ಕೊರೊನ ವೈರಸ್: ಸಿದ್ದರಾಮಯ್ಯರಿಗೆ ದೂರವಾಣಿ ಕರೆ ಮಾಡಿದ ಯಡಿಯೂರಪ್ಪ
ಬೆಂಗಳೂರು, ಏ. 06: ಇಡೀ ಜಗತ್ತಿಗೆ ಆತಂಕವನ್ನು ತಂದಿದೆ. ದೇಶದ ಗಡಿಗಳನ್ನು ಮರೆತು ಜಾಗತಿಕ ನಾಯಕರು ಕೊರೊನಾ ವೈರಸ್ ವಿರುದ್ಧ ಹೋರಾಡಲು ಕೈಜೋಡಿಸಿದ್ದಾರೆ. ಇದಕ್ಕೆ ಭಾರತವೂ ಹೊರತಾಗಿಲ್ಲ. ಆದರೆ ರಾಜ್ಯದಲ್ಲಿ ಮಾತ್ರ ಬೆರೆಯದ್ದೆ ಪರಿಸ್ಥಿತಿಯಿದೆ. ಕೊರೊನಾ ವೈರಸ್ ವಿರುದ್ಧ ಹೋರಾಡಲು ಸರ್ವಪಕ್ಷ ಸಭೆಯನ್ನು ಕರೆಯಲು ವಿರೋಧ ಪಕ್ಷಗಳು ನಾಯಕರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಒತ್ತಾಯ ಮಾಡಿದ್ದರು. ಕೊರೊನಾ ವೈರಸ್ ಹಾವಳಿಯಿಂದ ರಾಜ್ಯ ವಿಧಾನಮಂಡಲ ಬಜೆಟ್ ಅಧಿವೇಶನವನ್ನೂ ಮೊಟಕು ಗೊಳಿಸಲಾಗಿತ್ತು.
ಕೊರೊನಾಗಿಂತಲೂ ಮೊದಲು ವೈದ್ಯಕೀಯ ಲೋಕಕ್ಕೆ ಎಬೋಲಾ ಸವಾಲು
ಆಗಲೂ ಆಡಳಿತ ಹಾಗೂ ವಿರೋಧ ಪಕ್ಷಗಳ ಅಭಿಪ್ರಾಯ ಒಂದೆ ಆಗಿರಲಿಲ್ಲ. ಇದೀಗ ಸರ್ವಪಕ್ಷ ಸಭೆ ನಡೆದ ಬಳಿಕವೂ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಸರಣಿ ಪತ್ರಗಳನ್ನು ಬರೆದು ಜನರ ಸಂಕಷ್ಟಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದರು.
ಇಂದಿರಾ ಕ್ಯಾಂಟೀನ್ನಲ್ಲಿ ಉಚಿತ ಆಹಾರ ನಿಲ್ಲಿಸಿದ್ದ ಸರ್ಕಾರ
ಕೊರೊನಾ ವೈರಸ್ ಹರಡುವುದನ್ನು ತಡೆಯುವ ಹಿನ್ನೆಲೆಯಲ್ಲಿ ದೇಶಾದ್ಯಂತ ಒಮ್ಮೆಲೆ ಲಾಕ್ಡೌನ್ ಜಾರಿಗೆ ತರಲಾಯಿತು. ಬಡವರಿಗೆ ತೊಂದರೆ ಆಗಬಾರದು ಎಂದು ಕಾಂಗ್ರೆಸ್ ಆಡಳಿತದ ಸರ್ಕಾರವಿದ್ದಾಗ ಆರಂಭವಾಗಿದ್ದ ಇಂದಿರಾ ಕ್ಯಾಂಟೀನ್ಗಳಲ್ಲಿ ರಾಜ್ಯ ಬಿಜೆಪಿ ಸರ್ಕಾರ ಉಚಿತ ಆಹಾರ ಕೊಡುವ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಆದರೆ ಒಂದೇ ದಿನದಲ್ಲಿ ಇಂದಿರಾ ಕ್ಯಾಂಟೀನ್ನ್ನು ಬಂದ್ ಮಾಡಲಾಗಿತ್ತು. ಇದರಿದ ಜನಸಾಮನ್ಯರಿಗೆ ತೊಂದರೆ ಆಗಿತ್ತು. ನಂತರ ಇಂದಿರಾ ಕ್ಯಾಂಟೀನುಗಳನ್ನು ಮತ್ತೆ ಆರಂಭಿಸಿದ್ದ ಸರ್ಕಾರ ಆಹಾರಕ್ಕೆ ದರ ನಿಗದಿ ಮಾಡಿದೆ.
