ಬಿಜೆಪಿ ಹೈಕಮಾಂಡಿಗೆ ಯಡಿಯೂರಪ್ಪ ನೀಡಿದ ಸ್ಪಷ್ಟ ಭರವಸೆ
ನನ್ನ ಪರವಾಗಿ ಯಾರೂ ಪ್ರತಿಭಟನೆ ಮಾಡುವುದಾಗಲಿ, ಹೇಳಿಕೆ ನೀಡುವುದಾಗಲಿ ಮಾಡಬಾರದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ ನಂತರ, ಈ ಸಂಬಂಧ ಬಿಜೆಪಿ ಮುಖಂಡರಿಂದ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ.
Recommended Video
ಎಲ್ಲಾ ಒತ್ತಡಗಳ ನಡುವೆ ಸಿಎಂ ಇಂದು (ಜುಲೈ 22) ಕಾಚರಕನಹಳ್ಳಿಯ ಕೋದಂಡರಾಮ ದೇವಸ್ಥಾನದಲ್ಲಿ ಧನ್ವಂತರಿ ಯಾಗದಲ್ಲಿ ಪಾಲ್ಗೊಂಡಿದ್ದರು. ಇದಾದ ನಂತರ, ಪಕ್ಷದ ಹಲವು ಮುಖಂಡರುಗಳನ್ನು ಯಡಿಯೂರಪ್ಪ ಭೇಟಿಯಾಗಿದ್ದಾರೆ.
ರಾಜೀನಾಮೆ ಮುನ್ಸೂಚನೆ: ಸಿಎಂ ಯಡಿಯೂರಪ್ಪ ಕಾರವಾರ ಭೇಟಿಗೆ ಪದೇ ಪದೇ ವಿಘ್ನ!
ಇವೆಲ್ಲದರ ನಡುವೆ ಮುಖ್ಯಮಂತ್ರಿಗಳು ಇಂದು (ಜುಲೈ 22) ಕ್ಯಾಬಿನೆಟ್ ಮೀಟಿಂಗ್ ಅನ್ನು ಕರೆದಿದ್ದಾರೆ. ತಮ್ಮ ದೆಹಲಿ ಪ್ರವಾಸದ ಅನುಭವಗಳನ್ನು ಇಲ್ಲಿ ಚರ್ಚಿಸಬಹುದು ಎಂದು ಹೇಳಲಾಗುತ್ತಿದೆ. ಈ ವೇಳೆ, ಮುಖ್ಯಮಂತ್ರಿಗಳಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡುತ್ತೇವೆ ಎಂದು ಕೆಲವು ಸಚಿವರು ಹೇಳಿದ್ದಾರೆ.
ರಾಜೀನಾಮೆ ಕುರಿತು ಮಹತ್ವದ ಹೇಳಿಕೆ ನೀಡಿದ ಸಿಎಂ ಯಡಿಯೂರಪ್ಪ
ತಮ್ಮ ರಾಜೀನಾಮೆಯ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಜುಲೈ 26ಕ್ಕೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಆ ಮೂಲಕ, ರಾಜೀನಾಮೆಯ ಸೂಚನೆಯನ್ನು ಬಿಎಸ್ವೈ ನೀಡಿದ್ದಾರೆ. ಜೊತೆಗೆ, ಹೈಕಮಾಂಡಿಗೆ ಸ್ಪಷ್ಟ ಭರವಸೆಯನ್ನು ಈ ವೇಳೆ ನೀಡಿದ್ದಾರೆ.
