ಶನಿವಾರ ನಡೆದ ಪ್ರಮುಖ ರಾಜಕೀಯ ಬೆಳವಣಿಗೆಗಳು ಇವು
ಕರ್ನಾಟಕ ವಿಧಾನಸಭೆ ಚುನಾವಣೆ 2018ರ ಫಲಿತಾಂಶ ಬಂದಾಗಿನಿಂದಲೂ ಭಾರಿ ಏರು-ಪೇರು ಕಂಡಿದ್ದ ಕರ್ನಾಟಕ ರಾಜಕೀಯ ಇಂದು (ಶನಿವಾರ) ಒಂದು ಹಂತಕ್ಕೆ ಬಂದಂತೆ ಕಾಣುತ್ತಿದೆ.
ಫಲಿತಾಂಶ ಬಂದು ಅತಂತ್ರ ವಿಧಾನಸಭೆ ನಿರ್ಮಾಣವಾದಾಗಿನಿಂದಲೂ ಭಾರಿ ಕುತೂಹಲ ಮೂಡಿಸಿದ್ದ ಪ್ರಶ್ನೆ ಎಂದರೆ ಸರ್ಕಾರ ಯಾರದ್ದು? ಎಂಬುದು. ಅದಕ್ಕೆ ಇಂದು ಬಹುತೇಕ ಉತ್ತರ ದೊರೆತಂತಾಗಿದೆ.
ಸರ್ಕಾರ ರಚನೆಗೆ ಆಹ್ವಾನ ಸ್ವೀಕರಿಸಿ ಬಹುಮತ ಸಾಬೀತಿಗೆ ಸಮಯ ಪಡೆದಿದ್ದ ಯಡಿಯೂರಪ್ಪ ಅವರು ಶಾಸಕರ ಸಂಖ್ಯೆ ಕೊರತೆಯಿಂದಾಗಿ ವಿಶ್ವಾಸಮತ ಸಾಬೀತು ಮಾಡಲಾಗದೆ, ಮುಖ್ಯಮಂತ್ರಿಸ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಜೆಡಿಎಸ್-ಕಾಂಗ್ರೆಸ್ ಮೈತ್ರಿಗೆ ಅವಕಾಶ ಕೊಟ್ಟು ಹೊರ ನಡೆದರು.
ಬೆಳಿಗ್ಗೆ ಶಾಸಕರ ಹೈದರಾಬಾದ್ ಟು ಬೆಂಗಳೂರು ಪ್ರಯಾಣದಿಂದ ರಾತ್ರಿವರೆಗೆ ಇಂದು ರಾಜ್ಯ ರಾಜಕಾರಣದಲ್ಲಿ ಏನೇನಾಯಿತು ಎಂಬ ಬಗ್ಗೆ ವಿವರ ಇಲ್ಲಿದೆ ನೋಡಿ...
ಕಾಂಗ್ರೆಸ್ಗೆ ಸುಪ್ರೀಂನಲ್ಲಿ ಹಿನ್ನಡೆ
ನಿನ್ನೆ ರಾಜ್ಯಪಾಲರು ಕರ್ನಾಟಕ ವಿಧಾನಸಭೆ ಹಂಗಾಮಿ ಸ್ಪೀಕರ್ ಆಗಿ ಕೆ.ಜಿ.ಬೋಪಯ್ಯ ಅವರನ್ನು ಆಯ್ಕೆ ಮಾಡಿದ್ದರು ಈ ನಿರ್ಣಯದ ವಿರುದ್ಧ ಕಾಂಗ್ರೆಸ್ ಪಕ್ಷ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇಂದು ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಬೋಪಯ್ಯ ಅವರ ಆಯ್ಕೆ ಸರಿ ಇದೆ ಎಂದಿತು. ಜೊತೆಗೆ ಕಲಾಪದ ನೇರ ಪ್ರಸಾರ ಮಾಡಿ ಪಾರದರ್ಶಕೆ ಕಾಪಾಡುವಂತೆ ಸೂಚಿಸಿತು.
ಆಪರೇಷನ್ ಕಮಲಕ್ಕೆ ಕೈ ಹಾಕಿದ ಬಿಎಸ್ವೈ?
