ಕರ್ನಾಟಕದ ಸ್ವಾಭಿಮಾನವನ್ನು ಅಡವಿಟ್ಟಿದ್ದೇ ಬಿಎಸ್ವೈ ಸಾಧನೆ: ಎಎಪಿ
ಬೆಂಗಳೂರು, ಜುಲೈ 26: ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವನ್ನು ಕೆಡವಲು ಅನೇಕ ತಿಂಗಳುಗಳಿಂದ ಹೊಂಚು ಹಾಕಿ ಅನೇಕಾನೇಕ ಅಸಾಂವಿಧಾನಿಕ ಮಾರ್ಗ ಗಳಂತಹ ಆಪರೇಷನ್ ಕಮಲದ ಮೂಲಕ ಕುಮಾರಸ್ವಾಮಿ ಸರ್ಕಾರವನ್ನು ಕೆಡವಿ ಕುರ್ಚಿ ಕಸಿದುಕೊಂಡ ಯಡಿಯೂರಪ್ಪ ಅವರ ಸರ್ಕಾರ 1 ವರ್ಷ ಪೂರೈಸಿದೆ. ಈ ಮೂಲಕ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಲೇಬೇಕಾಗಿದೆ .
Recommended Video
ಅನರ್ಹ ಶಾಸಕರ ಉಪಚುನಾವಣೆಯ ಸಂದರ್ಭದಲ್ಲಿ ಮತದಾರರು ಗಳಿಗೆ ಸಾವಿರಾರು ಕೋಟಿ ರೂಗಳ ಅಭಿವೃದ್ಧಿ ಅನುದಾನಗಳ ಆಮಿಷಗಳನ್ನೊಡ್ಡಿ ಮಂಕುಬೂದಿ ಎರೆಚಿ ದೇಶದಲ್ಲಿ ಇದರಿಂದ ಎಲ್ಲ ವಿಚಾರಗಳಲ್ಲೂ ಮಾದರಿಯಾಗಿದ್ದ ಕರ್ನಾಟಕವನ್ನು ಹಾಳುಗೆಡವಿದ್ದೇ ಇವರ ಸಾಧನೆ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.
ಬಿಜೆಪಿ ಸರ್ಕಾರಕ್ಕೆ ಒಂದು ವರುಷ: ಡಿಸಿಎಂ ಆತ್ಮಾವಲೋಕನ!
ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಕರ್ನಾಟದ ಇತಿಹಾಸದಲ್ಲೇ ಹಿಂದೆಂದೂ ಕಂಡರಿಯದ ರೀತಿಯಲ್ಲಿ 21 ಜಿಲ್ಲೆಗಳು ಬೀಕರ ನೆರೆಗೆ ತುತ್ತಾಗಿ ಸಾಮಾನ್ಯ ಜನರ ಬದುಕು ಮೂರಾಬಟ್ಟೆ ಆಯಿತು, ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರದಿಂದ ಪುಡಿಗಾಸು ಪರಿಹಾರ ತರಲು ದೈನೇಸಿ ಪರಿಸ್ಥಿತಿಗೆ ತಲುಪಿ ರಾಜ್ಯದ ಸ್ವಾಭಿಮಾನವನ್ನು ಅಡವಿಟ್ಟಿದ್ದು ರಾಜ್ಯ ಬಿಜೆಪಿ ಸರ್ಕಾರದ ಒಂದು ವರ್ಷದ ಸಾಧನೆ.
