ಇಂಗ್ಲೆಂಡಿನಿಂದ ಬಂದವರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮನವಿ
ಬೆಂಗಳೂರು, ಡಿ. 30: ಇಂಗ್ಲೆಂಡ್ನಲ್ಲಿ ಪತ್ತೆಯಾಗಿರುವ ಹೊಸ ಪ್ರಬೇಧದ ಕೊರೊನಾ ವೈರಸ್ ರಾಜ್ಯದಲ್ಲಿಯೂ ಪತ್ತೆಯಾಗುವ ಮೂಲಕ ಆತಂಕ ಸೃಷ್ಟಿಸಿದೆ. ಮೊದಲಿದ್ದ ಕೊರೊನಾ ವೈರಸ್ಗಿಂತ ಶೇಕಡಾ 70 ರಷ್ಟು ವೇಗವಾಗಿ ರೂಪಾಂತರಿ ಕೊರೊನಾ ವೈರಸ್ ಹರಡುತ್ತದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಈಗಾಗಲೇ ಹೇಳಿಕೆ ನೀಡಿದ್ದಾರೆ. ರಾಜ್ಯ ಸರ್ಕಾರ ಮುಂಜಾಗ್ರತೆ ತೆಗೆದುಕೊಳ್ಳದೆ ಇದ್ದುದರಿಂದ, ಇಂಗ್ಲೆಂಡ್ನಿಂದ ಬಂದವರನ್ನು ಪತ್ತೆ ಮಾಡುವುದು ಆರೋಗ್ಯ ಇಲಾಖೆಗೆ ಸಾಧ್ಯವಾಗಿಲ್ಲ. ಹೀಗಾಗಿ ಇಂಗ್ಲೆಂಡ್ನಿಂದ ಬಂದವರು ರಾಜ್ಯದಲ್ಲಿ ರೂಪಾಂತರಿ ಕೊರೊನಾ ವೈರಸ್ನ್ನು ಹರಡಿಸರುವ ಆತಂಕ ಎದುರಾಗಿದೆ. ಹೀಗಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ.
Recommended Video
ಬೆಂಗಳೂರಿನಲ್ಲಿ ಮಾತನಾಡಿರುವ ಸಿಎಂ ಯಡಿಯೂರಪ್ಪ ಅವರು, ರಾಜ್ಯದಲ್ಲಿಯೂ ಬ್ರಿಟನ್ ಕೊರೊನಾ ವೈರಸ್ ಹರಡುತ್ತಿದೆ. ಇದನ್ನು ನಿಯಂತ್ರಿಸಲು ಕೇಂದ್ರ ಆರೋಗ್ಯ ಇಲಾಖೆ ಕ್ರಮ ವಹಿಸುತ್ತಿದೆ. ಈಗಾಗಲೇ ಬ್ರಿಟನ್ನಿಂದ ಬಂದವರು ಕಣ್ಣು ತಪ್ಪಿಸಿ ಓಡಾಡಬಾರದು. ಬಂದವರು ತಮ್ಮ ಆರೋಗ್ಯದ ದೃಷ್ಟಿಯಿಂದ ಪರೀಕ್ಷೆಗೆ ಒಳಗಾಗಬೇಕು. ನಾವು ಕೂಡ ಕಟ್ಟೆಚ್ಚರ ವಹಿಸಬೇಕು. ಕಳೆದ ಎರಡು ತಿಂಗಳಿಂದ ಬಂದಿರುವವರು ಒಮ್ಮೆ ಹೊಸ ಕೋವಿಡ್ ತಪಾಸಣೆ ಮಾಡಿಸಿ. ನಾನು ರಾಜ್ಯದ ಮುಖ್ಯಮಂತ್ರಿಯಾಗಿ ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ ಎಂದು ಇಂಗ್ಲೆಂಡ್ನಿಂದ ಬಂದವರಲ್ಲಿ ಯಡಿಯೂರಪ್ಪ ಅವರು ಮನವಿ ಮಾಡಿದ್ದಾರೆ.
ಹೊಸ ಪ್ರಬೇಧದ ಕೊರೊನಾ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸದ್ಯ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟನೆ ಕೊಟ್ಟಿದ್ದಾರೆ.