ದೊರೆಸ್ವಾಮಿಗೆ ಅವಮಾನ; ಸಚಿವರಿಗೆ ಸಾಹಿತಿ ದೇವನೂರು ಮಹಾದೇವ ಭಾವನಾತ್ಮಕ ಪತ್ರ
ಬೆಂಗಳೂರು, ಮಾರ್ಚ್ 2: ವಿಜಯಪು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ವಿರುದ್ಧ ನೀಡಿರುವ ವಿವಾದಾತ್ಮಕ ಹೇಳಿಕೆ ಅಧಿವೇಶನದಲ್ಲಿ ಕೋಲಾಹಲ ಸೃಷ್ಠಿಸಿದೆ. ವಿರೋಧ ಪಕ್ಷಗಳು ಯತ್ನಾಳ ರಾಜೀನಾಮೆಗೆ ಪಟ್ಟು ಹಿಡಿದ್ದಾರೆ.
ದೊರೆಸ್ವಾಮಿ ವಿರುದ್ಧ ಹೇಳಿಕೆ; ಯತ್ನಾಳ ಬೆಂಬಲಕ್ಕೆ ನಿಂತ ಬಿಜೆಪಿ
ಕೆಲ ಬಿಜೆಪಿ ಮುಖಂಡರು ಯತ್ನಾಳ ಅವರನ್ನು ಸಮರ್ಥಿಸಿಕೊಂಡು ಹೇಳಿಕೆ ನೀಡುತ್ತಿದ್ದಾರೆ. ಇನ್ನೂ ಕೆಲವರು ವಿರೋಧಿಸುತ್ತಿದ್ದಾರೆ. ಯತ್ನಾಳ ವಿರುದ್ಧ ನಾಡಿನ ಅನೇಕ ಸಾಹಿತಿಗಳು, ಬರಹಗಾರರು ಕೂಡ ಕಿಡಿ ಕಾರಿದ್ದಾರೆ.
ಸಿಲ್ಲಿಲಲ್ಲಿ ಧಾರವಾಹಿಯ ಲಲಿತಾಂಬೆ ಮತ್ತು ಪ್ರಧಾನಿ ಮೋದಿ: ದೇವನೂರು ವ್ಯಂಗ್ಯ
ಮೈಸೂರಿನಲ್ಲಿ ಕಳೆದ ಶನಿವಾರ ಯತ್ನಾಳ ಅವರನ್ನು ಸಮರ್ಥಿಸಿಕೊಂಡು ಮಾತನಾಡಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ವಿರುದ್ಧ ಸಾಹಿತಿ ದೇವನೂರು ಮಹಾದೇವ ಅವರು ಬಹಿರಂಗ ಪತ್ರ ಬರೆದು, ಯತ್ನಾಳ್ ಹಾಗೂ ಸುರೇಶ್ ಕುಮಾರ್ ಅವರನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ಮೇಲ್ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೇವನೂರು ಮಹಾದೇವ ಬರೆದ ಪತ್ರ
ಮಾನ್ಯ
ಶಿಕ್ಷಣ
ಸಚಿವರಾದ
ಎಸ್.ಸುರೇಶ್
ಕುಮಾರ್
ಅವರಿಗೆ
ವಂದನೆಗಳು
ಶ್ರೀ ಎಚ್.ಎಸ್.ದೊರೆಸ್ವಾಮಿಯವರು ಕಳೆದ ಚುನಾವಣೆಯ ಹಿಂದಿನ ದಿನ ಯಾರಿಗೆ ಮತ ನೀಡಬೇಕೆಂದು ಕರೆ ನೀಡುತ್ತಾ, ಮೋದಿಯವರ ವೈಫಲ್ಯಗಳನ್ನು ಹಾಗೂ ಸರ್ವಾಧಿಕಾರಿ ಪ್ರವೃತ್ತಿಯನ್ನು ವಿವರಿಸುತ್ತಾ, "ಆತ ಮಾತು ಕೊಟ್ಟಿದ್ದನ್ನು ಉಳಿಸಿಕೊಂಡಿಲ್ಲ. ಯಾವ ಕೆಲಸ ಮಾಡಿಲ್ಲ. ಕರ್ನಾಟಕವನ್ನು ತೆಗೆದುಕೊಂಡು ಬಿಟ್ರೆ ಇಡೀ ದೇಶವನ್ನು ತಗೋಬಹುದು ಎನ್ನುವ ಆಲೋಚನೆ ಇದೆ. ಆದ್ದರಿಂದ ಈಗ ನಾವು ಆತನನ್ನು ಮುಗಿಸಬೇಕು. ಆತನನ್ನು ಸೋಲಿಸಬೇಕು'' ಎಂದು ಹೇಳುತ್ತಾರೆ. ಇದರ ಅರ್ಥ ಸಾಯಿಸಬೇಕು ಎಂದಾಗುವುದೇ? ಅವರ ಮಾತುಗಳಲ್ಲಿ ಎತ್ತಿದ ಸಮಸ್ಯೆಗಳತ್ತ ಕಣ್ಣೆತ್ತೂ ನೋಡುವ ಧೈರ್ಯವಿಲ್ಲದೆ, ಅದನ್ನು ಅಪಾರ್ಥ ಮಾಡಿ, ನೂರು ವರ್ಷಕ್ಕೂ ಮಿಗಿಲಾಗಿ ಅಹಿಂಸೆಯ ವ್ರತ ಪಾಲಿಸಿಕೊಂಡು, ಯಾವುದೋ ಯುಗದ ಮನುಷ್ಯನೊಬ್ಬ ನಮ್ಮ ನಡುವೆ ಬದುಕಿರುವ ಸೋಜಿಗ ಕಾಣದೆ ಸದೆಬಡಿಯುವುದಾದರೆ ನಾವು ಲಿಲ್ಲಿ ಪುಟ್ಟರಂತಾಗಿಬಿಡುತ್ತೇವೆ.
