ಬೆಂಗಳೂರು, ಬೆಳಗಾವಿ; ಇದು ಯಡಿಯೂರಪ್ಪ ಸಂಪುಟ!
ಬೆಂಗಳೂರು, ಫೆಬ್ರವರಿ 06 : ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟ ವಿಸ್ತರಣೆ ಮಾಡಿದ್ದಾರೆ. ಯಡಿಯೂರಪ್ಪ ಸಂಪುಟದಲ್ಲಿ ಬೆಂಗಳೂರು ಮತ್ತು ಬೆಳಗಾವಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಕ್ಕಿದೆ. ಇನ್ನೂ 6 ಸಚಿವ ಸ್ಥಾನಗಳು ಸಂಪುಟದಲ್ಲಿ ಖಾಲಿ ಇವೆ.
ಗುರುವಾರ 10 ಶಾಸಕರು ಯಡಿಯೂರಪ್ಪ ಸಂಪುಟಕ್ಕೆ ಸಂಪುಟ ದರ್ಜೆ ಸಚಿವರಾಗಿ ಸೇರ್ಪಡೆಗೊಂಡಿದ್ದಾರೆ. ಇವರಲ್ಲಿ ಬೆಳಗಾವಿ ಜಿಲ್ಲೆಯ ಪ್ರಭಾವಿ ನಾಯಕ, ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಸಹ ಒಬ್ಬರು.
ಇಲ್ಲಿದೆ ಸಿಎಂ ಯಡಿಯೂರಪ್ಪ ಸಂಪುಟ ಸೇರಿದ 'ನೂತನ ಸಚಿವರ ಇತಿಹಾಸ'!
ಯಡಿಯೂರಪ್ಪ ಸಂಪುಟದಲ್ಲಿ ಎಲ್ಲಾ ಜಿಲ್ಲೆಗೂ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ಆರೋಪವಿದೆ. ಬೆಳಗಾವಿ ಮತ್ತು ಬೆಂಗಳೂರಿಗೆ ಹೆಚ್ಚಿನ ಸಚಿವ ಸ್ಥಾನಗಳು ಸಿಕ್ಕಿವೆ. ಮುಖ್ಯಮಂತ್ರಿಗಳ ತವರು ಜಿಲ್ಲೆಯಾದರೂ ಶಿವಮೊಗ್ಗದಲ್ಲಿ ಇರುವುದು ಒಬ್ಬರು ಸಚಿವರು ಮಾತ್ರ.
ಸಂಪುಟ ವಿಸ್ತರಣೆ; ಕೊನೆ ಕ್ಷಣದಲ್ಲಿ ಹೈಕಮಾಂಡ್ ಕೊಟ್ಟ ಟ್ವಿಸ್ಟ್!
ಬೆಂಗಳೂರು ನಗರಕ್ಕೆ 7 ಸಚಿವ ಸ್ಥಾನ ಸಿಕ್ಕಿದೆ. ಬೆಂಗಳೂರು ಬಿಟ್ಟರೆ ಬೆಳಗಾವಿಗೆ ಹೆಚ್ಚಿನ ಆದ್ಯತೆ ಸಿಕ್ಕಿದೆ. ಈಗಾಗಲೇ ಜಿಲ್ಲೆಯ ಇಬ್ಬರು ಶಾಸಕರು ಯಡಿಯೂರಪ್ಪ ಸಂಪುಟದಲ್ಲಿದ್ದರು. ಈಗ ಪುನಃ ಮತ್ತಿಬ್ಬರು ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ.
ಮೂಲ ಬಿಜೆಪಿ ಶಾಸಕರಿಗೆ ಸಚಿವರಾಗುವ 'ಯೋಗ' ತಪ್ಪಿದ್ದು ಏಕೆ?
ಸಂಪುಟಕ್ಕೆ ಇಬ್ಬರು ಸೇರ್ಪಡೆ
ಗುರುವಾರ ಸಚಿವ ಸಂಪುಟ ವಿಸ್ತರಣೆಯಾಗಿದೆ. ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಕಾಗವಾಡ ಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲ್ ಯಡಿಯೂರಪ್ಪ ಸಂಪುಟಕ್ಕೆ ಸೇರಿದ್ದಾರೆ. ಇದರಿಂದಾಗಿ ಬೆಳಗಾವಿಯ ಜಿಲ್ಲೆಯ ನಾಲ್ವರು ಯಡಿಯೂರಪ್ಪ ಸಂಪುಟ ಸೇರಿದಂತಾಗಿದೆ.
ಉಪ ಮುಖ್ಯಮಂತ್ರಿ ಹುದ್ದೆ
ಬೆಳಗಾವಿ ಜಿಲ್ಲೆಯ ಅಥಣಿ ಕ್ಷೇತ್ರದ ಬಿಜೆಪಿ ನಾಯಕ ಲಕ್ಷ್ಮಣ ಸವದಿ ಈಗಾಗಲೇ ಯಡಿಯೂರಪ್ಪ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರು, ನಿಪ್ಪಾಣಿ ಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆ ಆಹಾರ ಮತ್ತು ನಾಗರಿ ಸರಬರಾಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿದ್ದಾರೆ.
ಬೆಂಗಳೂರು ನಗರ
ಯಡಿಯೂರಪ್ಪ ಸಂಪುಟಕ್ಕೆ ಬೆಂಗಳೂರು ನಗರದ ಶಾಸಕರಾದ ಎಸ್. ಟಿ. ಸೋಮಶೇಖರ್ (ಯಶವಂತಪುರ), ಬೈರತಿ ಬಸವರಾಜ (ಕೆ. ಆರ್. ಪುರ), ಕೆ. ಗೋಪಾಲಯ್ಯ (ಮಹಾಲಕ್ಷ್ಮೀ ಲೇಔಟ್) ಇಂದು ಸೇರ್ಪಡೆಗೊಂಡಿದ್ದಾರೆ.
ನಾಲ್ವರು ಸಚಿವರು ಇದ್ದರು
ಯಡಿಯೂರಪ್ಪ ಸಂಪುಟದಲ್ಲಿ ಈಗಾಗಲೇ ಆರ್. ಅಶೋಕ (ಪದ್ಮನಾಭನಗರ), ಡಾ. ಅಶ್ವತ್ಥ ನಾರಾಯಣ (ಮಲ್ಲೇಶ್ವರ), ವಿ. ಸೋಮಣ್ಣ (ಗೋವಿಂದರಾಜನಗರ), ಎಸ್. ಸುರೇಶ್ ಕುಮಾರ್ (ರಾಜಾಜಿನಗರ) ಸಚಿವರಾಗಿದ್ದಾರೆ.