ಬಿಎಸ್ವೈ ಸಂಪುಟ ರಚನೆಯಲ್ಲಿ ಹುಬ್ಬೇರುವಂತೆ ಮಾಡಿದ ಎರಡು ಕ್ಯಾಬಿನೆಟ್ ಬರ್ತ್
ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದ 25ದಿನಗಳ ನಂತರ, ಅಂತೂ ಸಂಪುಟ ರಚನೆಯಾಗಿದೆ. ಯಡಿಯೂರಪ್ಪನವರ ಸಂಪುಟ ರಚನೆಯಲ್ಲಿ ಗಮನಿಸಬೇಕಾದ ಅಂಶವೆಂದರೆ, ನರಗುಂದ ಕ್ಷೇತ್ರದ ಶಾಸಕ ಸಿ ಸಿ ಪಾಟೀಲ್ ಮತ್ತು ಅಥಣಿಯ ಪರಾಜಿತ ಬಿಜೆಪಿ ಮುಖಂಡ ಲಕ್ಷ್ಮಣ ಸಂಗಪ್ಪ ಸವದಿಯ ಹೆಸರು.
ಯಡಿಯೂರಪ್ಪ ಆಂಡ್ ಟೀಂ: ಸಂಪುಟ ವಿಸ್ತರಣೆ ಸಂತಸದ ಚಿತ್ರಗಳು
ಇವರಿಬ್ಬರಿಗೂ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ಸಿಕ್ಕಿರುವುದು ಹಲವರ ಹುಬ್ಬೇರುವಂತೆ ಮಾಡಿದರೆ, ಟೀಕೆಗೂ ಗುರಿಯಾಗಿದೆ. ಕಾರಣ, ಇಡೀ ರಾಜ್ಯ ತಲೆತಗ್ಗಿಸುವಂತಹ ಸದನದಲ್ಲಿನ ಬ್ಲೂಫಿಲಂ ವೀಕ್ಷಣೆ. ಇವರಿಬ್ಬರ ಜೊತೆಗೆ ಕೃಷ್ಣ ಪಾಲೇಮಾರ್ ಅವರ ಹೆಸರೂ ಬ್ಲೂಫಿಲಂ ವೀಕ್ಷಣೆಯಲ್ಲಿ ತಗಲಾಕಿಕೊಂಡಿತ್ತು.
ಬಿಜೆಪಿಯನ್ನು ನಂಬಿ ಮತ್ತೆ 'ಬಲಿಪಶು'ವಾದ 'ಕುಂದಾಪುರದ ವಾಜಪೇಯಿ' ಹಾಲಾಡಿ
ಸಿ ಸಿ ಪಾಟೀಲ್ ಈಗಾಗಲೇ ಶಾಸಕರಾಗಿದ್ದಾರೆ. ಸವದಿ, ಕಳೆದ ಚುನಾವಣೆಯಲ್ಲಿ ಸೋತಿದ್ದರೂ ಅವರಿಗೆ ಕ್ಯಾಬಿನೆಟ್ ದರ್ಜೆ ಸಿಕ್ಕಿದೆ. ಹಾಗಾಗಿ, ಇಂದಲ್ಲಾ, ನಾಳೆ, ವಿಧಾನಸಭೆಗೆ ಗೆದ್ದು ಬರಬೇಕಿದೆ ಅಥವಾ ವಿಧಾನಪರಿಷತ್ತಿಗೆ ಆಯ್ಕೆಯಾಗಬೇಕಿದೆ.
ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಯಾರಿಗೆ ಯಾವ ಖಾತೆ
ಐದೆದು ಬಾರಿ ಚುನಾವಣೆ ಗೆದ್ದಿದ್ದ ಸುಳ್ಯ ಕ್ಷೇತ್ರದ ಅಂಗಾರ, ಕುಂದಾಪುರದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಚಿತ್ರದುರ್ಗದ ತಿಪ್ಪಾರೆಡ್ಡಿ ಮುಂತಾದ ಬಿಜೆಪಿಯ ನಿಯತ್ತಿನ ಮುಖಂಡರಿಗೆ ಮಂತ್ರಿಭಾಗ್ಯ ಮೊದಲ ಪಟ್ಟಿಯಲ್ಲಿ ಒದಗಿ ಬಂದಿಲ್ಲ. ನಿರೀಕ್ಷೆಯಂತೆ, ಇವರೆಲ್ಲಾ ಬೇಸರಿಸಿಕೊಂಡು, ಪ್ರಮಾಣವಚನ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಸದನದಲ್ಲಿ 'ಬ್ಲೂಫಿಲಂ' ಫ್ಲ್ಯಾಶ್ ಬ್ಯಾಕ್...
ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದರು
ಫೆಬ್ರವರಿ 7, 2012ರಂದು ನಡೆಯುತ್ತಿದ್ದ ಅಧಿವೇಶನದ ವೇಳೆ, ಸಿಂಧಗಿಯಲ್ಲಿ ಹಾರಾಡಿದ ಪಾಕ್ ಧ್ವಜ ಮತ್ತು ಸಂಘ ಪರಿವಾರದ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರ ಪ್ರಚೋದನಾಕಾರಿ ಭಾಷಣದ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿತ್ತು. ಆಡಳಿತ, ವಿರೋಧ ಪಕ್ಷಗಳ ನಡುವೆ ವಾಗ್ಯುದ್ದ ನಡೆಯುತ್ತಿತ್ತು. ಬೋಪಯ್ಯ ಅವರು ಸ್ಪೀಕರ್ ಆಗಿದ್ದರು. ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದರು.
ಮೊಬೈಲ್ ನಲ್ಲಿ ನೀಲಿ ಚಿತ್ರದ ದೃಶ್ಯಾವಳಿಗಳನ್ನು ವೀಕ್ಷಿಸುತ್ತಿದ್ದರು
ಸದನದ ಚರ್ಚೆಯ ವೇಳೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿದ್ದ ಸಿ ಸಿ ಪಾಟೀಲ್, ಸಹಕಾರ ಸಚಿವರಾಗಿದ್ದ ಲಕ್ಷ್ಮಣ ಸವದಿ ಮತ್ತು ಕೃಷ್ಣ ಪಾಲೇಮಾರ್ ಚರ್ಚೆಗೂ ನಮಗೂ ಸಂಬಂಧವಿಲ್ಲ ಎನ್ನುವಂತೆ ಮೊಬೈಲ್ ನಲ್ಲಿ ನೀಲಿ ಚಿತ್ರದ ದೃಶ್ಯಾವಳಿಗಳನ್ನು ವೀಕ್ಷಿಸುತ್ತಿದ್ದರು. ಮಾಧ್ಯಮಗಳ ಕ್ಯಾಮರಾಗಳಲ್ಲಿ ಸೆರೆಯಾದ ಈ ದೃಶ್ಯ ರಾತ್ರೋರಾತ್ರಿ ಯಾವ ಮಟ್ಟಿಗೆ ಬಿಜೆಪಿಗೆ ಮುಜುಗರ ತಂದೊಡ್ಡಿತು ಎಂದರೆ, ಈ ಮೂವರನ್ನು ಹೋದಲೆಲ್ಲಾ 'ಬ್ಲೂ ಬಾಯ್ಸ್' ಎಂದು ಕರೆಯುವ ಮಟ್ಟಿಗೆ ಕೆಟ್ಟ ಹೆಸರು ಬಂದಿತ್ತು.
ಅಥಣಿಯಲ್ಲಿ ಕೇಬಲ್ ಸಂಪರ್ಕವನ್ನೇ ತೆಗೆದು ಹಾಕಲಾಗಿತ್ತು
ಘಟನೆಯ ದೃಶ್ಯಗಳು ಟಿವಿಗಳಲ್ಲಿ ಬರುತ್ತಿದ್ದಂತೆಯೇ ಅಥಣಿಯಲ್ಲಿ ಕೇಬಲ್ ಸಂಪರ್ಕವನ್ನೇ ತೆಗೆದು ಹಾಕಲಾಗಿತ್ತು. ಈ ಘಟನೆ ನಡೆದ ಮರುದಿನವೇ ಬಿಜೆಪಿ ಮೂವರಿಂದಲೂ ರಾಜೀನಾಮೆ ಪಡೆದುಕೊಂಡಿತ್ತು. ಜೊತೆಗೆ, ಸದನ ಸಮಿತಿ ರಚಿಸಿ, ಕಾಂಗ್ರೆಸ್ ಹಾಗೂ ಜೆಡಿಎಸ್ಗೆ ಚರ್ಚೆಗೆ ಅವಕಾಶವನ್ನೇ ನೀಡಿರಲಿಲ್ಲ. ಆ ಅಧಿವೇಶನದ ಕೊನೆಯ ದಿನ ತರಾತುರಿಯಲ್ಲಿ ಸದನ ಸಮಿತಿ ತನ್ನ ಅಂತಿಮ ವರದಿಯನ್ನು ಸಲ್ಲಿಸಿ, ಮೂವರಿಗೂ ಕ್ಲೀನ್ ಚಿಟ್ ನೀಡಿ ಕೈತೊಳೆದುಕೊಂಡಿತ್ತು.
