ಯಡಿಯೂರಪ್ಪ ಸಂಪುಟ: ಎರಡು ಜಿಲ್ಲೆಗೆ ಬೆಣ್ಣೆ, ಹಲವು ಜಿಲ್ಲೆಗೆ ಸುಣ್ಣ
ಬೆಂಗಳೂರು, ಫೆಬ್ರವರಿ 07: ಹತ್ತು ಮಂದಿ ಹೊಸ ಸಚಿವರು ಯಡಿಯೂರಪ್ಪ ಸಂಪುಟ ಸೇರಿದ್ದಾರೆ. ಎರಡನೇ ಹಂತದ ಈ ಸಂಪುಟ ವಿಸ್ತರಣೆಯು ಅರ್ಹತೆ, ಜಿಲ್ಲಾಪ್ರಾತಿನಿಧ್ಯಕ್ಕೆ ಬದಲಾಗಿ '''ಸಹಾಯ''ಕ್ಕೆ ಸಲ್ಲಿಸುವ ಕೃತಜ್ಞೆಯ' ಆಧಾರದಲ್ಲಿ ಮಾಡಲಾಗಿದೆ.
ಹತ್ತು ಮಂದಿ ನೂತನ ಸಚಿವರು ಸಂಪುಟ ಸೇರಿದ ಬಳಿಕ ಜಿಲ್ಲಾ ಪ್ರಾತಿನಿಧ್ಯ ಹೇಗಿದೆ ಎಂದು ಲೆಕ್ಕಾ ಹಾಕಿದರೆ, ಯಡಿಯೂರಪ್ಪ ಸಂಪುಟವು ಅಸಮತೋಲನದಿಂದ ಕೂಡಿದೆ ಎಂಬುದು ಸ್ಪಷ್ಟವಾಗುತ್ತದೆ.
ಬೆಂಗಳೂರು ಸಚಿವರ ಪಟ್ಟಿಗೆ ಮೂರು ಹೊಸ ಸೇರ್ಪಡೆ
ಎರಡು ಜಿಲ್ಲೆಗಳಿಗೆ ಹೆಚ್ಚಿನ ಆದ್ಯತೆ ನೀಡಿರುವ ಯಡಿಯೂರಪ್ಪ, ಕೆಲವು ಜಿಲ್ಲೆಗಳ ಬಗ್ಗೆ ಅಲ್ಪ ನಿರ್ಲಕ್ಷ್ಯ ತೋರಿದ್ದರು. ಹಲವು ಜಿಲ್ಲೆಗಳನ್ನು ಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯ ಎಂಟು ಶಾಸಕರು ಸಚಿವರಾಗಿದ್ದಾರೆ. ಬೆಳಗಾವಿ ಜಿಲ್ಲೆಯ ನಾಲ್ಕು ಮಂದಿಗೆ ಸಚಿವ ಸ್ಥಾನ ದೊರೆತಿದೆ. ಈ ಎರಡೂ ಜಿಲ್ಲೆಗಳಲ್ಲಿ ಅತಿ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಈ ಎರಡೂ ಜಿಲ್ಲೆಗಳ ಇನ್ನೂ ಇಬ್ಬರು ಶಾಸಕರು ಸಚಿವರಾಗುವ ಸಂಭವ ಇದೆ.
ಯಾವ ಜಿಲ್ಲೆಗೆ ಎಷ್ಟು ಸಚಿವ ಸ್ಥಾನ
ಬೆಂಗಳೂರು ನಗರ ಜಿಲ್ಲೆಗೆ ಏಳು ಸಚಿವ ಸ್ಥಾನ, ಬೆಳಗಾವಿ ಜಿಲ್ಲೆಗೆ ನಾಲ್ಕು ಸಚಿವ ಸ್ಥಾನ. ಶಿವಮೊಗ್ಗ, ಹಾವೇರಿ ಜಿಲ್ಲೆಗಳಿಗೆ ತಲಾ ಎರಡು ಸಚಿವ ಸ್ಥಾನ. ಮಂಡ್ಯ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಚಿಕ್ಕಮಗಳೂರು, ಉತ್ತರಕನ್ನಡ, ದಕ್ಷಿಣ ಕನ್ನಡ, ವಿಜಯಪುರ, ಗದಗ, ಧಾರವಾಡ, ಬೀದರ್ ಜಿಲ್ಲೆಗಳಿಗೆ ತಲಾ ಒಂದೊಂದು ಸಚಿವ ಸ್ಥಾನ ನೀಡಲಾಗಿದೆ.
