ಖಾತೆ ಹಂಚಿಕೆ ಕುರಿತಂತೆ ಡಾ. ಸುಧಾಕರ್ ವಿಚಾರದಲ್ಲಿ ಎಲ್ಲರೂ ತಟಸ್ಥ ನಿಲುವು ತಾಳಿದ್ಯಾಕೆ?
ಬೆಂಗಳೂರು, ಜ. 23: ಖಾತೆ ಹಂಚಿಕೆ ಬಳಿಕ ಎದ್ದಿದ್ದ ಅಸಮಾಧಾನವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಮನಗೊಳಿಸಿದ್ದಾರೆ. ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ 24 ಗಂಟೆಗಳಲ್ಲಿ ಮತ್ತೊಮ್ಮೆ ಮರು ಹಂಚಿಕೆ ಮಾಡುವ ಮೂಲಕ ಸಂಭಾವ್ಯ ಭಿನ್ನಮತವನ್ನು ಸಿಎಂ ಯಡಿಯೂರಪ್ಪ ಅವರು ಆರಂಭದಲ್ಲಿಯೇ ಚಿವುಟಿ ಹಾಕಿದ್ದಾರೆ. 6 ಸಚಿವರು ಬಯಸಿದ್ದ ಖಾತೆಗಳನ್ನು ಕೊಡಲಾಗಿದೆ. ಆದರೆ ಎಲ್ಲರಿಗಿಂತ ಮೊದಲು ಖಾತೆ ಮರು ಹಂಚಿಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದ ಆರೋಗ್ಯ ಸಚಿವ ಡಾ. ಸುಧಾಕರ್ ಅವರನ್ನು ನಿರ್ಲಕ್ಷ ಮಾಡಲಾಗಿದೆಯಾ ಎಂಬ ಚರ್ಚೆ ಇದೀಗ ಶುರುವಾಗಿದೆ. ಅದಕ್ಕೆ ಕಾರಣವೂ ಇದೆ.
ಸಚಿವ ಶ್ರೀರಾಮುಲು ಅವರ ಬಳಿಯಿದ್ದ ಆರೋಗ್ಯ ಇಲಾಖೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರಿಗೆ ಯಡಿಯೂರಪ್ಪ ಅವರು ವಹಿಸಿದ್ದರು. ಆಗ ಶ್ರೀರಾಮುಲು ಅವರಿಗೆ ಅಸಮಾಧಾನವಾಗಿದ್ದರೂ ತೋರಿಸಿಕೊಂಡಿರಲಿಲ್ಲ. ಹೈಡ್ರಾಮಾದ ಬಳಿಕ ಸುಮ್ಮನಾಗಿದ್ದರು. ಈಗ ಡಾ. ಸುಧಾಕರ್ ಅವರು ಹೊಂದಿದ್ದ ಪ್ರಮುಖ ಖಾತೆಯನ್ನೇ ಸಿಎಂ ಹಿಂದಕ್ಕೆ ಪಡೆದಿದ್ದಾರೆ. ಡಾ. ಸುಧಾಕರ್ ಅವರಲ್ಲಿನ ವೈದ್ಯಕೀಯ ಶಿಕ್ಷಣ ಇಲಾಖೆ ಖಾತೆಯನ್ನು ಹಿಂದಕ್ಕೆ ಪಡೆದು ಒಂದು ಖಾತೆಯನ್ನು ಮಾತ್ರ ಅವರಿಗೆ ವಹಿಸಲಾಗಿದೆ. ಹೀಗಾಗಿ ರಾಜ್ಯ ಸಚಿವ ಸಂಪುಟ ಸಭೆಗೂ ಹೋಗದೆ ಸಚಿವ ಡಾ. ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಆದದ್ದೇನು?
