ಲಾಕ್ ಡೌನ್ ಹೊರತಾಗಿ ಯಡಿಯೂರಪ್ಪ ಮುಂದಿರುವ '3 ಆಯ್ಕೆಗಳು'
ಎಸ್ ಎಸ್ ಎಲ್ ಸಿ ಪರೀಕ್ಷೆ ಮುಗಿದ ನಂತರ ರಾಜ್ಯದಲ್ಲಿ ಕೊರೊನಾ ವೈರಸ್ ಹತ್ತಿಕ್ಕಲು ಯಡಿಯೂರಪ್ಪ ಸರಕಾರ ಕಠಿಣ ಕ್ರಮ ತೆಗೆದುಕೊಳ್ಲಲಿದೆಯೇ ಎನ್ನುವುದಕ್ಕೆ ಬಹುಷಃ ಸರಕಾರದ ಮಟ್ಟದಲ್ಲೇ ಯಾರಿಗೂ ಖಚಿತ ಮಾಹಿತಿ ಇದ್ದಂಗಿಲ್ಲ.
Recommended Video
ಯಾಕೆಂದರೆ, ಒಬ್ಬ ಸಚಿವರು ಲಾಕ್ ಡೌನ್ ಬಗ್ಗೆ ಚರ್ಚೆಯೇ ಆಗಿಲ್ಲ ಎಂದರೆ, ಇನ್ನೊಬ್ಬರು, ಹತ್ತನೇ ತರಗತಿಯ ಪರೀಕ್ಷೆ ಮುಗಿದ ನಂತರ ಮಾರ್ಗಸೂಚಿ ಇನ್ನಷ್ಟು ಬಿಗಿಗೊಳ್ಳಲಿದೆ ಎಂದರೆ, ಮತ್ತೊಬ್ಬರು, ಲಾಕ್ ಡೌನ್ ಚರ್ಚೆಯಲ್ಲಿದೆ ಎಂದು ಹೇಳುತ್ತಾರೆ.
ಬಾಯಿ ಬಿಟ್ಟರೆ ಬಣ್ಣಗೇಡು: ಮೋದಿ ಭಾಷಣದ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ
ಸಚಿವ ಸಂಪುಟ ಮಟ್ಟದಲ್ಲೇ ಈ ಗೊಂದಲವಿರುವಾಗ, ಇನ್ನು ಸಾರ್ವಜನಿಕ ವಲಯದಲ್ಲಿ ಗೊಂದಲವೋ ಗೊಂದಲ. ಪ್ರಮುಖವಾಗಿ, ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ, ಸೋಮವಾರ ಮತ್ತು ಮಂಗಳವಾರದ (ಜೂನ್ 30) ಕೋವಿಡ್ ಸೋಂಕಿತರ ಸಂಖ್ಯೆ ಕ್ರಮವಾಗಿ 783, 738, 503.
ಕೊರೊನಾ ಸೋಂಕಿತರ ಶವಸಂಸ್ಕಾರ ವಿಡಿಯೋ: ಸಿಎಂ ಖಂಡನೆ
ಈ ನಡುವೆ ಅನ್ ಲಾಕ್ - 2.0 ಮಾರ್ಗಸೂಚಿ ಬಿಡುಗಡೆಯಾಗಿದೆ. ಕೇಂದ್ರದ ನಿಯಮಗಳನ್ನೇ, ಕೆಲವೊಂದು ಸಣ್ಣಪುಟ್ಟ ಮಾರ್ಗಸೂಚಿ ಹೊರತಾಗಿ, ಬಹುತೇಕ ರಾಜ್ಯವೂ ಪಾಲಿಸುತ್ತಿದೆ.ಆದರೆ, ಕೇಂದ್ರದ ಮಾರ್ಗಸೂಚಿಯನ್ನು ಬದಲಾಯಿಸುವ ಸ್ವಾತಂತ್ರ್ಯ ರಾಜ್ಯ ಸರಕಾರಕ್ಕಿದೆ. ಲಾಕ್ ಡೌನ್ ಹೊರತಾಗಿ ಯಡಿಯೂರಪ್ಪ ಮುಂದಿರುವ ಮೂರು ಆಯ್ಕೆಗಳು:
ಮುಖ್ಯಮಂತ್ರಿ ಯಡಿಯೂರಪ್ಪ
ರಾಜ್ಯವನ್ನು ಮತ್ತೆ ಲಾಕ್ ಡೌನ್ ಗೆ ದೂಡಿದರೆ, ಆರ್ಥಿಕ ವ್ಯವಸ್ಥೆಯ ಮೇಲೆ ಬೀಳುವ ಹೊಡೆತದ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಹಲವು ಬಾರಿ ಹೇಳಿದ್ದಾಗಿದೆ. ಲಾಕ್ ಡೌನ್ ಮಾಡುವುದನ್ನು ಕೊನೆಯ ಆಯ್ಕೆಯಾಗಿ ಇಟ್ಟುಕೊಂಡಿರುವ ಸಿಎಂ, ಕೋವಿಡ್ ಕಮಿಟಿಯ ಶಿಫಾರಸು ಎಂದು ಹೇಳಲಾಗುತ್ತಿರುವ ಈ ಮೂರು ಆಯ್ಕೆಗಳನ್ನು ಸಿಎಂ ಪರಿಗಣಿಸಬಹುದು ಎಂದು ಹೇಳಲಾಗುತ್ತಿದೆ.