ಒಂದೂ ಸಚಿವ ಸ್ಥಾನ ಇಲ್ಲದ ಜಿಲ್ಲೆಗಳು
ಬೆಂಗಳೂರು ಗ್ರಾಮಾಂತರ, ಮೈಸೂರು, ಕೊಡಗು, ಬಾಗಲಕೋಟೆ, ಬಳ್ಳಾರಿ, ಉಡುಪಿ, ರಾಮನಗರ, ದಾವಣಗೆರೆ, ಯಾದಗಿರಿ, ರಾಯಚೂರು, ಹಾಸನ ಜಿಲ್ಲೆಗಳಿಗೆ ಒಂದೂ ಸಹ ಸಚಿವ ಸ್ಥಾನ ನೀಡಲಾಗಿಲ್ಲ.
ಮಿ. ಕಟೀಲ್, ನಿಮ್ಮ ಊರಿನ 8 ಶಾಸಕರಲ್ಲಿ ಒಬ್ಬರಿಗೂ ಸಚಿವ ಸ್ಥಾನ ಕೊಡಿಸಲಾಗಲಿಲ್ಲವೇ?
ಕೆಲವು ಜಿಲ್ಲೆಗಳಲ್ಲಿ ಶಾಸಕರಿಲ್ಲ
ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಪ್ರದೇಶವಾಗಿರುವ ಹಳೆ ಮೈಸೂರು ಭಾಗವನ್ನು ಸಂಪುಟ ವಿಸ್ತರಣೆ ಸಮಯ ನಿರ್ಲಕ್ಷಿಸಿರುವುದು ಕಾಣುತ್ತದೆ. ಕೆಲವು ಜಿಲ್ಲೆಗಳಲ್ಲಿ ಬಿಜೆಪಿ ಶಾಸಕರಿಲ್ಲದಿರುವುದು ಸಹ ಬಿಜೆಪಿಗೆ ಹಿನ್ನೆಡೆ ಆಗಿದೆ.
ನೂತನ ಸಚಿವರು ಎಲ್ಲಿ, ಯಾವ ಕೊಠಡಿಗಳಲ್ಲಿ ಸಿಗುತ್ತಾರೆ?
ಬಿಜೆಪಿ ಹೆಚ್ಚು ಶಾಸಕರಿರುವ ಜಿಲ್ಲೆಗಳ ನಿರ್ಲಕ್ಷ್ಯ?
ಕರಾವಳಿ ಭಾಗದಲ್ಲಿ ಹೆಚ್ಚು ಸಂಖ್ಯೆಯ ಬಿಜೆಪಿ ಶಾಸಕರಿದ್ದಾರೆ. ಆದರೆ ಈ ಭಾಗಕ್ಕೆ ನೀಡಿರುವ ಪ್ರಾಶಸ್ತ್ಯ ಕಡಿಮೆಯೇ ಆಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಿಗೆ ಕೇವಲ ಒಂದೊಂದು ಸ್ಥಾನ ನೀಡಲಾಗಿದೆ. ಉಡುಪಿ ಹಾಗೂ ಕೊಡಗು ಜಿಲ್ಲೆಗಳಿಗೆ ಒಂದು ಸಚಿವ ಸ್ಥಾನವನ್ನೂ ನೀಡಲಾಗಿಲ್ಲ.