ಕುಮಟಳ್ಳಿ ಅದೇನು ಪಾಪ ಮಾಡಿದ್ರೋ, ಬಿಜೆಪಿ ಕಚೇರಿ ಕಸ ಗುಡ್ಸೋದೆ ಪಕ್ಕಾ ಆಯ್ತಾ?
Recommended Video
ಕ್ಷಣಕ್ಕೊಂದು ತಿರುವು ಕೊಡುವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಂತೆ, ಯಡಿಯೂರಪ್ಪನವರ ಸಚಿವ ಸಂಪುಟ ವಿಸ್ತರಣೆಯ ಸರ್ಕಸ್, ಹತ್ತು ಶಾಸಕರು ಪ್ರಮಾಣವಚನ ಸ್ವೀಕರಿಸುವ ಮೂಲಕ ಒಂದು ಹಂತಕ್ಕೆ ಬಂದು ನಿಂತಿದೆ.
ಯಡಿಯೂರಪ್ಪನವರ ಸರಕಾರ ಅಧಿಕಾರಕ್ಕೆ ಬರಲು ಕಾರಣರಾದ ಹದಿನೇಳು ಅನರ್ಹರಲ್ಲಿ, ಜನಾದೇಶದಲ್ಲಿ ಅರ್ಹಗೊಂಡ ಹನ್ನೆರಡು ಶಾಸಕರಲ್ಲಿ, ಹತ್ತು ಮಂದಿ ಇಂದು (ಫೆ 6) ಸಚಿವರಾಗಿದ್ದಾರೆ. ಅಲ್ಲಿಗೆ, ಒಂದು ಹಂತಕ್ಕೆ ಯಡಿಯೂರಪ್ಪ ಅವರೆಲ್ಲರ ಖುಣ ಸಂದಾಯ ಮಾಡಿದ್ದಾರೆ.
ಇನ್ನು ಅರ್ಹಗೊಂಡ ಇಬ್ಬರಿಗೆ ಸಚಿವ ಸ್ಥಾನ ಸಿಗುತ್ತಿಲ್ಲ. ಅದರಲ್ಲಿ ರಾಣೆಬೆನ್ನೂರು ಶಾಸಕ ಅರುಣ್ ಕುಮಾರ್ ಪೂಜಾರ್ ಅವರ ಹೆಸರು ಸಚಿವ ಸ್ಥಾನದ ಸುತ್ತ ಸುಳಿದಾಡುತ್ತಿರಲೇ ಇರಲಿಲ್ಲ. ಹಾಗಾಗಿ, ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿಕೊಂಡು, ಚುನಾವಣೆ ಗೆದ್ದ ಮಹೇಶ್ ಕುಮಟಳ್ಳಿ ಒಬ್ಬರೇ ಈ ವೈಭೋಗದಿಂದ ಹೊರಗುಳಿಯುವಂತಾಗಿದೆ.
ಕೈತಪ್ಪಿದ ನಿರೀಕ್ಷಿತ ಸಚಿವ ಸ್ಥಾನ: ಮಹೇಶ್ ಕುಮಟಳ್ಳಿ ಪ್ರತಿಕ್ರಿಯೆ
ಮಹೇಶ್ ಕುಮಟಳ್ಳಿ ಮತ್ತು ಶ್ರೀಮಂತ ಪಾಟೀಲ, ಈ ಇಬ್ಬರಿಗೆ ಸಚಿವ ಸ್ಥಾನ ಸಿಗುವುದಿಲ್ಲ ಎನ್ನುವ ಮಾತು ಬುಧವಾರದವರೆಗೂ ಚಾಲ್ತಿಯಲ್ಲಿತ್ತು. ಆದರೆ, ಕೊನೆಯ ಗಳಿಗೆಯಲ್ಲಿ ಕಾಗವಾಡದ ಶಾಸಕ ಪಾಟೀಲ್, ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ತನ್ನ ಜೊತೆಗಿದ್ದ ಬಹುತೇಕ ಎಲ್ಲರಿಗೂ ಜಾಕ್ ಪಾಟ್
ತನ್ನ ಜೊತೆಗಿದ್ದ ಬಹುತೇಕ ಎಲ್ಲರಿಗೂ ಜಾಕ್ ಪಾಟ್ ಹೊಡೆದರೂ, ತನಗೆ ಸಚಿವ ಸ್ಥಾನ ಸಿಗದೇ ಇದ್ದಿದ್ದಕ್ಕೆ ಮಹೇಶ್ ಕುಮಟಳ್ಳಿ ಬೇಸರಗೊಂಡಿದ್ದಾರೆ. "ಯಾಕೆ ಹೀಗಾಯಿತು ಎಂದು ಗೊತ್ತಾಗುತ್ತಿಲ್ಲ. ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸುತ್ತೇನೆ" ಎಂದು ಕುಮಟಳ್ಳಿ ಹೇಳಿದ್ದಾರೆ. ಅಥಣಿ ಕ್ಷೇತ್ರದವರೇ ಆದ ಲಕ್ಷ್ಮಣ ಸವದಿ ಡಿಸಿಎಂ ಆಗಿರುವುದರಿಂದ, ಕುಮಟಳ್ಳಿಗೆ ಸ್ಥಾನ ತಪ್ಪಿದೆ ಎನ್ನುವುದು ಮೇಲ್ನೋಟಕ್ಕೆ ಕಾಣಿಸುವ ರಾಜಕೀಯ.
