ಇಂದಿರಾ ಕ್ಯಾಂಟೀನ್: ಅಂದು ಮಾಡಿದ್ದೂ ರಾಜಕೀಯ, ಇಂದೂ ಕೂಡಾ ಅದೇ!
ಆಯಾಯ ಸರಕಾರ ತಮ್ಮ ಅವಧಿಯಲ್ಲಿ ತಮ್ಮತಮ್ಮ ಪಕ್ಷದ ಮುಖಂಡರ ಹೆಸರನ್ನು ಜನಪ್ರಿಯ ಯೋಜನೆಗಳಿಗೆ ಹೆಸರಿಡುವುದು ಮಾಮೂಲಿ. ಅಂದು ಪ್ರತಿಭಟಿಸಿದವರಿಗೆ ವಾಲ್ಮೀಕಿಯ ಹೆಸರೂ ನೆನಪಿರಲಿಲ್ಲ, ಇಂದು, ಪ್ರತಿಭಟಿಸುವವರಿಗೆ ಕನಕದಾಸರ ಹೆಸರೂ ನೆನಪು ಬರುವುದಿಲ್ಲ.
ಸಿದ್ದರಾಮಯ್ಯನವರ ಸರಕಾರದ ಅವಧಿಯಲ್ಲಿ, ಬಡವರ ಹೊಟ್ಟೆ ತಣ್ಣಗಾಗಿಸುವ, ಜನಪ್ರಿಯ ಕಾರ್ಯಕ್ರಮಗಳಲ್ಲಿ 'ಇಂದಿರಾ ಕ್ಯಾಂಟೀನ್' ಎನ್ನುವುದೂ ಒಂದು ಎನ್ನುವುದು ಬಹುವಾಗಿ ಒಪ್ಪಿಕೊಂಡ ವಿಚಾರ.
ಹೋಟೆಲ್ ಮಾಡಿ ಸೋನಿಯಾ ಗಾಂಧಿ ಹೆಸರಿಡಿ: ಸಿ.ಟಿ. ರವಿ ವ್ಯಂಗ್ಯ
ಈಗ, ಅದರ ಹೆಸರನ್ನು ಬದಲಾಯಿಸುವ ಕೆಲಸಕ್ಕೆ ಯಡಿಯೂರಪ್ಪ ಸರಕಾರ ಮುಂದಾಗಿದೆ. ಸ್ವಾಭಾವಿಕವಾಗಿ ಇದಕ್ಕೆ ಕಾಂಗ್ರೆಸ್ಸಿನಿಂದ ವಿರೋಧ ವ್ಯಕ್ತವಾಗಿದೆ. ಆದರೆ, ಹೆಸರು ಬದಲಾಯಿಸುವ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿಗಳು ಸಮಜಾಯಿಷಿ ನೀಡಿದ್ದಾರೆ.
ಬದುಕಿರುವವರೆಗೂ ಇಂದಿರಾ ಕ್ಯಾಂಟೀನ್ ಹೆಸರು ಬದಲಾಗಲು ಬಿಡೆವು: ಡಿಕೆಶಿ
"ಹೆಸರು ಬದಲಾಯಿಸಿದರೆ, ಸುಮ್ಮನಿರುವುದಿಲ್ಲ, ಊಟದ ವಿಚಾರದಲ್ಲಿ ರಾಜಕೀಯ ಮಾಡಬೇಡಿ" ಎನ್ನುವ ಎಚ್ಚರಿಕೆ, ಕಾಂಗ್ರೆಸ್ ಕಡೆಯಿಂದ ಬಂದಿದೆ. ಅದಕ್ಕೆ, ಬಿಜೆಪಿ ಮುಖಂಡರು/ಸಚಿವರು ತಮ್ಮದೇ ದಾಟಿಯಲ್ಲಿ ತಿರುಗೇಟನ್ನೂ ನೀಡಿದ್ದಾರೆ.
ಪೌರತ್ವದ ವಿಚಾರದಲ್ಲಿನ ಪ್ರತಿಭಟನೆಯ ಕಾವು
ಪೌರತ್ವದ ವಿಚಾರದಲ್ಲಿನ ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ವೇಳೆ, ಇಂದಿರಾ ಕ್ಯಾಂಟೀನ್ ವಿಚಾರವೂ ಮುನ್ನಲೆಗೆ ಬಂದಿದೆ. ಹೆಸರು ಬದಲಾಯಿಸಬೇಕೆನ್ನುವ ಅರ್ಜಿ, ಕಂದಾಯ ಸಚಿವರಿಗೆ ಬಂದ ಸುದ್ದಿಯಿಂದ ಎಚ್ಚೆತ್ತಿರುವ ಕಾಂಗ್ರೆಸ್ ಮುಖಂಡರು, ಹೆಸರನ್ನು ಸರಕಾರ ಬದಲಾಯಿಸಿಯೇ ಬಿಟ್ಟಿತು ಎನ್ನುವ ರೀತಿಯಲ್ಲಿ ಹೇಳಿಕೆಯನ್ನು ನೀಡುತ್ತಿದ್ದಾರೆ. (ಚಿತ್ರ: ಪಿಟಿಐ)
ಮಾಜಿ ಪ್ರಧಾನಿ ವಾಜಪೇಯಿ
"ಸುವರ್ಣ ಚತುಷ್ಪಥ ಹೆದ್ದಾರಿಗೆ ಚಾಲನೆ ನೀಡಿದ್ದು ಮಾಜಿ ಪ್ರಧಾನಿ ವಾಜಪೇಯಿಯವರು. ಅವರ ಬೋರ್ಡ್ ಅನ್ನು ಕಿತ್ತುಹಾಕಿದವರು, ನಮಗೆ ದ್ವೇಷದ ರಾಜಕಾರಣದ ಬಗ್ಗೆ ಪಾಠ ಮಾಡುತ್ತಾರೆ. ಇಂದಿರಾ ಕ್ಯಾಂಟೀನ್ ಎನ್ನುವುದು ಅವ್ಯವಹಾರದ ತಾಣ, ಇಪ್ಪತ್ತು ಜನರಿಗೆ ಊಟ ಕೊಟ್ಟು ಇನ್ನೂರು ಜನರ ಲೆಕ್ಕ ತೋರಿಸುತ್ತಾರೆ" ಎನ್ನುವುದು ಬಿಜೆಪಿ ಮುಖಂಡರ ಕೌಂಟರ್ ಅಟ್ಯಾಕ್.
