ಸ್ವಾಮೀಜಿ Vs ಯಡಿಯೂರಪ್ಪ: ಯಾರು ಸರಿ? ಯಾರದು ತಪ್ಪು?
ಬೆಂಗಳೂರು, ಜನವರಿ 15: ದಾವಣಗೆರೆಯ ಹರಿಹರದಲ್ಲಿ ನಡೆಯುತ್ತಿರುವ ಹರ ಜಾತ್ರೆಯ ಕಾರ್ಯಕ್ರಮದಲ್ಲಿ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಮತ್ತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಡುವೆ ವೇದಿಕೆಯಲ್ಲೇ ನಡೆದ ವಾಗ್ವಾದ ತೀವ್ರ ಚರ್ಚೆಗೆ ಒಳಗಾಗಿದೆ.
ಸಮುದಾಯದ ನಾಯಕರಿಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದ ಸ್ವಾಮೀಜಿಗಳ ಮಾತು ಸರಿಯೇ ಅಥವಾ ಅವರಿಗೆ ವೇದಿಕೆಯಲ್ಲಿಯೇ ತಿರುಗೇಟು ನೀಡುವ ಮೂಲಕ ರಾಜೀನಾಮೆಯ ಬೆದರಿಕೆಯನ್ನೂ ಒಡ್ಡಿದ ಯಡಿಯೂರಪ್ಪ ಅವರ ನಿಲುವು ಸರಿಯೇ ಎಂಬ ವಿಭಿನ್ನ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿವೆ.
ಪಂಚಮಸಾಲಿ ಸ್ವಾಮೀಜಿ ವಿರುದ್ಧ ಕನಲಿದ ಬಿಎಸ್ವೈ: ರಾಜೀನಾಮೆ ಕೊಡುವ ಮಾತು
ಮುರಗೇಶ್ ನಿರಾಣಿ ಅವರನ್ನು ಕೈಬಿಟ್ಟರೆ ವೀರಶೈವ ಪಂಚಮಸಾಲಿ ಸಮುದಾಯವೇ ನಿಮ್ಮ ಕೈಬಿಡಲಿದೆ ಎಂದು ಎಚ್ಚರಿಕೆ ನೀಡಿದ್ದ ಸ್ವಾಮೀಜಿ ವಿರುದ್ಧ ಯಡಿಯೂರಪ್ಪ ಹರಿಹಾಯ್ದಿದ್ದರು. 'ನೀವು ಸಲಹೆ ಕೊಡಬಹುದಷ್ಟೇ, ಎಚ್ಚರಿಕೆ ನೀಡಬೇಡಿ. ಹೀಗೆ ಮಾತನಾಡಿದರೆ ಹೊರಟುಹೋಗುತ್ತೇನೆ' ಎಂದು ಯಡಿಯೂರಪ್ಪ ಮುನಿಸಿಕೊಂಡಿದ್ದರು. ಇದು ವೀರಶೈವ ಸಮುದಾಯದೊಳಗೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹಾಗೆಯೇ ರಾಜಕೀಯ ವಲಯದಲ್ಲಿಯೂ ಪರ-ವಿರೋಧದ ಮಾತುಗಳು ಕೇಳಿಬರುತ್ತಿವೆ.
ಸ್ವಾಮೀಜಿಗಳಿಗೆ ರಾಜಕೀಯ ಏಕೆ?
ಎಲ್ಲವನ್ನೂ ತ್ಯಜಿಸಿದ ಸ್ವಾಮೀಜಿಗಳು ರಾಜಕೀಯದಿಂದಲೂ ದೂರವಿರಬೇಕು. ಆದರೆ ತಮ್ಮ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ನೀಡದೆ ಇದ್ದರೆ ಸಮುದಾಯವೇ ನಿಮ್ಮ ಕೈಬಿಡಲಿದೆ ಎಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಹೇಳುವ ಮೂಲಕ ಪೀಠದ ಆಶಯಕ್ಕೆ ಧಕ್ಕೆ ತಂದಿದ್ದಾರೆ. ಸ್ವಾಮೀಜಿಗಳಿಗೆ ಸರ್ಕಾರ ಅಥವಾ ಆಡಳಿತದಲ್ಲಿ ಮೂಗು ತೂರಿಸುವ ಅಧಿಕಾರ ಇರುವುದಿಲ್ಲ. ಅವರು ಇತಿಮಿತಿಗಳನ್ನು ಮೀರಬಾರದು ಎಂದು ಅನೇಕರು ಸಲಹೆ ನೀಡಿದ್ದಾರೆ.
