ಎಐಸಿಸಿ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ರಾಜೀನಾಮೆ
ಬೆಂಗಳೂರು, ಜೂನ್ 12: 'ಇದು ಖಾತೆ ಕ್ಯಾತೆಯೂ ಅಲ್ಲ, ಬಂಡಾಯವೂ ಅಲ್ಲ. ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಸಲುವಾಗಿ ಉನ್ನತ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ, ಇದನ್ನು ದೊಡ್ಡ ವಿವಾದವಾಗಿಸುವುದು ಬೇಡ' ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಹೌದು, ಕೊನೆಗೂ, ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ದೆಹಲಿಯಲ್ಲಿ ತಯಾರಾದ ಸಚಿವರ ಪಟ್ಟಿಯಲ್ಲಿ ಕೊನೆಯವರೆಗೂ ನನ್ನ ಹೆಸರಿತ್ತು. ಆದರೆ, ರಾಜ್ಯ ನಾಯಕರಿಂದಲೇ ನನಗೆ ಸಚಿವ ಸ್ಥಾನ ಕೈತಪ್ಪಿತು ಎಂದು ಯಮಕನಮರಡಿ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿ ಜಿಲ್ಲಾ ಉಸ್ತುವಾರಿ ಯಾರ ಪಾಲಾಗಲಿದೆ?
ನನ್ನ ಜತೆ 10 ಮಂದಿ ಶಾಸಕರ ಪಟ್ಟಿ ಕೊಡುತ್ತಿದ್ದೆ. ಮಾಜಿ ಸಿಎಂ ಸಿದ್ದರಾಮಯ್ಯ ನನ್ನ ಪರ ನಿಲ್ಲಲಿಲ್ಲ ಎಂಬ ಬೇಸರವಿದೆ ಎಂದರು. ಒಂದು ರೂ. ಕೆಲಸ ಮಾಡಿ ನೂರು ರೂಪಾಯಿ ಲಾಭ ಪಡೆದುಕೊಳ್ಳುವವರು ಪಕ್ಷದಲ್ಲಿದ್ದಾರೆ. ಆದರೆ, ಅದು ನನ್ನ ಜಾಯಮಾನವಲ್ಲ ಎಂದು ಹೇಳಿದರು.
ಯಮಕನಮರಡಿಯಿಂದ ಕಳೆದ 10 ವರ್ಷದಿಂದ ಆಯ್ಕೆಯಾಗಿರುವ ಸತೀಶ್ ಅವರು ಈ ಬಾರಿ 2,850 ಮತಗಳ ಅಂತರದಿಂದ ಮಾತ್ರ ಗೆಲುವು ಸಾಧಿಸಿದರು.
ಸಚಿವ ಸ್ಥಾನ ಸಿಗದಿದ್ದರೂ ಎಐಸಿಸಿ ಕಾರ್ಯದರ್ಶಿ ಹಾಗೂ ತೆಲಂಗಾಣ ರಾಜ್ಯ ಉಸ್ತುವಾರಿ ಜವಾಬ್ದಾರಿ ಹೊತ್ತುಕೊಂಡಿದ್ದರು. ಬಾದಾಮಿಯಲ್ಲಿ ಸಿದ್ದರಾಮಯ್ಯ ಅವರ ಗೆಲುವಿಗೆ ಕಾರಣದ ಸತೀಶ್ ಬದಲಿಗೆ ಅವರ ಸೋದರ ರಮೇಶ್ ಅವರಿಗೆ ಎಚ್ಡಿ ಕುಮಾರಸ್ವಾಮಿ ಅವರ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿತು.
ಸತೀಶ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸತೀಶ್ ಅವರ ಹೆಸರು ಕೇಳಿ ಬಂದಿದ್ದು, ಸತೀಶ್ ಮುಂದಿನ ನಡೆ ಕುತೂಹಲ ಕೆರಳಿಸಿದೆ.