ಬಿಎಸ್ವೈ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ: ಸಮರ್ಥ ಸಚಿವರಿಗೆ ಯಾಕೀ ಹಿನ್ನಡೆ?
ಯಡಿಯೂರಪ್ಪನವರ ನೇತೃತ್ವದ ಸಚಿವ ಸಂಪುಟದ ನೂತನ ಏಳು ಸಚಿವರಿಗೆ ಖಾತೆ ಹಂಚಿಕೆಯನ್ನು ಮಾಡಲಾಗಿದೆ ಜೊತೆಗೆ ಕೆಲವು ಸಚಿವರ ಖಾತೆಯೂ ಅದಲು ಬದಲಾಗಿದೆ. ಸಚಿವ ಸ್ಥಾನ ಸಿಕ್ಕರೆ ಸಾಕು ಎನ್ನುತ್ತಿದ್ದವರು ಈಗ ಕೊಟ್ಟ ಖಾತೆಗೆ ಮುನಿಸಿಕೊಂಡು ಕೂತಿದ್ದಾರೆ.
ಆಪರೇಶನ್ ಕಮಲದ ಮೂಲಕ ಬಂದವರ ಪೈಕಿ ಹೆಚ್ಚಿನವರು ಖಾತೆ ಬದಲಾವಣೆಯ ವಿಚಾರದಲ್ಲಿ ಬೇಸರಿಸಿಕೊಂಡಿದ್ದಾರೆ. ಅದರಲ್ಲಿ ಎಂ.ಟಿ.ಬಿ ನಾಗರಾಜ್ ಅಂತೂ ಮಾಧ್ಯಮದವರ ಮುಂದೆಯೇ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಬಿ.ಎಸ್ ಯಡಿಯೂರಪ್ಪ ಸಚಿವ ಸಂಪುಟ: ಯಾರಿಗೆ ಯಾವ ಖಾತೆ? ಸಮಗ್ರ ಪಟ್ಟಿ
ಗುರುವಾರ (ಜ 21) ಹಂಚಿಕೆಯಾದ ಖಾತೆಯಲ್ಲಿ ಮಹತ್ವದ ಬದಲಾವಣೆ ಎಂದರೆ ಅದು ಡಾ.ಸುಧಾಕರ್ ಅವರದ್ದು. ಇವರ ಬಳಿಯಿದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಅವರಿಂದ ಕಿತ್ತುಕೊಂಡು ಜೆ.ಸಿ.ಮಾಧುಸ್ವಾಮಿಯವರಿಗೆ ನೀಡಲಾಗಿದೆ.
ಸುಧಾಕರ್ ಅವರಿಗೆ ಹೆಚ್ಚುವರಿಯಾಗಿ ಕುಟುಂಬ ಕಲ್ಯಾಣ ಖಾತೆಯನ್ನು ನೀಡಲಾಗಿದೆ. ವೈದ್ಯ ಶಿಕ್ಷಣ ಕೈತಪ್ಪಿದ್ದು ಸುಧಾಕರ್ ಅವರ ಬೇಸರಕ್ಕೆ ಕಾರಣವಾಗಿದೆ ಮತ್ತು ಸಾರ್ವಜನಿಕ ವಲಯದಲ್ಲೂ ಆಶ್ಚರ್ಯಕ್ಕೆ ಕಾರಣವಾಗಿದೆ. ಯಾಕೆಂದರೆ..
ಖಾತೆ ಹಂಚಿಕೆ ಅಸಮಾಧಾನ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಮಹತ್ವದ ಹೇಳಿಕೆ!
ಎರಡು ಸಚಿವಾಲಯದ ನಡುವಿನ ಸಂವಹನದ ಕೊರತೆ
ಕೊರೊನಾ ಹಾವಳಿ ತೀವ್ರವಾಗಿದ್ದ ಸಮಯದಲ್ಲಿ ಆರೋಗ್ಯ ಇಲಾಖೆಯ ನಿರ್ವಹಣೆಯನ್ನು ಶ್ರೀರಾಮುಲು ಮಾಡುತ್ತಿದ್ದರೆ, ವೈದ್ಯಕೀಯ ಶಿಕ್ಷಣ ಖಾತೆಯನ್ನು ಸುಧಾಕರ್ ಅವರು ನಿಭಾಯಿಸುತ್ತಿದ್ದರು. ಎರಡು ಸಚಿವಾಲಯದ ನಡುವಿನ ಸಂವಹನದ ಕೊರತೆಯಿಂದ ಸಾರ್ವಜನಿಕರು ಪರದಾಡುವಂತಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಸಿಎಂ ಬಿಎಸ್ವೈ, ವೈದ್ಯಕೀಯ ಶಿಕ್ಷಣದ ಜೊತೆಗೆ ಆರೋಗ್ಯ ಇಲಾಖೆಯ ಜವಾಬ್ದಾರಿಯನ್ನೂ ಸುಧಾಕರ್ ಅವರಿಗೆ ನೀಡಿದ್ದರು.
