ದೇವೇಗೌಡರ ಆರೋಪಕ್ಕೆ ಟ್ವೀಟ್ ಮೂಲಕ ಉತ್ತರಿಸಿದ ಯಡಿಯೂರಪ್ಪ
Recommended Video
ಬೆಂಗಳೂರು, ಆಗಸ್ಟ್ 03: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗಿಗು ಏಳಲು ಬಿಜೆಪಿಯ ತಂತ್ರವೇ ಕಾರಣ ಎಂದು ನಿನ್ನೆ ದೇವೇಗೌಡರು ಮಾಡಿದ್ದ ಆರೋಪಕ್ಕೆ ಇಂದು ಯಡಿಯೂರಪ್ಪ ಅವರು ಟ್ವೀಟ್ ಮೂಲಕ ಉತ್ತರಿಸಿದ್ದಾರೆ.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗು ಏಳಲು ಯಡಿಯೂರಪ್ಪ ಕಾರಣ ಎಂಬರ್ಥದ ಮಾತುಗಳನ್ನು ನಿನ್ನೆ ದೇವೇಗೌಡ ಅವರು ಆಡಿದ್ದರು. ಬಿಜೆಪಿಯ ಕುತಂತ್ರಕ್ಕೆ ಜನ ಬಲಿಯಾಗಬಾರದು ಎಂದು ಸಹ ಎಚ್ಚರಿಕೆ ನೀಡಿದ್ದರು.
ಕುಮಾರಸ್ವಾಮಿ ರಾಜ್ಯ ಒಡೆಯಲು ಹೊರಟಿದ್ದಾರೆ: ಯಡಿಯೂರಪ್ಪ
ಇದಕ್ಕೆ ಇಂದು ಪ್ರತ್ಯುತ್ತರಿಸಿರುವ ಯಡಿಯೂರಪ್ಪ, ಕೇವಲ ರಾಜಕೀಯ ಲಾಭಕ್ಕಾಗಿ ಉತ್ತರ ಕರ್ನಾಟಕ ಜನತೆಯ ಭಾವನೆ ಜೊತೆ ಆಟವಾಡಿದ್ದಕ್ಕೆ ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡರವರು ಉತ್ತರಿಸಬೇಕಿದೆ ಎಂದು ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಕುಮಾರಸ್ವಾಮಿ ಹೇಳಿಕೆಗಳ ಉಲ್ಲೇಖ
ಕುಮಾರಸ್ವಾಮಿ ನೀಡಿದ್ದ ಹೇಳಿಕೆಗಳನ್ನು ಉಲ್ಲೇಖಿಸಿರುವ ಅವರು, ಉತ್ತರ ಕರ್ನಾಟಕದಿಂದ ಆದಾಯ ಬರುತ್ತಿಲ್ಲ, ಹಣದ ಆಮಿಷದಿಂದ ಅಲ್ಲಿನ ಜನ ಮತ ಚಲಾಯಿಸಿದ್ದಾರೆ, ಉತ್ತರ ಕರ್ನಾಟಕಕ್ಕೆ ಲಿಂಗಾಯತ ಮುಖ್ಯಮಂತ್ರಿಗಳ ಕೊಡುಗೆ ಇಲ್ಲ' ಎಂದು ಕೀಳುಮಟ್ಟದ ಹೇಳಿಕೆಗಳನ್ನು ನೀಡಿ ಜನರ ಭಾವನೆ ಕೆರಳಿಸಿದವರು ಯಾರು ಎಂದು ಬಿಎಸ್ವೈ, ದೇವೇಗೌಡ ಅವರನ್ನು ಪ್ರಶ್ನಿಸಿದ್ದಾರೆ.
ರಾಜಕೀಯ ಲಾಭಕ್ಕಾಗಿ ಇಬ್ಭಾಗ ಮಾಡುವ ತಂತ್ರ
ರಾಜಕೀಯ ಲಾಭಕ್ಕಾಗಿ ಉತ್ತರ ಕರ್ನಾಟಕವನ್ನು ಕಡೆಗಣಿಸಿ, ರಾಜ್ಯವನ್ನು ಇಬ್ಭಾಗ ಮಾಡಲು ಯತ್ನಿಸಿದಿರಿ, ಎಂದು ಆರೋಪಿಸಿರುವ ಅವರು, ಅಧಿಕಾರ ಸಿಗದೇ ನಾವು ಹತಾಶರಾಗಿಲ್ಲ, ಈ ರೀತಿಯ ಅವಕಾಶವಾದಿ ರಾಜಕಾರಣ ನಾವು ಮಾಡಿಲ್ಲ ಎಂದಿದ್ದಾರೆ.
'ಕುಮಾರಸ್ವಾಮಿಗೆ ತಕ್ಕ ಪಾಠ ಕಲಿಸಬೇಕಿದೆ'
ಸಿಎಂ ಕುಮಾರಸ್ವಾಮಿಯವರ ಅಹಂಕಾರದ ನಡೆ ಹಾಗೂ ಜೆಡಿಎಸ್ನ ಸ್ವಾರ್ಥ ರಾಜಕಾರಣಕ್ಕೆ ರಾಜ್ಯದ ಜನತೆ ಪಾಠ ಕಲಿಸಬೇಕಿದೆ ಎಂದೂ ಅವರು ಮನವಿ ಮಾಡಿದ್ದಾರೆ.
ದೇವೇಗೌಡ ಹೇಳಿದ್ದೇನು?
ನಿನ್ನೆ ದೆಹಲಿಯಲ್ಲಿ ಮಾತನಾಡಿದ್ದ ದೇವೇಗೌಡ ಅವರು, ಯಡಿಯೂರಪ್ಪ ಅವರು ದುರುದ್ದೇಶಪೂರಿತ ಅಪಪ್ರಚಾರ ಮಾಡಿ ಉತ್ತರ ಕರ್ನಾಟಕದ ಜನರ ಭಾವನೆಯನ್ನು ಉದ್ರೇಕಿಸುತ್ತಿದ್ದಾರೆ. ನಾನು ಮತ್ತು ನನ್ನ ಮಗ (ಕುಮಾರಸ್ವಾಮಿ) ಬದುಕಿರುವವರೆಗೆ ಕರ್ನಾಟಕ ವಿಭಜನೆ ಸಾಧ್ಯವಿಲ್ಲ ಎಂದಿದ್ದರು.