ಯಡಿಯೂರಪ್ಪ ಸಂಪುಟ ವಿಸ್ತರಣೆ; ಕಾಂಗ್ರೆಸ್ ನಾಯಕರು ಹೇಳಿದ್ದೇನು?
ಬೆಂಗಳೂರು, ಆಗಸ್ಟ್ 21 : ಯಡಿಯೂರಪ್ಪ ಅವರದ್ದು ಏಕ ಚಕ್ರಾಧಿಪತ್ಯ, ಏಕಾಂಗಿ ಸರ್ಕಾರ, ಒನ್ ಮ್ಯಾನ್ ಆರ್ಮಿ ಹೀಗೆ ಪ್ರತಿಪಕ್ಷ ಕಾಂಗ್ರೆಸ್ ಬಿಜೆಪಿ ಸರ್ಕಾರವನ್ನು ಲೇವಡಿ ಮಾಡಿತ್ತು. ಈಗ ಸಂಪುಟ ವಿಸ್ತರಣೆಯಾಗಿದೆ 17 ಶಾಸಕರು ಸಂಪುಟ ಸೇರಿದ್ದಾರೆ.
ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್ ನಾಯಕರು, "ರಾಜ್ಯದ ಹಿತದೃಷ್ಟಿಯಿಂದ ವಿಪಕ್ಷವಾಗಿ ಸರ್ಕಾರಕ್ಕೆ ನಾವು ಎಲ್ಲಾ ರೀತಿಯ ಸಹಕಾರ ಕೊಡುತ್ತೇವೆ" ಎಂದು ಭರವಸೆ ನೀಡಿದ್ದಾರೆ. "ಎಲ್ಲಾ ಜಿಲ್ಲೆಗಳಿಗೂ ಸಂಪುಟದಲ್ಲಿ ಆದ್ಯತೆ ಸಿಕ್ಕಿಲ್ಲ" ಎಂದು ಟೀಕಿಸಿದ್ದಾರೆ.
ಕೈ ತಪ್ಪಿದ ಸಚಿವ ಸ್ಥಾನ : ಯಾರು, ಏನು ಹೇಳಿದರು?
"ಇಲ್ಲಿಯವರೆಗೆ ಆಗಿರುವ ಗಲಾಟೆಗಳನ್ನು ಮಾಧ್ಯಮಗಳೇ ತೋರಿಸುತ್ತಿವೆ. ನಾವು ಕಾಂಗ್ರೆಸ್ ಹೈಕಮಾಂಡ್ ಮಾರ್ಗದರ್ಶನ ತೆಗೆದುಕೊಳ್ಳುವಾಗ ಬಿಜೆಪಿ ನಾಯಕರು ವ್ಯಂಗ್ಯವಾಡುತ್ತಿದ್ದರು. ಈಗ ಬಿಜೆಪಿಯವರ ಬಣ್ಣ ಬಯಲಾಗಿದೆ" ಎಂದು ಹಿರಿಯ ನಾಯಕ ಎಚ್. ಕೆ. ಪಾಟೀಲ್ ವ್ಯಂಗ್ಯವಾಡಿದ್ದಾರೆ.
ಯಡಿಯೂರಪ್ಪ ಸಂಪುಟ ಸೇರಿ ಬಿ. ಡಿ. ಜತ್ತಿ ದಾಖಲೆ ಮುರಿದ ಶೆಟ್ಟರ್!
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಳ್ಳಲು ಕಾರಣರಾದ ಅನರ್ಹ ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಕಾಂಗ್ರೆಸ್ ನಾಯಕರು ಇದನ್ನು ಕಂಡು ಮುಸಿ-ಮುಸಿ ನಗುತ್ತಿದ್ದಾರೆ. ಸಂಪುಟ ವಿಸ್ತರಣೆ ಬಗ್ಗೆ ಯಾರು ಏನು? ಹೇಳಿದರು?.
ಬಿಜೆಪಿ ಅತೃಪ್ತ ಶಾಸಕರ ರಹಸ್ಯ ಸಭೆ: ಬಂಡಾಯದ ಮುನ್ಸೂಚನೆ?
ದಿನೇಶ್ ಗುಂಡೂರಾವ್ ಹೇಳಿಕೆ
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ್ದು, "ನೂತನ ಸಂಪುಟ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯದ ಹಿತ ದೃಷ್ಟಿಯಿಂದ ವಿಪಕ್ಷವಾಗಿ ಸರ್ಕಾರಕ್ಕೆ ನಾವು ಸಹಕಾರ ಕೊಡುತ್ತೇವೆ. ಸಂಪುಟ ವಿಸ್ತರಣೆಗೆ ಯಾಕಿಷ್ಟು ತಡ ಮಾಡಿದರು ಎಂಬುದು ಗೊತ್ತಿಲ್ಲ. ಅತೃಪ್ತರನ್ನು ತೃಪ್ತಿ ಮಾಡುವ ಕೆಲಸ ಬಿಜೆಪಿ ಮಾಡಿದಂತೆ ಕಾಣುತ್ತಿಲ್ಲ. ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಇದು ಸರಿಯಿಲ್ಲ, ಹಲವು ಜಿಲ್ಲೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ" ಎಂದು ಹೇಳಿದರು.