ಸರಕಾರೀ ಯೋಜನೆಗಳಿಗೆ ಅವರವರ ಪಕ್ಷದ ಪ್ರಮುಖರ ಹೆಸರನ್ನಿಡುವ ಪರಿಪಾಠ
ಯಾವುದೇ ಪ್ರಮುಖ ಸರಕಾರೀ ಯೋಜನೆಗಳಿಗೆ ಅವರವರ ಪಕ್ಷದ ಪ್ರಮುಖರ ಹೆಸರನ್ನಿಡುವ ಪರಿಪಾಠ ಇಂದು ನಿನ್ನೆಯದಲ್ಲ. ಇಂದಿರಾ ಗಾಂಧಿ, ರಾಜೀವ್ ಗಾಂಧಿ, ದೀನ್ ದಯಾಳ್ ಉಪಾಧ್ಯಾಯ, ವಾಜಪೇಯಿ ಹೆಸರಿನಲ್ಲಿ ಯೋಜನೆಗಳಿವೆ. ಇದಕ್ಕೆ ಕಾಂಗ್ರೆಸ್ ಕೂಡಾ ಹೊರತಾಗಿಲ್ಲ, ಬಿಜೆಪಿ ಕೂಡಾ..
ಸಿದ್ದರಾಮಯ್ಯ, ಇಂದಿರಾ ಗಾಂಧಿ ಹೆಸರಿನಲ್ಲಿ ಕ್ಯಾಂಟೀನ್
ಬಡವರ ಹೊಟ್ಟೆ ಖಾಲಿ ಬೀಳದಂತೆ, ಅಂದು ಸಿದ್ದರಾಮಯ್ಯ, ಇಂದಿರಾ ಗಾಂಧಿ ಹೆಸರಿನಲ್ಲಿ ಕ್ಯಾಂಟೀನ್ ತೆರೆಯಲು ಮುಂದಾಗಿದ್ದಕ್ಕೆ, ಆ ವೇಳೆಯೇ ವಿರೋಧ ವ್ಯಕ್ತವಾಗಿತ್ತು. ಇಂದಿರಾ ಗಾಂಧಿ ಎಂಬುದು ದೇಶದ ಜನರ ಭಾವನಾತ್ಮಕ ವಿಷಯ ಭಾವನೆಗಳ ಜೊತೆ ರಾಜಕೀಯ ಮಾಡಲು ಪ್ರಯತ್ನಿಸಬೇಡಿ. ಲಕ್ಷಾಂತರ ಬಡವರಿಗೆ ಆಶಾಕಿರಣವಾಗಿದ್ದವರು ಎನ್ನುವುದು ಕಾಂಗ್ರೆಸ್ ನಿಲುವು. ಎಮರ್ಜೆನ್ಸಿ ತಂದಿದ್ದು ಇಂದಿರಾ ಗಾಂಧಿಯವರ ಸಾಧನೆ ಎಂದು ಬಿಜೆಪಿ ಹೇಳುತ್ತಿದೆ.
ರಾಜಕೀಯ ಮೇಲಾಟದಲ್ಲಿ ಬಡವರು/ ಮಧ್ಯಮ ವರ್ಗದವರು ತೊಂದರೆ ಅನುಭವಿಸದಿದ್ದರೆ ಸಾಕು
ಯಾವುದೇ ಸರಕಾರಕ್ಕೆ ಬಡವರಿಗೆ ಒಳ್ಲೆಯದು ಮಾಡಬೇಕು ಎನ್ನುವುದೇ ಸ್ಪಷ್ಟ ಉದ್ದೇಶವಾಗಿದ್ದರೆ, ಮೊದಲು, ಯಾವುದೇ ಯೋಜನೆಗಳಿಗೆ ರಾಜಕೀಯ ಮುಖಂಡರ ಹೆಸರಿಡುವುದಕ್ಕೆ ಕಡಿವಾಣ ಹಾಕಬೇಕು. ದೇಶಕ್ಕಾಗಿ ಸೇವೆ ಸಲ್ಲಿಸಿದ ಅನೇಕ ಮಹನೀಯರು, ದಾರ್ಶನಿಕರ ಹೆಸರನ್ನು ಇಟ್ಟರೆ, ಯಾರಿಗೂ ಅಭ್ಯಂತರವಿರುವುದಿಲ್ಲ. ಒಟ್ಟಿನಲ್ಲಿ, ಇಬ್ಬರ ನಡುವಿನ ರಾಜಕೀಯ ಮೇಲಾಟದಲ್ಲಿ ಬಡವರು/ ಮಧ್ಯಮ ವರ್ಗದವರು ತೊಂದರೆ ಅನುಭವಿಸದಿದ್ದರೆ ಸಾಕು...