ಫತ್ವಾ ಹೊರಡಿಸುತ್ತಿದ್ದರೇನೋ!
ಸ್ಪಷ್ಟತೆಗಾಗಿ ಒಂದು ಉದಾಹರಣೆ ನೋಡೋಣ: ಇಂದಿನ ಓಲೈಕೆ, ಅವಕಾಶವಾದಿ ರಾಜಕಾರಣದಲ್ಲಿ ಇದೇ ಶ್ರೀ ಬಸವನಗೌಡ ಯತ್ನಾಳ್, ಶ್ರೀ ಈಶ್ವರಪ್ಪ ಅಥವಾ ಮತ್ತಾರೋ ಮೋದಿಯವರ ವಿರೋಧಿಗಳಾಗಿದ್ದರೆ ಅವರು ತಮ್ಮ ಸ್ವಭಾವಕ್ಕೆ ತಕ್ಕಂತೆ ಏನು ಹೇಳುತ್ತಿದ್ದರು? ಮೋದಿಯವರ ತಲೆಗೆ ಹತ್ತಿಪ್ಪತ್ತು ಕೋಟಿ ಫತ್ವಾ ಹೊರಡಿಸುತ್ತಿದ್ದರೇನೋ! ಇಂಥವರು ದೊರೆಸ್ವಾಮಿ ಅವರನ್ನು "ನಕಲಿ ಸ್ವಾತಂತ್ರ್ಯ ಹೋರಾಟಗಾರ'' ಎನ್ನುತ್ತಾರೆ ! ಅಂದರೆ, ರಾಜಕಾರಣವೆಂಬುದು ಅದೇನು ಜಾದೂ, ಕಣ್ಕಟ್ಟು ವಿದ್ಯೆಯೇ? ಅಸಲಿಯನ್ನು ನಕಲಿ ಮಾಡುವುದಕ್ಕೆ, ನಕಲಿಯನ್ನು ಅಸಲಿ ಮಾಡುವುದಕ್ಕೆ? ದೊರೆಸ್ವಾಮಿ ಅವರನ್ನು "ಪಾಕ್ ಏಜೆಂಟ್ ''ಎನ್ನುವುದಕ್ಕೆ ಇವರ ನಾಲಿಗೆ ಹೇಗೆ ಹೊರಳಿತು? ಇಂದಿನ ನಮ್ಮ ಬಹುತೇಕ ರಾಜಕಾರಣಿಗಳಲ್ಲಿ ಕೆಲವರಿಗೆ ನಾಲಿಗೆ ಇಲ್ಲ. ಇನ್ನೂ ಕೆಲವರಿಗೆ ನಾಕಾರು ನಾಲಿಗೆಗಳು. ಇಲ್ಲಿದ್ದಾಗ ಮಾತನಾಡಲು ಒಂದು, ಇನ್ನೊಂದು ಕಡೆ ಹೋದಾಗ ಮತ್ತೊಂದು, ನುಂಗಲು ಮಗದೊಂದು-ಹೀಗೆ.
