ಸಾಲಮನ್ನಾ ಮಾಡದಿದ್ದರೆ ಸೋಮವಾರ ಕರ್ನಾಟಕ ಬಂದ್: ಯಡಿಯೂರಪ್ಪ
Recommended Video
ಬೆಂಗಳೂರು, ಮೇ 25: ವಿಶ್ವಾಸ ಮತ ಯಾಚನೆ ಪ್ರಸ್ತಾಪವನ್ನು ಉದ್ದೇಶಿಸಿ ಕರ್ನಾಟಕ ವಿಧಾನಸಭೆಯ ಕಲಾಪದಲ್ಲಿ ಮಾತನಾಡಿದ ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಇಂದು ಸಂಜೆಯೊಳಗೆ ರೈತರ ಸಾಲ ಮನ್ನಾ ಮಾಡದಿದ್ದರೆ ಸೋಮವಾರವೇ ಕರ್ನಾಟಕ ರಾಜ್ಯ ಬಂದ್ ನಡೆಸಲಾಗುವುದು ಎಂದು ಯಡಿಯೂರಪ್ಪ ಕಿಡಿಕಾರಿದರು.
ಇಂದೇ ಸಾಲಮನ್ನಾ ಘೋಷಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ: ಬಿಎಸ್ವೈ
"ಇವತ್ತು ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದೀರಿ. ಬಹುಮತ ಹೇಗೂ ಇಂದು ಸಾಬೀತಾಗುತ್ತಿದೆ. ಇದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ಬಹುಮತ ಸಾಬೀತಾಗಿ ಇವತ್ತು ಸಾಯಂಕಾಲದೊಳಗೆ ನೀವು ಹೇಳಿದಂತೆ ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್ ಮತ್ತು 25 ಖಾಸಗಿ ಬ್ಯಾಂಕ್ಗಳ ಸಾಲ ಮನ್ನಾ ಮಾಡಬೇಕು," ಎಂದು ಯಡಿಯೂರಪ್ಪ ಆಗ್ರಹಿಸಿದರು.
"ರೈತ ಸಮುದಾಯ ಕಷ್ಟದಲ್ಲಿ ಸಿಕ್ಕಿ ನರಳುತ್ತಿದೆ. ಈ ಸಂದರ್ಭದಲ್ಲಿ ಸಂಪೂರ್ಣ ಸಾಲ ಮನ್ನಾ ಮಾಡುವುದಿದ್ದರೆ ಇದಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ಜೊತೆಗೆ ನೀವು ನೀಡಿರುವ ಭರವಸೆಗಳನ್ನು ಇಡೇರಿಸಬೇಕು. ಇಲ್ಲದಿದ್ದರೆ ಸೋಮವಾರ ಕರ್ನಾಟಕ ಬಂದ್ ಆಚರಿಸಲಿದ್ದೇವೆ. ಈ ಬಗ್ಗೆ ರಾಜ್ಯದ ಜನರಿಂದಲೂ ಒತ್ತಡ ಬರುತ್ತಿದೆ. ಬಂದ್ ಗೆ ಬೆಂಬಲ ನೀಡುವಂತೆ ಕರ್ನಾಟಕದ ಜನತೆಯಲ್ಲಿ ಕೇಳಿಕೊಳ್ಳುತ್ತೇನೆ," ಎಂದರು
ಈ ಮಾತುಗಳನ್ನು ಹೇಳಿ ಯಡಿಯೂರಪ್ಪ ಮತ್ತು ಬಿಜೆಪಿ ಪಕ್ಷದವರು ಕಲಾಪವನ್ನು ಬಹಿಷ್ಕರಿಸಿದರು. ಈ ಹಿನ್ನೆಲೆಯಲ್ಲಿ ಸದನದಲ್ಲಿ ಬಹುಮತ ಸಾಬೀತಾಗುವುದು ಬಹುತೇಕ ಖಚಿತವಾಗಿದೆ.
ಬಹುಮತ ಸಾಬೀತಾದ ನಂತರ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಸಾಲಮನ್ನಾ ಮಾಡುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.