ಪ್ರತೀ ಶನಿವಾರ, ಭಾನುವಾರ ಕರ್ಫ್ಯೂ
ಜುಲೈ ಐದರಿಂದ ಅನ್ವಯವಾಗುವಂತೆ ಮುಂದಿನ ಒಂದು ತಿಂಗಳ ಭಾನುವಾರ ಕರ್ಪ್ಯೂ ವಿಧಿಸುವ ನಿರ್ಣಯಕ್ಕೆ ಈಗಾಗಲೇ ರಾಜ್ಯ ಸರಕಾರ ಬಂದಿದೆ. ಇದರ ಜೊತೆಗೆ, ಪ್ರತೀ ಶನಿವಾರವನ್ನೂ ಕರ್ಫ್ಯೂ ಎಂದು ಘೋಷಿಸುವ ಸಾಧ್ಯತೆಯಿದೆ. ಹಾಗೆ ಮಾಡಿದ್ದಲ್ಲಿ, ವಾರಾಂತ್ಯದಲ್ಲಿನ ತಿರುಗಾಟಕ್ಕೆ ಬ್ರೇಕ್ ಬೀಳಬಹುದು, ಎನ್ನುವುದು ಒಂದು ಲೆಕ್ಕಾಚಾರ.
ಸಂಜೆ ನಾಲ್ಕರಿಂದ, ನಸುಕಿನ ಐದರವರೆಗೆ ನಿರ್ಬಂಧ
ರಾತ್ರಿ ಕರ್ಫ್ಯೂ ರಾತ್ರಿ ಎಂಟರಿಂದ, ಮುಂಜಾನೆ ಐದರವರೆಗೆ ಈಗಾಗಲೇ ಜಾರಿಯಲ್ಲಿದೆ. ಸಾಯಂಕಾಲದ ವೇಳೆ, ಸಾರ್ವಜನಿಕರ ಓಡಾಟ, ಜನಸಂದಣಿಯನ್ನು ಮತ್ತಷ್ಟು ತಪ್ಪಿಸಲು ಸಂಜೆ ನಾಲ್ಕರಿಂದ, ನಸುಕಿನ ಐದರವರೆಗೆ ಕರ್ಫೂ ವಿಧಿಸುವ ಸಾಧ್ಯತೆಯೂ ಒಂದು ಎಂದು ಹೇಳಲಾಗುತ್ತಿದೆ.
ಅಂತರ್ ಜಿಲ್ಲಾ ಪ್ರಯಾಣಕ್ಕೆ ಕನಿಷ್ಠ ಹದಿನೈದು ದಿನ ನಿಷೇಧ
ಮತ್ತೊಂದು ಸಾಧ್ಯತೆಯ ಪ್ರಕಾರ, ರಾಜ್ಯದಲ್ಲಿ ಅಂತರ್ ಜಿಲ್ಲಾ ಪ್ರಯಾಣಕ್ಕೆ ಕನಿಷ್ಠ ಹದಿನೈದು ದಿನ ನಿಷೇಧ ಹೇರಬಹುದು. ಅಂತರ್ ರಾಜ್ಯ ಪ್ರವಾಸದಿಂದ, ಕರ್ನಾಟಕದಲ್ಲಿ ಸೋಂಕು ಹೆಚ್ಚಾಯಿತು ಎನ್ನುವುದು ಒಂದು ಕಾರಣ. ಜೊತೆಗೆ, ಸೋಂಕು ಜಾಸ್ತಿಯಿರುವ ಜಿಲ್ಲೆಗಳ ಜನರು ತಮ್ಮ ತವರೂರಿಗೆ ಹೋಗುತ್ತಿರುವುದರಿಂದ ಗ್ರೀನ್ ಝೋನ್ ನಲ್ಲಿರುವ ಪ್ರದೇಶಗಳು ರೆಡ್ ಝೋನ್ ಆಗುತ್ತಿವೆ. ಹಾಗಾಗಿ, ಇದು ಕೂಡಾ ಯಡಿಯೂರಪ್ಪನವರ ಮುಂದಿರುವ ಇನ್ನೊಂದು ಆಯ್ಕೆಯೆಂದು ಹೇಳಲಾಗುತ್ತಿದೆ.