ಬಿಎಸ್ವೈ-ಸಿದ್ದರಾಮಯ್ಯ ತಡರಾತ್ರಿ ಭೇಟಿ: ಎಚ್.ಡಿ. ಕುಮಾರಸ್ವಾಮಿ ಸಿಡಿಸಿದ ಹೊಸ ಬಾಂಬ್
ಮೈಸೂರು, ಅ 12: ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪನವರ ಆಪ್ತರ ಮೇಲೆ ಇತ್ತೀಚೆಗೆ ನಡೆದ ಆದಾಯ ತೆರಿಗೆ ದಾಳಿ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಹೊಸ ಬಾಂಬ್ ಸಿಡಿಸುವ ಮೂಲಕ ಚರ್ಚೆಯನ್ನು ಜೀವಂತವಾಗಿರಿಸಿದ್ದಾರೆ.
ಉಪ ಚುನಾವಣೆಯ ಸಂದರ್ಭದಲ್ಲಿ ಕುಮಾರಸ್ವಾಮಿಯವರು ನೀಡಿದ ಹೇಳಿಕೆ ಮಹತ್ವವನ್ನು ಪಡೆದುಕೊಂಡಿದ್ದು, ಯಾವ ರಾಜಕೀಯ ಆಯಾಮಗಳಲ್ಲಿ ತಿರುವುಗಳನ್ನು ಪಡೆದುಕೊಳ್ಳಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಉಪ ಚುನಾವಣೆಗೆ ಮುನ್ನ ಸಿಎಂ ಬೊಮ್ಮಾಯಿ ಆಡಿಯೋ ವೈರಲ್
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪನವರು ತಡರಾತ್ರಿ ಭೇಟಿಯಾಗಿ ಮಾತುಕತೆ ನಡೆಸಿದ್ದೇ, ಆದಾಯ ತೆರಿಗೆ ದಾಳಿಗೆ ಮೂಲ ಕಾರಣ ಎನ್ನುವ ಕುಮಾರಸ್ವಾಮಿಯವರ ಗಂಭೀರ ಆರೋಪದ ಬಗ್ಗೆ ಇಬ್ಬರು ಮಾಜಿ ಸಿಎಂಗಳ ಪ್ರತಿಕ್ರಿಯೆ ಇನ್ನೂ ವ್ಯಕ್ತವಾಗಿಲ್ಲ.
ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಸಿದ್ದರಾಮಯ್ಯನವರ ವಿರುದ್ದ ಸತತ ದಾಳಿ ನಡೆಸುತ್ತಿರುವ ಕುಮಾರಸ್ವಾಮಿಯವರು, ಯಡಿಯೂರಪ್ಪನವರನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಲೋಸ್ಕರ ಐಟಿ ದಾಳಿ ನಡೆದಿದೆ ಎಂದು ಹೇಳಿದ್ದಾರೆ. ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಕುಮಾರಸ್ವಾಮಿಯವರು ಹೇಳಿದ್ದು ಹೀಗೆ:
ಯಡಿಯೂರಪ್ಪನವರ ಆಪ್ತರ ಮನೆಯ ಮೇಲೆ ನಡೆದ ಆದಾಯ ತೆರಿಗೆ ದಾಳಿ
"ಮೊನ್ನೆ ನಡೆದ ಆದಾಯ ತೆರಿಗೆ ದಾಳಿ ಏನಿದೆಯೋ, ಅದು ರಾಜಕೀಯ ತಿಳಿದಿರುವಂತಹ ಅಲ್ಪಸ್ವಲ್ಪ ಪ್ರಜ್ಞೆ ಇರುವಂತವರಿಗೆ, ಯಾವ ಕಾರಣಕ್ಕಾಗಿ ರೈಡ್ ನಡೆದಿದೆ ಎನ್ನುವುದು ಗೊತ್ತಿರುವಂತಹ ವಿಚಾರ. ಇಂದಿನ ದಿನಪತ್ರಿಕೆಯೊಂದರಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಫೋಟೋ ಹಾಕಿ( ಹೆಸರು ಉಲ್ಲೇಖಿಸದೇ, ಬಿಎಸ್ವೈಮತ್ತು ಸಿದ್ದರಾಮಯ್ಯ) ಇಬ್ಬರ ನಡುವೆ ಒಳಗಡೆ ಏನೋ ನಡೀತಾ ಇತ್ತು ಎನ್ನುವುದರ ಬಗ್ಗೆ ವರದಿಯಾಗಿದೆ" - ಎಚ್.ಡಿ.ಕುಮಾರಸ್ವಾಮಿ.
ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ತಡರಾತ್ರಿ ಭೇಟಿ
"ಆ ವಿಚಾರ ಗೊತ್ತಾಗಿಯೇ ರೈಡ್ ಮಾಡಿಸಿರುವುದು. ಇದು ದೆಹಲಿಯಿಂದ ಆಗಿರುವುದು, ರಾಜ್ಯದಲ್ಲೂ ಅವರದ್ದೇ ಸರಕಾರವಿದೆ, ಕೇಂದ್ರದಲ್ಲೂ ಅವರದ್ದೇ ಸರಕಾರವಿದೆ. ತನಿಖಾ ದಳಗಳು ಅವರ ಸುಪುರ್ದಿಯಲ್ಲೇ ಇರುವುದರಿಂದ, ಅವರನ್ನು (ಬಿಎಸ್ವೈ) ತಮ್ಮ ನಿಯಂತ್ರಣದಲ್ಲಿ ಇರಿಸಲು ಈ ದಾಳಿ ನಡೆದಿದೆ. ಅವರಿಗೆ (ಕೇಂದ್ರ ಸರಕಾರ), ಅವರದ್ದೇ ಆದ ಮೂಲಗಳು ಇರುತ್ತವೆ. ನಾನು ಎಂದೂ ಯಡಿಯೂರಪ್ಪನವರು ಕ್ಲೀನ್ ಹ್ಯಾಂಡ್ ಎಂದು ಸರ್ಟಿಫಿಕೇಟ್ ನೀಡಿದವನಲ್ಲ"ಎಂದು ಕುಮಾರಸ್ವಾಮಿಯವರು ಹೇಳಿದರು.
ಯಡಿಯೂರಪ್ಪನವರು ಪ್ರಾಮಾಣಿಕವಾಗಿ ಸರಕಾರ ನಡೆಸಿದರು ಎಂದೂ, ಎಲ್ಲೂ ನಾನು ಹೇಳಿಲ್ಲ
"ಯಡಿಯೂರಪ್ಪನವರು ಪ್ರಾಮಾಣಿಕವಾಗಿ ಸರಕಾರ ನಡೆಸಿದರು ಎಂದೂ, ಎಲ್ಲೂ ನಾನು ಹೇಳಿಲ್ಲ. ಯಡಿಯೂರಪ್ಪನವರ ಆಪ್ತರ ಮೇಲೆ ದಾಳಿಗೆ, ಮೈಸೂರಿನ ಮಹಾನಾಯಕ (ಸಿದ್ದರಾಮಯ್ಯ) ಕಾರಣ. ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸುವಂತಹ ಶಕ್ತಿ ಇಟ್ಟುಕೊಂಡಿದ್ದೇನೆ ಎಂದು ಹೇಳುವ ಆ ನಾಯಕ, ಚಾಮುಂಡೇಶ್ವರಿ ಚುನಾವಣೆಯಲ್ಲಿ 37 ಸಾವಿರ ಮತಗಳ ಅಂತರದಿಂದ ಸೋಲಿಲ್ಲವೇ" ಎಂದು ಕುಮಾರಸ್ವಾಮಿಯವರು ಪ್ರಶ್ನಿಸಿದರು.
ಚಾಮುಂಡೇಶ್ವರಿ ಚುನಾವಣೆಯಲ್ಲಿ 37 ಸಾವಿರ ಮತಗಳ ಅಂತರದಿಂದ ಸೋಲು
"ಮುಖ್ಯಮಂತ್ರಿಯಾಗಿದ್ದವರನ್ನು ಸೋಲಿಸಿದಾಗ ಅದರಲ್ಲೂ ನನ್ನ ಪಾತ್ರವೂ ಸ್ವಲ್ಪ ಇರುವುದಿಲ್ಲವೇ? ಯಾರ ಬಗ್ಗೆಯೂ ಮಾತನಾಡುವಾಗ ಲಘುವಾಗಿ ಮಾತನಾಡಬಾರದು. ರಾಜಕೀಯದಲ್ಲಿ ಏಳುಬೀಳು ಇದ್ದಿದ್ದೇ"ಎಂದು ಕುಮಾರಸ್ವಾಮಿಯವರು ಸಿದ್ದರಾಮಯ್ಯನವರ ವಿರುದ್ದ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಭೇಟಿಯ ಬಗ್ಗೆ ಹೊಸ ವಿಷಯವನ್ನು ಎಚ್ಡಿಕೆ ಪ್ರಸ್ತಾವಿಸುವ ಮೂಲಕ, ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.
"ಸಿದ್ದರಾಮಯ್ಯನವರು ಮಾಡಿದ ಅಪರಾಧಗಳಿಂದ ಕಾಂಗ್ರೆಸ್ ನಾಶವಾಗಲಿದೆ. ಕೋಲಾರದಲ್ಲಿ ಕೆ.ಎಚ್.ಮುನಿಯಪ್ಪ ಸೋತರು, ವೀರಪ್ಪ ಮೊಯ್ಲಿ ಸೋತರು. ಅವರನ್ನು ನಾವು ಸೋಲಿಸಿದೆವಾ, ಕಾಂಗ್ರೆಸ್ಸಿನವರೇ ಇವರನ್ನು ಸೋಲಿಸಿದ್ದು. ನನ್ನ ಪಕ್ಷವನ್ನು ಹೇಗೆ ಕಟ್ಟಿಕೊಳ್ಳಬೇಕು ಎನ್ನುವುದು ನನಗೆ ಗೊತ್ತಿದೆ, ಇವರಿಗೆಲ್ಲಾ ಆ ಚಿಂತೆ ಬೇಡ. ಹಲವು ಭಾಗ್ಯಗಳನ್ನು ಕೊಟ್ಟಿದ್ದೆ ಎಂದು ಹೇಳುವ ಸಿದ್ದರಾಮಯ್ಯನವರು, ಚಾಮುಂಡೇಶ್ವರಿಯಲ್ಲಿ ಯಾಕೆ ಸೋತರು"ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
Recommended Video