ಅಪ್ಪನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ವಿಜಯೇಂದ್ರ ಆಶಿಸಿದ್ದೇನು?
ಬೆಂಗಳೂರು, ಫೆ. 27: 78ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನೆಚ್ಚಿನ ಪುತ್ರ ಬಿ.ವೈ. ವಿಜಯೇಂದ್ರ ಶುಭಾಶಯ ಕೋರಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ 'ದಣಿವರಿಯದ ಧೀಮಂತ' ಅಭಿನಂದನಾ ಸಮಾರಂಭವನ್ನು ರಾಜ್ಯ ಬಿಜೆಪಿ ಯುವ ಮೊರ್ಚಾ ಪ್ರಧಾನ ಕಾರ್ಯದರ್ಶಿ, ಸಿಎಂ ಬಿಎಸ್ವೈ ಪುತ್ರ ಬಿ.ವೈ. ವಿಜಯೇಂದ್ರ ತಾವೇ ಮುಂದುನಿಂತು ಖುದ್ದಾಗಿ ಆಯೋಜಿಸಿದ್ದಾರೆ. ಸಿಎಂ ಯಡಿಯೂರಪ್ಪ ಅವರ ರಾಜಕೀಯ ಉತ್ತರಾಧಿಕಾರಿ ಎಂದೆ ವಿಜಯೇಂದ್ರ ಅವರು ಬಿಂಬಿತವಾಗುತ್ತಿದ್ದಾರೆ.
ಟ್ವಿಟರ್ ಮೂಲಕ ತಂದೆಗೆ ಹುಟ್ಟುಹಬ್ಬದ ಶುಭಕೋರಿರುವ ವಿಜಯೇಂದ್ರ ಅವರು ಯಡಿಯೂರಪ್ಪ ಅವರ ಹೋರಾಟದ ಹಾದಿಯನ್ನು ನೆನೆಸಿಕೊಂಡಿದ್ದಾರೆ. ಜೊತೆಗೆ ಜನರಾಶೀರ್ವಾದ ಯಾವಾಗಲೂ ತಂದೆಯ ಮೇಲಿರಲಿ ಎಂದು ದೇವರಲ್ಲಿ ಬೇಡಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಸರ್ಕಾರಿ ನಿವಾಸ ಕಾವೇರಿ ಗೃಹಪ್ರವೇಶದಲ್ಲಿ ವಿಜಯೇಂದ್ರ ವಿಶೇಷ ಪೂಜೆಯಲ್ಲಿ ಭಾಗವಹಿಸಿದ್ದರು.
ಟ್ವಟರ್ ಮೂಲಕ ಅಪ್ಪನಿಗೆ ಶುಭಕೋರಿದ ವಿಜಯೇಂದ್ರ
ಟ್ವಟರ್ನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪುತ್ರ ಬಿ ವೈ ವಿಜಯೇಂದ್ರ ಅವರು ಹೀಗೆ ಶುಭಕೋರಿದ್ದಾರೆ. ಹೋರಾಟದಿಂದಲೇ ಜನಮನಗೆದ್ದ ಹುಟ್ಟುಹೋರಾಟಗಾರ, ಸರ್ವರಿಗೂ ಸಮಪಾಲು, ಸಮಬಾಳು, ಸಾಮಾಜಿಕ ನ್ಯಾಯಕ್ಕಾಗಿ ಪಣತೊಟ್ಟು ಮುನ್ನಡೆಯುತ್ತಾ ಸಾರ್ಥಕ 77 ವಸಂತಗಳನ್ನು ಪೂರೈಸಿರುವ ಜನನಾಯಕ, ಸನ್ಮಾನ್ಯ ಮುಖ್ಯಮಂತ್ರಿ, ನನ್ನ ಪೂಜ್ಯ ತಂದೆ ಶ್ರೀ ಯಡಿಯೂರಪ್ಪರವರಿಗೆ ಹುಟ್ಟಿದ ದಿನದ ಹಾರ್ದಿಕ ಶುಭಾಶಯಗಳು. ದೇವರು ಮತ್ತು ಜನರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಎಂದು ಟ್ವಟರ್ ಮೂಲಕ ಅಪ್ಪನಿಗೆ ಪುತ್ರ ಬಿ.ವೈ. ವಿಜಯೇಂದ್ರ ಹುಟ್ಟುಹಬ್ಬದ ಶುಭಾಶಯ ಹೇಳಿದ್ದಾರೆ.