ನೆರೆ ಸಂತ್ರಸ್ತರಿಗೆ ಮನೆ ಕಟ್ಟಿ ಕೊಡುವಲ್ಲಿ ಸಂಪೂರ್ಣ ವೈಫಲ್ಯ
2009ರಲ್ಲಿ ಯಡಿಯೂರಪ್ಪನವರೇ ಮುಖ್ಯಮಂತ್ರಿಗಳಾಗಿದ್ದುನಿಮ್ಮದೇ ಸರ್ಕಾರ ಇದ್ದ ವೇಳೆಯಲ್ಲಿಯೇ ಬೀಕರ ನೆರೆ ಉಂಟಾಗಿತ್ತು. ಆಗಲೂ ಸಹ ಪರಿಹಾರದ ಹೆಸರಿನಲ್ಲಿ ಹಣ ದುರುಪಯೋಗ ಆದ ಬಗ್ಗೆ ಮಾಧ್ಯಮಗಳ ಮುಂದೆ ಒಪ್ಪಿಕೊಂಡಿದ್ದಾರೆ. ಸಂತ್ರಸ್ತರಿಗೆ ಎಂದು ನೇರವಾಗಿ ₹ 5 ಲಕ್ಷ ನಗದು ನೀಡುವ ಯೋಜನೆಯನ್ನು ಜಾರಿಗೆ ತರಲಾಯಿತು.
ವಾಸ್ತವ ಅಂಶ ಏನೆಂದರೆ ನೆರೆಯಲ್ಲಿ ಮನೆ ಕಳೆದುಕೊಂಡವರು ಸುಮಾರು 32,424 ಜನ, ಆದರೆ ಇದುವರೆಗೂ ಸರ್ಕಾರ ಪೂರ್ಣ ಪ್ರಮಾಣದ ಹಣ ಸಿಕ್ಕಿ ಮನೆ ಕಟ್ಟಿಕೊಂಡವರು ಕೇವಲ 47 ಮಂದಿ. ನಿಮ್ಮ ಸರ್ಕಾರ ಇದುವರೆಗೂ 32 ಸಾವಿರ ಮಂದಿಗೆ 1 ಲಕ್ಷ, 11 ಸಾವಿರ ಜನಕ್ಕೆ 2 ಲಕ್ಷ, 4 ಸಾವಿರ ಜನಕ್ಕೆ 3 ಲಕ್ಷ ಮಾತ್ರ ನೀಡಿದೆ. ಮನೆಕಟ್ಟಲು ಹಣ ಬರುತ್ತದೆ ಎಂದು ನಂಬಿಕೊಂಡ ಜನ ರಸ್ತೆಯಲ್ಲಿ ಬೀದಿಗಳಲ್ಲಿ ಶಾಲಾ ಆವರಣಗಳಲ್ಲಿ, ಸಮುದಾಯ ಭವನಗಳಲ್ಲಿ, ಜಮೀನಿನಲ್ಲಿ ಊರಂಚಿನ ಗೋಮಾಳಗಳಲ್ಲಿ ಈಗಲೂ ದಿನದೂಡುತ್ತಿದ್ದಾರೆ. ಇದು ನಿಮ್ಮ ಸರ್ಕಾರದ ಒಂದು ವರ್ಷದ ಸಾಧನೆಯೇ?
ಸರ್ಕಾರ ರಚನೆಯಾಗಿ 1 ತಿಂಗಳಾದರೂ ಸಚಿವ ಸಂಪುಟ ರಚಿಸದೇ ಸಾಧನೆ ಮಾಡಿದ ಯಡಿಯೂರಪ್ಪ ಅವರು, ಕೊರೊನಾ ಕಾಲದಲ್ಲಿ ದೇಶವು ಸ್ವಾತಂತ್ರ್ಯ ಬಂದು ಅನೇಕ ಹೋರಾಟಗಳ ಮೂಲಕ ಸಮ ಸಮಾಜ ನಿರ್ಮಾಣಕ್ಕಾಗಿ ರೂಪಿತವಾದ ಅನೇಕ ಕಾನೂನುಗಳನ್ನು ನುಂಗಿ ನೀರು ಕುಡಿದಿರುವುದು ನಿಮ್ಮ ಒಂದು ವರ್ಷದ ಅಮೋಘ ಸಾಧನೆ.