ಎಲ್ಲರನ್ನೂ ಸಮಾಧಾನ ಮಾಡಿದ್ದ ಸಿಎಂ
ಖಾತೆ ಹಂಚಿಕೆಯಿಂದ ಅಸಮಾಧಾನಗೊಂಡಿದ್ದ ಎಲ್ಲ ಸಚಿವರೊಂದಿಗೆ ಮುಖ್ಯಮಂತ್ರಿ ದೂರವಾಣಿಯಲ್ಲಿ ಮಾತನಾಡಿ ಸಮಾಧಾನ ಮಾಡಿದ್ದರು ಎಂಬ ಮಾಹಿತಿಯಿದೆ. ಸಚಿವರಾದ ಎಂ.ಟಿ.ಬಿ. ನಾಗರಾಜ್, ಕೆ. ಗೋಪಾಲಯ್ಯ, ಅರವಿಂದ್ ಲಿಂಬಾವಳಿ, ಕೆ.ಸಿ. ನಾರಾಯಣಗೌಡ ಹಾಗೂ ಆರ್. ಶಂಕರ್ ಅವರನ್ನು ಸಮಾಧಾನ ಮಾಡಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮಾಧಾನ ಮಾಡಿದ್ದರು. ಜೊತೆಗೆ ಅವರ ಖಾತೆಗಳನ್ನು ಕೂಡ ಬದಲಾವಣೆ ಮಾಡಲಾಯಿತು. ಸಿಎಂ ಮಾತನಾಡುವ ಮೊದಲು ಸಚಿವರಾದ ಆರ್. ಅಶೋಕ್ ಸೇರಿದಂತೆ ಹಲವರು ಅಸಮಾಧಾನಿತರ ಮನವೊಲಿಸಿದ್ದರು. ಆದರೆ ಡಾ. ಸುಧಾಕರ್ ಜೊತೆಗೆ ಮಾತ್ರ ಯಾರೂ ಮಾತನಾಡಲೇ ಇಲ್ಲ. ಅದಕ್ಕೆ ಕಾರಣವೂ ಇದೆ.
ಹೈಕಮಾಂಡ್ ಸಂಪರ್ಕಿಸುವ ಪ್ರಯತ್ನ
ಖಾತೆ ಹಂಚಿಕೆ ಕುರಿತಂತೆ ಡಾ. ಸುಧಾಕರ್ ವಿಚಾರದಲ್ಲಿ ಎಲ್ಲರೂ ತಟಸ್ಥ ನಿಲುವು ತಾಳಿದ್ದರು. ಸಚಿವ ಡಾ. ಸುಧಾಕರ್ ಅವರ ಮನವೊಲಿಕೆಗೆ ಯಾವುದೇ ಸಚಿವರು ಮುಂದಾಗಲಿಲ್ಲ. ವೈದ್ಯಕೀಯ ಶಿಕ್ಷಣ ಖಾತೆ ವಾಪಸ್ ಪಡೆದಿದ್ದ ಹಿನ್ನೆಲೆಯಲ್ಲಿ ಡಾ. ಸುಧಾಕರ್ ಬೇಸರಗೊಂಡಿದ್ದರು. ಅವರೊಂದಿಗೆ ಬೇಸರ ಹೊರ ಹಾಕಿದ್ದ ಎಲ್ಲಾ ಸಚಿವರನ್ನು ಕರೆಸಿ ಸುಧಾಕರ್ ಮಾತನಾಡಿದ್ದರು. ಆದರೆ ಸುಧಾಕರ ವಿಚಾರದಲ್ಲಿ ಉಳಿದ ಸಚಿವರು ಸೈಲೆಂಟ್ ಆದರು. ಸಿಎಂ ಕೂಡಾ ಸುಧಾಕರ ಜೊತೆ ಮಾತನಾಡಲಿಲ್ಲ. ಖಾತೆ ಹಂಚಿಕೆ ಮರುದಿನ ಸುಧಾಕರ್ ಮನೆಯಿಂದ ಹೊರಬಂದಿರಲಿಲ್ಲ. ಆ ವೇಳೆಯಲ್ಲಿ ಹೈಕಮಾಂಡ್ ಸಂಪರ್ಕಕ್ಕೂ ಅವರು ಪ್ರಯತ್ನ ನಡೆಸಿದ್ದರು. ಸಚಿವ ಸುಧಾಕರ್ ವಿಚಾರದಲ್ಲಿ ಎಲ್ಲರೂ ತಟಸ್ಥ ನಿಲುವು ತಾಳಿದ್ದೇಕೆ?
ಎಲ್ಲರ ತಟಸ್ಥ ನಿಲುವು ಯಾಕೆ?
ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಡಾ. ಸುಧಾಕರ್ ಅವರಿಗೆ ಎರಡು ಮಹತ್ವದ ಖಾತೆಗಳನ್ನು ಸಿಎಂ ಹಂಚಿಕೆ ಮಾಡಿದ್ದರು. ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಇಲಾಖೆ ಖಾತೆಗಳನ್ನು ಡಾ. ಸುಧಾಕರ್ ಅವರಿಗೆ ವಹಿಸಲಾಗಿತ್ತು. ಹೈಕಮಾಂಡ್ನಿಂದ ಬಂದಿದ್ದ ಆದೇಶದ ಹಿನ್ನೆಲೆಯಲ್ಲಿ ಈ ತೀರ್ಮಾನವನ್ನು ಯಡಿಯೂರಪ್ಪ ತೆಗೆದುಕೊಂಡಿದ್ದರು ಎನ್ನಲಾಗಿದೆ. ಜೊತೆಗೆ ಆಗ ಪೂರ್ಣ ಪ್ರಮಾಣದ ಸಂಪುಟ ರಚನೆ ಕೂಡ ಆಗಿದ್ದಿಲ್ಲ. ಹೀಗಾಗಿ ಹಲವು ಪ್ರಮುಖ ಖಾತೆಗಳನ್ನು ಕೆಲವೇ ಸಚಿವರ ಬಳಿ ಇದ್ದವು. ಇದೀಗ ಪೂರ್ಣ ಪ್ರಮಾಣದ ಸಂಪುಟ ರಚನೆ ಬಳಿಕ ಒಬ್ಬ ಸಚಿವರಿಗೆ ಒಂದು ಮಹತ್ವದ ಖಾತೆಯನ್ನು ಮಾತ್ರ ಕೊಡಲಾಗಿದೆ. ಹೀಗಾಗಿ ಡಾ. ಸುಧಾಕರ್ ಅವರ ಬೇಡಿಕೆ ನ್ಯಾಯಯುತವಲ್ಲ ಎಂದು ವಲಸೆ ಸಚಿವರೇ ಮಾತನಾಡಿದ್ದರು ಎನ್ನಲಾಗಿದೆ. ಜೊತೆಗೆ ಈ ವಿಚಾರದಲ್ಲಿ ಬೇರೆ ಸಚಿವರು ಸುಧಾಕರ್ ಅವರಿಗೆ ಸಾತ್ ಕೊಡಲಿಲ್ಲ.
Recommended Video
ಮೊದಲ ಬಾರಿ ಭಾರಿ ಹಿನ್ನಡೆ
ಜೊತೆಗೆ ಆರೋಗ್ಯ ಹಾಗೂ ವೈದಗ್ಯಕೀಯ ಶಿಕ್ಷಣ ಇಲಾಖೆಗಳನ್ನು ಒಬ್ಬ ಸಚಿವರಿಗೆ ಕೊಟ್ಟಿರುವ ಉದಾಹರಣೆಗಳು ಕೂಡ ಕಡಿಮೆ ಇವೆ. ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಯು.ಟಿ. ಖಾದರ್ ಅವರು ಆರೋಗ್ಯ ಇಲಾಖೆಯನ್ನು ವಹಿಸಿಕೊಂಡಿದ್ದರೆ, ಡಾ. ಶರಣ ಪ್ರಕಾಶ್ ಪಾಟೀಲ್ ಅವರಿಗೆ ವೈದ್ಯಕೀಯ ಶಿಕ್ಷಣ ಇಲಾಖೆ ಕೊಡಲಾಗಿತ್ತು. ಹೀಗಾಗಿ ಎರಡು ಮಹತ್ವದ ಖಾತೆಗಳನ್ನು ಒಬ್ಬರಿಗೆ ಕೊಡಲು ಯಡಿಯೂರಪ್ಪ ಅವರು ಸುತಾರಾಂ ಒಪ್ಪಲಿಲ್ಲ. ಹೀಗಾಗಿ ಸಚಿವ ಸುಧಾಕರ್ ಅವರಿಗೆ ತೀವ್ರ ಹಿನ್ನಡೆ ಆಗಿದೆ ಎನ್ನಲಾಗಿದೆ.