ಸುಧಾಕರ್ ಅವರ ಕಾರ್ಯಶೈಲಿಗೆ ಕೇಂದ್ರ ಸರಕಾರವೂ ಶಹಬ್ಬಾಸ್ ಅಂದಿತ್ತು
ಅಲ್ಲಿಂದ ಒಂದು ರೀತಿಯಲ್ಲಿ ಕೊರೊನಾ ನಿರ್ವಹಣೆ ಸರಿದಾರಿಗೆ ಬರಲಾರಂಭಿಸಿತು ಎಂದು ಹೇಳಬಹುದಾಗಿದೆ. ಅತ್ಯಂತ ಕ್ರಿಯಾಶೀಲರಾಗಿ ಎರಡೂ ಖಾತೆಯನ್ನು ನಿಭಾಯಿಸಿಕೊಂಡೂ ಹೋದ ಸುಧಾಕರ್ ಅವರ ಕಾರ್ಯಶೈಲಿಗೆ ಕೇಂದ್ರ ಸರಕಾರವೂ ಶಹಬ್ಬಾಸ್ ಅಂದಿತ್ತು. ದೇಶದ ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರ ಪೈಕಿ, ಸರಕಾರದ ಕ್ರಮವನ್ನು ಸಮರ್ಥಿಸಿಕೊಳ್ಳುವಲ್ಲಿ ಸುಧಾಕರ್ ಮಂಚೂಣಿಯಲ್ಲಿದ್ದರು.
ರಾಜ್ಯ ಉಸ್ತುವಾರಿ ಅರುಣ್ ಸಿಂಗ್
ಪ್ರಧಾನಿ, ಗೃಹಸಚಿವರು ಮತ್ತು ಕೇಂದ್ರ ಸರಕಾರದ ಜೊತೆಗಿನ ಸಭೆಯಲ್ಲಿ ರಾಜ್ಯದ ನಿಲುವು/ಯೋಜನೆಗಳನ್ನು ಉತ್ತಮ ರೀತಿಯಲ್ಲಿ ಮಂಡಿಸಿದ್ದ ಸುಧಾಕರ್, ಕೇಂದ್ರದ ಬಿಜೆಪಿ ನಾಯಕರ ಜೊತೆಗೂ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಇತ್ತೀಚೆಗೆ ನಡೆದ ಸಂಪುಟ ವಿಸ್ತರಣೆಯ ವೇಳೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಸುಧಾಕರ್ ಅವರನ್ನು ಕರೆಸಿಕೊಂಡು ಪ್ರತ್ಯೇಕ ಸಭೆಯನ್ನು ನಡೆಸಿದ್ದರು.
ಯಡಿಯೂರಪ್ಪ ಸರಕಾರದ ಚುರುಕಿನ ಸಚಿವ
ಯಡಿಯೂರಪ್ಪ ಸರಕಾರದ ಚುರುಕಿನ ಸಚಿವರೆಂದೇ ಹೆಸರಾಗಿರುವ ಸುಧಾಕರ್ ಅವರಿಂದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಹಿಂದಕ್ಕೆ ಪಡೆದುಕೊಂಡಿರುವುದರಿಂದ, ಕೊರೊಲಾ ಲಸಿಕೆ ವಿತರಣೆಯ ಈ ಪ್ರಮುಖ ಘಟ್ಟದಲ್ಲಿ ಮತ್ತೆ ಎರಡು ಸಚಿವಾಲಯಗಳ ನಡುವೆ ಹೊಂದಾಣಿಕೆ/ಸಂವಹನದ ಕೊರತೆ ಎದುರಾಗುವ ಸಾಧ್ಯತೆಯಿಲ್ಲದಿಲ್ಲ.