ಇಂಥ ಸಂಪುಟ ಮಾಡೋದಕ್ಕೆ ಕಾಯಬೇಕಿತ್ತಾ?
ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಮಾತನಾಡಿ, "ಬಿಜೆಪಿಯ ಸಂಪುಟ ರಚನೆ ಅವರ ಮನಸ್ಥಿತಿ ಹೇಗಿದೆ? ಅನ್ನೋದನ್ನು ತೋರಿಸುತ್ತದೆ. ಸರ್ಕಾರ ಬೀಳಿಸುವಾಗ ಫಿಲಾಸಫಿ ಮಾತನಾಡುತ್ತಿದ್ದರು. ಈಗ ಕ್ಯಾಬಿನೆಟ್ ನೋಡಿದತೆ ಎಷ್ಟರ ಮಟ್ಟಿಗೆ ರಾಜ್ಯದ ಅಭಿವೃದ್ಧಿ ಮಾಡಬಹುದು ಇವರು ಅನ್ನೋದು ತಿಳಿಯುತ್ತದೆ. ನೆರೆ ಪೀಡಿತ ಪ್ರದೇಶಗಳಿಗೆ ಇವರು ಮಾನ್ಯತೆಯನ್ನು ಕೊಟ್ಟಿಲ್ಲ. ಇಂಥ ಸಚಿವ ಸಂಪುಟ ಮಾಡೋದಕ್ಕೆ 25 ದಿನ ಕಾಯಬೇಕಾಗಿತ್ತಾ?" ಎಂದು ಪ್ರಶ್ನೆ ಮಾಡಿದರು.
ಸಾಮಾಜಿಕ ನ್ಯಾಯವಿಲ್ಲ
ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿ, "ಸಾಮಾಜಿಕ ನ್ಯಾಯ ಬಿಜೆಪಿ ಸರ್ಕಾರದಲ್ಲಿ, ಆರ್ ಎಸ್ ಎಸ್ ನೇತೃತ್ವದಲ್ಲಿ ಸಿಗುತ್ತೆ ಅಂತ ನನಗೆ ನಂಬಿಕೆ ಇಲ್ಲ. ಸಚಿವರ ಪಟ್ಟಿ ನೋಡಿದರೆ ಇದು ಗೊತ್ತಾಗುತ್ತೆ. ಯಾವ್ಯಾವ ಭಾಗಕ್ಕೆ ಏನು ಸ್ಥಾನ-ಮಾನ ಕೊಟ್ಟಿದ್ದಾರೆ ಅನ್ನೋದು ತಿಳಿದಿದೆ. ಸಾಮಾಜಿಕ ನ್ಯಾಯ ಬಿಜೆಪಿ ಪ್ರಣಾಳಿಕೆ, ಅವರ ನಡವಳಿಕೆ ಎರಡರಲ್ಲೂ ಇಲ್ಲ" ಎಂದು ಟೀಕಿಸಿದರು.
ಒಳ್ಳೆಯ ಸರ್ಕಾರ ಕೊಡಲಿ
ಮಾಜಿ ಸಚಿವ ಎಚ್. ಕೆ. ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, "ಇಲ್ಲಿಯವರೆಗೆ ಆಗಿರುವ ಗಲಾಟೆಗಳನ್ನು ಮಾಧ್ಯಮಗಳೇ ತೋರಿಸಿವೆ. ನಾವು ಕಾಂಗ್ರೆಸ್ ಹೈಕಮಾಂಡ್ ಮಾರ್ಗದರ್ಶನ ತೆಗೆದುಕೊಳ್ಳುವಾಗ ಬಿಜೆಪಿ ನಾಯಕರು ವ್ಯಂಗ್ಯ ಮಾಡುತ್ತಿದ್ದರು. ಬಿಜೆಪಿಯವರ ಬಣ್ಣ ಈಗ ಬಯಲಾಗಿದೆ. ಬಿಜೆಪಿಗೆ ಅವಕಾಶ ಸಿಕ್ಕಿದೆ ಒಳ್ಳೆ ಸರ್ಕಾರ ಕೊಡಲಿ ಅಂತ ಹಾರೈಸುತ್ತೇನೆ" ಎಂದು ಹೇಳಿದರು.
ಬೆಂಗಳೂರಿನ ಬಗ್ಗೆ ಆಸಕ್ತಿ ವಹಿಸಲಿ
ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ಕೊಟ್ಟಿದ್ದು, "ಸಂಪುಟದಲ್ಲಿ ಸಿಎಂ ಸೇರಿ 18 ಜನ ಇದ್ದಾರೆ. ಬೆಂಗಳೂರಿಗೆ 4 ಸ್ಥಾನ ಕೊಟ್ಟಿದ್ದಾರೆ. ಬೆಂಗಳೂರಿನ ಬಗ್ಗೆ ಹೆಚ್ಚು ಆಸಕ್ತಿ ವಹಿಸಲಿ. ಅಸಮಾಧಾನ ಅವರ ಆಂತರಿಕ ವಿಚಾರ. ಅದರ ಬಗ್ಗೆ ಮಾತನಾಡಲ್ಲ, ಗೊಂದಲ ಜಾಸ್ತಿ ಇರೋದು ಬಿಜೆಪಿಯಲ್ಲಿ. ಹಿಂದೆ 5 ವರ್ಷ ನೋಡಿದ್ದೇವೆ" ಎಂದರು.