ಪುತ್ರನ ರಾಜಕೀಯ ಭವಿಷ್ಯದ ಕುರಿತು ಯಡಿಯೂರಪ್ಪ ಮಹತ್ವದ ಹೇಳಿಕೆ!
ಬೆಂಗಳೂರು, ನ. 10: ಉಪ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯದ ಬಳಿಕ ಬಿಜೆಪಿಯಲ್ಲಿನ ಚರ್ಚೆಯ ದಿಕ್ಕು ಬದಲಾಗಿದೆ. ಪ್ರತಿಷ್ಠೆಯ ಕಣಗಳಾಗಿದ್ದ ಶಿರಾ ಹಾಗೂ ಆರ್ ಆರ್ ನಗರ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಬಳಿಕ ಲೆಕ್ಕಾಚಾರಗಳು ಬದಲಾಗಿವೆ. ಪಕ್ಷದಲ್ಲಿನ ನಾಯಕತ್ವ ಬದಲಾವಣೆ ಬದಲಿಗೆ ಯಡಿಯೂರಪ್ಪ ಅವರ ಸಿಎಂ ಸ್ಥಾನ ಮತ್ತಷ್ಟು ಗಟ್ಟಿಯಾಗಿದೆ. ಜೊತೆಗೆ ಬಿ.ವೈ. ವಿಜಯೇಂದ್ರ ಅವರು ಚುನಾವಣೆ ಗೆಲ್ಲಿಸಿಕೊಡುವ ಮಾಸ್ಟರ್ ಮೈಂಡ್ ಎಂಬಂತಾಗಿದೆ.
ಬಿ.ವೈ. ವಿಜಯೇಂದ್ರ ಅವರು ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ಸ್ಥಾನವನ್ನು ತುಂಬುತ್ತಾರೆ ಎಂಬುದು ಅತಿಶಯೋಕ್ತಿ. ಆದರೆ ಕೆ.ಆರ್. ಪೇಟೆ ಹಾಗೂ ಶಿರಾ ಉಪ ಚುನಾವಣೆಗಳು ವಿಜಯೇಂದ್ರ ಅವರ ರಾಜಕೀಯ ತಂತ್ರಗಾರಿಕೆಯನ್ನು ಸಾಬೀತು ಪಡಿಸಿವೆ. ಹೀಗಾಗಿ ಯಡಿಯೂರಪ್ಪ ಅವರನ್ನು ಬಿಜೆಪಿ ಹೈಕಮಾಂಡ್ ನಿರ್ಲಕ್ಷ ಮಾಡುವುದು ಹೇಗೆ ಅಸಾಧ್ಯವೊ ಹಾಗೆಯೆ ವಿಜಯೇಂದ್ರ ಅವರೂ ಕೂಡ ಈ ಉಪ ಚುನಾವಣೆಯಿಂದ ಬಿಜೆಪಿ ಅನಿವಾರ್ಯ ಎಂಬಂತಾಗಿದೆ.
ಶಿರಾ: ಬಿ.ವೈ.ವಿಜಯೇಂದ್ರ ಮುಂದೆ ಮಂಡಿಯೂರಿದ ಪ್ರಜ್ವಲ್ ರೇವಣ್ಣ ಕಾರ್ಯತಂತ್ರ
ಆರ್ ಆರ್ ನಗರ ಉಪ ಚುನಾವಣೆಯನ್ನು ಮುನಿರತ್ನ ಅವರು ಸ್ವಂತ ಬಲದಿಂದ ಗೆದ್ದಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಪರಿಸ್ಥಿತಿ ಹಾಗಿರಲಿಲ್ಲ. ಅಸಲಿಗೆ ಅಲ್ಲಿ ಬಿಜೆಪಿಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಪೈಪೋಟಿ ನೀಡುವ ಅಭ್ಯರ್ಥಿಯೆ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೇವಲ ಒಂದು ತಿಂಗಳಲ್ಲಿ ಇಡೀ ಕ್ಷೇತ್ರದ ಚಿತ್ರಣವನ್ನೇ ಬದಲಿಸಿದ್ದು ವಿಜಯೇಂದ್ರ ಎಂದು ಬಿಜೆಪಿ ಹಿರಿಯ ನಾಯಕರೆ ಹೇಳಿದ್ದಾರೆ.