ರೈತರನ್ನು ಬೀದಿಗೆ ತಳ್ಳಿದ ಸರ್ಕಾರ
ಭೂ ಸುಧಾರಣಾ ಕಾಯ್ದೆಯ ಮೂಲಕ ರೈತರನ್ನು ಬೀದಿಗೆ ತಳ್ಳಿದ ಸರ್ಕಾರ: ಭೂ ಸುಧಾರಣೆಗಳ ತಿದ್ದುಪಡಿ ವಿಧೇಯಕ ಸಂಪೂರ್ಣ ಭೂ ಮಾಫಿಯಾಗಳ ಕೈವಾಡ ಹಾಗೂ ಒಳ ಒಪ್ಪಂದ ಮಾಡಿಕೊಂಡ ಯಡಿಯೂರಪ್ಪ ಅವರು ಕರ್ನಾಟಕ ಭೂ ಸುಧಾರಣೆಗಳ (ತಿದ್ದುಪಡಿ) ವಿಧೇಯಕ 2020ಅನ್ನು ವಿಧಾನಸಭೆಯಲ್ಲಿ ತರಾತುರಿಯಲ್ಲಿ ಮಂಡಿಸಿ ರೈತರ ಕುತ್ತಿಗೆ ಹಿಸುಕಲಾಯಿತು.
ಬಿಜೆಪಿ ಸರ್ಕಾರಕ್ಕೆ ವರುಷ: ಕೋವಿಡ್ ಜೊತೆಗೆ ಎದುರಿಸಿದ ಸವಾಲುಗಳು!
ಕೈಗಾರಿಕಾ ಉದ್ದೇಶಗಳಿಗಾಗಿ ಭೂ ಮಂಜೂರಾತಿಯನ್ನು ಪಡೆದುಕೊಂಡ ಸಂಸ್ಥೆಗಳು 7 ವರ್ಷಗಳಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸದೆ ಇದ್ದರೆ ಇಂತಹ ಜಮೀನುಗಳನ್ನು ಸರ್ಕಾರದ ಭೂ ಬ್ಯಾಂಕಿಗೆ ವಾಪಸ್ ನೀಡುವುದು, ಇಲ್ಲದಿದ್ದ ಪಕ್ಷದಲ್ಲಿ ಸರ್ಕಾರವು ಯಾವುದೇ ಪರಿಹಾರಗಳನ್ನು ನೀಡದೆ, ನೀಡಿದ್ದ ಎಲ್ಲ ಸವಲತ್ತುಗಳನ್ನು ವಾಪಸ್ಸು ಪಡೆದು ಈ ಕೈಗಾರಿಕೆಗಳ ಮಂಜೂರಾತಿಯನ್ನು ರದ್ದುಗೊಳಿಸುವ ಖಲಂ109 ಕಾನೂನಿಗೆ ತಿದ್ದುಪಡಿ ಮಾಡಿ ಕರ್ನಾಟಕ ಭೂ ಬ್ಯಾಂಕ್ ಗೆ ಹಿಂದಿರುಗಿಸದೆ ತಾವುಗಳೇ ನೇರವಾಗಿ ಭೂಮಿಯನ್ನು ಮಾರಾಟ ಮಾಡಬಹುದೆಂಬ ಕಾನೂನು ತಂದು ಅಕ್ರಮವಾಗಿ ಭೂಮಿ ಹೊಂದಿರುವ ಮುರುಗೇಶ್ ನಿರಾಣಿ, ಜನಾರ್ದನ ರೆಡ್ಡಿ, ಜಿಂದಾಲ್ ,ನೈಸ್ ಸಂಸ್ಥೆಗಳ ಹಾಗೂ ಅನೇಕಾನೇಕ ಪ್ರಭಾವಿಗಳ ಪರವಾಗಿ ನಿಂತಿದೆ. ಕೈಗಾರಿಕಾ ಸ್ಥಾಪನೆಯ ನೆಪದಲ್ಲಿ ಈ ಭೂ ಅವ್ಯವಹಾರಕ್ಕೆ ಕುಮಕ್ಕು ನೀಡಿದ್ದು ರಾಜ್ಯ ಬಿಜೆಪಿ ಸರ್ಕಾರದ 1 ವರ್ಷದ ಘನ ಕಾರ್ಯ.