ಯಡಿಯೂರಪ್ಪಗೆ ಶ್ಲಾಘನೆ
ಯಡಿಯೂರಪ್ಪ ಲಿಂಗಾಯತ ಮಠಗಳು ಮತ್ತು ಸಮುದಾಯದ ಹೆಚ್ಚಿನ ಬೆಂಬಲ ಪಡೆದರೂ ಮತ್ತು ಲಿಂಗಾಯತ ಮುಖಂಡರಿಗೆ ಪ್ರಾಶಸ್ತ್ಯ ನೀಡಿದ್ದರೂ ಪ್ರಭಾವ ಬೀರುವ ಸ್ವಾಮೀಜಿಗಳ ತಂತ್ರಕ್ಕೆ ಜಗ್ಗಿಲ್ಲ. ಅವರು ವೇದಿಕೆ ಮೇಲೆ ದಿಟ್ಟತನ ತೋರಿಸಿದ್ದಾರೆ. ಮುಖ್ಯಮಂತ್ರಿಯಾಗಿ ಅವರು ಈ ರೀತಿ ನಿಲುವು ಪ್ರದರ್ಶಿಸಿತ್ತು ಸ್ವಾಗತಾರ್ಹ ಎಂದು ಅನೇಕರು ಶ್ಲಾಘಿಸಿದ್ದಾರೆ.
ಎಲ್ಲರೆದುರೇ ಪರಿಹಾರ ಕೇಳಿದ್ದಕ್ಕೆ ಬಿಎಸ್ವೈ ವಿರುದ್ಧ ಅಮಿತ್ ಶಾ ಕಿಡಿ?
ಎಚ್ಚರಿಕೆ ನೀಡುವುದು ಬೇಡ
ರಾಜಕೀಯ ವಿಚಾರದಲ್ಲಿ ಸಮುದಾಯಕ್ಕೆ ಆದ್ಯತೆ ನೀಡುವ ವಿಚಾರವನ್ನು ಜಾತ್ರೆಯ ಕಾರ್ಯಕ್ರಮವೊಂದರಲ್ಲಿ ಪ್ರಸ್ತಾಪಿಸಿರುವುದು ಯಡಿಯೂರಪ್ಪ ಅವರಿಗೆ ಅಸಮಾಧಾನ ಉಂಟುಮಾಡಿದೆ. ಸಲಹೆ ಕೊಡಿ ಎಂದರೆ ಎಚ್ಚರಿಕೆ ನೀಡುವುದು ಬೇಡ. ಪಂಚಮಸಾಲಿ ಸಮಾಜ ನನ್ನ ಜತೆ ಇದೆ. ಎಲ್ಲ ಮಠಾಧೀಶರನ್ನೂ ಸೇರಿಸುತ್ತೇನೆ ಎಂದು ಯಡಿಯೂರಪ್ಪ ತಮ್ಮ ಭಾಷಣದ ವೇಳೆ ಕಟುವಾಗಿ ಹೇಳಿದ್ದರು.
ಅಧಿಕಾರದ ಅಂತ್ಯ ಆರಂಭವೇ?
