ತುಂಬಿದ ಸಭೆಯಲ್ಲಿ ಪೇಜಾವರ ಶ್ರೀಗಳ ಕ್ಷಮೆಯಾಚಿಸಿದ ಸಾಹಿತಿ ಸಿದ್ದಲಿಂಗಯ್ಯ
ಶಿವಮೊಗ್ಗ, ನ 16: ಅಸ್ಪೃಶ್ಯತಾ ಕಾರ್ಯಕ್ರಮದ ವಿಚಾರದಲ್ಲಿ ನಿಮ್ಮ ಮೇಲೆ ನನಗೆ ಸಂದೇಹಗಳಿದ್ದವು, ನಿಮ್ಮ ಹೋರಾಟ ನಿಜವಾದ ಹೋರಾಟವೇ ಎನ್ನುವ ಅನುಮಾನ ನನ್ನನ್ನು ಕಾಡುತ್ತಿತ್ತು ಎಂದು ಸಾಹಿತಿ ಡಾ. ಸಿದ್ದಲಿಂಗಯ್ಯ, ಪೇಜಾವರ ಶ್ರೀಗಳನ್ನು ಉದ್ದೇಶಿಸಿ ಹೇಳಿದ್ದಾರೆ.
ನಗರದಲ್ಲಿ ಭಾನುವಾರ (ನ 15) ಪರ್ಯಾಯ ಪೀಠವನ್ನೇರಲಿರುವ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳಿಗೆ ಏರ್ಪಡಿಸಿದ್ದ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಅಭಿನಂದನಾ ಭಾಷಣ ಮಾಡುತ್ತಾ ಸಿದ್ದಲಿಂಗಯ್ಯ, ನನ್ನಿಂದ ನಿಮಗೇನಾದರೂ ನೋವಾಗಿದ್ದಾರೆ ಕ್ಷಮೆ ಕೋರುತ್ತೇನೆ ಎಂದಿದ್ದಾರೆ.
ನಗರದ ಎನ್ಇಎಸ್ ಮೈದಾನದಲ್ಲಿ ಪೇಜಾವರ ಅಭಿವಂದನಾ ಸಮಿತಿಯಿಂದ ಆಯೋಜಿಸಲಾಗಿದ್ದ ನಾಗರಿಕ ಅಭಿವಂದನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಾ ಪೇಜಾವರ ಶ್ರೀಗಳು, ನನಗಿರುವ ದೌರ್ಬಲ್ಯ ಮತ್ತು ಇತಿಮಿತಿ ಏನು ಎನ್ನುವುದು ನನಗೆ ಚೆನ್ನಾಗಿ ತಿಳಿದಿದೆ ಎಂದಿದ್ದಾರೆ.
ನನ್ನ ಶಕ್ತ್ಯಾನುಸಾರ ಸಮಾಜಕ್ಕೆ ಅಳಿಲು ಸೇವೆ ಸಲ್ಲಿಸುತ್ತಾ ಬಂದಿದ್ದೇನೆ, ಮಾಡಬೇಕಾಗಿರುವುದು ಬೆಟ್ಟದಷ್ಟಿದೆ, ಅದನ್ನು ಮಾಡಬೇಕು ಎನ್ನುವ ಸ್ಪೂರ್ತಿ ಕೂಡಾ ನನ್ನಲ್ಲಿದೆ. ಶ್ರೀಕೃಷ್ಣನ ಅನುಗ್ರಹದಿಂದ ದೀನದಲಿತರ ಸೇವೆ ಮಾಡಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದು ಶ್ರೀಗಳು ಹೇಳಿದ್ದಾರೆ.
ಪೇಜಾವರ ಅಭಿವಂದನಾ ಸಮಿತಿಯ ಗೌರವಾಧ್ಯಕ್ಷ, ಶಿವಮೊಗ್ಗ ಸಂಸದ ಯಡಿಯೂರಪ್ಪ ಮಾತನಾಡುತ್ತಾ, ಹಿಂದೂ ಸಮಾಜಕ್ಕೆ ಮತ್ತು ಸಂಪ್ರದಾಯಕ್ಕೆ ತೊಂದರೆ ಬಂದಾಗ ಮೊದಲು ಧ್ವನಿ ಎತ್ತುವುದು ಶ್ರೀಗಳು. ಐದನೇ ಬಾರಿ ಸರ್ವಜ್ಞ ಪೀಠವನ್ನೇರಲಿರುವ ಪೇಜಾವರ ಶ್ರೀಗಳ ಆಶೀರ್ವಾದ ನಾಡಿನ ಮೇಲಿರಲಿ ಎಂದು ಬಿಎಸ್ವೈ ಹೇಳಿದ್ದಾರೆ.
ಅಭಿವಂದನಾ ಕಾರ್ಯಕ್ರಮದಲ್ಲಿ ಪೇಜಾವರ ಕಿರಿಯ ಶ್ರೀಗಳು, ಬಿಎಸ್ವೈ, ಈಶ್ವರಪ್ಪ, ಆಯನೂರು ಮಂಜುನಾಥ, ಬಿ ವೈ ರಾಘವೇಂದ್ರ ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಶ್ರೀಗಳಿಗೆ ಅರ್ಚಕ ವೃಂದದಿಂದ ತುಲಾಭಾರ ಮತ್ತು 51 ಲಕ್ಷ ರೂಪಾಯಿ ಕಾಣಿಕೆಯನ್ನು ನೀಡಲಾಯಿತು.
ಮಸೀದಿ, ಹಂದಿಮಾಂಸದ ಬಗೆಗಿನ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಯಿಸಲಾಗಿದೆ, ಮುಂದೆ ಓದಿ..
