ಮುಂಗಾರು ಮೇ 29ಕ್ಕೆ ಕರ್ನಾಟಕ ಪ್ರವೇಶಿಸುವ ಸಾಧ್ಯತೆ
ಬೆಂಗಳೂರು, ಮೇ 28: ಕಳೆದ ಒಂದೂವರೆ ತಿಂಗಳಿನಿಂದ ಮಳೆಯಾಗುತ್ತಿದ್ದು, ಬೆಂಗಳೂರಿನಲ್ಲಂತೂ ಬೇಸಿಗೆಯ ಬಿಸಿಲೇ ಜನರಿಗೆ ತಾಗದಿರುವಂತೆ ನೋಡಿಕೊಂಡಿದೆ. ಮುಂಗಾರು ಮೇ 27ರಂದು ಶ್ರೀಲಂಕಾವನ್ನು ಪ್ರವೇಶಿಸಿದೆ.
ಮೇ 29ರಂದು ಕೇರಳ ಪ್ರವೇಶಿಸುವ ಮುನ್ಸೂಚನೆ ಇದೆ. ಮುಂಗಾರು ಮಾರುತಗಳು ಪ್ರಬಲವಾಗಿದ್ದಲ್ಲಿ ಮೇ 29ರಂದು ಅಥವಾ 30 ರಂದು ಕರ್ನಾಟಕದ ದಕ್ಷಿಣ ಒಳನಾಡು ಹಾಗೂ ಕರಾವಳಿ ಪ್ರದೇಶಕ್ಕೂ ಪ್ರವೇಶಿಸುವ ನಿರೀಕ್ಷೆ ಇದೆ.
ಮುಂಗಾರು ಪೂರ್ವ ಮಳೆ ಇನ್ನೂ 3 ದಿನ ಮುಂದುವರೆಯುವ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮೇ 30ರವರೆಗೂ ಭಾರಿ ಮಳೆ ಮುಂದುವರೆಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಗಾಳಿ, ಗುಡುಗು ಸಹಿತ ಮಳೆ ಅಬ್ಬರವಿರಲಿದೆ. ಬೆಳಗಾವಿ , ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಕಲಬುರಗಿ, ವಿಜಯಪುರ ಸೇರಿ ಬಹುತೇಕ ಪ್ರದೇಶದಲ್ಲಿ ತುಂತುರು ಅಥವಾ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ಚಂಡಮಾರುತ ನೇರ ಪರಿಣಾಮ ರಾಜ್ಯದ ಮೇಲೆ ಬೀರಿಲ್ಲ. ಆದರೆ ಅರಬ್ಬೀ ಸಮುದ್ರದಲ್ಲಿ ಎತ್ತರದ ಅಲೆಗಳು ಕಂಡುಬಂದಿವೆ. ನಾಳೆ ವೇಳೆಗೆ ಚಂಡಮಾರುತದ ದುರ್ಬಲಗೊಳ್ಳಲಿದೆ. ಮುಂದಿನ 24 ಗಂಟೆಯೊಳಗೆ ಕರ್ನಾಟಕ, ಕೇರಳ, ತಮಿಳುನಾಡು, ಗೋವಾ ಹಾಗೂ ಮಹಾರಾಷ್ಟ್ರ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ದಟ್ಟವಾಗಿದೆ.