ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅಸ್ವಸ್ಥ, ಕೆಎಂಸಿಗೆ ದಾಖಲು
ಕಾರವಾರ, ಅಕ್ಟೋಬರ್ 01: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಯಕ್ಷಗಾನದ ಮೇರು ಕಲಾವಿದ ಹೊನ್ನಾವರ ತಾಲ್ಲೂಕಿನ ಚಿಟ್ಟಾಣಿಯ ರಾಮಚಂದ್ರ ಹೆಗಡೆ ಅವರು ನ್ಯುಮೋನಿಯಾ ಮತ್ತು ಲಘು ಪಾರ್ಶ್ವ ವಾಯು ಖಾಯಿಲೆಯಿಂದ ಬಳಲುತ್ತಿದ್ದಾರೆ.
ಚಿಟ್ಟಾಣಿ ರಾಮಚಂದ್ರ ಹೆಗ್ಗಡೆಯವರು ಶುಕ್ರವಾರ ಮಣಿಪಾಲದ ಕಸ್ತೂರಬಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಕಳೆದ ಐದಾರು ದಿನಗಳಿಂದ ಅವರು ಜ್ವರದಿಂದ ಬಳಲುತ್ತಿದ್ದು, ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದಾರೆ.
ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ದಣಿವರಿಯದ ಕಲಾವಿದ ಚಿಟ್ಟಾಣಿ
ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಹದಿನಾಲ್ಕರ ಹರೆಯದಲ್ಲೇ ರಂಗಸ್ಥಳ ಪ್ರವೇಶಿಸಿದವರು. ಆರಂಭದಲ್ಲಿ ಒಂದೆರಡು ವರ್ಷ ಸಾಮಾನ್ಯ ಕಲಾವಿದರಂತೆ ಸಣ್ಣ ಪುಟ್ಟ ವೇಷಗಳನ್ನು ಮಾಡಿಕೊಂಡಿದ್ದು ಬಳಿಕ ತಮ್ಮದೇ ಆದ ವಿಶಿಷ್ಟ ನರ್ತನ, ಲಯಗಾರಿಕೆ, ಅಭಿನಯ ಕೌಶಲಗಳಿಂದ ಅಭಿಮಾನಿಗಳ ಮನಗೆದ್ದರು.
ಬಾಳೆಗದ್ದೆ ರಾಮಕೃಷ್ಣ ಭಟ್ಟರ ಶಿಷ್ಯರಾಗಿದ್ದ ಇವರು, ಭಟ್ಟರ ನಿರ್ದೇಶನದಲ್ಲಿ 'ಕೃಷ್ಣಪಾರಿಜಾತ' ಪ್ರಸಂಗಕ್ಕೆ ಅಗ್ನಿಪಾತ್ರ ಮಾಡಿದ ಬಳಿಕ ಯಕ್ಷಗಾನದ ಐಕಾನ್ ಆಗಿ ಮಿಂಚಿದವರು.
ಇದೀಗ 84ರ ಹರೆಯದಲ್ಲೂ ಕೀಚಕನಾಗಿ, ಭಸ್ಮಾಸುರನಾಗಿ, ಕೌರವನಾಗಿಯಕ್ಷಗಾನದಲ್ಲಿ ಬಣ್ಣ ಹಚ್ಚಿ ರಂಗದ ಮೇಲೆ ಬಂದರೆ ಸಾಕು, ಸಹಸ್ರ ಸಹಸ್ರ ಸಂಖ್ಯೆಯ ಯಕ್ಷಾಭಿಮಾನಿಗಳು, ಚಿಟ್ಟಾಣಿ ಅಭಿಮಾನಿಗಳು ಬೆಕ್ಕಸ ಬೆರಗಾಗುತ್ತಾರೆ.
ಯಕ್ಷಗಾನಕ್ಕೆ ಮೊದಲ ಪದ್ಮ ಪ್ರಶಸ್ತಿ ದಕ್ಕಿಸಿಕೊಂಡ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ಇಂಥಹ ಮೇರು ಕಲಾವಿದರು ಬೇಗ ಗುಣಮುಖರಾಗಲಿ, ಇನ್ನಷ್ಟು ಕಾಲ ರಂಗದ ಮೇಲೆ ಮಿಂಚಲಿ ಎಂಬುದು ನಮ್ಮ ಹಾರೈಕೆ.