ರಮೇಶ್ ಜಾರಕಿಹೊಳಿ ಸುಮ್ಮನಿರ್ತಾರಾ? ಅವರ ಬಳಿಯೂ ಕೆಲವು 'ಸಿಡಿ'ಗಳು ಇರ್ತವೆ!
ಬೆಂಗಳೂರು, ಮಾ. 10: ರಾಜ್ಯದಲ್ಲಿ 'ಸಿಡಿ' ಕುರಿತು ಮೊದಲು ಪ್ರಸ್ತಾಪಿಸಿದ್ದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್. ರಾಜ್ಯ ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಮಂತ್ರಿ ಪದವಿ ಕೈತಪ್ಪಿದಾಗ ಶಾಸಕ ಯತ್ನಾಳ್ ಗರಂ ಆಗಿದ್ದರು. ಹೀಗಾಗಿ ಮಂತ್ರಿ ಪದವಿಯನ್ನು ಯಾರಿಗೆ ಕೊಡಲಾಗಿದೆ ಎಂಬುದನ್ನು ಬಹಿರಂಗವಾಗಿಯೇ ಹೇಳಿದ್ದರು.
ಆಗ ಅವರ ಹೇಳಿಕೆ ರಾಜ್ಯ ಬಿಜೆಪಿಯಲ್ಲಿ ಸಂಚಲನವನ್ನುಂಟು ಮಾಡಿತ್ತು. ಇದೀಗ ಅವರು ಹೇಳಿದಂತೆ 'ಸಿಡಿ' ಬಿಡುಗಡೆ ಆಗಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದ್ದ 'ಸಿಡಿ' ಇದೇನಾ ಎಂಬ ಪ್ರಶ್ನೆ ಸಹಜವಾಗಿಯೇ ಎಲ್ಲರನ್ನು ಕಾಡುತ್ತಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾತನಾಡಿದ್ದಾರೆ. ಜೊತೆಗೆ ಮತ್ತಷ್ಟು ಸ್ಪೋಟಕ ವಿಚಾರಗಳನ್ನು ಬಹಿರಂಗಪಡಿಸಿದದ್ದಾರೆ. ಅವರು ಹೇಳಿದ್ದು ಇದೇ 'ಸಿಡಿ'ನಾ? ಇನ್ನೂ ಎಷ್ಟು 'ಸಿಡಿ'ಗಳು ಬಿಡುಗಡೆ ಆಗಲಿವೆ? ಎಲ್ಲವನ್ನೂ ಅವರ ಮಾತಿನಲ್ಲಿಯೇ ಕೇಳಿ, ಮುಂದಿದೆ.!
ಸಂಚಲನ ಮೂಡಿಸಿದ್ದ ಯತ್ನಾಳ್ ಹೇಳಿಕೆ
ಮೂರು ತಿಂಗಳುಗಳಿಂದ ಮೂರು 'ಸಿಡಿ'ಗಳನ್ನು ಇಟ್ಟುಕೊಂಡು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬ್ಲ್ಯಾಕ್ಮೇಲ್ ಮಾಡಲಾಗುತ್ತಿದೆ. ಈಗಾಗಲೇ ಇಬ್ಬರು 'ಸಿಡಿ' ಇಟ್ಟುಕೊಂಡೇ ಮಂತ್ರಿ ಪದವಿಯನ್ನೂ ಪಡೆದುಕೊಂಡಿದ್ದಾರೆಂಬ ಗಂಭೀರ ಆರೋಪವನ್ನು ಕಳೆದ ಜನವರಿ ತಿಂಗಳಿನಲ್ಲಿಯೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾಡಿದ್ದರು. ಅದಾಗಿ ಎರಡು ತಿಂಗಳು ಆಗುವುದರೊಳಗೆ ಒಂದು 'ಸಿಡಿ' ಬಿಡುಗಡೆ ಆಗಿದೆ. ಸಚಿವ ಸಂಪುಟದಲ್ಲಿ ಸ್ಥಾನ ಸಿಗದೇ ಇದ್ದುದಕ್ಕಾಗಿ ಶಾಸಕ ಯತ್ನಾಳ್ ಅವರು ಹಾಗೆ ಹೇಳಿಕೆ ನೀಡಿದ್ದರು ಎಂದುಕೊಂಡವರಿಗೆ ಈಗ ಶಾಕ್ ಆಗಿದೆ.