ಅನೇಕರು ಯಡಿಯೂರಪ್ಪ ಅವರ ನಡೆಯನ್ನು ಕೂಡ ಟೀಕಿಸಿದ್ದಾರೆ. ಸ್ವಾಮೀಜಿ ಅವರ ಮಾತನ್ನು ಅರ್ಧದಲ್ಲಿಯೇ ತಡೆದಿರುವುದು ಸರಿಯಲ್ಲ. ಅಲ್ಲದೆ ಸ್ವಾಮೀಜಿಗಳ ಕಾಲು ತಟ್ಟಿ ಭಾಷಣ ನಿಲ್ಲಿಸುವಂತೆ ಹೇಳಿದ್ದಾರೆ. ಪೂರ್ಣ ಮಾತುಗಳನ್ನು ಕೇಳಿಸಿಕೊಂಡು ಸಂಯಮ ಪ್ರದರ್ಶಿಸಿ ಬಳಿಕ ಉತ್ತರ ನೀಡಬೇಕಿತ್ತು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು ಇದು ಯಡಿಯೂರಪ್ಪ ಅವರ ಅಧಿಕಾರ ಅಂತ್ಯಕ್ಕೆ ಹಾಡಿದ ನಾಂದಿ. ಇನ್ನು ದಿನಗಳನ್ನು ಎಣಿಸಬೇಕು ಎಂದು ವ್ಯಾಖ್ಯಾನಿಸಿದ್ದಾರೆ.
ದಾವೋಸ್ ಗೆ ಹೋಗುವ ಮುನ್ನವೇ ಸಂಪುಟ ವಿಸ್ತರಣೆ: ಯಡಿಯೂರಪ್ಪ
ಸಿದ್ದರಾಮಯ್ಯ ಅಥವಾ ಕುಮಾರಸ್ವಾಮಿ ಇದ್ದಿದ್ದರೇ?
ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ವಿರೋಧಪಕ್ಷ ಹಾಗೂ ಬಿಜೆಪಿ ಟೀಕಾಕಾರರು ಬೇರೆ ಬೇರೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅಥವಾ ಎಚ್ ಡಿ ಕುಮಾರಸ್ವಾಮಿ ಈ ರೀತಿ ಸ್ವಾಮೀಜಿಗಳ ವಿರುದ್ಧ ವೇದಿಕೆಯಲ್ಲಿಯೇ ಸಿಟ್ಟಿನಿಂದ ಪ್ರತಿಕ್ರಿಯೆ ನೀಡಿದ್ದರೆ ಬಿಜೆಪಿಯ ಭಕ್ತರು ಮುಗಿಬೀಳುತ್ತಿದ್ದರು. ಮಾಧ್ಯಮಗಳು ಕೂಡ 'ದುರಹಂಕಾರದ ವರ್ತನೆ' ಎಂದು ವರದಿ ಮಾಡುತ್ತಿದ್ದವು ಎಂದು ಹೇಳಿದ್ದಾರೆ.
ಮತ ಕೇಳಿದ್ದರು, ಪದವಿ ಕೇಳುತ್ತಿದ್ದಾರೆ
ಚುನಾವಣೆಯಲ್ಲಿ ಒಂದೂ ಲಿಂಗಾಯತ ಮತಗಳು ಬಿಜೆಪಿಯ ಕೈತಪ್ಪದಂತೆ ನೋಡಿಕೊಳ್ಳಬೇಕು ಎಂದು ಬಿಎಸ್ ಯಡಿಯೂರಪ್ಪ ಈ ಹಿಂದೆ ಹೇಳಿದ್ದರು. ಈಗ ಅದಕ್ಕೆ ಪ್ರತಿಯಾಗಿ ಅವರು ಸಚಿವ ಸ್ಥಾನದ ಪ್ರಾತಿನಿಧ್ಯ ಕೇಳುತ್ತಿದ್ದಾರೆ. ಅದರಲ್ಲಿ ತಪ್ಪೇನೂ ಇಲ್ಲ ಎಂದಿದ್ದಾರೆ.
ಹಳೆ ಯಡಿಯೂರಪ್ಪ ಸರ್ಕಾರ ಅಲ್ಲ
ಜಾತಿ ಸ್ವಾಮಿಗಳೆಲ್ಲಾ ಸೇರಿ ಅಖಂಡ ಹಿಂದುತ್ವವನ್ನು ಕಟ್ಟುತ್ತಾರಂತೆ.! ತಲೆಗೆ ಹುಯ್ದುಕೊಂಡ ನೀರು ಕಾಲಿಗೆ ಬಂದಿದೆ. ಯಡಿಯೂರಪ್ಪ ನವರು ಜಾತಿ ನಾಯಕನಾಗಲು ಹೊರಟು ವಿಪರೀತವಾಗಿ ಮಠ, ಸ್ವಾಮಿಗಳನ್ನು ಓಲೈಸಿದ್ದರ ಫಲ ಇವತ್ತು ಸ್ವಾಮಿಯೊಬ್ಬ ತಮ್ಮ ಜಾತಿಯ ನಾಯಕರಿಗೆ ಹೆಚ್ಚು ಆದ್ಯತೆ ನೀಡಬೇಕೆಂದು ಸಾರ್ವಜನಿಕ ವೇದಿಕೆಯಲ್ಲಿಯೇ ರಾಜ್ಯದ ಮುಖ್ಯಮಂತ್ರಿಗಳಿಗೆ ಬೆದರಿಸುವಂತೆ ಆಗ್ರಹಿಸುತ್ತಾರೆ.
