ಎರಡನೇ ಪಟ್ಟಿ ಸಿದ್ಧತೆಗೆ ಯಡಿಯೂರಪ್ಪ ಇಂದು ದೆಹಲಿಗೆ
ಬೆಂಗಳೂರು, ಏಪ್ರಿಲ್ 14 : ಕರ್ನಾಟಕ ವಿಧಾನಸಭೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿ ವಾರದೊಳಗೆ ಎರಡನೇ ಪಟ್ಟಿ ಸಿದ್ಧತೆಗೆ ಯಡಿಯೂರಪ್ಪನವರು ಶನಿವಾರ ನವದೆಹಲಿಗೆ ಹೋಗಲಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳು ಯಡಿಯೂರಪ್ಪ ಅವರ ಮನೆಗೆ ಎಡತಾಕಲು ಆರಂಭಿಸಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಯಡಿಯೂರಪ್ಪ, ಕೆಎಸ್ ಈಶ್ವರಪ್ಪ, ಸಿಟಿ ರವಿ, ಶ್ರೀರಾಮುಲು, ಅಶ್ವತ್ಥ ನಾರಾಯಣ ಸೇರಿದಂತೆ 72 ಅಭ್ಯರ್ಥಿಗಳ ಪಟ್ಟಿಯನ್ನು ಭಾರತೀಯ ಜನತಾ ಪಕ್ಷ ಬಿಡುಗಡೆ ಮಾಡಿದೆ. ಎರಡನೇ ಪಟ್ಟಿ, ದೆಹಲಿಯ ಹಿರಿಯರೊಂದಿಗೆ ಚರ್ಚಿಸಿದ ನಂತರ ಭಾನುವಾರ, ಏಪ್ರಿಲ್ 15ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ.
ಬಿಜೆಪಿಯಲ್ಲಿ ಟಿಕೆಟಿಗಾಗಿ ಗುದ್ದಾಟ ಎಲ್ಲ ಪಕ್ಷಗಳಂತೆ ತಾರಕಕ್ಕೇರಿದೆ. ಮೊಳಕಾಲ್ಮೂರಿನಲ್ಲಿ ಶ್ರೀರಾಮುಲುಗ್ಯಾಕೆ ಟಿಕೆಟ್ ನೀಡಿದ್ದೆಂದು ತಿಪ್ಪೇಸ್ವಾಮಿ ದಂಗೆ ಎದ್ದಿದ್ದಾರೆ. ಟಿಕೆಟ್ ತಪ್ಪಿದ್ದರಿಂದ ಪಕ್ಷದ ಬಗ್ಗೆಯಿದ್ದ ನಿಷ್ಠೆಯನ್ನು ಕಸದಬುಟ್ಟಿಗೆಸೆದು ಧಾರವಾಡದಲ್ಲಿ ಸೀಮಾ ಮಸೂತಿ ಕಾಂಗ್ರೆಸ್ ಕೈಹಿಡಿಯಲು ಸಿದ್ಧರಾಗಿದ್ದಾರೆ.
ಅಂಬೇಡ್ಕರ್ ಜಯಂತಿ ಅಂಗವಾಗಿ ದಲಿತರ ಮನೆಯಲ್ಲಿ ಬಿಎಸ್ ವೈ ಉಪಹಾರ
ಈಗಾಗಲೆ ಚಿಕ್ಕಪೇಟೆ, ವಿಜಯಪುರ, ಶಿಗ್ಗಾಂವಿ, ಮೊಳಕಾಲ್ಮೂರು, ರಾಜರಾಜೇಶ್ವರಿ ನಗರ, ಬೈಲಹೊಂಗಲ, ಮುದ್ದೇಬಿಹಾಳ ಮುಂತಾದೆಡೆ ಟಿಕೆಟ್ ರಾಜಕೀಯದಿಂದ ಬೇಸತ್ತು ಟಿಕೆಟ್ ಆಕಾಂಕ್ಷಿಗಳು ಮುನಿಸಿಕೊಂಡಿದ್ದಾರೆ. ಚಿಕ್ಕಪೇಟೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಎನ್ ಆರ್ ರಮೇಶ್ ಅವರಂತು ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸಿದ್ದಾರೆ.
ಎರಡನೇ ಟಿಕೆಟ್ ಹಂಚಿಕೆಯ ನಂತರ, ಮತ್ತಷ್ಟು ಅಸಮಾಧಾನ ಭುಗಿಲೇಳುವ, ಮತ್ತಷ್ಟು ಆಕಾಂಕ್ಷಿಗಳು ಬೇರೆ ಪಕ್ಷದೆಡೆಗೆ ಸಾಗುವ, ಮತ್ತಷ್ಟು ಆಕಾಂಕ್ಷಿಗಳು ಹೈಕಮಾಂಡನ್ನು ಧಿಕ್ಕರಿಸಿ ಪಕ್ಷೇತರರಾಗಿ ಸ್ಪರ್ಧಿಸಿದರೂ ಅಚ್ಚರಿಯಿಲ್ಲ. ಉಳಿದ ಪಕ್ಷಗಳು ಸಂಭ್ರಮಿಸುವ ಅಗತ್ಯವಿಲ್ಲ. ಎಲ್ಲ ರಾಜಕೀಯ ಪಕ್ಷಗಳ ದೋಸೆಯೂ ತೂತೆ.