ಅಮಾನವೀಯ ಎಂದು ಸಿಎಂಗೆ ಪತ್ರ ಬರೆದಿದ್ದ ಸಿದ್ದರಾಮಯ್ಯ
ಏಕಾಏಕಿ ಲಾಕ್ಡೌನ್ ಮಾಡಿ, ಇಂದಿರಾ ಕ್ಯಾಂಟೀನ್ಗಳಲ್ಲಿ ಉಚಿತ ಆಹಾರ ಕೊಡದೇ ಇದ್ದುದನ್ನು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದರು. ಈ ಬಗ್ಗೆ ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಸರ್ಕಾರದ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಕೊರೊನಾ ವೈರಸ್ ಕಾರಣಕ್ಕೆ ಇಡೀ ದೇಶದಲ್ಲಿ ಲಾಕ್ಡೌನ್ ಆಗಿರುವಾಗ ಹಸಿದವನ ಹಸಿವು ನೀಗಿಸಲು ಇಂದಿರಾ ಕ್ಯಾಂಟೀನುಗಳನ್ನು ಸಮರ್ಥವಾಗಿ ಬಳಸಿಕೊಳ್ಳಬಹುದಾಗಿದೆ. ದುಡಿಮೆ ಇಲ್ಲದೆ, ಕೈಯಲ್ಲಿ ಕಾಸಿಲ್ಲದ ಕೆಟ್ಟ ಪರಿಸ್ಥಿತಿಯಲ್ಲಿ ಇಂದಿರಾ ಕ್ಯಾಂಟೀನ್ಗಳಲ್ಲಿ ಕೊಡುವ ಊಟ, ಉಪಹಾರಕ್ಕೆ ದರ ನಿಗದಿ ಮಾಡಿದ್ದು ಅಮಾನವೀಯ. ದುರುಪಯೋಗವಾಗುತ್ತಿದ್ದರೆ ಅದನ್ನು ತಡೆಯಬೇಕೇ ಹೊರತು ಉಚಿತವಾಗಿ ಊಟ, ತಿಂಡಿ ನೀಡುವುದನ್ನು ನಿಲ್ಲಿಸುವುದ ಸರಿಯಲ್ಲ ಎಂದು ಸಿದ್ದರಾಮಯ್ಯ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದರು.