ಸಿಎಂ ಯಡಿಯೂರಪ್ಪ ಅವರಿಗೆ 78ನೇ ಹುಟ್ಟುಹಬ್ಬದ ಸಂಭ್ರಮ, ಶುಭಕೋರಿದ ಪ್ರಧಾನಿ
ಯಡಿಯೂರಪ್ಪರಿಗೆ ಶುಭ ಕೋರಿದ ಸ್ನೇಹಿತ ಈಶ್ವರಪ್ಪ
ಸಿಎಂ ಯಡಿಯೂರಪ್ಪ ಅವರಿಗೆ ಸಚಿವ, ಸ್ನೇಹಿತ ಕೆ.ಎಸ್. ಈಶ್ವರಪ್ಪ ಅವರು ಹುಟ್ಟುಹಬ್ಬದ ಶುಭಾಶಯ ಹೇಳಿದ್ದಾರೆ. ಈಶ್ವರಪ್ಪ ಅವರು, ನನ್ನ ರಾಜಕೀಯ ಜೀವನದ ಒಡನಾಡಿ, ಮಾರ್ಗದರ್ಶಕರು ಹಾಗೂ ರಾಜ್ಯದ ಹೆಮ್ಮೆಯ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪನವರಿಗೆ 78ನೇ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ನಿಮ್ಮ ರೈತಪರ ಕಾಳಜಿ ಹಾಗೂ ಹೋರಾಟದ ಶಕ್ತಿ ಪಕ್ಷವನ್ನು ಈ ಮಟ್ಟಕ್ಕೆ ಕಟ್ಟಿ ಬೆಳೆಸುವಲ್ಲಿ ಸದಾ ಪ್ರೇರಣೆಯಾಗಿದೆ. ಭಗವಂತ ತಮಗೆ ಇನ್ನೂ ಹೆಚ್ಚಿನ ಆಯುರಾರೋಗ್ಯ ಕೊಡಲಿ ಎಂದು ಪ್ರಾರ್ಥಿಸುವೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಅವರು ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಶುಭಾಶಯ ಹೇಳಿದ್ದಾರೆ.
ಸಿಎಂ ಯಡಿಯೂರಪ್ಪ ಅವರಿಗೆ ಶುಭಕೋರಿದ ಮಾಜಿ ಸಿಎಂ ಎಚ್ಡಿಕೆ
ಇನ್ನು ಅರಮನೆ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಲಿರುವ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ಹೋರಾಟದ ಮೂಲಕವೇ ರಾಜಕೀಯ ನೆಲೆಕಂಡುಕೊಂಡು ಉನ್ನತ ಸ್ಥಾನಕ್ಕೇರಿರುವ ತಮಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ವಯಸ್ಸು 77 ಆದರೂ, ಈಗಲೂ 18ರ ಯುವಕನಂತೆ ಚೈತನ್ಯದ ಚಿಲುಮೆಯಾಗಿ ಕರ್ನಾಟಕವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ನಿಮ್ಮ ಗುರಿ ಈಡೇರಲೆಂದು ಹಾರೈಸುತ್ತೇನೆಂದು ಸಿಎಂಗೆ ಬರೆದಿರುವ ಪತ್ರದಲ್ಲಿ ಮಾಜಿ ಸಿಎಂ ಎಚ್ಡಿಕೆ ಹಾರೈಸಿದ್ದಾರೆ.
ಈ ಶುಭ ಸಂದರ್ಭದಲ್ಲಿ ತಾವು ನೂರ್ಕಾಲ ಬಾಳಿ, ಇನ್ನೂ ಹೆಚ್ಚಿನ ಉನ್ನತ ಸ್ಥಾನಕ್ಕೇರಲಿ ಎಂದು ಆಶಿಸುತ್ತೇನೆ ಎಂದು ಎಚ್ಡಿಕೆ ಶುಭಹಾರೈಸಿದ್ದಾರೆ.
ಅಭಿನಂದನಾ ಸಮಾರಂಭ ಪುತ್ರನನ್ನು ಹೊಗಳಿದ ಸಿಎಂ
ಅರಮನೆ ಮೈದಾನದಲ್ಲಿ ಆಯೋಜಿಸಿರುವ 'ದಣಿವರಿಯದ ಧೀಮಂತ ಯಡಿಯೂರಪ್ಪ' ಅಭಿನಂದನಾ ಸಮಾರಂಭದ ಆಯೋಜನೆ ಕುರಿತಂತೆ ಪುತ್ರ ಬಿ ವೈ ವಿಜಯೇಂದ್ರ ಅವರನ್ನು ಸಿಎಂ ಯಡಿಯೂರಪ್ಪ ಹೊಗಳಿದ್ದಾರೆ. ಈ ಸಲ ವಿಜಯೇಂದ್ರ ಆಸಕ್ತಿ ತೆಗೆದುಕೊಂಡು ಎಲ್ಲ ಪಕ್ಷದ ಮುಖಂಡರನ್ನೂ ಆಹ್ವಾನಿಸಿದ್ದಾನೆ. ಎಲ್ಲರೂ ಒಟ್ಟಾಗಿ ಸೇರಲು ಇದೊಂದು ಸಂದರ್ಭ ಎಂದು ಹೇಳಿದ್ದಾರೆ.
ಪಕ್ಷಾತೀತವಾಗಿ ಎಲ್ಲ ರಾಜಕೀಯ ನಾಯಕರನ್ನೂ ಬಿ ವೈ ವಿಜೇಂದ್ರ ಖದ್ದಾಗಿ ಹೋಗಿ ಆಹ್ವಾನಿಸುವ ಮೂಲಕ ರಾಜ್ಯದಲ್ಲಿ ಹೊಸ ಸಾಂಪ್ರದಾಯವನ್ನು ಹಾಕಿದ್ದಾರೆ. ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಎಚ್ ಡಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರನ್ನು ಸ್ವತಃ ವಿಜಯೇಂದ್ರ ಭೇಟಿ ಮಾಡಿ ಆಹ್ವಾನಿಸಿದ್ದಾರೆ.