ಸ್ಪಷ್ಟ ಸಾಕ್ಷ್ಯಾಧಾರಗಳು ಇಲ್ಲ
ಮೂವರು ಮಾಜಿ ಸಚಿವರ ಪೈಕಿ ಸಿ ಸಿ ಪಾಟೀಲ್ ಮೊಬೈಲ್ ನಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿದ್ದರು ಮತ್ತು ಪಾಲೇಮಾರ್ ಘಟನೆಗೆ ಕಾರಣರಾಗಿದ್ದಾರೆ ಎನ್ನುವ ಆರೋಪದ ಬಗ್ಗೆ ಯಾವುದೇ ಸ್ಪಷ್ಟ ಸಾಕ್ಷ್ಯಾಧಾರಗಳು ಇಲ್ಲದೇ ಇರುವುದರಿಂದ ಅವರ ವಿರುದ್ಧ ಹೊರಿಸಲಾಗಿರುವ ಆರೋಪವು ಸಾಬೀತಾಗಿಲ್ಲವೆಂದು ಸಮಿತಿ ಅಭಿಪ್ರಾಯಪಟ್ಟು, ಕ್ಲೀನ್ ಚಿಟ್ ನೀಡಿತ್ತು.
ಲಕ್ಷ್ಮಣ ಸವದಿ ಉದ್ದೇಶಪೂರ್ವಕವಾಗಿ ನೀಲಿಚಿತ್ರ ವೀಕ್ಷಿಸಿದಲ್ಲ
ಇನ್ನು ಲಕ್ಷ್ಮಣ ಸವದಿ ಉದ್ದೇಶಪೂರ್ವಕವಾಗಿ ನೀಲಿಚಿತ್ರ ವೀಕ್ಷಿಸಿದಲ್ಲ. ಸರಕಾರದ ಕಾರ್ಯಕ್ರಮವನ್ನು ಓದುತ್ತಿದ್ದ ವೇಳೆ, ದೃಶ್ಯಗಳನ್ನು ನೋಡಿದ್ದಾರೆ. ಈಗಾಗಲೇ ಒಂದೂವರೆ ತಿಂಗಳಿನಿಂದ ಅವರಿಗೆ ಸದನದ ಕಲಾಪದಲ್ಲಿ ಭಾಗವಹಿಸದಂತೆ ನಿರ್ಬಂಧವನ್ನು ವಿಧಿಸಿರುವುದರ ಮೂಲಕ ಸಭಾಧ್ಯಕ್ಷರು ಅವರಿಗೆ ಶಿಕ್ಷೆ ವಿಧಿಸಿರುತ್ತಾರೆ. ಸವದಿಗೆ ಇನ್ನು ಮುಂದೆ ಅಂತಹ ಕೃತ್ಯವೆಸಗಬಾರದು ಎನ್ನುವ ಎಚ್ಚರಿಕೆಯನ್ನು ನೀಡಬೇಕೆಂದು ಸದನ ಸಮಿತಿ ಶಿಫಾರಸು ಮಾಡಿ, ಅವರನ್ನೂ ಬಚಾವ್ ಮಾಡಿತ್ತು.
ಸಿ ಸಿ ಪಾಟೀಲ್, ಲಕ್ಷ್ಮಣ್ ಸವದಿಯಿಂದ ಅಂದಿನ 'ಆ ಘಟನೆ' ಮರುಕಳಿಸದಿರಲಿ
ಈಗ, ಈ ಮೂವರಲ್ಲಿ ಸಿ ಸಿ ಪಾಟೀಲ್ ಮಾತ್ರ ಶಾಸಕರು, ಇನ್ನು ಸವದಿ ಕಳೆದ ಚುನಾವಣೆಯಲ್ಲಿ ಸೋತಿದ್ದರೆ, ಪಾಲೇಮಾರ್ ಗೆ ಟಿಕೆಟೇ ಸಿಕ್ಕಿರಲಿಲ್ಲ. ಈಗ, ಮೂವರಲ್ಲಿ ಇಬ್ಬರಿಗೆ ಸಚಿವ ಸ್ಥಾನ ಅದೂ ಕ್ಯಾಬಿನೆಟ್ ದರ್ಜೆ ಸಿಕ್ಕಿರುವುದು, ಹಳೆಯ ಬ್ಲೂಫಿಲಂ ವೀಕ್ಷಣೆಯ ಕೆಟ್ಟ ಘಟನೆ ಮತ್ತೆ ಮುನ್ನಲೆಗೆ ಬಂದಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಈ ವಿಚಾರವನ್ನು ಯಾವರೀತಿ ಬಳಸಿಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. ಅಂಗಾರ ಮತ್ತು ಹಾಲಾಡಿಗೆ ಸಚಿವಸ್ಥಾನ ಸಿಗದೇ ಇರುವುದು, ಸಾಮಾಜಿಕ ತಾಣದಲ್ಲಿ ಟೀಕೆಗೆ ಗುರಿಯಾಗಿದೆ.