ಈ ನಡುವೆ ಕಾಂಗ್ರೆಸ್ ಶಾಸಕ ಬಿಸಿ ಪಾಟೀಲ್ ಅವರಿಗೆ ಯಡಿಯೂರಪ್ಪ ಅವರು ಕರೆ ಮಾಡಿ ಮಾತನಾಡಿದ ಆಡಿಯೋ ಕ್ಲಿಪ್ ಎನ್ನಲಾದ ಆಡಿಯೋ ಒಂದನ್ನು ಕಾಂಗ್ರೆಸ್ ಬಿಡುಗಡೆ ಮಾಡಿತು ಅದರಲ್ಲಿ ಬಿಎಸ್ವೈ ಅವರದ್ದನ್ನು ಹೋಲುವ ಧ್ವನಿ ಇತ್ತು. ಆನಂತರ ಬಿಜೆಪಿ ಉಸ್ತುವಾರಿ ಮುರಳಿಧರ ರಾವ್ ಹಾಗೂ ಶ್ರೀರಾಮುಲು ಅವರ ಆಡಿಯೋಗಳನ್ನೂ ಬಿಡುಗಡೆ ಮಾಡಲಾಯಿತು. ಆಡಿಯೋ ಕ್ಲಿಪ್ನಲ್ಲಿ ಹಣದ ಆಮೀಷ ಮತ್ತು ಮಂತ್ರಿಗಿರಿ ಆಮೀಷ ಒಡ್ಡಲಾಗಿತ್ತು.
ಶಾಸಕರ ಪ್ರಮಾಣ ವಚನ ಸ್ವೀಕಾರ
ಮಧ್ಯಾಹ್ನದ ವೇಳೆಗೆ ಸದನ ಆರಂಭವಾಗಿ ಸಿದ್ದರಾಮಯ್ಯ, ಪರಮೇಶ್ವರ್ ಸೇರಿದಂತೆ ಎಲ್ಲ ಶಾಸಕರೂ ಪ್ರಮಾಣ ವಚನ ಸ್ವೀಕರಿಸಿದರು. ವಿಜಯನಗರ ಶಾಸಕ ಆನಂದ್ ಸಿಂಗ್ ಮತ್ತು ಪ್ರತಾಪ್ ಗೌಡ ಅವರು ಸದನಕ್ಕೆ ಹಾಜರಾಗಿರಲಿಲ್ಲ ಅವರ ಸುಳಿವೂ ಇರಲಿಲ್ಲ.
ಕಾಂಗ್ರೆಸ್ ತೆಕ್ಕೆಗೆ ಬಿದ್ದ ಪ್ರತಾಪ್ ಗೌಡ
ಫಲಿತಾಂಶ ಬಂದ ದಿನದಿಂದಲೂ ಕಾಣೆ ಆಗಿದ್ದ ಮಸ್ಕಿಯ ಶಾಸಕ ಕಾಂಗ್ರೆಸ್ ಶಾಸಕ ಪ್ರತಾಪ್ ಗೌಡ ಅವರು ಇಂದು ವಿಶ್ವಾಸಮತ ಆರಂಭವಾಗುವ ಕೆಲ ಸಮಯ ಮುಂಚೆ ವಿಧಾನಸೌಧದಲ್ಲಿ ಪ್ರತ್ಯಕ್ಷವಾದರು. ಅವರನ್ನು ಡಿಕೆಶಿವಕುಮಾರ್ ಬರಮಾಡಿಕೊಂಡರು. ವಿಧಾನಸೌಧದ ಒಳಗೆ ಹೋಗಿ ಕಾಂಗ್ರೆಸ್ ಶಾಸಕರ ಜೊತೆ ಸೇರಿಕೊಂಡ ಅವರು ಪಕ್ಷದ ವಿಪ್ ಸ್ವೀಕರಿಸಿದರು.
ಕೊನೆಗೂ ಆನಂದ್ ಸಿಂಗ್ ಪತ್ತೆ
ಎಲ್ಲ ಶಾಸಕರೂ ಬಂದಿದ್ದರೂ ಶಿವಕುಮಾರ್ ಅವರು ವಿಧಾನಸೌಧದ ಹೊರಗೆ ಒಬ್ಬರೇ ಕಾಯುತ್ತಿದ್ದರು. ಅವರು ಕಾಯುತ್ತಿದ್ದುದು ಶಾಸಕ ಆನಂದ್ ಸಿಂಗ್ಗೆ ಎಂಬುದು ನಂತರ ಗೊತ್ತಾಯಿತು. ಫಲಿತಾಂಶ ಬಂದ ದಿನದಿಂದ ನಾಪತ್ತೆ ಆಗಿದ್ದ ಆನಂದ್ ಸಿಂಗ್ 3:45 ರ ಸುಮಾರಿಗೆ ವಿಧಾನಸೌಧಕ್ಕೆ ಆಗಮಿಸಿದರು. ಡಿಕೆ ಶಿವಕುಮಾರ್ ಅವರೇ ಹೆಗಲ ಮೇಲೆ ಕೈ ಹಾಕಿ ಅವರನ್ನು ವಿಧಾನಸೌಧಕ್ಕೆ ಕರೆತಂದರು.
