ಬಸ್ ಮುಷ್ಕರಕ್ಕೆ ಬೆಂಬಲ ನೀಡಿ ಎಂಬ ಪತ್ರಕ್ಕೆ ನಟ ಯಶ್ ಪ್ರತಿಕ್ರಿಯೆ ಹೀಗಿದೆ...
ಬೆಂಗಳೂರು, ಏಪ್ರಿಲ್ 15: ಕಳೆದ ಸತತ ಒಂಬತ್ತು ದಿನಗಳಿಂದ ಕರ್ನಾಟಕ ರಾಜ್ಯದಲ್ಲಿ ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಬಸ್ ಚಾಲಕರು ಮತ್ತು ನಿರ್ವಾಹಕರು ಸರ್ಕಾರದ ಮುಂದೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ.
Recommended Video
ಈ ಪ್ರತಿಭಟನೆಗೆ ನಟ ಯಶ್ ಅವರು ಬೆಂಬಲ ನೀಡಬೇಕೆಂದು ಸಾರಿಗೆ ನೌಕರರ ಒಕ್ಕೂಟ ಬರೆದಿದೆ ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಪತ್ರದಲ್ಲಿ ಯಾವುದೇ ಸಂಘಟನೆಯ ಅಧಿಕೃತ ಮುದ್ರೆ, ಸಹಿ, ದಿನಾಂಕ ಇಲ್ಲ. ಆದರೆ, ಯಶ್ ಅವರ ತಂದೆ ಸಹ ನಿವೃತ್ತ ಬಿಎಂಟಿಸಿ ನೌಕರರಾಗಿರುವ ಕಾರಣ ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿತ್ತು. ಕರ್ನಾಟಕ ರಾಜ್ಯ ಸಾರಿಗೆ ನೌಕರರ ಒಕ್ಕೂಟದ ಪತ್ರಕ್ಕೆ ನಟ ಯಶ್ ಪತ್ರ ಬರೆದು ಸ್ಪಷ್ಟನೆ ನೀಡಿದ್ದಾರೆ.
ಯಶ್ ಬರೆದ ಪತ್ರದಲ್ಲೇನಿದೆ?
ಪ್ರೀತಿಯ ಸಾರಿಗೆ ಸಂಸ್ಥೆ ನೌಕರರ ಕುಟುಂಬಕ್ಕೆ ನಿಮ್ಮ ಯಶ್ ಮಾಡುವ ನಮಸ್ಕಾರಗಳು...
ಇಂದು ನಿಮ್ಮ ಯಶ್ ಏನೇ ಆಗಿರಬಹುದು..
ಆದರೆ ಅದಕ್ಕೂ ಮೊದಲು ನಾನು ನಿಮ್ಮ ಸಂಸ್ಥೆಯ ಪ್ರಾಮಾಣಿಕ ಚಾಲಕನ ಪುತ್ರ.
""ಮನೆಯಲ್ಲಿ ನಾನು ತಡ ಮಾಡಿದ್ರೆ ದಿನಾಲೂ ನನ್ನ ಬಸ್ಸಿನಲ್ಲಿಯೇ ಬರೋ ಪ್ರಯಾಣಿಕರಿಗೆ ಟ್ರೇನ್ ಮಿಸ್ ಆಗುತ್ತೇನೋ, ಆಫೀಸ್ ಗೆ ಲೇಟ್ ಆಗುತ್ತೇನೋ ಅಂತ ನಮ್ಮಪ್ಪ ಎಷ್ಟೋ ದಿನ ಬೆಳಿಗ್ಗೆ ಮನೆಯಲ್ಲಿ ತಿಂಡಿ ಕೂಡ ತಿನ್ನದೇ ಗಡಿಬಿಡಿಯಲ್ಲಿ ನಡೆಯುತ್ತಿದ್ದ ಆ ದಿನಗಳು ಈಗಲೂ ನೆನಪಾಗುತ್ತೆ. ಬಹುಶಃ ಇದು ನನ್ನ ಅಪ್ಪನ ಕತೆ ಮಾತ್ರವಲ್ಲ, ಕರ್ತವ್ಯ ನಿಷ್ಠೆ ಮೆರೆವ ಸಾವಿರಾರು ಸಾರಿಗೆ ನೌಕರರ ದಿನಚರಿ ಹೀಗೆ ಇರುತ್ತೆ.''
