ಯಡಿಯೂರಪ್ಪ ರಾಜ್ಯ ಪ್ರವಾಸ; ಮಾಜಿ ಸಿಎಂ ಸಂಚಾರಕ್ಕೆ ಹೊಸ ಕಾರು
ಬೆಂಗಳೂರು, ಆಗಸ್ಟ್ 25; ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಒಂದು ತಿಂಗಳು ಕಳೆಯುತ್ತಾ ಬಂತು. ರಾಜ್ಯದಲ್ಲಿ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಯಡಿಯೂರಪ್ಪ ಈಗಾಗಲೇ ಘೋಷಣೆ ಮಾಡಿದ್ದಾರೆ. ರಾಜ್ಯ ಪ್ರವಾಸಕ್ಕಾಗಿ ಅವರು ಹೊಸ ಕಾರು ಸಹ ಖರೀದಿ ಮಾಡಿದ್ದಾರೆ.
ರಾಜ್ಯ ಪ್ರವಾಸ ಮಾಡಲಿರುವ ಯಡಿಯೂರಪ್ಪ Toyota Vellfire ಕಾರು ಬಳಕೆ ಮಾಡಲಿದ್ದಾರೆ. ಈಗಾಗಲೇ ಹೊಸ ಕಾರಿನಲ್ಲಿ ಯಡಿಯೂರಪ್ಪ ಘಾಟಿ ಸುಬ್ರಮಣ್ಯ ದೇವಾಲಯಕ್ಕೆ ಹೋಗಿ ಬಂದಿದ್ದಾರೆ. ವಿದೇಶ ಪ್ರವಾಸ ಮುಗಿಸಿ ವಾಪಸ್ ಆದ ಅವರು ವಿಮಾನ ನಿಲ್ದಾಣದಿಂದ ಇದೇ ಕಾರಿನಲ್ಲಿ 'ಕಾವೇರಿ'ಗೆ ಆಗಮಿಸಿದ್ದರು.
ಸಂಪುಟ ದರ್ಜೆ ಸ್ಥಾನಮಾನ ನಿರಾಕರಿಸಿದ ಯಡಿಯೂರಪ್ಪ!
ಬಿಳಿ ಬಣ್ಣದ ಐಷಾರಾಮಿ Toyota Vellfire ಕಾರನ್ನು ಖರೀದಿ ಮಾಡಲಾಗಿದೆ. 78 ವರ್ಷದ ಯಡಿಯೂರಪ್ಪ ಇದೇ ಕಾರಿನಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದು, 2023ರ ವಿಧಾನಸಭೆ ಚುನಾವಣೆಗೆ ಪಕ್ಷ ಸಂಘಟನೆ ಮಾಡಲಿದ್ದಾರೆ. ಗಣಪತಿ ಹಬ್ಬ ಬಳಿಕ ಅವರು ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ.
ಬಿಜೆಪಿಯಲ್ಲಿ ಬದಲಾವಣೆ; ಬೆಂಗಳೂರು ನಾಯಕನಿಗೆ ರಾಜ್ಯಾಧ್ಯಕ್ಷ ಪಟ್ಟ?
ರಾಜ್ಯದ ಪ್ರತಿ ಜಿಲ್ಲೆಗೆ ಭೇಟಿ ಕೊಡುವ ಚಿಂತನೆಯಲ್ಲಿ ಯಡಿಯೂರಪ್ಪ ಇದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋತ ಕ್ಷೇತ್ರಗಳಲ್ಲಿ ಮೊದಲು ಅವರು ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಪ್ರವಾಸದ ರೂಪುರೇಷೆ ಇನ್ನೂ ತಯಾರಾಗುತ್ತಿದೆ.
ಸಚಿವ ಸ್ಥಾನ ಅಥವ ರಾಜ್ಯಾಧ್ಯಕ್ಷ ಪಟ್ಟ; ವಿಜಯೇಂದ್ರ ಸ್ಪಷ್ಟನೆ
Toyota Vellfire ಕಾರಿನಲ್ಲಿ ಪ್ರವಾಸ
ಯಡಿಯೂರಪ್ಪ ರಾಜ್ಯ ಪ್ರವಾಸಕ್ಕಾಗಿ Toyota Vellfire ಕಾರನ್ನು ಖರೀದಿ ಮಾಡಲಾಗಿದೆ. ಈ ಕಾರಿನ ಬೆಲೆ ಸುಮಾರು 89 ಲಕ್ಷ ರೂಪಾಯಿ. ಕಾರಿನ ಒಳಗಡೆಯೇ ನಿಂತು ಪ್ರಚಾರ ಮಾಡುವ ವ್ಯವಸ್ಥೆಯನ್ನು ಇದು ಹೊಂದಿದೆ. ಯಡಿಯೂರಪ್ಪ ನೋಡಲು ಹೆಚ್ಚು ಜನ ಸೇರುತ್ತಾರೆ. ಕೋವಿಡ್ ಸಂದರ್ಭದಲ್ಲಿ ಜನರ ಗುಂಪಿನಿಂದ ದೂರ ಉಳಿಯಲು ಯಡಿಯೂರಪ್ಪ ಕಾರಿನಲ್ಲಿಯೇ ನಿಂತು ಭಾಷಣಗಳನ್ನು ಮಾಡುವ ಸಾಧ್ಯತೆ ಇದೆ.
