50ಸಾವಿರ ಅಂತರದಿಂದ ಗೆಲ್ಲುತ್ತೇನೆ: ಬಿ.ಸಿ.ಪಾಟೀಲ್ ಗೆಲುವಿನ ಲೆಕ್ಕಾಚಾರ ಹೀಗೆ
ಬೆಂಗಳೂರು, ನ 14: ಮುಖ್ಯಮಂತ್ರಿ ಆದಿಯಾಗಿ ರಾಜ್ಯ ಬಿಜೆಪಿ ಮುಖಂಡರ ಸಮ್ಮುಖದಲ್ಲಿ ಅನರ್ಹ ಶಾಸಕರು ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅನರ್ಹರಲ್ಲಿ ಒಬ್ಬರಾದ ಬಿ.ಸಿ.ಪಾಟೀಲ್ ಭಾರೀ ಗೆಲುವಿನ ಲೆಕ್ಕಾಚಾರದಲ್ಲಿದ್ದಾರೆ.
ಬಿಜೆಪಿ ಸೇರ್ಪಡೆಗೊಂಡ ನಂತರ ಮಾತನಾಡಿದ ಪಾಟೀಲ್, "ಕಳೆದ ಬಾರಿ ಚುನಾವಣೆಯಲ್ಲಿ ನನ್ನ ಮತ್ತು ಬಣಕರ್ ನಡುವೆ, ಜಿದ್ದಾಜಿದ್ದಿನ ಪೈಪೋಟಿಯಿತ್ತು. ಈ ಬಾರಿ ಹಾಗಿಲ್ಲ" ಎನ್ನುವ ವಿಶ್ವಾಸದ ಮಾತನ್ನಾಡಿದ್ದಾರೆ.
"ಕಳೆದ ಬಾರಿ ನನಗೆ 72,461 ಮತಗಳು ಬಂದಿದ್ದವು, ಯು.ಬಿ,ಬಣಕರ್ ಅವರಿಗೆ 71,906 ಮತಗಳು ಬಂದು, ನಾನು 555 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೆ. ಆದರೆ, ಈ ಬಾರಿ ಬಣಕರ್ ನಮ್ಮ ಜೊತೆಗಿದ್ದಾರೆ" ಎಂದು ಪಾಟೀಲ್ ಹೇಳಿದರು.
"ಬಣಕರ್ ನಮ್ಮ ಜೊತೆಗಿರುವುದರಿಂದ, ನಾನು ಕನಿಷ್ಟ ಐವತ್ತು ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವುದು ನಿಶ್ಚಿತ" ಎನ್ನುವ ವಿಶ್ವಾಸದ ಮಾತನ್ನು ಬಿ.ಸಿ.ಪಾಟೀಲ್ ಆಡಿದ್ದಾರೆ.
"ನನ್ನ ಹಾಗೇ ನನ್ನ ಮಗಳು. ಅವಳು ಈಗಾಗಲೇ ಬಿಜೆಪಿಯಲ್ಲಿದ್ದಾಳೆ. ಶರತ್ ಬಚ್ಚೇಗೌಡ್ರ ತರ ಮಾಡೋಕೆ ಆಗುತ್ತಾ. ತಂದೆ ಎಲ್ಲಿರುತ್ತಾರೋ, ಅಲ್ಲೇ ಮಕ್ಕಳು. ಅದು ಸಂಸ್ಕಾರ" ಎಂದು ಪಾಟೀಲ್, ಬಚ್ಚೇಗೌಡ್ರಿಗೆ ಟಾಂಗ್ ನೀಡಿದ್ದಾರೆ.
ನಗರದ ಮಲ್ಲೇಶ್ವರಂ ಬಿಜೆಪಿ ಕಚೇರಿ ಮುಂಭಾಗದ ಬೃಹತ್ ವೇದಿಕೆಯ ಮೇಲೆ ಕೇಸರಿ ಶಾಲು ಹೊದ್ದು ಮಿಂಚುತ್ತಿದ್ದ ಅನರ್ಹ ಶಾಸಕರು ಒಬ್ಬೊಬ್ಬರಾಗಿಯೇ ಬಂದು ಬಿಎಸ್ ವೈಯಿಂದ ಪಕ್ಷದ ಬಾವುಟ ಸ್ವೀಕರಿಸಿ, ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಪಡೆದುಕೊಂಡರು.