ಅತೃಪ್ತ ಶಾಸಕರಿಗೆ ಮಂತ್ರಿಗಿರಿ: ಯಾರಿಗೆ ಒಲಿಯಲಿದೆ ಅದೃಷ್ಟ?
ನವದೆಹಲಿ, ಆಗಸ್ಟ್ 24: ಸಚಿವ ಸಂಪುಟ ವಿಸ್ತರಣೆ ಆಗುತ್ತಿದ್ದಂತೆ ಬಿಜೆಪಿಯಲ್ಲಿ ಭುಗಿಲೆದ್ದಿರುವ ಅತೃಪ್ತಿಯನ್ನು ಶಮನಮಾಡಲು ಯಡಿಯೂರಪ್ಪ ಅವರು ಹೈಕಮಾಂಡ್ ಮೊರೆ ಹೋಗಿದ್ದಾರೆ.
ಶುಕ್ರವಾರ ದೆಹಲಿಯಲ್ಲಿದ್ದ ಅವರು, ನಿನ್ನೆ ಜೆಪಿ ನಡ್ಡಾ ಅವರನ್ನು ಭೇಟಿ ಆಗಿದ್ದು, ಅತೃಪ್ತ ಶಾಸಕರಲ್ಲಿ ಕೆಲವರಿಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ.
ಅತೃಪ್ತರಲ್ಲಿ ಪ್ರಮುಖರಾದ ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ, ರೇಣುಕಾಚಾರ್ಯ ಇನ್ನೂ ಕೆಲವರಿಗಾದರೂ ಸಚಿವ ಸ್ಥಾನ ಕೊಡಲೇ ಬೇಕು ಎಂದು ಯಡಿಯೂರಪ್ಪ ಅವರು ಮನವಿ ಮಾಡಿದ್ದಾರೆ.
ಲಿಂಬಾವಳಿಯನ್ನು ದೆಹಲಿ ಕರೆಸಿಕೊಂಡ ಹೈಕಮಾಂಡ್
ಅದರಂತೆ ಉಮೇಶ್ ಕತ್ತಿ, ರೇಣುಕಾಚಾರ್ಯ ಅವರಿಗೆ ಸಚಿವ ಸ್ಥಾನ ದೊರಕುವ ಸಾಧ್ಯತೆ ಇದೆ. ಅರವಿಂದ ಲಿಂಬಾವಳಿ ಅವರನ್ನು ಹೈಕಮಾಂಡ್ ಇಂದು ದೆಹಲಿಗೆ ಕರೆಸಿಕೊಂಡಿದ್ದು ಅಲ್ಲಿ ಅವರನ್ನು ಸಮಾಧಾನ ಮಾಡುವ ಕೆಲಸ ಮಾಡಲಿದ್ದಾರೆ.
ಅತೃಪ್ತ ಶಾಸಕರಿಗೆ 3-4 ಸಚಿವ ಸ್ಥಾನ ಮಾತ್ರ
ಅತೃಪ್ತ ಶಾಸಕರಿಗೆ 3-4 ಶಾಸಕ ಸ್ಥಾನವನ್ನು ಮಾತ್ರವೇ ನೀಡಲು ಚಿಂತನೆ ನಡೆದಿದ್ದು, ತಿಪ್ಪಾರೆಡ್ಡಿ, ರಾಜುಗೌಡ ಅವರಿಗೆ ಸಚಿವ ಸ್ಥಾನ ಕೈತಪ್ಪುವ ನಿರೀಕ್ಷೆ ಇದೆ. ಅಂಗಾರ ಅವರಿಗೆ ಸಚಿವ ಸ್ಥಾನ ನೀಡಬೇಕೆಂಬ ಒತ್ತಡ ಹೆಚ್ಚಾಗಿದ್ದು, ಅವರಿಗೆ ಸಚಿವ ಸ್ಥಾನ ಧಕ್ಕುವ ಸಾಧ್ಯತೆ ಹೆಚ್ಚಿದೆ.
ಕೆಲವು ಶಾಸಕರಿಗೆ ಸಚಿವ ಸ್ಥಾನ ಇಲ್ಲ
ಗೂಳಿಹಟ್ಟಿ ಶೇಖರ್, ಎಂಪಿ ಕುಮಾರಸ್ವಾಮಿ, ಅಪ್ಪಚ್ಚು ರಂಜನ್, ಬಾಲಚಂದ್ರ ಜಾರಕಿಹೊಳಿ ಇನ್ನೂ ಕೆಲವು ಅತೃಪ್ತರಿಗೆ ಸಚಿವ ಸ್ಥಾನ ದೊರೆಯುವುದು ಅನುಮಾನವಾಗಿದೆ. ಉಳಿಕೆ ಸಚಿವ ಸ್ಥಾನಗಳನ್ನು ಅನರ್ಹಗೊಂಡಿರುವ ಶಾಸಕರಿಗೆ ನೀಡುವ ಸಾಧ್ಯತೆ ಇರುವ ಕಾರಣ ಅತೃಪ್ತ ಶಾಸಕರಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತಿಲ್ಲ.
ಪ್ರಭಾವಿ ಖಾತೆ ಕೇಳುತ್ತಿರುವ ಅನರ್ಹ ಶಾಸಕರು
ನಿನ್ನೆ ದೆಹಲಿಯಲ್ಲಿದ್ದ ಯಡಿಯೂರಪ್ಪ ಅವರು ಜೆ.ಪಿ.ನಡ್ಡಾ ಅವರೊಂದಿಗೆ ದೀರ್ಘ ಮಾತುಕತೆ ನಡೆಸಿದ್ದಾರೆ. ಅಷ್ಟೆ ಅಲ್ಲದೆ ಅನರ್ಹ ಶಾಸಕರೊಂದಿಗೂ ರಹಸ್ಯ ಮಾತುಕತೆ ನಡೆಸಿದ್ದಾರೆ. ಅನರ್ಹ ಶಾಸಕರು ಪ್ರಭಾವಿ ಖಾತೆಗಳಿಗೇ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.