್ಕೆ ಬೇಕಾಗಿದೆ. ಹಾಗಾಗಿ ಸರ್ಕಾರವು ಈ ನಿರ್ಣಯಕ್ಕೆ ಬಂದಿದೆ.
ಎ ಕೆಟಗರಿಯಲ್ಲಿ 8067, ಬಿ ಕೆಟಗರಿಯಲ್ಲಿ 27,142 ಹಾಗೂ ಸಿ ಕೆಟಗರಿಯಲ್ಲಿ 87,743 ಮನೆಗಳು ಹಾನಿಗೊಳಗಾಗಿವೆ. ಇದರಲ್ಲಿ ಎ ಮತ್ತು ಬಿ ಕೆಟಗರಿ ಮನೆಗಳಿಗೆ 5 ಲಕ್ಷ ರೂ. ಪರಿಹಾರ ನೀಡಿದರೆ ಸರ್ಕಾರದ ಬೊಕ್ಕಸಕ್ಕೆ ಭಾರೀ ಹಾನಿಯಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನೆರೆ ಪರಿಹಾರದ ಹಣವನ್ನು ಪಾಕಿಸ್ತಾನದ ಬಳಿ ಕೇಳಬೇಕೇ?: ಎಚ್ಡಿಕೆ ಪ್ರಶ್ನೆ
ಹೀಗಾಗಿ ಈಗಾಗಲೇ ಘೋಷಣೆ ಮಾಡಿರುವ ಪರಿಹಾರದ ಮೊತ್ತವನ್ನು ಪರಿಷ್ಕರಣೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಬಿಎಸ್ವೈ ಸೂಚನೆ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಮುಖ್ಯಮಂತ್ರಿಗಳ ಸೂಚನೆಯಂತೆ ಕಂದಾಯ ಮತ್ತು ವಸತಿ ಇಲಾಖೆ ಅಧಿಕಾರಿಗಳು ಹಾನಿಗೊಳಗಾದ ಮನೆಗಳಿಗೆ ಎಷ್ಟು ಪ್ರಮಾಣದಲ್ಲಿ ಪರಿಹಾರ ನೀಡಬೇಕು ಎಂಬುದರ ಕುರಿತಂತೆ ಪಟ್ಟಿಯನ್ನು ಸಿದ್ದಪಡಿಸುವತ್ತ ಚಿತ್ತ ಹರಿಸಿದ್ದಾರೆ.