ದಲಿತರ ಮನಗೆಲ್ಲಲು ಯಡಿಯೂರಪ್ಪ ಯತ್ನ
ಈ ಎಲ್ಲ ಟಿಕೆಟ್ ಗೊಂದಲ, ಗಡಿಬಿಡಿಯ ನಡುವೆ ಯಡಿಯೂರಪ್ಪನವರು, ಡಾ. ಅಂಬೇಡ್ಕರ್ ಜನುಮದಿನದಂದು ನೆಲಮಂಗಲ ತಾಲೂಕಿನ ಮೈಲನಹಳ್ಳಿಯಲ್ಲಿ ಮಂಜುಳಾ ಮತ್ತು ನರಸಿಂಹಮೂರ್ತಿ ಎಂಬ ದಲಿತರ ಮನೆಯಲ್ಲಿ ಇಂದು ಉಪಾಹಾಸ ಸೇವಿಸಿ ದಲಿತರ ಮನವನ್ನು ಗೆಲ್ಲಲು ಯತ್ನಿಸಿದ್ದಾರೆ. ಅಲ್ಲದೆ, ರಾಧಾಕೃಷ್ಣ ವಾರ್ಡ್ ನಲ್ಲಿ ಕಾರ್ಯ ನಿರ್ವಹಿಸುವ ಪೌರ ಕಾರ್ಮಿಕರಿಗೆ ತಾವೇ ಖುದ್ದಾಗಿ ಒಬ್ಬಟ್ಟು ಬಡಿಸಿ ಆದರಾತಿಥ್ಯ ಮೆರೆದಿದ್ದಾರೆ.
ಬಿಜೆಪಿ ಖಂಡಿತ ಅಧಿಕಾರಕ್ಕೆ ಬಂದೇ ಬರುತ್ತದೆ
ಏಪ್ರಿಲ್ 13ರಂದು ಸಂಜೆ ಪ್ರಕಟವಾದ ಇಂಡಿಯಾ ಟುಡೇ - ಕಾರ್ವಿ ಚುನಾವಣಾಪೂರ್ವ ಸಮೀಕ್ಷೆಯ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಆಯಾ ಪಕ್ಷಗಳೇ ಪ್ರಾಯೋಜಿಸಿರುವ ಈ ಸಮೀಕ್ಷೆಗಳ ಬಗ್ಗೆ ಏನನ್ನೂ ಹೇಳುವುದಿಲ್ಲ. ಜನರು ನಮ್ಮ ನಾಡಿಮಿಡಿತ ಅರಿತಿದ್ದಾರೆ ಮತ್ತು ನಾವು ಕೂಡ ಜನರ ನಾಡಿಮಿಡಿತ ಅರಿತುಕೊಂಡೇ ಈ ರೀತಿ ಹೇಳಿಕೆ ನೀಡುತ್ತಿದ್ದೇನೆ. ನಮ್ಮ ನಿರೀಕ್ಷೆಗೆ ತಕ್ಕಂತೆ ಭಾರತೀಯ ಜನತಾ ಪಕ್ಷ ಖಂಡಿತವಾಗಿ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದರು.
ಕರ್ನಾಟಕದಲ್ಲಿ ಅತಂತ್ರ ಸ್ಥಿತಿ ಎಂದಿದೆ ಸಮೀಕ್ಷೆ
ಸಮೀಕ್ಷೆ ಹೇಳಿರುವುದೇನೆಂದರೆ, ಕರ್ನಾಟಕದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದ್ದು, ಬಿಜೆಪಿ ಎರಡನೇ ಸ್ಥಾನದಲ್ಲಿ ನಿಲ್ಲಲಿದೆ. ಕಾಂಗ್ರೆಸ್ ನೂರಕ್ಕೂ ಹೆಚ್ಚು ಸ್ಥಾನ ಗಳಿಸಿದರೂ ಬಹುಮತ ಪಡೆಯುವುದಿಲ್ಲ. ಭಾರತೀಯ ಜನತಾ ಪಕ್ಷ 80ರ ಆಸುಪಾಸಿನಲ್ಲಿ ಸ್ಥಾನ ಪಡೆಯಲಿದೆ. ಮೂರನೇ ಸ್ಥಾನದಲ್ಲಿ ನಿಲ್ಲಲಿರುವ ಜೆಡಿಎಸ್ 40 ಸ್ಥಾನಗಳನ್ನು ಭದ್ರ ಮಾಡಿಕೊಳ್ಳಲಿದೆ. ಈ ಸಮೀಕ್ಷೆಯನ್ನು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸಾರಾಸಗಟಾಗಿ ತಿಪ್ಪೆಗೆಸೆದಿವೆ.
ಸಮೀಕ್ಷೆ 2018 : ಇಂಡಿಯಾ ಟುಡೇ ಅಭಿಮತ, ವಿಧಾನಸಭೆ ಅತಂತ್ರ
ಟಿಕೆಟ್ ಯಾರಿಗೆಂದು ಹೈಕಮಾಂಡ್ ನಿರ್ಧರಿಸುತ್ತೆ
ಟಿಕೆಟ್ ಹಂಚಿಕೆಯ ಕುರಿತು, ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆ ಹೊತ್ತು ಅನೇಕರು ಬರಲಿದ್ದಾರೆ. ಆದರೆ, ಎಲ್ಲರಿಗೂ ಟಿಕೆಟ್ ನೀಡಲಾಗದು. ವರಿಷ್ಠರು ನಡೆಸಿರುವ ಸಮೀಕ್ಷೆ, ಅಧ್ಯಯನದ ಆಧಾರದ ಮೇಲೆಯೇ ಗೆಲ್ಲಲಿರುವ ಮತ್ತು ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ಅವರು ಟಿಕೆಟ್ ಆಕಾಂಕ್ಷಿಗಳನ್ನು ವಿನಂತಿಸಿಕೊಂಡಿದ್ದಾರೆ 75 ವರ್ಷದ ಧುರೀಣ ಯಡಿಯೂರಪ್ಪ.