ಸಿಎಂ ಯಡಿಯೂರಪ್ಪ ಎದುರು ಮಹತ್ವದ ಬೇಡಿಕೆ ಇಟ್ಟ ಅನರ್ಹ ಶಾಸಕ!
ಹೀಗಾಗಿ ಪುತ್ರ ಬಿ.ವೈ. ವಿಜಯೇಂದ್ರ ಅವರ ರಾಜಕೀಯ ಭವಿಷ್ಯದ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶಿರಾ ಉಪ ಚುನಾವಣೆಯ ಫಲಿತಾಂಶದ ಬಳಿಕ ಮಹತ್ವದ ಮಾತನ್ನಾಡಿದ್ದಾರೆ. ಯಡಿಯೂರಪ್ಪ ಅವರ ಹೇಳಿಕೆಯ ಸಂಪೂರ್ಣ ವಿವರ ಇಲ್ಲಿದೆ.
ಜನತೆಗೆ ಸೇರಬೇಕಾದ ಜಯ
ಉಪ ಚುನಾವಣೆ ಫಲಿತಾಂಶದ ಬಗ್ಗೆ ತಮ್ಮ ಪ್ರತಿಕ್ರಿಯೆ ಕೊಟ್ಟಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಈ ವಿಜಯ ಜನತೆಗೆ ಸೇರಬೇಕಾದ ವಿಜಯ ಭೀಕರ ಪ್ರವಾಹ, ಕೊರೊನಾದಂತಹ ಪರಿಸ್ಥಿತಿಯಲ್ಲಿ ಸರ್ಕಾರ ಉತ್ತಮವಾಗಿ ಕೆಲಸ ಮಾಡಿದೆ. ಶಿರಾ ಹಾಗೂ ಆರ್ ಆರ್ ನಗರದ ಜನತೆಗೆ ಕೊಟ್ಟ ಭರವಸೆಗಳನ್ನು ಈಡೇರಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ವಿಜಯೇಂದ್ರ ಅವರು ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆಯೂ ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ.
ಉಪ ಚುನಾವಣೆಯಲ್ಲಿ ಸ್ಪರ್ಧೆ
ವಿಜಯೇಂದ್ರ ಉಪ ಚುನಾವಣೆಯಲ್ಲಿ ಅತ್ಯುತ್ತಮ ರಾಜಕೀಯ ತಂತ್ರಗಾರಿಕೆ ಮಾಡುತ್ತಿರುವುದರಿಂದ ಬಸವ ಕಲ್ಯಾಣ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ವಿಜಯೇಂದ್ರ ಅವರ ಮೇಲೆ ಪಕ್ಷದಲ್ಲಿ ಒತ್ತಡ ಹೆಚ್ಚಾಗುತ್ತಿವೆ ಎಂಬ ಮಾತಿದೆ. ಅದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಸಿಎಂ ಯಡಿಯುರಪ್ಪ ಅವರು, ವಿಜಯೇಂದ್ರ ಉಪ ಚುನಾವಣೆಗಳಲ್ಲಿ ಸ್ಪರ್ಧೆ ಮಾಡುವಿದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧೆ
ಆದರೆ ಬಸವ ಕಲ್ಯಾಣ ಹಾಗೂ ಮಸ್ಕಿ, ಎರಡೂ ಉಪ ಚುನಾವಣೆಯೂ ನಮಗೆ ಬಹಳ ಮುಖ್ಯ. ಆ ಎರಡೂ ಕ್ಷೇತ್ರಗಳನ್ನು ಗೆಲ್ಲುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ವಿಜಯೇಂದ್ರ ಸ್ಪರ್ಧೆಗೆ ಏನೇ ಒತ್ತಡ ಇದ್ದರೂ ಈಗ ಅವನು ಸ್ಪರ್ಧೆ ಮಾಡುವುದಿಲ್ಲ. ಪಕ್ಷ ಜೊತೆಗೆ ಹೈಕಮಾಂಡ್ ಬಯಸಿದರೆ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನೋಡೋಣ ಎಂದು ತಮ್ಮ ಪುತ್ರನ ರಾಜಕೀಯ ಭವಿಷ್ಯದ ಬಗ್ಗೆ ಯಡಿಯೂರಪ್ಪ ಅವರು ಮಾತನಾಡಿದ್ದಾರೆ.
