ಸರ್ಕಾರ ಉರುಳಿಸಿದ ಖುಷಿ: ಮೋದಿಗೆ ಪತ್ರ ಬರೆದ ಯಡಿಯೂರಪ್ಪ
ಬೆಂಗಳೂರು, ಜುಲೈ 23: ವಿಶ್ವಾಮತದಲ್ಲಿ ಮೈತ್ರಿ ಸರ್ಕಾರವನ್ನು ಸೋಲಿಸಿ ಬಹುಮತ ಸಂಪಾದನೆ ಮಾಡಿ, ಸಿಎಂ ಖುರ್ಚಿಯನ್ನು ತಮ್ಮ ಪಾಲಿಗೆ ಮಾಡಿಕೊಂಡ ಕೂಡಲೇ ಯಡಿಯೂರಪ್ಪ ಅವರು ಮೋದಿ ಸೇರಿದಂತೆ ಬಿಜೆಪಿ ಹೈಕಮಾಂಡ್ಗೆ ಪತ್ರ ಬರೆದಿದ್ದಾರೆ.
ಮೋದಿ ಅವರಿಗೆ ಬರೆದಿರುವ ಪತ್ರದಲ್ಲಿ, ನಿಮ್ಮ ಹಾಗೂ ಪಕ್ಷದ ಪ್ರಮುಖರ ಬೆಂಬಲಕ್ಕೆ ಧನ್ಯವಾದಗಳು, ಕರ್ನಾಟಕದಲ್ಲಿ ನಾವು ಮೈತ್ರಿ ಸರ್ಕಾರವನ್ನು ವಿಶ್ವಾಸಮತದಲ್ಲಿ ಸೋಲಿಸಿದ್ದೇವೆ. ಬಿಜೆಪಿ ಪಕ್ಷ ರಚನೆ ಮಾಡುವ ಹಾದಿಯಲ್ಲಿದ್ದೇವೆ ಎಂದು ಹೇಳಿದ್ದಾರೆ.
ಯುದ್ದಗೆದ್ದ ಸಂಭ್ರಮದಲ್ಲಿ ಯಡಿಯೂರಪ್ಪ: ಮುಂದಿನ ನಡೆಯೇನು?
'ನಮ್ಮ ಪಕ್ಷದ 105 ಶಾಸಕರು ಕಲ್ಲಿನಂತೆ ಪಕ್ಷದ ಜೊತೆಗೆ ನಿಂತರು. ಕಳೆದ ಮೂರು ದಿನಗಳಲ್ಲಿ ಬಹಳ ಕ್ಲಿಷ್ಟಕರ ರಾಜಕೀಯ ಪರಿಸ್ಥಿತಿಯನ್ನು ನಾವು ಎದುರಿಸಿದೆವು, ಆದರೆ ಅದನ್ನೆಲ್ಲ ಮೀರಿ ನಾವು ಮೇಲೆದ್ದು ಬಂದೆವು' ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.
ನಾವು ಮಾತ್ರವಲ್ಲ, ರಾಜ್ಯದ ಜನ ಸಹ ಕೆಟ್ಟ ಆಡಳಿತದಿಂದ ಬೇಸತ್ತು ಹೋಗಿದ್ದರು, ಅವರು ಈಗ ನೆಮ್ಮದಿಯ ಉಸಿರು ಬಿಡುವಂತೆ ಆಗಿದೆ ಎಂದು ಯಡಿಯೂರಪ್ಪ ಅವರು ಮೋದಿ ಅವರಿಗೆ ತಿಳಿಸಿದ್ದಾರೆ.
ಇದು ಪ್ರಜಾಪ್ರಭುತ್ವದ ಗೆಲುವು : ಬಿ.ಎಸ್.ಯಡಿಯೂರಪ್ಪ
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೂ ಪತ್ರ ಬರೆದಿರುವ ಯಡಿಯೂರಪ್ಪ ಅವರು, ಮೋದಿ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ ಅದೇ ಮಾತುಗಳನ್ನು ಉಲ್ಲೇಖಿಸಿ ಅಮಿತ್ ಶಾ ಅವರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. ಅಂತೆಯೇ ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರಿಗೂ ಪತ್ರ ಮುಖೇನ ಧನ್ಯವಾದ ತಿಳಿಸಿದ್ದಾರೆ.