ವೈಟ್ ಮನಿ ಮಾಡುವ ದಂಧೆಗೆ ಕಾನೂನಿನ ರೂಪ
ಬೆಂಗಳೂರು ಸುತ್ತಾ ಮುತ್ತಾ ಪುಡಾರಿಗಳು ಅಕ್ರಮವಾಗಿ ಖರೀದಿಸಿರುವ 10 ಸಾವಿರ ಕೋಟಿ ಮೌಲ್ಯದ ಭೂಮಿಯನ್ನು ವಶಪಡಿಸಿಕೊಳ್ಳಿ ಎಂದು ಆದೇಶ ನೀಡಿದ ನ್ಯಾಯಲಯದ ತೀರ್ಪನ್ನು ಹೊಸಕಿಹಾಕಿ, ಐಟಿ, ಬಿಟಿಯವರು ಕೃಷಿಯಲ್ಲಿ ತೊಡಗಿಕೊಳ್ಳಲು ಉತ್ತೇಜನ ನೀಡುತ್ತೇವೆ ಎನ್ನುವ ನೆಪದಲ್ಲಿ ಭೂಮಿ ಖರೀದಿಸಲು ಇದ್ದ ಆದಾಯದ ಮಿತಿ ಹಾಗೂ ಕೃಷಿಕರಲ್ಲದವರು ಕೃಷಿ ಭೂಮಿ ಕೊಂಡುಕೊಳ್ಳಬಾರದು ಎನ್ನುವ ಭೂ ಸುಧಾರಣಾ ಕಾಯ್ದೆಯ 79A ಮತ್ತು 79B ಕಾನೂನಿಗೆ ತಿದ್ದುಪಡಿ ಮಾಡಿ ಭ್ರಷ್ಟಾಚಾರಿಗಳ ರಿಯಲ್ ಎಸ್ಟೇಟ್ ದಂದೆಗೆ ಸರ್ಕಾರ ಬೆಂಬಲವಾಗಿ ಕಾನೂನಿನ ರೂಪವನ್ನು ಕೊಟ್ಟು ಅಧಿಕೃತ ಮುದ್ರೆಯನ್ನು ಹಾಕಿದ್ದು ನಿಮ್ಮ ಒಂದು ವರ್ಷದ ಸಾಧನೆ.
ಕೃಷಿಕರ, ಸಣ್ಣಪುಟ್ಟ ವರ್ತಕರ ಕತ್ತು ಹಿಸುಕಿದ ಭೂಸುಧಾರಣೆ, ಎಪಿಎಂಸಿ ತಿದ್ದುಪಡಿ: ಬಹುರಾಷ್ಟ್ರೀಯ ಕಂಪೆನಿಗಳಿಗೆ ಲಾಭ ಮಾಡಿ ಕೊಡುವ ಉದ್ದೇಶದಿಂದ ನೀವು ತಂದ ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ಹಮಾಲಿಗಳ, ಸಣ್ಣಪುಟ್ಟ ವರ್ತಕರ ಬದುಕು ಕಸಿದುಕೊಂಡಿದ್ದೀರಿ, ಅಲ್ಲದೇ ಕಾರ್ಪೊರೇಟ್ ಸಂಸ್ಕೃತಿಯ ಕೃಷಿಗೆ ಹಿಂಬಾಗಿಲ ಮೂಲಕ ಆಹ್ವಾನ ನೀಡಿ ನಮ್ಮ ಮೂಲ ಸಂಸ್ಕೃತಿಗೆ ಬೆಂಕಿ ಹಚ್ಚಿದ್ದು ಯಡಿಯೂರಪ್ಪ ಅವರ ಒಂದು ವರ್ಷದ ಸಾಧನೆ.
