ಅಮೆರಿಕಾ ಕನ್ನಡಿಗರಲ್ಲಿ ಬಿಎಸ್ವೈ ವಿಡಿಯೋ ಕಾನ್ಫರೆನ್ಸ್ ಮೂಲಕ ಮನವಿ
ಬೆಂಗಳೂರು, ಅ 15: ರಾಜ್ಯ ರಾಜಕೀಯದಲ್ಲಿ ಅಪರೂದ ಹೆಜ್ಜೆ ಎನ್ನುವಂತೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅನಿವಾಸಿ ಕನ್ನಡಿಗರ ಜೊತೆ ಶನಿವಾರ (ಅ 15) ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ.
ಮಲ್ಲೇಶ್ವರದಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲಿ ಯಡಿಯೂರಪ್ಪ, ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ನಮಗೆ ನಿಮ್ಮ ಸಹಾಯ ಬೇಕಾಗಿದೆ.
ಬಿಜೆಪಿಯನ್ನು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕಿದೆ. ರಜಾ ಹಾಕಿ ಪಕ್ಷದ ಪರವಾಗಿ ಕೆಲಸ ಮಾಡಲು ಕರ್ನಾಟಕಕ್ಕೆ ಬನ್ನಿ ಎಂದು ಬಿಎಸ್ವೈ ಮನವಿ ಮಾಡಿದ್ದಾರೆ. (ಬಿಜೆಪಿ ಸಮಾವೇಶದಲ್ಲಿ ಅಸಮಾಧಾನ ಬಯಲು)
ತಂತ್ರಜ್ಞಾನದ ಸಹಾಯದಿಂದ ನಿಮ್ಮೊಂದಿಗೆ ಮಾತನಾಡುತ್ತಿರುವುದಕ್ಕೆ ನನಗೆ ಸಂತಸವಾಗಿದೆ. ನೀವು ಮುಖ್ಯವಾಗಿ ಕರ್ನಾಟಕವನ್ನು ಅದರಲ್ಲೂ ಬೆಂಗಳೂರು ನಗರವನ್ನು ಇಡೀ ವಿಶ್ವದಲ್ಲಿ ಪ್ರಸಿದ್ಧಿ ಗಳಿಸುವಂತೆ ಮಾಡಿರುವುದಕ್ಕೆ ನಾನು ನಿಮ್ಮೆಲ್ಲರ ಬಗ್ಗೆ ಅತೀವ ಹೆಮ್ಮೆ ಪಡುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ
ನರೇಂದ್ರ ಮೋದಿ ಅವರ ದೂರದರ್ಶಿತ್ವದ ನಾಯಕತ್ವವು ಇಂದು ತಂದಿರುವ ಕ್ರಾಂತಿಕಾರಿ ಸುಧಾರಣಾ ಕ್ರಮಗಳಿಂದಾಗಿ ಭಾರತವು ಬಂಡವಾಳ ಹೂಡಿಕೆಗೆ ಮತ್ತು ವ್ಯಾಪಾರ ವಹಿವಾಟುಗಳಿಗೆ ಅತ್ಯಂತ ಪ್ರಶಸ್ತ ರಾಷ್ಟ್ರ ಎನ್ನುವ ಖ್ಯಾತಿಗೆ ಪಾತ್ರವಾಗಿದೆ ಎಂದು ಯಡಿಯೂರಪ್ಪ ಅಮೆರಿಕಾ ಕನ್ನಡಿಗರಿಗೆ ತಿಳಿಸಿದ್ದಾರೆ.
ಕರ್ನಾಟಕವೂ ಕೂಡಾ ಇದೇ ರೀತಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ನಾನು ನಿಮಗೆ ಈ ಬಗ್ಗೆ ಭರವಸೆ ನೀಡುತ್ತೇನೆ.
ನಾನು ಪುನಃ ಮುಖ್ಯಮಂತ್ರಿಯಾದರೆ ಮೋದಿ ಅವರು ಸಾಗಿದ ದಾರಿಯನ್ನೇ ಅನುಸರಿಸಿ ಆಡಳಿತದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರಲು ಬದ್ಧನಾಗಿದ್ದೇನೆ. ನವ ಕರ್ನಾಟಕದ ನಿರ್ಮಾಣಕ್ಕೆ ನಿಮ್ಮ ಸಹಕಾರವನ್ನು ಕೋರುತ್ತೇನೆ ಎಂದು ಯಡಿಯೂರಪ್ಪ, ಅಮೆರಿಕ ಕನ್ನಡಿಗರಲ್ಲಿ ಮನವಿ ಮಾಡಿದ್ದಾರೆ.
ಬಿಜೆಪಿಯ ಐಟಿ ಘಟಕ ಈ ಹೊಸ ಪ್ರಯೋಗವನ್ನು ಆಯೋಜಿಸಿತ್ತು. ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಸಂಸದ ಪಿ ಸಿ ಮೋಹನ್, ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಬಿಎಸ್ವೈ ಜೊತೆಗಿದ್ದರು.