ಬಯಲು ಬಹಿರ್ದೆಸೆ ಮುಕ್ತಗೊಂಡ ಗ್ರಾಮೀಣ ಕರ್ನಾಟಕ
ವಿಶ್ವ ಶೌಚಾಲಯ ದಿನ(ನವೆಂಬರ್ 19)ದಂದು ಅರ್ಥಪೂರ್ಣ ಎನ್ನುವಂತೆ ಕರ್ನಾಟಕದ ಪಾಲಿಗೂ ಇಂದಿನ ದಿನ ಒಂದು ಹೊಸ ಮೈಲಿಗಲ್ಲು ದಾಟಿದ ದಿನವಾಗಿದೆ. ಗ್ರಾಮೀಣ ಕರ್ನಾಟಕವು ಇಂದು ಅಧಿಕೃತವಾಗಿ ಬಯಲು ಬಹಿರ್ದೆಸೆ ಮುಕ್ತ ಎಂಬ ಬಿರುದನ್ನು ತನ್ನ ಮುಡಿಗೇರಿಸಿಕೊಂಡಿತು.
ವಿಧಾನಸೌಧದ ಗಾಂಧಿ ಪ್ರತಿಮೆ ಬಳಿಯ ಇಂದು ನಡೆದ ಸರಳ ಸಮಾರಂಭದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗ್ರಾಮೀಣ ಕರ್ನಾಟಕವನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸುವುದಲ್ಲದೆ ಸ್ವಚ್ಛಮೇವಜಯತೆ ಅಭಿಯಾನಕ್ಕೆ ಚಾಲನೆಯನ್ನೂ ನೀಡಿದರು.
ಶೌಚಾಲಯ... ಇಲ್ಲಿ ಸ್ವಚ್ಛತೆಯ ಪ್ರತೀಕ, ಸಬಲೀಕರಣದ ದ್ಯೋತಕ
ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಕೃಷ್ಣಭೈರೇಗೌಡ ಹಾಗೂ ಇಲಾಖೆಯ ಪ್ರಧಾನಕಾರ್ಯದರ್ಶಿಗಳಾದ ಅತೀಕ್, ಸಚಿವರಾದ ಬಂಡೇಪ್ಪ ಕಾಶೇಂಪುರ್, ಸಚಿವರಾದ ಜಮೀರ್ ಅಹ್ಮದ್ ಖಾನ್ ಮುಂತಾದ ಗಣ್ಯವ್ಯಕ್ತಿಗಳು ಭಾಗವಹಿಸಿದ್ದರು.
ದಯವಿಟ್ಟು ಶೌಚಾಲಯ ಕಟ್ಟಿಸಿಕೊಳ್ಳಿ, ನಿಮ್ಮ ಕಾಲಿಗೆ ಬೀಳುತ್ತೀನಿ!
ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡುತ್ತ, ಮಹಾತ್ಮಾ ಗಾಂಧೀಜಿ ಅವರ ಮುಂಬರುವ 150ನೇ ವರ್ಧಂತ್ಯುತ್ಸವದ ಸುಸಂದರ್ಭದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದು ಈ ಮಹತ್ವದ ಸಾಧನೆ ಮಾಡಿದೆ ಎಂದು ನುಡಿದರು.
ಅಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಮಸ್ಯೆಯ ಕುರಿತು ಸರ್ಕಾರಕ್ಕೆ ಅರಿವಿದ್ದು ಮುಂದಿನ ವರ್ಷದಿಂದ ಅನುಷ್ಠಾನಕ್ಕೆ ತರಲು ಜಲಧಾರೆ ಯೋಜನೆಯ ಸಿದ್ಧತೆಗೆ ಈಗಾಗಲೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಏಳು ಲಕ್ಷ ಶೌಚಾಲಯಗಳ ನಿರ್ಮಾಣ
ಸಮಾರಂಭದಲ್ಲಿ ಉಪಸ್ಥಿತರಿದ್ದ ಗ್ರಾಮೀಣಾಭಿವೃದ್ಧಿ ಸಚಿವರಾದ ಕೃಷ್ಣಭೈರೇಗೌಡ ಅವರು ಮಾತನಾಡುತ್ತ, ಇಂದು ಗ್ರಾಮೀಣಾಭಿವೃದ್ಧಿಯಲ್ಲಿ ಕರ್ನಾಟಕ ಹೊಸ ಮೈಲಿಗಲ್ಲೊಂದನ್ನು ದಾಟಿದೆ ಎಂದು ಹೇಳಿದರು. ಮುಂದುವರೆಯುತ್ತ, ತಾವು ಕಳೆದ ಐದು ತಿಂಗಳಿನಿಂದ ಅಧಿಕಾರ ಹಿಡಿದಿದ್ದು ಇಲ್ಲಿಯವರೆಗೆ ಏಳು ಲಕ್ಷ ಶೌಚಾಲಯಗಳ ನಿರ್ಮಾಣ ಮಾಡಲಾಗಿದೆ ಎಂದರು.