ಲೆಕ್ಕವಿಲ್ಲದಷ್ಟು ಗೆಳೆತನಗಳಿಗೆ ಸಾಕ್ಷಿ
ಸಾರಿಗೆ ಸಂಸ್ಥೆಯ ನೌಕರರು ಮತ್ತು ಪ್ರಯಾಣಿಕರ ನಡುವಿನ ಸಂಬಂಧ ಮತ್ತು ಸಹಕಾರ ಲೆಕ್ಕವಿಲ್ಲದಷ್ಟು ಗೆಳೆತನಗಳಿಗೆ ಸಾಕ್ಷಿಯಾಗಿದೆ. ಆದರೆ, ನಮ್ಮ ಸಾರಿಗೆ ಸಂಸ್ಥೆಯ ನೌಕರರ ಸಂಬಳದ ತಾರತಮ್ಯವಿರಬಹುದು, ರಜೆಗಳಿಗಾಗಿ ನಡೆಯುವ ತಕರಾರುಗಳಿರಬಹುದು, ಓವರ್ ಡ್ಯೂಟಿಗಾಗಿ ನಡೆಯುವ ಜಟಾಪಟಿಗಳಿರಬಹುದು. ಎಲ್ಲವನ್ನೂ ನಾನು ಹತ್ತಿರದಿಂದ ಬಲ್ಲವನು.
ನ್ಯಾಯ ಕೊಡಿ ಎಂದು ಪ್ರಾಮಾಣಿಕವಾಗಿ ಹೋರಾಟಕ್ಕಿಳಿದಿರುವ ಸಾರಿಗೆ ನೌಕರರ ಕೂಗು ಮತ್ತು ಸಾರಿಗೆ ಬಸ್ಸುಗಳ ಮೇಲೆಯೇ ಅವಲಂಬಿತವಾಗಿರುವ ಮಧ್ಯಮ ವರ್ಗದ ಜನರ ಅಳಲು.. ಈ ಎರಡು ನನ್ನನ್ನು ಬಹುವಾಗಿ ಕಾಡುತ್ತಿದೆ.
ದೊಡ್ಡ ಸಮಸ್ಯೆಯೊಂದರ ಪರಿಹಾರಕ್ಕೆ ಚಿಕ್ಕ ಪ್ರಯತ್ನ
ದೊಡ್ಡ ಸಮಸ್ಯೆಯೊಂದರ ಪರಿಹಾರಕ್ಕೆ ಚಿಕ್ಕ ಪ್ರಯತ್ನವೆಂಬಂತೆ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರಿಗೆ ಸಾರಿಗೆ ನೌಕರರ ಬೇಡಿಕೆಗಳ ಬಗ್ಗೆ ಇದ್ದ ಅರಿವು ಮತ್ತು ಕಳಕಳಿ, ಜೊತೆಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಾರಿಗೆ ನೌಕರರ ಬಹುಮುಖ್ಯ ಬೇಡಿಕೆಯಾದ ವೇತನ ತಾರತಮ್ಯವನ್ನು ತಪ್ಪದೆ ಈಡೇರಿಸುವ ಮಾತನ್ನು ನನಗೆ ಕೊಟ್ಟಿದ್ದು ಮತ್ತಷ್ಟು ಖುಷಿ ಕೊಟ್ಟಿದೆ.
ಸಮಸ್ಯೆಗೆ ಮತ್ತೊಂದು ಸಮಸ್ಯೆ ಎಂದಿಗೂ ಪರಿಹಾರವಲ್ಲ. ಬದಲಿಗೆ ಮುಕ್ತ ಮನಸ್ಸುಗಳ ಬಿಚ್ಚುಮಾತು ಈ ಸಮಸ್ಯೆಗೆ ಪರಿಹಾರವಾಗಬಲ್ಲದು ಎಂಬುದು ನನ್ನ ದೃಢ ವಿಶ್ವಾಸ. ವಿರಸ ಬಿಟ್ಟು ಸಾಮರಸ್ಯದೊಂದಿಗೆ ಮುನ್ನಡೆಯೋಣ ಎಂದು ನಟ ಯಶ್ ತಿಳಿಸಿದ್ದಾರೆ.
ಸಾರಿಗೆ ನೌಕರರ ಒಕ್ಕೂಟ ಪತ್ರದಲ್ಲೇನಿದೆ?
ಸಾರಿಗೆ ನೌಕರರ ಒಕ್ಕೂಟ ಬರೆದಿದೆ ಎನ್ನಲಾದ ಪತ್ರದಲ್ಲಿ, ""ಜನಪ್ರಿಯ ನಟರು ಹಾಗೂ ನಿವೃತ್ತ ಬಿಎಂಟಿಸಿ ಚಾಲಕರ ಪುತ್ರ. ಪ್ರೀತಿಯ ರಾಕಿಂಗ್ ಸ್ಟಾರ್ ಯಶ್...
ವಿಷಯ: ಕರ್ನಾಟಕ ರಾಜ್ಯದಲ್ಲಿ ಸಾರಿಗೆ ನೌಕರರು ಕೈಗೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಕೋರಿ..
""ಯುಗಾದಿ ಹಬ್ಬದ ಶುಭಾಶಯ ಕೋರುತ್ತಾ, ಒಂದು ವಾರದಿಂದ ಕರ್ನಾಟಕದಲ್ಲಿ ಹಲವು ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಸಾರಿಗೆ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರವು ಸರ್ಕಾರದ ಹಠಮಾರಿ ಧೋರಣೆಯಿಂದ ತೀವ್ರ ಸ್ವರೂಪಕ್ಕೆ ತಿರುಗಿದ್ದು, ಸಾರಿಗೆ ನೌಕರರು ಕುಟುಂಬ ಸಮೇತರಾಗಿ ಬೀದಿಗಿಳಿದು ಹೋರಾಟ ಮಾಡುತ್ತಿರುವ ವಿಷಯ ನಿಮಗೆ ತಿಳಿಯದಾದುದೇನಲ್ಲ.''