ಸಾಧನೆ ಮಾತನಾಡಬೇಕು!
ಸಿದ್ದರಾಮಯ್ಯ ಅವರ ಆರೋಪದ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ಯಡಿಯೂರಪ್ಪ ಅವರು, ಚುನಾವಣಾ ಸಮಯದಲ್ಲಿ ನಾನು ಏನೂ ಮಾತಾಡಿರಲಿಲ್ಲ. ಮಾತಾಡೋದೇ ಸಾಧನೆ ಆಗಬಾರದು, ಸಾಧನೆ ಮಾತನಾಡಬೇಕು. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಟೀಕೆಗಳಿಗೆ ಜನರೇ ಉತ್ತರ ಕೊಟ್ಟಿದ್ದಾರೆ, ನಾನು ಉತ್ತರ ಕೊಡಬೇಕಿಲ್ಲ. ಇನ್ನಾದರೂ ಅವರು ತಮ್ಮ ತಪ್ಪುಗಳನ್ನು ತಿದ್ದುಕೊಂಡು ಹೋಗಲಿ ಎಂದಿದ್ದಾರೆ.
ವಿಜಯೇಂದ್ರ ತಂತ್ರಗಾರಿಕೆ
ಕೆ.ಆರ್. ಪೇಟೆಯಲ್ಲಿ ಜೆಡಿಎಸ್ ಭದ್ರಕೋಟೆಗೆ ಲಗ್ಗೆ ಹಾಕಿದ್ದ ವಿಜಯೇಂದ್ರ ಅವರು, ಇದೀಗ ಕಾಂಗ್ರೆಸ್ ಹಾಗೂ ಜೆಡಿಎಸ್ ಭದ್ರಕೋಟೆಯಾಗಿದ್ದ ಶಿರಾಕ್ಕೆ ನುಗ್ಗಿ ಜಯಿಸಿದ್ದಾರೆ. ಜೊತೆಗೆ ಅಭ್ಯರ್ಥಿ ಆಯ್ಕೆಯಲ್ಲಿಯೂ ರಾಜಕೀಯ ತಂತ್ರಗಾರಿಕೆಯನ್ನು ವಿಜಯೇಂದ್ರ ಮೆರೆದಿದ್ದಾರೆ. ಜೆಡಿಎಸ್ ಪಕ್ಷ ಅನುಕಂಪದ ಲಾಭ ಪಡೆಯಲಿಕ್ಕೆ ವಿಜಯೇಂದ್ರ ಆಸ್ಪದನ್ನೇ ಕೊಟ್ಟಿಲ್ಲ. ಜೊತೆಗೆ ಮದಲೂರು ಕೇರೆ ನೀರಿನ ವಿಚಾರ ಬಂದಾಗ ಅದನ್ನು ಸಮರ್ಥವಾಗಿ ಮತಗಳನ್ನಾಗಿ ಬದಲಿಸಿದ್ದಾರೆ.
ಶಿಕಾರಿಪುರ ಕ್ಷೇತ್ರದಲ್ಲಿಯೇ ಸ್ಪರ್ಧೆ?
ಈ ಎಲ್ಲ ಕಾರಣಗಳಿಂದ ಈಗ ಬಿಜೆಪಿ ಹೈಕಮಾಂಡ್ ಕೂಡ ವಿಜಯೇಂದ್ರ ಅವರನ್ನು ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ನಡೆದಿದ್ದ ಚರ್ಚೆಯನ್ನು ವಿಜಯೇಂದ್ರ ಚಿವುಟಿ ಹಾಕಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಯಡಿಯೂರಪ್ಪ ಅವರುಯ ಕೂಡ ಮತ್ತಷ್ಟು ಸ್ಟ್ರಾಂಗ್ ಆಗಿದ್ದಾರೆ. ಹೀಗಾಗಿ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ವಿಜಯೇಂದ್ರ ಬನಹುತೇಕ ಶಿಕಾರಿಪುರ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವುದು ಕೂಡ ಖಚಿತವಾಗಿದೆ.
Recommended Video