ಕಾರ್ಮಿಕರ ನೀತಿಗಳನ್ನು ಗಾಳಿಗೆ ತೂರಿದ ಸರ್ಕಾರ
ಅನೇಕ ಹೋರಾಟಗಳ ಮೂಲಕ ಪಡೆದಿದ್ದ ಕಾರ್ಮಿಕರ ಕಾನೂನುಗಳಿಗೆ ತಿದ್ದುಪಡಿ ತಂದು ಮತ್ತೆ ಗುಲಾಮಿ ಪದ್ದತಿಗೆ ಸರ್ಕಾರ ಅಡಿಪಾಯ ಹಾಕಲು ಹೊರಟಿದೆ. ಮತ ನೀಡಿ ಗೆಲ್ಲಿಸಿದ ಜನರನ್ನು ಕಾರ್ಪೋರೇಟ್ ಕುಳಗಳಿಗೆ ಗುಲಾಮರನ್ನಾಗಿ ಮಾಡಲು ಹೊರಟಿದೆ. ಕಾರ್ಮಿಕರಿಗೆ ಕನಿಷ್ಠ ವೇತನ ಕಾನೂನನ್ನು ಬಿಗಿಗೊಳಿಸದೆ ಕಾರ್ಮಿಕ ಕಾಯ್ದೆಯನ್ನೇ ಬುಡಮೇಲು ಮಾಡಿದ್ದು ನಿಮ್ಮ ಒಂದು ವರ್ಷದ ಸಾಧನೆ.
ಬಿಜೆಪಿ ಸರ್ಕಾರದ ಸಾಧನೆಯ ಗುಟ್ಟು ಬಿಚ್ಚಿಟ್ಟ ಸಿದ್ದರಾಮಯ್ಯ
ಬಜೆಟ್ನಲ್ಲಿ ನೀಡಿದ ಭರವಸೆಗಳನ್ನು ಮರೆತ ಸರ್ಕಾರ: ಮಹಿಳೆಯರಿಗೆ ಉಚಿತ ಬಸ್ಪಾಸ್, ಬೆಂಗಳೂರು ನಗರದ ಬಡವರಿಗೆ 10 ಸಾವಿರ ಲೀ ಉಚಿತ ಕುಡಿಯುವ ನೀರು ಹೀಗೆ ಅನೇಕ ಹುಸಿ ಭರವಸೆಗಳನ್ನು ನೀಡಿ ಆನಂತರ ಹಣವಿಲ್ಲ ಎಂದು ಜನ ಸಾಮಾನ್ಯರಿಗೆ ದ್ರೋಹ ಬಗೆದಿದೆ.
ಬೊಕ್ಕಸದಲ್ಲಿ ಹಣವಿಲ್ಲ ಎಂದು ಸುಳ್ಳು ಹೇಳುತ್ತಾ ಬೆಂಗಳೂರು ನಗರದಲ್ಲೇ ನೀರಿನ ಪೈಪ್ ಅಳವಡಿಕೆ, ರಸ್ತೆ ಗುಂಡಿ ಮುಚ್ಚುವ ನೆಪದಲ್ಲಿ ಸಾವಿರಾರೂ ಕೋಟಿ ಕಾಮಗಾರಿ ನಡೆಸಿ ಆಪರೇಷನ್ ಕಮಲದಿಂದ ಬಂದ ಮಂತ್ರಿಗಳ , ಗುತ್ತಿಗೆದಾರರ ಜೇಬು ತುಂಬಿಸಿದೆ. ಅಲ್ಲದೇ ಅನರ್ಹ ಶಾಸಕರಲ್ಲಿ ಅಗ್ರಗಣ್ಯರಾದ ರಮೇಶ್ ಜಾರಕಿಹೊಳಿ ಅವರ ಬೃಹತ್ ನೀರಾವರಿ ಇಲಾಖೆಗೆ 10 ಸಾವಿರ ಕೋಟಿ ನೀಡಲಾಗಿದೆ, ಬಿ.ಸಿ.ಪಾಟೀಲ್, ಬೈರತಿ ಬಸವರಾಜು, ಹೆಬ್ಬಾರ, ಅನರ್ಹ ಶಾಸಕ ಮುನಿರತ್ನ ಅವರ ಕ್ಷೇತ್ರಗಳಿಗೆ ಸಾವಿರಾರು ಕೋಟಿ ನೀಡಿ ಜನರ ಚಿಕಿತ್ಸೆಗೆ ಮಾತ್ರ ಹಣವಿಲ್ಲ ಎಂದು ಸುಳ್ಳು ಹೇಳಿದ್ದು ಬಿಜೆಪಿ ಸರ್ಕಾರದ ಒಂದು ವರ್ಷದ ಸಾಧನೆ.
