ಮತ್ತೆ ಪುಟಿದೆದ್ದ ಯಡಿಯೂರಪ್ಪ, ಕುಮಾರಸ್ವಾಮಿಗೆ ನಡುಕ?
Recommended Video
ಬೆಂಗಳೂರು, ಮೇ 25: ತೀರಾ ಇತ್ತೀಚೆಗೆ ಚುನಾವಣಾ ಪ್ರಚಾರದ ಸಮಯದಲ್ಲಿ ಕೂಡ ಬಿಜೆಪಿಯ ಕೆಲವರು ಸೇರಿದಂತೆ ವಿರೋಧ ಪಕ್ಷಗಳು ಯಡಿಯೂರಪ್ಪ ಅವರ ಕ್ಷಮತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಅವರಿಗೆ ದಣಿವಾಗಿದೆ, ಅವರಲ್ಲಿನ ಹೋರಾಟಗಾರ ನಿರ್ಗಮಿಸಿದ್ದಾನೆ ಎಂದೇ ಹೇಳಲಾಗುತ್ತಿತ್ತು.
ಆದರೆ ಈಗ ಹೊಸ ಸರ್ಕಾರ ಸ್ಥಾಪನೆ ಆಗಿ ಬಿಎಸ್ವೈ ಅವರಿಗೆ ವಿರೋಧ ಪಕ್ಷದ ಸ್ಥಾನ ಸಿಗುತ್ತಿದ್ದಂತೆ ಅವರಲ್ಲಿ ಹೊಸ ಹುರುಪು ಮೂಡಿದಂತಿದೆ. ಇದಕ್ಕೆ ಸಾಕ್ಷಿಯಾಗಿದ್ದು ಸದನದಲ್ಲಿ ಇಂದು ಯಡಿಯೂರಪ್ಪ ಅವರು ಮಾಡಿದ ಭಾಷಣ.
ಕುಮಾರಸ್ವಾಮಿ ಊಸರವಳ್ಳಿ, ಇದು ದಿನಗೂಲಿ ಸರಕಾರ : ಬಿಎಸ್ವೈ ವಾಗ್ದಾಳಿ
ಎದುರಾಳಿಗಳನ್ನು, ಅದರಲ್ಲಿಯೂ ದೇವೇಗೌಡ ಅವರ ಕುಟುಂಬವನ್ನು ಮಾತಿನ ಮೊನಚಿನಿಂದ ಚುಚ್ಚಿದ ಯಡಿಯೂರಪ್ಪ ಅವರಲ್ಲಿ ಇಂದು ಹೊಸ ಹುರುಪು ಕಂಡಿದ್ದಂತೂ ಸತ್ಯ. ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರಿಂದ ಬಂದಿರುವ ಉತ್ಸಾವೋ, ವಿರೋಧ ಪಕ್ಷ ಸ್ಥಾನಕ್ಕೆ ಸ್ವಾಭಾವಿಕವಾಗಿ ಇರಬೇಕಾದ ಖದರ್ ಆದೊ? ಒಟ್ಟಿನಲ್ಲಿ ದಶಕದ ಹಿಂದೆ ನೋಡುತ್ತಿದ್ದ ಯಡಿಯೂರಪ್ಪ ಅವರು ಇಂದು ಮತ್ತೆ ಕಾಣಸಿಕ್ಕರು.
ಯಡಿಯೂರಪ್ಪ ಅವರ ಇಂದಿನ ಆತ್ಮವಿಶ್ವಾಸ, ಮಾತಿನ ಧಾಟಿ, ಸರ್ಕಾರದ ಮೇಲೆ ಅವರು ಏರಿ ಹೋದ ರೀತಿ, ಎದುರಾಳಿಗಳನ್ನು ಕಾಲೆಳೆದ ರೀತಿ ನೋಡಿದರೆ ಕುಮಾರಸ್ವಾಮಿ ಅವರಿಗೆ ಮುಂದಿನ ದಿನಗಳಲ್ಲಿ ಆಡಳಿತ ಅಂದುಕೊಂಡಷ್ಟು ಸುಲಭವಲ್ಲ ಎಂಬುದು ಖಾತ್ರಿ.
ಈಗಾಗಲೇ ಸಮ್ಮಿಶ್ರ ಸರ್ಕಾರದ ಎರಡು ದೋಣಿಯ ಮೇಲೆ ಕಾಲಿಟ್ಟು ಸಮಸ್ಯೆಗಳ ಸಾಗರ ದಾಟಿ ಮುಂದಿನ ಚುನಾವಣೆಯ ಬಹುಮತದ ಮೇಲೆ ಕಣ್ಣಿಟ್ಟಿರುವ ಕುಮಾರಸ್ವಾಮಿ ಅವರಿಗೆ ಯಡಿಯೂರಪ್ಪ ಅವರ ಇಂದಿನ ಉತ್ಸಾಹ ಸಣ್ಣ ಮಟ್ಟಿನ ಭಯ ಹುಟ್ಟಿಸಿರುವುದರಲ್ಲಿ ಸಂಶಯ ಇಲ್ಲ.
ಸಾಲಮನ್ನಾ ಮಾಡದಿದ್ದರೆ ಸೋಮವಾರ ಕರ್ನಾಟಕ ಬಂದ್: ಯಡಿಯೂರಪ್ಪ
ಫಲಿತಗಳು ಏನೇ ಆಗಲಿ, ಬಹಳ ದಿನಗಳ ನಂತರ ಯಡಿಯೂರಪ್ಪ ಅವರು ತಮ್ಮ ಹಳೆಯ ಹಳಿಗೆ ಮರಳಿರುವುದು ರಾಜ್ಯ ರಾಜಕಾರಣಕ್ಕೆ ಶುಭವೇ. ವಿರೋಧ ಪಕ್ಷ ಶಕ್ತಿವಂತವಾಗಿದ್ದಷ್ಟೂ ಸರ್ಕಾರ ಚುರುಕಾಗಿರುತ್ತದೆ ಎಂದು ಹಿರಿಯ ರಾಜಕೀಯ ತಜ್ಞರು ಹೇಳಿದ್ದಾರೆ.
ಅಂತೆಯೇ ರಾಜ್ಯದಲ್ಲಿ ವಿರೋಧ ಪಕ್ಷ ಶಕ್ತಿಯುತವಾಗಿದೆ, ಅದರ ನಾಯಕರೂ ಮೊದಲ ದಿನವೇ ಸರ್ಕಾರಕ್ಕೆ ಸ್ಪಷ್ಟ ಮತ್ತು ಕಠಿಣ ಸಂದೇಶ ರವಾನಿಸಿದ್ದಾರೆ. ಇವರಿಬ್ಬರ ಆರೋಗ್ಯಕರ ಕಿತ್ತಾಟ ರಾಜ್ಯದ ಅಭಿವೃದ್ಧಿಯಾಗಿ ಪರಿವರ್ತನೆ ಆಗಲಿ ಎಂಬುದೇ ಮತದಾರನ ಆಶಯ.