ಯಡಿಯೂರಪ್ಪ ಮತ್ತು ಬಿಜೆಪಿಗೆ ಮುಜುಗರ ತರುವುದಿಲ್ಲ
"ನೆಟ್ಟಗಿರುವ ಮರ ಬೇಗ ಉರುಳಿ ಬೀಳುತ್ತದೆ. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಿಜೆಪಿಗೆ ಮುಜುಗರ ಉಂಟು ಮಾಡುವ ಕೆಲಸವನ್ನು ನಾನು ಮಾಡುವುದಿಲ್ಲ. ಆದರೆ, ನಾನು ಸಚಿವನಾಗಲು ಏನು ತೊಂದರೆ ಎದುರಾಯಿತೋ ಗೊತ್ತಿಲ್ಲ" ಎಂದಿರುವ ಕುಮಠಳ್ಳಿ ಭರವಸೆಯನ್ನು ನೀಡಿದ್ದಾರೆ. ಆರು ತಿಂಗಳು ಬಿಟ್ಟು ನಿಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುವುದು ಎನ್ನುವ ಭರವಸೆ ಮುಖ್ಯಮಂತ್ರಿಗಳಿಂದ ಕುಮಟಳ್ಳಿಗೆ ಸಿಕ್ಕಿದೆ.
Karnataka Cabinet Expansion Live : 10 ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಂಡ ಯಡಿಯೂರಪ್ಪ
ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸೋ ಕೆಲಸ ಕೊಟ್ಟರೂ ಮಾಡುತ್ತೇನೆ
ಕೆಲವು ದಿನಗಳ ಹಿಂದೆ, ನನಗೆ ಮಂತ್ರಿಗಿರಿ ಕೊಡದಿದ್ದರೂ ಪರವಾಗಿಲ್ಲ ಆದರೆ, ಎಚ್. ವಿಶ್ವನಾಥ್ ಅವರನ್ನು ಮಂತ್ರಿ ಮಾಡಿ. ಹಾಗೇ, ನನಗೆ ಕ್ಷೇತ್ರ ಮುಖ್ಯ. ಮಂತ್ರಿ ಸ್ಥಾನ ಸಿಗದಿದ್ದರೂ ಪರವಾಗಿಲ್ಲ. ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸೋ ಕೆಲಸ ಕೊಟ್ಟರೂ ಮಾಡುತ್ತೇನೆ ಎಂದು ಕುಮಟಳ್ಳಿ ಹೇಳಿದ್ದರು.
ರಾಜಕೀಯ ಪ್ರಹಸನದಲ್ಲಿ ಏನೂ ಇಲ್ಲದೇ ಕಳೆದುಕೊಂಡಿದ್ದು ಮಾತ್ರ ಮಹೇಶ ಕುಮಟಳ್ಳಿ
ಹಿಂದೆ ಹೇಳಿರುವ ಮಾತನ್ನು ಸಂಪುಟ ವಿಸ್ತರಣೆಯ ದಿನದಂದು ಮತ್ತೆ ಕುಮಟಳ್ಳಿ ಪುನರುಚ್ಚಿಸಿದ್ದಾರೆ. "ಕಸ ಗುಡಿಸೋ ಕೆಲಸವಾದರೂ ಮಾಡಲು ಸಿದ್ಧನಿದ್ದೇನೆ. ಬಿಜೆಪಿ ವರಿಷ್ಟರ ನಿರ್ಧಾರಕ್ಕೆ ನಾನು ಬದ್ದ ಎಂದು ಜಾರಕಿಹೊಳಿಗೆ ತಿಳಿಸಿದ್ದೇನೆ. ನನಗೆ ಮಂತ್ರಿಸ್ಥಾನ ತಪ್ಪಲು ಯಾರು ಕಾರಣ ಎನ್ನುವ ವಿವರವನ್ನು ಸಿಎಂ ಭೇಟಿ ನಂತರ ತಿಳಿಸುತ್ತೇನೆ. ಮಂತ್ರಿ ಸ್ಥಾನ ಸಿಗದಿದ್ದರೂ ಪರ್ಯಾಯ ಅಧಿಕಾರ ಕೊಡುತ್ತೇನೆಂದು ಯಡಿಯೂರಪ್ಪ ಹೇಳಿದ್ದಾರೆ" ಎಂದು ಕುಮಟಳ್ಳಿ ಹೇಳಿದ್ದಾರೆ. ಒಟ್ಟಿನಲ್ಲಿ, ಇಷ್ಟುದಿನದ ಈ ರಾಜಕೀಯ ಪ್ರಹಸನದಲ್ಲಿ ಏನೂ ಇಲ್ಲದೇ ಕಳೆದುಕೊಂಡಿದ್ದು ಮಾತ್ರ ಮಹೇಶ ಕುಮಟಳ್ಳಿ.