ಗ್ರಾಮೀಣ ಕರ್ನಾಟಕದಲ್ಲಿ ಪರಿಣಾಮಕಾರಿ ಕೆಲಸ
ಈ ಹಿಂದೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಚಿವರಾಗಿದ್ದ ಎಚ್.ಕೆ.ಪಾಟೀಲ್ ಅವರೂ ಸಹ ಈ ನಿಟ್ಟಿನಲ್ಲಿ ಸಾಕಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದು ಇಂದು ಗ್ರಾಮೀಣ ಕರ್ನಾಟಕದಲ್ಲಿ ಕಳೆದ 3-4 ವರ್ಷಗಳಲ್ಲಿ 45 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ನುಡಿದರು.
ಜಾಗೃತಿ ಮೂಡಿಸುವಂತಹ ಕಾರ್ಯ ಮಾಡಬೇಕು
ಕೇವಲ ಶೌಚಾಲಯಗಳ ನಿರ್ಮಾಣವೊಂದೆ ಕೆಲಸವಾಗಬಾರದು. ಅದನ್ನು ಅವಶ್ಯಕತೆಗನುಗುಣವಾಗಿ ನಿರಂತರವಾಗಿ ಬಳಸುವ ರೂಡಿಯನ್ನೂ ಸಹ ಬೆಳೆಸಿಕೊಳ್ಳಬೇಕು. ಈ ಕುರಿತು ಎಲ್ಲರೂ ಕೈಜೋಡಿಸಬೇಕು ಹಾಗೂ ಸುದ್ದಿ ಮಾಧ್ಯಮಗಳೂ ಸಹ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವಂತಹ ಕಾರ್ಯ ಮಾಡಬೇಕು ಎಂದು ಕೃಷ್ಣಭೈರೇಗೌಡರು ಹೇಳಿದರು.
ಸ್ವಚ್ಛಮೇವ ಜಯತೆ ಅಭಿಯಾನಕ್ಕೆ ಚಾಲನೆ
ಸಮಾರಂಭದ ಕೊನೆಯಲ್ಲಿ ಸ್ವಚ್ಛಮೇವಜಯತೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು ಹಾಗೂ ಅದಕ್ಕೆ ಸಂಬಂಧಿಸಿದಂತೆ ಕೃಷ್ಣಭೈರೇಗೌಡರು ಪ್ರತಿಜ್ಞೆಯನ್ನು ಉಪಸ್ಥಿತರಿದ್ದ ಗಣ್ಯರು ಹಾಗೂ ಸಮ್ಮಿಲಿತವಾಗಿದ್ದ ಮಕ್ಕಳಿಗೆ ಬೋಧಿಸಿದರು. ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ನೈರ್ಮಲ್ಯ ಹಾಗೂ ಶುಚಿತ್ವದ ಕುರಿತು ರೂಪಕಗಳು ಪ್ರದರ್ಶನಗೊಂಡವು.
|
ವಿಶ್ವ ಶೌಚಾಲಯ ದಿನಕ್ಕಾಗಿ ಕೃಷ್ಣಭೈರೇಗೌಡರ ಸಂದೇಶ
ಇಂದು ವಿಶ್ವ ಶೌಚಾಲಯ ದಿನ. ಇದಕ್ಕೆ ಅರ್ಥಪೂರ್ಣ ಎನ್ನುವಂತೆ ಕರ್ನಾಟಕದ ಪಾಲಿಗೂ ಇಂದಿನ ದಿನ ಒಂದು ಹೊಸ ಮೈಲಿಗಲ್ಲು ದಾಟಿದ ದಿನವಾಗಿದೆ. ಗ್ರಾಮೀಣ ಕರ್ನಾಟಕವು ಇಂದು ಅಧಿಕೃತವಾಗಿ ಬಯಲು ಬಹಿರ್ದೆಸೆ ಮುಕ್ತ ಎಂಬ ಬಿರುದನ್ನು ತನ್ನ ಮುಡಿಗೇರಿಸಿಕೊಂಡಿತು.