ರೈತರ ಸಂಕಷ್ಟಗಳ ಬಗ್ಗೆ ಎರಡು ಪತ್ರ ಬರೆದಿದ್ದ ಸಿದ್ದರಾಮಯ್ಯ
ಇನ್ನು ಲಾಕ್ಡೌನ್ನಿಮದ ರೈತರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆಯೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರಬರೆದಿದ್ದರು. ಜೊತೆಗೆ ಅಸಂಘಟಿತ ವಲಯದ ಕೂಲಿ ಕಾರ್ಮಿಕರ ಸಂಕಷ್ಟಗಳನ್ನು ಪ್ರಸ್ತಾಪಿಸಿದ್ದರು. ರೈತ ಹಾಗೂ ಗ್ರಾಹಕ ಇಬ್ಬರಿಗೂ ಒಂದೇ ಸಲಕ್ಕೆ ಸಂಕಷ್ಟ ಬಂದಿರುವುದರಿಂದ ರಾಜ್ಯದಲ್ಲಿ ಅರಾಜಕತೆ ವಾತಾರವಣ ಉಂಟಾಗಿದೆ. ರೈತರು ಲಂಚ ಕೊಡದೇ ಇದ್ದರೆ ಅವರು ಕಷ್ಟಪಟ್ಟು ಬೆಳೆದಿರುವ ಬೆಳಗಳನ್ನು ಮಾರುಕಟ್ಟೆಗೆ ಸಾಗಿಸಲು ಪೊಲೀಸರು, ಆರ್ಟಿಓಗಳು ಬಿಡುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲೂ ಲಂಚಬಾಕುತನವನ್ನು ನೋಡಿದ್ರೆ ಸರ್ಕಾರ ಇದೆಯೊ ಇಲ್ಲವೊ ಎಂಬ ಅನುಮಾನ ಜನರಲ್ಲಿ ಬಂದಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಸಿದ್ದರಾಮಯ್ಯ ಎಚ್ಚರಿರಿಸಿದ್ದರು.
ಸಿದ್ದರಾಮಯ್ಯ ಅವರಿಗೆ ಸಿಎಂ ಯಡಿಯೂರಪ್ಪ ದೂರವಾಣಿ ಕರೆ
ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರಣಿ ಪತ್ರಗಳನ್ನು ಬರೆದಿದ್ದ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಕರೆ ಮಾಡಿ ಮಾತನಾಡಿದ್ದಾರೆ. ಎಲ್ಲ ವಿಚಾರಗಳ ಕುರಿತು ಸರ್ಕಾರದ ಕ್ರಮಗಳನ್ನು ಸಿಎಂ ಯಡಿಯೂರಪ್ಪ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದಾರೆ. ಇಂದಿರಾ ಕ್ಯಾಂಟೀನುಗಳಲ್ಲಿ ಊಟ, ತಿಂಡಿ ಉಚಿತವಾಗಿ ನೀಡಲಾಗುತ್ತಿತ್ತು. ಆದರೆ ದುರುಪಯೋಗವಾಗದ ಕಾರಣ ದರ ನಿಗದಿ ಮಾಡಿರುವುದಾಗಿ ಯಡಿಯೂರಪ್ಪ ತಿಳಿಸಿದ್ದಾರೆ. ಜೊತೆಗೆ ಲಾಕ್ಡೌನ್ನಿಂದ ರೈತರು, ಕೃಷಿ ಕೂಲಿ ಕಾರ್ಮಿಕರು, ಜತೆಗೆ ಹಲವಾರು ಕ್ಷೇತ್ರಗಳ ದುಡಿಯುವ ವರ್ಗದವರಿಗೆ ಆಗಿರುವ ತೊಂದರೆ ಬಗ್ಗೆ ಸೂಕ್ತ ಪರಿಹಾರ ಒದಗಿಸುವ ಭರವಸೆಯನ್ನು ಸಿಎಂ ಕೊಟ್ಟಿದ್ದಾರೆ. ಪ್ರತಿಪಕ್ಷಗಳ ಸಲಹೆ, ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮ ರೂಪಿಸುವುದಾಗಿ ಸಿದ್ದರಾಮಯ್ಯ ಅವರಿಗೆ ಸಿಎಂ ಯಡಿಯೂರಪ್ಪ ಭರವಸೆ ಕೊಟ್ಟಿದ್ದಾರೆ. ಒಟ್ಟಾರೆಯಾಗಿ ಸರ್ವಪಕ್ಷ ಸಭೆಯಲ್ಲಿ ಭರವಸೆ ಕೊಟ್ಟಂತೆ ವಿರೋಧ ಪಕ್ಷಗಳು ರಾಜ್ಯ ಸರ್ಕಾರಕ್ಕೆ ಸಹಕಾರವನ್ನು ಕೊಡುತ್ತಿವೆ.