ಡಾ. ಸಿದ್ದಲಿಂಗಯ್ಯ
ಎಪ್ಪತ್ತರ ದಶಕದಲ್ಲಿ ನೀವು ಅಸ್ಪೃಶ್ಯತಾ ಆಂದೋಲನ ಆರಂಭಿಸಿದ್ದಾಗ ನಿಮ್ಮ ಮೇಲೆ ನಮಗೆ ಕೆಲವು ಸಂದೇಹಗಳಿದ್ದವು, ನಿಮ್ಮನ್ನು ಪ್ರಶ್ನಿಸಿದ್ದೆ ಕೂಡಾ. ಶಾಂತ ರೀತಿಯಿಂದ ನೀವು ಉತ್ತರಿಸಿದ್ದೀರಿ. ನಲವತ್ತು ವರ್ಷಗಳಿಂದ ನಿಮ್ಮಿಂದಾಗುತ್ತಿರುವ ಸಾಮಾಜಿಕ ಕೆಲಸಗಳನ್ನು ಗಮನಿಸುತ್ತಾ ಬಂದಿದ್ದೇನೆ. ಅಂದು ನಾನು ಆಡಿದ ಮಾತಿನಿಂದ ನಿಮಗೆ ಬೇಸರವಾಗಿದ್ದರೆ ನನ್ನನ್ನು ಕ್ಷಮಿಸಿ - ಸಿದ್ದಲಿಂಗಯ್ಯ
ದಲಿತರ ಮನೆಗೆ ಹೋಗಿ ಮುದ್ರಾಧಾರಣೆ
ಶ್ರೀಗಳು ಭಾರತೀಯ ಸಂಸ್ಕೃತಿ ಹಾಗೂ ಔದಾರ್ಯದ ಪ್ರತೀಕ. ದಲಿತರ ಶೋಷಿತರ ಮನೆಗೆ ತೆರಳಿ ಅವರಿಗೆ ಮುದ್ರಾ ಧಾರಣೆ ಮಾಡಿದ ಭಾರತದ ಏಕೈಕ ಮಠಾಧೀಶ ಎಂದರೆ ಅದು ಪೇಜಾವರ ಶ್ರೀಗಳು. ಉದ್ದೇಶಿತ ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ತರುವ ಮುನ್ನ ಸರ್ಕಾರ ಶ್ರೀಗಳ ಸಲಹೆ ಪಡೆಯಲಿ - ಡಾ. ಸಿದ್ದಲಿಂಗಯ್ಯ.
ಜಯಂತಿಗೆ ರಜೆ ನೀಡಬೇಡಿ
ದೇಶಕ್ಕೆ ಸೇವೆ ಸಲ್ಲಿಸಿದ, ಪುಣ್ಯ ಪುರುಷರ ಜಯಂತಿ ಆಚರಿಸುವುದು ತಪ್ಪಲ್ಲ. ಆದರೆ ಜಯಂತಿ ಹೆಸರಿನಲ್ಲಿ ರಜೆ ನೀಡುವುದಕ್ಕೆ ನನ್ನ ವಿರೋಧವಿದೆ. ಇದರಿಂದ ಜನರು ಸೋಮಾರಿಗಳಾಗುತ್ತಾರೆ. ಜಯಂತಿ ಆಚರಿಸುವ ಮುನ್ನ ಸರಕಾರ ಧೃಡ ನಿರ್ಧಾರ ತಾಳಬೇಕೆಂದು ಪೇಜಾವರ ಶ್ರೀಗಳು ಹೇಳಿದ್ದಾರೆ.
ಮಸೀದಿ ಮುಂದೆ ಹಂದಿ ಮಾಂಸ
ಮಸೀದಿ ಮುಂದೆ ಹಂದಿ ಮಾಂಸ ಸಮಾರಾಧನೆ, ಮುಖ್ಯಮಂತ್ರಿ ತಾನು ದನದ ಮಾಂಸ ತಿನ್ನುತ್ತೇನೆ ಎನ್ನುವ ಹೇಳಿಕೆಯನ್ನು ತಪ್ಪಾಗಿ ಅರ್ಥೈಯಿಸಿಕೊಳ್ಳಲಾಗಿದೆ. ದಲಿತರಿಗೆ ಮೋಕ್ಷವಿಲ್ಲ ಎಂದು ಎಲ್ಲೂ ಮಧ್ವಾಚಾರ್ಯರು ಹೇಳಿಲ್ಲ - ಪೇಜಾವರ ಶ್ರೀ.
ಕೆ ಎಸ್ ಈಶ್ವರಪ್ಪ
ಗೋಮಾಂಸದ ವಿಚಾರದಲ್ಲಿ ನಡೆಯುತ್ತಿದ್ದ ಚರ್ಚೆ ತೀವ್ರ ಸ್ವರೂಪ ಪಡೆದಾಗ, ತಮ್ಮ ನಿಲುವನ್ನು ನಿರ್ಭೀತಿಯಿಂದ ಹೇಳಿದ್ದು ಪೇಜಾವರ ಶ್ರೀಗಳು. ಹಿಂದೂ ಸಮಾಜಕ್ಕೆ ಧಕ್ಕೆ ಬಂದಾಗ ಮಂಚೂಣಿಯಲ್ಲಿ ನಿಲ್ಲುವ ಶ್ರೀಗಳ ಆಶೀರ್ವಾದ ನಮ್ಮಲ್ಲರ ಮೇಲೆ ಇರಲಿ, ಹಾಗೆಯೇ ಅವರು ನಮಗೆ ಆದೇಶವನ್ನೂ ನೀಡುತ್ತಿರಲಿ - ಕೆ ಎಸ್ ಈಶ್ವರಪ್ಪ.