ನೋಟಿಸ್ ನೀಡದೆ ಗುತ್ತಿಗೆದಾರರಿಗೆ ನಿರ್ಬಂಧ ಸಲ್ಲ- ಹೈಕೋರ್ಟ್ ಆದೇಶ
ಬೆಂಗಳೂರು. ಜೂ.9: ಗುತ್ತಿಗೆದಾರರನ್ನು ಗುತ್ತಿಗೆ ಒಪ್ಪಂದದಲ್ಲಿ ಭಾಗವಹಿಸದಂತೆ ನಿರ್ಬಂಧಿಸುವ ಮತ್ತು ಕಪ್ಪು ಪಟ್ಟಿಗೆ ಸೇರಿಸುವ ಮುಂಚಿತವಾಗಿ ನೋಟಿಸ್ ನೀಡಿ ವಿವರಣೆ ಕೇಳುವುದು ಕಡ್ಡಾಯ, ನಂತರವೇ ಅಂತಿಮ ಆದೇಶ ಹೊರಡಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಮೆರ್ಸೆಸ್ ಕ್ರೆಸ್ಟ್ ಫೆಸಿಲಿಟಿ ಮ್ಯಾನೇಜ್ಮೆಂಟ್ ಕಂಪನಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಎಸ್.ಜಿ. ಪಂಡಿತ್ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ನೀಡಿದೆ.
ದಿನಗೂಲಿ ಅವಧಿಯಲ್ಲಿ ನೌಕರರ ಗ್ರ್ಯಾಚುಟಿಗೆ ಅರ್ಹರೆಂದ ಹೈಕೋರ್ಟ್
ಅರ್ಜಿದಾರ ಕಂಪನಿಯನ್ನು ಗುತ್ತಿಗೆ ಒಪ್ಪಂದದಿಂದ ನಿರ್ಬಂಧಿಸಿ 2019ರ ಏ.5ರಂದು ನೈರುತ್ಯ ರೈಲ್ವೆ ವಲಯದ ಹಿರಿಯ ವಾಣಿಜ್ಯ ವ್ಯವಸ್ಥಾಪಕರು ಜಾರಿ ಮಾಡಿದ್ದ ಪತ್ರವನ್ನು ರದ್ದುಪಡಿಸಿದೆ.
ಕೋರ್ಟ್ ಆದೇಶವೇನು?: ಅರ್ಜಿದಾರ ಕಂಪನಿಯನ್ನು ಗುತ್ತಿಗೆ ಒಪ್ಪಂದದಿಂದ ನಿರ್ಬಂಧಿಸುವ ಮುನ್ನ ನೋಟಿಸ್ ನೀಡಿ ಕೇಟರಿಂಗ್ ಸೇವೆ ಆರಂಭಿಸದ ಬಗ್ಗೆ ವಿವರಣೆ ಕೇಳಿಲ್ಲ. ಇದರಿಂದ ಕಂಪನಿಗೆ ನೀಡಿರುವ ಪತ್ರ ರದ್ದುಪಡಿಸಲು ಅರ್ಹವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅಲ್ಲದೆ, ಕಂಪನಿಗೆ ಅವಕಾಶ ಕೊಟ್ಟು ಕೇಟರಿಂಗ್ ಸೇವೆ ಆರಂಭಿಸದ ಬಗ್ಗೆ ವಿವರಣೆ ಪಡೆಯಬೇಕು. ನಂತರ ತನ್ನ ಅಂತಿಮ ಆದೇಶ ಹೊರಡಿಸಬಹುದು ಎಂದು ರೈಲ್ವೆ ಇಲಾಖೆ ನಿರ್ದೇಶಿಸಿದೆ.
''ಗುತ್ತಿಗೆದಾರರನ್ನು ಗುತ್ತಿಗೆ ಒಪ್ಪಂದದಲ್ಲಿ ಭಾಗವಹಿಸದಂತೆ ನಿರ್ಬಂಧಿಸುವ ಮತ್ತು ಕಪ್ಪು ಪಟ್ಟಿಗೆ ಸೇರಿಸುವುದರಿಂದ ಅವರನ್ನು ಗುತ್ತಿಗೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅಕಾಶ ಕಸಿದುಕೊಂಡಂತಾಗುತ್ತದೆ. ಜತೆಗೆ, ಇದು ಸಿವಿಲ್ ವ್ಯಾಜ್ಯಗಳಿಗೆ ದಾರಿ ಮಾಡಿಕೊಡುತ್ತದೆ. ಗುತ್ತಿಗೆದಾರನ ಜೀವನ ಹಕ್ಕು ಚ್ಯುತಿಯಾಗುತ್ತದೆ'' ಎಂದು ಹೈಕೋರ್ಟ್ ಹೇಳಿದೆ.
ಜತೆಗೆ, ಅಧಿಕಾರಿಗಳು ಗುತ್ತಿಗೆದಾರರನ್ನು ಗುತ್ತಿಗೆ ಒಪ್ಪಂದಲ್ಲಿ ಭಾಗಹಿಸದಂತೆ ನಿರ್ಬಂಧಿಸುವ ಹಾಗೂ ಕಪ್ಪುಪಟ್ಟಿಗೆ ಸೇರಿಸುವ ಮುನ್ನ ಆ ಸಂಬಂಧ ನೋಟಿಸ್ ಜಾರಿಗೊಳಿಸಬೇಕು. ಯಾವ ಕಾರಣಕ್ಕೆ ಈ ತೀರ್ಮಾನ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂಬ ಬಗ್ಗೆ ತಿಳಿಸಬೇಕು ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ನೈರುತ್ಯ ರೈಲ್ವೆ ಇಲಾಖೆಯು ಹೌಸ್ ಕೀಪಿಂಗ್, ಕೇಟರಿಂಗ್ ಮತ್ತು ಸರಕು ಲೋಡಿಂಗ್-ಅನ್ಲೋಡಿಂಗ್ ಸೇವೆಗಳಿಗೆ ಟೆಂಡರ್ ಕರೆದಿತ್ತು. ಅರ್ಜಿದಾರ ಸಂಸ್ಥೆ ಕೇಟರಿಂಗ್ ಸೇವೆಯ ಟೆಂಡರ್ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಆದರೆ, ಟೆಂಡರ್ ಅನ್ನು ಒಪ್ಪಿಕೊಂಡಿದ್ದ ನಂತರವೂ ಸೇವೆ ಆರಂಭಿಸುವಲ್ಲಿ ಕಂಪನಿ ವಿಫಲವಾಗಿದೆ ಎಂದು ತಿಳಿಸಿ ರೈಲ್ವೆ ಇಲಾಖೆಯು ಕಂಪನಿ ಗುತ್ತಿಗೆ ಒಪ್ಪಂದವನ್ನು ನಿರ್ಬಂಧಿಸಿತ್ತು. ಆ ಕುರಿತು ಕಂಪನಿಗೆ 2019ರ ಏ.5ರಂದು ರೈಲ್ವೆ ಇಲಾಖೆ ಪತ್ರ ಕಳುಹಿಸಿತ್ತು. ಇದರಿಂದ ಕಂಪನಿ ಹೈಕೋರ್ಟ್ ಮೆಟ್ಟಿಲೇರಿತ್ತು.
Recommended Video