ಕೊರೋನಾ ಸೋಂಕು ತಡೆಗಟ್ಟುವಲ್ಲಿ ಸಂಪೂರ್ಣ ವಿಫಲ
ಇಡೀ ದೇಶದಲ್ಲೆ ಕೊರೋನಾ ಸೋಂಕಿಗೆ ಮೊದಲು ಬಲಿ ಆಗಿದ್ದು ನಮ್ಮ ರಾಜ್ಯದ ಕಲ್ಬುರ್ಗಿ ಜಿಲ್ಲೆಯಲ್ಲಿ. ಆದರೂ ಎಚ್ಚೆತ್ತು ಕೊಳ್ಳದ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಆದೇಶಕ್ಕೆ ಕಾದು ರಾಜ್ಯವನ್ನು ನರಕ ಮಾಡಿದ್ದು ಇತಿಹಾಸ. ಲಾಕ್ಡೌನ್ ಸಂದರ್ಭದಲ್ಲಿ ಹಾಗೂ ನಂತರ ಆರೋಗ್ಯ ಕ್ಷೇತ್ರಗಳ ಸುಧಾರಣೆಗೆ ಸಾಕಷ್ಟು ಅವಕಾಶವಿದ್ದರೂ ಸೋಮಾರಿತನ ತೋರಿಸಿ, ಖಾಸಗಿ ಆಸ್ಪತ್ರೆಗಳ ಲಾಭಿಗೆ ಮಣಿದು ಸೋಂಕಿತರು ಬೀದಿ, ಬೀದಿಯಲ್ಲಿ ಸಾಯುವಂತೆ ಮಾಡಿದ್ದು, ಹಾಸಿಗೆ ಇಲ್ಲದೆ ಜನ ಸಾಯುತ್ತಿದ್ದರೂ ಕೇವಲ 10 ಸಾವಿರ ಹಾಸಿಗೆ ವ್ಯವಸ್ಥೆ ಮಾಡದ ಅತ್ಯಂತ ಹೀನ ಹಾಗೂ ದುಬರ್ಲ ಸರ್ಕಾರ. ಇದಲ್ಲದೇ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ 2000 ಕೋಟಿ ರೂಪಾಯಿಗಳ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಸಿಲುಕಿಕೊಂಡಿರುವುದು ನಿಮ್ಮ ಒಂದು ವರ್ಷದ ಮಹಾನ್ ಸಾಧನೆ.
ಇಷ್ಟೆಲ್ಲಾ ಸಾಧನೆಗಳನ್ನು ಕೇವಲ ಒಂದು ವರ್ಷದಲ್ಲಿ ಸಾಧಿಸಿದ ಬಿಜೆಪಿ ಸರ್ಕಾರಕ್ಕೆ ಉತ್ತಮ ಆಡಳಿತ ಮಾಡಿದ್ದಕ್ಕೆ ನೊಬೆಲ್ ಪ್ರಶಸ್ತಿಗೆ ಸಮಾನಾಂತರವಾದ ಬೇರೆ ಯಾವುದಾದರೂ ಪ್ರಶಸ್ತಿಯನ್ನು ಸನ್ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ನೀಡಬೇಕೆಂದು ಆಮ್ ಆದ್ಮಿ ಪಕ್ಷ ರಾಷ್ಟ್ರಪತಿಗಳಲ್ಲಿ ಮನವಿ ಮಾಡುತ್ತದೆ ಎಂದು ಆಮ್ ಆದ್ಮಿ ಪಾರ್ಟಿ ಬೆಂಗಳೂರು ವಿಭಾಗದ ಅಧ್ಯಕ್ಷ ಮೋಹನ್ ದಾಸರಿ ಹೇಳಿದ್ದಾರೆ.