ಹಲವು ಮಠಾಧೀಪತಿಗಳು ಯಡಿಯೂರಪ್ಪನವರನ್ನು ಭೇಟಿಯಾಗಿ ಬೆಂಬಲ
ಲಿಂಗಾಯತ ಸಮುದಾಯ ಸೇರಿದಂತೆ ಹಲವು ಮಠಾಧೀಪತಿಗಳು ಯಡಿಯೂರಪ್ಪನವರನ್ನು ಭೇಟಿಯಾಗಿ ಬೆಂಬಲ ಸೂಚಿಸಿದ್ದರು. ನಾಡಿನ ಧರ್ಮಗುರುಗಳಿಗೆ ರಾಜಕೀಯದಲ್ಲಿ ಏನು ಕೆಲಸ ಎಂದು ಪರ ವಿರೋಧ ಚರ್ಚೆಗಳಿಗೆ ಇದು ಕಾರಣವಾಗಿತ್ತು. ಈ ಬಗ್ಗೆಯೂ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಹೈಕಮಾಂಡ್ ಮಾತಿಗೆ ಬೆಲೆ ಕೊಡುತ್ತೇನೆ ಎಂದ ಬಿಎಸ್ವೈ
ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಹೈಕಮಾಂಡ್ ಮಾತಿಗೆ ಬೆಲೆ ಕೊಡುತ್ತೇನೆ ಎಂದು ಬಿಎಸ್ವೈ ಹೇಳುವ ಮೂಲಕ ಬಂಡಾಯ ಸಾರುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. "ಮಠಾಧೀಶರು ನನಗೆ ಬೆಂಬಲ ಕೊಟ್ಟು ಆಶೀರ್ವದಿಸಿದ್ದಾರೆ, ಇಂಥ ಬೆಂಬಲ, ಆಶೀರ್ವಾದ ಹಿಂದೆ ಯಾರಿಗೂ ಸಿಕ್ಕಿಲ್ಲ, ಇದು ನನ್ನ ಭಾಗ್ಯ"ಎಂದು ಯಡಿಯೂರಪ್ಪ ಹೇಳಿದ್ದಾರೆ.
ಹೈಕಮಾಂಡಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದ ಯಡಿಯೂರಪ್ಪ
ಜೊತೆಗೆ, "ನನ್ನ ಕೆಲಸವನ್ನು ಮೆಚ್ಚಿ ವರಿಷ್ಠರು 75 ಆದ ಬಳಿಕ 78ರವರೆಗೂ ಅಧಿಕಾರ ನಡೆಸುವುದಕ್ಕೆ ಅವಕಾಶವನ್ನು ಮಾಡಿಕೊಟ್ಟಿದಾರೆ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರೋದು ನನ್ನ ಸಂಕಲ್ಪ, ನಮ್ಮ ಪಕ್ಷದಲ್ಲಿ 75 ವಯಸ್ಸಾದ ಬಳಿಕವೂ ಜವಾಬ್ದಾರಿ ನೀಡಿರುವುದು ನನಗೆ ಮಾತ್ರ. ಇದಕ್ಕಾಗಿ ಹೈಕಮಾಂಡಿಗೆ ಧನ್ಯವಾದ ಅರ್ಪಿಸುತ್ತೇನೆ"ಎಂದು ಯಡಿಯೂರಪ್ಪ ಹೇಳಿದ್ದಾರೆ.
ಬಲವಂತದಿಂದ ಪದತ್ಯಾಗಕ್ಕೆ ಸೂಚಿಸಿದರೆ ಬಿಜೆಪಿಗೆ ತೊಂದರೆ ಆಗಬಹುದು
"ಇದೇ 26ಕ್ಕೆ ಸರ್ಕಾರದ ಸಾಧನೆ ಬಗ್ಗೆ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಈ ಕಾರ್ಯಕ್ರಮದ ಬಳಿಕ ವರಿಷ್ಠರ ಸೂಚನೆಯಂತೆ ನಡೆದುಕೊಳ್ಳುತ್ತೇನೆ. ವರಿಷ್ಠರ ತೀರ್ಮಾನವೇ ನನ್ನ ತೀರ್ಮಾನ, ಅವರೇ ಸೂಚನೆಯೇ ಅಂತಿಮ, ನಾನು ಪಕ್ಷದ ಶಿಸ್ತಿನ ಸಿಪಾಯಿ"ಎಂದು ಯಡಿಯೂರಪ್ಪ ಹೇಳಿದ್ದಾರೆ. ಆ ಮೂಲಕ, ಯಡಿಯೂರಪ್ಪ ಅವರನ್ನು ಬಲವಂತದಿಂದ ಪದತ್ಯಾಗಕ್ಕೆ ಸೂಚಿಸಿದರೆ ಬಿಜೆಪಿಗೆ ತೊಂದರೆ ಆಗಬಹುದು ಎನ್ನುವ ಮಾತಿಗೆ ತೆರೆ ಬಿದ್ದಂತಾಗಿದೆ.