ಇದು ಅದೇ 'ಸಿಡಿ'ನಾ? ಅಥವಾ ಬೇರೆನಾ?
ಆಗಲೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿಕೆ ಕೊಡುತ್ತಿದ್ದಂತೆಯೆ ರಾಜ್ಯ ಬಿಜೆಪಿಯಲ್ಲಿ ಸಂಚಲನ ಉಂಟಾಗಿತ್ತು. ಜೊತೆಗೆ ಶಾಸಕ ಯತ್ನಾಳ್ ಅವರು ಸುಮ್ಮನೆ ಹೇಳಿಕೆ ಕೊಡುತ್ತಿದ್ದಾರೆ. ಅವರಿಗೆ ಮಾತನಾಡುವ ಚಪಲ ಎಂದು ಬಿಜೆಪಿಯ ಕೆಲ ನಾಯಕರು ಲೇವಡಿಯನ್ನೂ ಮಾಡಿದ್ದರು. ಯತ್ನಾಳ್ ಹೇಳಿಕೆಯನ್ನು ಮತ್ತಷ್ಟು ಜನರು ಸಿರಿಯಸ್ ತೆಗೆದುಕೊಂಡಿದ್ದರು. ಇದೀಗ 'ಸಿಡಿ' ಬಿಡುಗಡೆ ಆಗಿದೆ. ಅವರು ಹೇಳಿದ್ದ 'ಸಿಡಿ' ಇದೇನಾ? ಅವರೇ ಹೇಳಿದ್ದಾರೆ. ಮುಂದೆ ಓದಿ.
ಆದರೆ ಇದು ಆ ಸಿಡಿ ಅಲ್ಲ, ಅವೂ ಬರುತ್ತವೆ!
'ಸಿಡಿ' ಬಿಡುಗಡೆ ಕುರಿತು ವಿಧಾನಸೌಧದಲ್ಲಿ ಮಾತನಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ನಾನು ಸಿಡಿ ಇವೆ ಎಂದು ಹೇಳಿದ್ದೆ. ಆದರೆ ನಾನು ಹೇಳಿದ್ದು ಬೇರೆ ಸಿಡಿಗಳ ಬಗ್ಗೆ. ಆದರೆ ಈಗ ಬಿಡುಗಡೆಯಾಗಿರುವುದು ಬೇರೆ ಸಿಡಿ. ಉಳಿದ 'ಸಿಡಿ'ಗಳು ಬರುತ್ತವೆ ನೋಡ್ತಾ ಇರಿ ಎಂದು ಮತ್ತೊಂದು ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ಬೆಕ್ಕಿಗೆ ಆಟ, ಇಲಿಗೆ ಪ್ರಾಣ ಸಂಕಟ ಎಂಬಂತಾಗಿದೆ. ಜೊತೆಗೆ ಯಾಕೆ ಸಿಡಿಗಳು ಬಿಡುಗಡೆ ಆಗುತ್ತವೆ ಎಂಬುದನ್ನೂ ಅವರು ವಿವರಿಸಿದ್ದಾರೆ.
ರಮೇಶ್ ಜಾರಕಿಹೊಳಿ ಬಳಿಯೂ 'ಸಿಡಿ' ಇವೆ!