ರಾಜಿನಾಮೆ ನೀಡಿದ ಯಡಿಯೂರಪ್ಪ
ವಿಶ್ವಾಸಮತಕ್ಕೂ ಮುನ್ನ ಯಡಿಯೂರಪ್ಪ ಅವರು ಸುಮಾರು ಒಂದು ಗಂಟೆ ಕಾಲ ಭಾವನಾತ್ಮಕ ಭಾಷಣ ಮಾಡಿದರು. ಜೀವ ಇರುವ ವರೆಗೆ ಜನರಿಗೆ ಹೋರಾಡುವೆ ಎಂದರು. ಭಾಷಣದ ಕೊನೆಗೆ ವಿಶ್ವಾಸಮತ ಕೂಡಾ ಯಾಚಿಸದೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಡುವುದಾಗಿ ಹೇಳಿ ಸದನದಿಂದ ಹೊರನಡೆದರು. ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರು ಪರಸ್ಪರ ಸಂತಸ ಹಂಚಿಕೊಂಡರು.
ಕುಮಾರಸ್ವಾಮಿಗೆ ರಾಜ್ಯಪಾಲರ ಬುಲಾವ್
ಯಡಿಯೂರಪ್ಪ ಅವರು ಸದನದಿಂದ ನೇರವಾಗಿ ರಾಜ್ಯಪಾಲರ ಬಳಿ ತೆರಳಿ ರಾಜೀನಾಮೆ ಸಲ್ಲಿಸಿದರು. ನಂತರ ರಾಜ್ಯಪಾಲರು ವಾಡಿಕೆಯಂತೆ ಎಚ್ಡಿ ಕುಮಾರಸ್ವಾಮಿ ಅವರಿಗೆ ಸರ್ಕಾರ ರಚಿಸಲು ಆಹ್ವಾನ ನಿಡಿದರು. ಬಹುಮತ ಸಾಬೀತಿಗೆ 15 ದಿನಗಳ ಕಲಾವಕಾಶ ನೀಡಿದರು.
ರಾಹುಲ್ ಗಾಂಧಿ ಸುದ್ದಿಗೋಷ್ಠಿ
ಯಡಿಯೂರಪ್ಪ ರಾಜಿನಾಮೆ ನೀಡುತ್ತಿದ್ದಂತೆ ಬಿಜೆಪಿಯವರು ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಮೇಲೆ ಮೂದಲಿಕೆ ಪ್ರಾರಂಭಿಸಿದರು. ಮತ್ತೊಂದು ಕಡೆ ಕಾಂಗ್ರೆಸ್ ನಾಯಕರು ಸಂಭ್ರಮಾಚರಣೆ ಮಾಡಿದರು, ಚಂದ್ರಬಾಬು ನಾಯ್ಡು, ಕೆಸಿಆರ್, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್, ಮಾಯಾವತಿ ಜೆಡಿಎಸ್ಗೆ ಶುಭ ಹಾರೈಸಿದರು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸುದ್ದಿಗೋಷ್ಠಿ ನಡೆಸಿ ಎರಡೂ ಪಕ್ಷಗಳಿಗೆ ಅಭಿನಂದನೆ ಸಲ್ಲಿಸಿದರು. ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಉಳಿಸಿದ್ದೇವೆ ಎಂದರು.
ಎಚ್ಡಿಕೆ ಪ್ರಮಾಣ ವಚನ ಮುಂದೂಡಿಕೆ
ಅಶೋಕ ಹೊಟೇಲ್ನಲ್ಲಿ ತಡ ರಾತ್ರಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಸಭೆ ನಡೆಸಿದರು. ಮೇ 21ರಂದು ರಾಜೀವ್ ಗಾಂಧಿ ಅವರ ಪುಣ್ಯತಿಥಿ ಇರುವ ಕಾರಣ ಅಂದು ಪ್ರಮಾಣ ವಚನ ಬೇಡವೆಂದು ಬುಧವಾರಕ್ಕೆ ಮುಂದೂಡುವ ನಿರ್ಣಯ ತೆಗೆದುಕೊಳ್ಳಲಾಯಿತು. ಇದಷ್ಟೆ ಅಲ್ಲದೆ ಸಮನ್ವಯ ಸಮಿತಿ, ಶಿಸ್ತು ಸಮಿತಿ, ಪ್ರಥಮ ಮಂತ್ರಿ ಮಂಡಲ, ಖಾತೆ ಹಂಚಿಕೆ ಬಗ್ಗೆಯೂ ಸಭೆಯಲ್ಲಿ ಚರ್ಚೆಗಳು ನಡೆದವು.