ಜನಪ್ರತಿನಿಧಿಗಳು ಹೊಣೆಗೇಡಿಯಾಗಿದ್ದಾರೆ
ಇಂದು ಜನಪ್ರತಿನಿಧಿಗಳು ತಮ್ಮನ್ನು ಜನಪ್ರತಿನಿಧಿಗಳು ಅಂದುಕೊಂಡಿಲ್ಲ. ಶಾಸಕರು ಶಾಸಕ ಅಂದುಕೊಂಡಿಲ್ಲ. ಯಾರೂ ತಮ್ಮ ಸ್ಥಾನಕ್ಕೆ ಹೊಣೆಗಾರರಾಗಿಲ್ಲ. ಇದು ಇಂದಿನ ಸಮಸ್ಯೆಯಾಗಿದೆ. ಉದಾಹರಣೆಗೆ, ಶ್ರೀ ಯತ್ನಾಳ್ ಅವರ ವಿಜಯಪುರ ಜಿಲ್ಲೆಯಲ್ಲಿ ನಿರುದ್ಯೋಗ ತಾಂಡವವಾಡುತ್ತಾ ಅದು 'ಗುಳೆ ಜಿಲ್ಲೆ' ಎನ್ನಿಸಿಕೊಂಡುಬಿಟ್ಟಿದೆ. ಯತ್ನಾಳರನ್ನು ಆಯ್ಕೆ ಮಾಡಿದ 'ಮತದಾರ ಪ್ರಭುಗಳು' ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಕೆಲಸ ಅರಸುತ್ತಾ ಗೋವಾ, ಮಹಾರಾಷ್ಟ್ರದ ಕಡೆಗೆ ಗುಳೆ ಹೋಗುವುದು ದಿನೇದಿನೇ ಹೆಚ್ಚುತ್ತಿದೆ. ಅದೇ ವಿಜಯಪುರದಲ್ಲಿ ಒಂದು ದೊಡ್ಡದಾದ ಕೈಗಾರಿಕಾ ಪ್ರದೇಶವಿದೆ. ಆದರೆ, ಆ ಕೈಗಾರಿಕಾ ಪ್ರದೇಶವು ವಿದ್ಯುತ್ ಮತ್ತಿತರ ಮೂಲಸೌಲಭ್ಯಗಳಿಲ್ಲದೆ ನೊಣ ಹೊಡೆಯುತ್ತಿದೆ. ಇಂತಹ ಕಡೆ ಶಾಸಕನಾದವನು ಮಾತಾಡಲೂ ಪುರುಸೊತ್ತಿಲ್ಲದವನಂತೆ ಆ ಕೈಗಾರಿಕಾ ಕ್ಷೇತ್ರಕ್ಕೆ ವಿದ್ಯುತ್ ಮತ್ತಿತರ ಸೌಲಭ್ಯ ಕಲ್ಪಿಸಲು ಕಾರ್ಯಪ್ರವೃತ್ತನಾಗಿರಬೇಕಿತ್ತು. ಆದರೇನಾಗಿದೆ? ಜನಪ್ರತಿನಿಧಿಗಳು ಹೊಣೆಗೇಡಿಯಾಗಿದ್ದಾರೆ. ಜನಪ್ರತಿನಿಧಿಗಳನ್ನು ಎಚ್ಚರಿಸಬೇಕಿರುವ ಜನರು ಅವಜ್ಞೆಗೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಯಾವ ಪಕ್ಷದಲ್ಲೇ ಇರಲಿ ತಮ್ಮಂಥವರಿಂದ ಹೆಚ್ಚಿನದನ್ನು ನಿರೀಕ್ಷಿಸುವುದು ತಪ್ಪಲ್ಲ ಎಂದುಕೊಂಡಿದ್ದೇನೆ.
ತುಂಬಾ ಹೆಚ್ಚಾಗಿ ಬರೆದುಬಿಟ್ಟೆ. ಕೊಳೆತ ಹಣ್ಣುಗಳ ಜೊತೆ ಒಳ್ಳೆಯ ಹಣ್ಣುಗಳು ಸೇರಿಕೊಂಡಾಗ ಅವೂ ಕೆಡಬಹುದೇ? ನಿಮ್ಮ ಹೇಳಿಕೆ ನೋಡಿದಾಗ ಈ ಪ್ರಶ್ನೆ ನನ್ನೊಳಗೆ ಸುಳಿದಾಡಿತು. ಅದಕ್ಕಾಗಿ ಈ ಪತ್ರ. ಕ್ಷಮೆ ಇರಲಿ.
ಸುರೇಶ್ ಕುಮಾರ್ ಏನು ಹೇಳಿದ್ದರು
ಕಳೆದ ಶನಿವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು, ಯತ್ನಾಳ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ದೊರೆಸ್ವಾಮಿ ಅಂತವರು ನಮ್ಮ ದೇಶದ ಪ್ರಧಾನಿ ವಿರುದ್ಧವೇ ಯಾವ ರೀತಿ ಮಾತನಾಡಿದ್ದರು ಎಂಬುದನ್ನು ನೋಡಿದಾಗ, ಯತ್ನಾಳ್ ಹೇಳಿದ್ದರು.
ಮುದುಕ ಪಾಕಿಸ್ತಾನ್ ಏಜೆಂಟ್
ಕಳೆದ ಫೆ 25 ರಂದು ವಿಜಯಪುರದಲ್ಲಿ ಯತ್ನಾಳ, ದೊರೆಸ್ವಾಮಿ ದೇಶದ್ರೋಹಿಗಳನ್ನು ಸಮರ್ಥಿಸಿಕೊಳ್ಳುವುದನ್ನು ನೋಡಿದ್ದೇವೆ. ಆ ಮುದುಕ ಪಾಕಿಸ್ತಾನ್ ಏಜೆಂಟ್ ಇದ್ದಂತೆ ಎಂದು ಹೇಳಿದ್ದರು. ಇದು ವಿವಾದ ಸೃಷ್ಠಿಸಿದೆ.