ಇಂಥಾ ವಿಚಾರಗಳಲ್ಲಿ ಸಿದ್ದರಾಮಯ್ಯ ಎಲ್ಲರಿಗೂ ಮಾದರಿ ಮತ್ತು ಬುದ್ದಿವಂತ.! ಅವರು ಜಾತಿಗಳನ್ನು ಓಲೈಸಿದರೇ ಹೊರತು ಜಾತಿ ಸ್ವಾಮಿಗಳನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಲಿಲ್ಲ.
ಅವರ ಉಡಾಫೆ, ಒರಟುತನಕ್ಕೆ ಹೆದರಿ ಅವರ ಅಧಿಕಾರಾವಧಿಯಲ್ಲಿ ಯಾವ ಸ್ವಾಮಿಯೂ ಅವರತ್ತ ತಲೆಯಿಟ್ಟೂ ಮಲಗಲಿಲ್ಲ. ಇದೇ ಮೊದಲ ಬಾರಿಗೆ ವೇದಿಕೆಯಲ್ಲೇ ಆಗಲ್ಲ ಹೋಗ್ರೀ ಎಂದು ಯಡಿಯೂರಪ್ಪನವರು ಸ್ವಾಮ್ಗುಳನ್ನು ಜಾಡಿಸಿದ್ದೂ ಕೂಡಾ ವಿಶೇಷ ಮತ್ತು ಈಗಿನದು ಹಳೇ ಯಡಿಯೂರಪ್ಪನ ಸರ್ಕಾರವಲ್ಲ ಎಂಬುದರ ಸೂಚಕ.- ಕಾರ್ತಿಕಾದಿತ್ಯ ಬೆಳಗೋಡು.
ತಲೆ ಮೇಲೆ ಕೂರಿಸಿಕೊಂಡಿದ್ದರ ಫಲ
ಸ್ವಾಮ್ಗಳನ್ನ ಎಷ್ಟು ಹಚ್ಕೊಬೇಕೋ ಅಷ್ಟೇ ಹಚ್ಕೋಬೇಕು. ತಲೆ ಮೇಲೆ ಕುಂಡ್ರಿಸಿಕೊಂಡರೆ ನೋಡಿ ಹಿಂಗಾಗಿಬಿಡುತ್ತೆ. ಆಶೀರ್ವಚನ ಮಾಡುವವರು ಅಕ್ಷರಶಃ ಬ್ಲಾಕ್ ಮೇಲ್ ಮಾಡುತ್ತಾರೆ, ಬೆದರಿಕೆ ಹಾಕುತ್ತಾರೆ. ಬಿ.ಎಸ್.ಯಡಿಯೂರಪ್ಪ ತುಸು ಜಾಸ್ತಿನೇ ಇಂಥವರನ್ನು ಮುದ್ದು ಮಾಡಿಬಿಟ್ಟರು. ಅದರ ಪ್ರತಿಫಲ ಈಗ ಅವರೇ ಅನುಭವಿಸುವಂತಾಗಿದೆ. ಮಾಡಿದ್ದುಣ್ಣೋ ಮಹರಾಯ. ಒಂದು ಸಮಾಧಾನ, ಯಡಿಯೂರಪ್ಪ ಅಲ್ಲೇ ಆ ಕ್ಷಣವೇ ಪ್ರತಿಭಟಿಸಿದ ರೀತಿ ಇಷ್ಟವಾಯಿತು. - ದಿನೇಶ್ ಕುಮಾರ್