ದೌರ್ಜನ್ಯ-ದಬ್ಬಾಳಿಕೆಗಳಿಂದ ಬೇಸತ್ತು ಹೋರಾಟಕ್ಕೆ
ಹೀಗಿರುವಾಗ, ಸಾರಿಗೆ ನೌಕರ ಕುಟುಂಬದ ಹಿನ್ನೆಲೆ ಇರುವ, ಇಲ್ಲಿನ ನೌಕರರ ಪಾಡು-ಬದುಕು-ಬವಣೆಗಳ ಬಗೆಗೆ ಚಾಲಕರಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಘೋಷಿಸಿರುವ ಹಾಗೂ ನಮಗೆ ಹಿರಿಯ ಸಿಬ್ಬಂದಿಯೂ ಆಗಿದ್ದ ನಿಮ್ಮ ತಂದೆಯವರು ಅವರ ಅನುಭವವನ್ನು ನಿಮ್ಮೊಡನೆ ಹಂಚಿಕೊಂಡಿರಬಹುದು.
ಪ್ರಯತ್ನ-ಪರಿಶ್ರಮ ಫಲವಾಗಿ ಚಲನಚಿತ್ರರಂಗದಲ್ಲಿ ರಾಕಿಂಗ್ ಸ್ಟಾರ್ ಆಗಿ ಜನಮಾನಸದಲ್ಲಿ ರಾರಾಜಿಸುತ್ತಿರುವ ತಾವು ಸಮಾಜ ಸೇವೆಯಲ್ಲೂ ಹಿಂದೆ ಬಿದ್ದಿಲ್ಲವೆಂಬುದು ನಮಗೆ ಹೆಮ್ಮೆಯ ವಿಷಯ. ಆದರೀಗ, ಸಾರಿಗೆ ನೌಕರರು ನಿರಂತರವಾಗಿ ತಮ್ಮ ಮೇಲಾಗುತ್ತಿರುವ ತಾರತಮ್ಯ ದೌರ್ಜನ್ಯ-ದಬ್ಬಾಳಿಕೆಗಳಿಂದ ಬೇಸತ್ತು ಹೋರಾಟಕ್ಕೆ ಕುಟುಂಬ ಸಮೇತರಾಗಿ ಬೀದಿಗಿಳಿದಿದ್ದಾರೆ.
ಹೃದಯಹೀನ ಸರ್ಕಾರದ ಹಠಮಾರಿ ಧೋರಣೆ
ಹೃದಯಹೀನ ಸರ್ಕಾರ ತನ್ನ ಹಠಮಾರಿ ಧೋರಣೆಯಿಂದ ಸೇವೆ ಮಾಡುವ ಕೈಗಳನ್ನು ಭಿಕ್ಷೆ ಬೇಡುವಂತೆ ಮಾಡಿದೆ. ಇದೂ ನಿಮಗೆ ತಿಳಿದಿರಬಹುದು. ಕಾನೂನಿನ ಚೌಕಟ್ಟಿನಲ್ಲಿ ಮುಷ್ಕರ ಮೊರೆಹೋಗಿರುವ ನಾವು, ಇಂತಹ ಸಂಕಷ್ಟದ ಸಮಯದಲ್ಲಿ ನಿಮ್ಮಿಂದ ಬೆಂಬಲ ನಿರೀಕ್ಷಿಸಬಹುದೇ? ನಿಮ್ಮ ಏಳಿಗೆಯನ್ನು ಹೆಮ್ಮೆಯಿಂದ ಸಂಭ್ರಮಿಸುವ ನಾವು, ನಿಮ್ಮ ಬೆಂಬಲವೂ ನಮ್ಮ ಹೋರಾಟಕ್ಕೆ ಧನಾತ್ಮಕ ಪರಿಣಾಮ ಬೀರಬಹುದೆಂಬ ನಂಬಿಕೆ ಹೊಂದಿದ್ದೇವೆ ಹಾಗೂ ನಿಮ್ಮ ಬೆಂಬಲ ನಿರೀಕ್ಷೆಯಲ್ಲಿ ಆಸೆಗಣ್ಣಿಂದ ಕಾಯುತ್ತಿರುತ್ತೇವೆ.
""ವಂದನೆಗಳು.. ನಿಮ್ಮ ಬೆಂಬಲದ ನಿರೀಕ್ಷೆಯಲ್ಲಿ ಕ ರಾ ಸಾ ನೌಕರರ ಒಕ್ಕೂಟ, ಕರ್ನಾಟಕ'' ಎಂದು ಪತ್ರದಲ್ಲಿ ಬರೆಯಲಾಗಿತ್ತು.