ಯಾವಗ ಯಡಿಯೂರಪ್ಪ ರಾಜ್ಯ ಪ್ರವಾಸ?
ಜುಲೈ 26ರಂದು ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರು ರಾಜೀನಾಮೆ ನೀಡಿ ಒಂದು ತಿಂಗಳು ಕಳೆಯುತ್ತಾ ಬಂದಿದೆ. ರಾಜೀನಾಮೆ ಬಳಿಕ ಶಿಕಾರಿಪುರಕ್ಕೆ ಸಹ ಭೇಟಿ ನೀಡದೆ ಬೆಂಗಳೂರಿನಲ್ಲಿ ಯಡಿಯೂರಪ್ಪ ಇದ್ದಾರೆ. ಗಣೇಶ ಹಬ್ಬವಾದ ಬಳಿಕ ಯಡಿಯೂರಪ್ಪ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಆದರೆ ದಿನಾಂಕ ಮತ್ತು ಎಲ್ಲಿಂದ ಪ್ರವಾಸ ಆರಂಭಿಸಬೇಕು? ಎಂಬುದು ಇನ್ನೂ ಅಂತಿಮವಾಗಿಲ್ಲ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಎರಡು ವರ್ಷಗಳು ಬಾಕಿ ಇದೆ. ಚುನಾವಣೆ ಘೋಷಣೆಗೂ ಮುನ್ನ ಯಡಿಯೂರಪ್ಪ ಒಂದು ಸುತ್ತಿನ ರಾಜ್ಯ ಪ್ರವಾಸವನ್ನು ಪೂರ್ಣಗೊಳಿಸಲಿದ್ದಾರೆ.
ಶಿಕಾರಿಪುರಕ್ಕೆ ಭೇಟಿ
ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸ್ವಕ್ಷೇತ್ರ ಶಿಕಾರಿಪುರ, ಶಿವಮೊಗ್ಗಕ್ಕೂ ಭೇಟಿ ಕೊಟ್ಟಿಲ್ಲ. ನಿಗದಿಯಾಗಿದ್ದ ಶಿವಮೊಗ್ಗ ಪ್ರವಾಸ ಸಹ ರದ್ದಾಗಿತ್ತು. ಈಗ ವಿದೇಶ ಪ್ರವಾಸ ಮುಗಿಸಿ ಬಂದಿರುವ ಯಡಿಯೂರಪ್ಪ ಮೊದಲು ಶಿಕಾರಿಪುರಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ರಾಜ್ಯ ಪ್ರವಾಸವನ್ನು ಮಾಡಲಿದ್ದಾರೆ. ತಮ್ಮ ತವರು ಜಿಲ್ಲೆ ಶಿವಮೊಗ್ಗದಿಂದಲೇ ಅವರು ಪ್ರವಾಸವನ್ನು ಆರಂಭಿಸಲಿದ್ದಾರೆಯೇ? ಎಂದು ಕಾದು ನೋಡಬೇಕಿದೆ.
Recommended Video
ತಯಾರಾಗುತ್ತಿದೆ ರೂಪುರೇಷೆ
2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋತ ಕ್ಷೇತ್ರ, ಯಾವ ಕ್ಷೇತ್ರದಲ್ಲಿ ಪಕ್ಷ ದುರ್ಬಲವಾಗಿದೆಯೋ ಅಲ್ಲಿಂದ ಯಡಿಯೂರಪ್ಪ ಪ್ರವಾಸ ಆರಂಭಿಸಲಿದ್ದಾರೆ ಎಂಬ ಮಾಹಿತಿ ಇದೆ. ರಾಜ್ಯದ ಪ್ರತಿಯೊಂದು ಜಿಲ್ಲೆಗಳಿಗೂ ಭೇಟಿ ಕೊಡುವ ಚಿಂತನೆಯಲ್ಲಿದ್ದಾರೆ ಮಾಜಿ ಮುಖ್ಯಮಂತ್ರಿ. ಯಡಿಯೂರಪ್ಪ ರಾಜ್ಯ ಪ್ರವಾಸದ ರೂಪುರೇಷೆ ಇನ್ನೂ ಅಂತಿಮಗೊಳ್ಳುತ್ತಿದೆ. ಕರ್ನಾಟಕ ಬಿಜೆಪಿಯ ಪ್ರಭಾವಿ ನಾಯಕನ ರಾಜ್ಯ ಪ್ರವಾಸಕ್ಕೆ ಯಾವ ರೀತಿ ಪ್ರತಿಕ್ರಿಯೆ ಸಿಗಲಿದೆ? ಎಂದು ವಿರೋಧ ಪಕ್ಷಗಳು ಸಹ ಕಾದು ನೋಡುತ್ತಿವೆ.