ರಮೇಶ್ ಜಾರಕಿಹೊಳಿ ಅವರ 'ಸಿಡಿ'ಯನ್ನು ಇವರು ಬಿಟ್ಟಿದ್ದಾರೆ. ರಮೇಶ್ ಜಾರಕಿಹೊಳಿ ಸುಮ್ಮನಿರ್ತಾರಾ? ಅವರ ಬಳಿಯೂ ಕೆಲವು 'ಸಿಡಿ'ಗಳು ಇರುತ್ತವೆ. ಅಪ್ಪ ಮಕ್ಕಳ ಸಿಡಿ ಅವರ ಬಳಿ ಇವೆ. ಅವರೂ ಆ 'ಸಿಡಿ'ಗಳನ್ನು ಇಷ್ಟರಲ್ಲೇ ಬಿಡ್ತಾರೆ ನೋಡಿ. 'ಸಿಡಿ' ಇಟ್ಕೊಂಡೇ ಬ್ಲ್ಯಾಕ್ಮೇಲ್ ಮಾಡೋ ಎರಡು ಪಕ್ಷಗಳಿವೆ. ಜೊತೆಗೆ ಕೆಲ ರಾಜಕೀಯ ನಾಯಕರು ರಾಜ್ಯದಲ್ಲಿದ್ದಾರೆ ಎಂದು 'ಸಿಡಿ' ರಾಜಕೀಯಕ್ಕೆ ಮತ್ತೊಂದು ಸ್ಪೋಟಕ ತಿರುವು ಕೊಟ್ಟಿದ್ದಾರೆ.
ಇನ್ನೂ 23 'ಸಿಡಿ' ಗಳಿವೆ, ಒಂದೊಂದಾಗಿ ಬಿಡುಗಡೆ
ನನಗಿರುವ ಮಾಹಿತಿ ಪ್ರಕಾರ ಇನ್ನೂ 23 ಸಿಡಿಗಳು ಇವೆಯಂತೆ. ನೋಡ್ತಾ ಇರಿ ಅವು ಒಂದೊಂದಾಗಿ ಬಿಡುಗಡೆ ಆಗುತ್ತವೆ. ಯಾವುದೂ ಉಳಿಯೋದಿಲ್ಲ, ಎಲ್ಲವೂ ಬಿಡುಗಡೆಯಾಗುತ್ತವೆ. ನಾನು 'ಸತ್ಯದರ್ಶನ ಬಿಡುಗಡೆ' ಎಂದಿದ್ದೆ. ಅದರಂತೆ ಎಲ್ಲವೂ ಬಿಡುಗಡೆ ಆಗುತ್ತವೆ. ನನ್ನ ಬಳಿ ಯಾವ 'ಸಿಡಿ'ಗಳೂ ಇಲ್ಲ. ಸತ್ಯ ಯಾವತ್ತಿದ್ದರೂ ಹೊರಗೆ ಬರಬೇಕಲ್ವೇನ್ರೀ? ನೋಡ್ತಾ ಇರಿ ಇನ್ನು ಏನೇನು ಬಿಡುಗಡೆಯಾಗುತ್ತವೆಯೋ? ಎಂದು ಮತ್ತಷ್ಟು ಗಂಭೀರ ವಿಚಾರಗಳನ್ನು ತಮ್ಮ ಹೇಳಿಕೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಿಳಿಸಿದ್ದಾರೆ.
Recommended Video
ತಳ್ಳಿ ಹಾಕುವಂತಿಲ್ಲ ಶಾಸಕ ಯತ್ನಾಳ್ ಹೇಳಿಕೆ
ಈಗಾಗಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಈ ಮೊದಲೇ ಹೇಳಿದಂತೆ ರಾಜ್ಯದಲ್ಲಿ 'ಸಿಡಿ' ರಾಜಕೀಯ ಶುರುವಾಗಿದೆ. ಅವರು ಹೇಳಿದ್ದ 'ಸಿಡಿ' ಬಿಡುಗಡೆ ಆಗಿದೆಯೋ ಇಲ್ಲವೋ ಎಂಬುದು ಬೇರೆ ಮಾತು. ಆದರೆ 'ಸಿಡಿ'ಯಂತೂ ಬಿಡುಗಡೆ ಆಗಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ. ಇನ್ನು ಅವರು ಹೇಳಿರುವ ಉಳಿದ 23 'ಸಿಡಿ'ಗಳು ಬಿಡುಗಡೆ ಆದಲ್ಲಿ ಪರಿಸ್ಥಿತಿ ಹೇಗಿರಬಹುದು? ಎಂಬುದೇ ರಾಜ್ಯದ ಜನರಲ್ಲಿ ಆತಂಕವನ್ನುಂಟು ಮಾಡುವಂತಿದೆ