ಇನ್ನು ಮುಂದೆ ಕರ್ನಾಟಕ ಬಿಜೆಪಿಯಲ್ಲಿ ಮೂರು 'ಶಕ್ತಿ' ಕೇಂದ್ರಗಳು
ಬರೀ ಎರಡು ಕ್ಷೇತ್ರದ ಉಪಚುನಾವಣೆ ಎದುರಾಗುತ್ತಿದ್ದರೂ, ಆಡಳಿತ ಬಿಜೆಪಿ ಮತ್ತು ವಿರೋಧ ಪಕ್ಷವಾದ ಕಾಂಗ್ರೆಸ್ಸಿಗೆ ಇದು ಪ್ರತಿಷ್ಠೆಯ ಪ್ರಶ್ನೆ. ಕೆಪಿಸಿಸಿಗೆ ಡಿ.ಕೆ.ಶಿವಕುಮಾರ್ ಬಾಸ್ ಆದ ನಂತರ ನಡೆಯುತ್ತಿರುವ ಚುನಾವಣೆ ಇದಾಗಿರುವುದರಿಂದ, ಹೆಚ್ಚಿನ ಉತ್ಸಾಹದಿಂದ ಕಾರ್ಯಕರ್ತರು ಮತ್ತು ಮುಖಂಡರು ಕೆಲಸ ಮಾಡುವುದು ನಿಶ್ಚಿತ.
ಉಪಚುನಾವಣೆಯ ಈ ಕಾವಿನಲ್ಲಿ ಬಿಜೆಪಿಯ ಕೇಂದ್ರ ಘಟಕ ಹಲವು ಬದಲಾವಣೆಗಳನ್ನು ಮಾಡಿತ್ತು. ಅದರಲ್ಲಿ, ರಾಜ್ಯ ಸಚಿವರಾಗಿರುವ ಸಿ.ಟಿ.ರವಿಯವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು. ಅದರ ಬೆನ್ನಲ್ಲೇ, ಈಗ ಅವರನ್ನು ಕರ್ನಾಟಕವೂ ಸೇರಿದಂತೆ, ದಕ್ಷಿಣಭಾರತದ ಉಸ್ತುವಾರಿಯನ್ನಾಗಿ ನೇಮಿಸಿರುವುದು.
ಸಿ.ಟಿ ರವಿಗೆ ಮಹತ್ವದ ಜವಾಬ್ದಾರಿ ನೀಡಿದ ಬಿಜೆಪಿ ಹೈಕಮಾಂಡ್
ಮೇಲ್ನೋಟಕ್ಕೆ ಉತ್ತಮ ವಾಗ್ಮಿಯಾಗಿರುವ ರವಿಯವರ ನೇಮಕ, ಪಕ್ಷದ ಆಡಳಿತಾತ್ಮಕ ಬದಲಾವಣೆ ಎಂದು ಕಾಣುತ್ತಿದ್ದರೂ, ಇದರ ಹಿಂದೆ, ರಾಜ್ಯ ಬಿಜೆಪಿ ಘಟಕದಲ್ಲಿನ ಕೆಲವು ಹಿರಿಯ ಮುಖಂಡರಿಗೆ ಮೂಗುದಾರ ಹಾಕುವ ಉದ್ದೇಶವಿದೆಯೇ ಎನ್ನುವ ಪ್ರಶ್ನೆ ಕಾಡುವುದು ಸಹಜ.
ಯಡಿಯೂರಪ್ಪ ವಿರುದ್ದ ಆಪರೇಷನ್ ಕಮಲದ 16 ಮುಖಂಡರ ಬಂಡಾಯ ಸಾಧ್ಯತೆ?
ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್. ಯಡಿಯೂರಪ್ಪನವರನ್ನು ಕೆಳಗಿಸಲಾಗುವುದು ಎನ್ನುವುದು ಇಂದು ನಿನ್ನೆಯ ಸುದ್ದಿಯಲ್ಲ. ರಾಜ್ಯದ ಮುಖಂಡರು, ದೆಹಲಿ ಪ್ರವಾಸ ಕೈಗೊಂಡರೆ ಸಾಕು, ಈ ವಿಚಾರದ ಸುತ್ತಮುತ್ತ ಚರ್ಚೆಗಳು ಮತ್ತೆ ಧುತ್ತೆಂದು ಶುರುವಾಗುತ್ತದೆ. ಇನ್ನು ಮುಂದೆ, ರಾಜ್ಯ ಬಿಜೆಪಿಯಲ್ಲಿ ಮೂರು ಶಕ್ತಿ ಕೇಂದ್ರಗಳು? ಅದು ಯಾರ್ಯಾರು, ಮುಂದೆ ಓದಿ...
ಯಡಿಯೂರಪ್ಪ ಮತ್ತು ನಳಿನ್ ಕುಮಾರ್ ಕಟೀಲ್
ತೀರಾ ಇತ್ತೀಚಿನ ವಿದ್ಯಮಾನವೊಂದನ್ನು ಉಲ್ಲೇಖಿಸುವುದಾದರೆ, ಆರ್.ಆರ್.ನಗರದ ಟಿಕೆಟ್ ಸಂಬಂಧ ನಡೆದ ಕೋರ್ ಕಮಿಟಿಯ ಸಭೆ. ಮುನಿರತ್ನ ಪರವಾಗಿ ಯಡಿಯೂರಪ್ಪ ಮತ್ತು ತುಳಸಿ ಮುನಿರಾಜು ಗೌಡ ಪರವಾಗಿ ನಳಿನ್ ಕುಮಾರ್ ಕಟೀಲ್ ವಕಾಲತ್ತು ವಹಿಸಿದ್ದರು. ಈ ಸಂಬಂಧ ಇಬ್ಬರ ನಡುವೆ ಬಿಸಿಬಿಸಿ ಚರ್ಚೆ ನಡೆದಿತ್ತು ಎಂದೂ ಹೇಳಲಾಗುತ್ತಿತ್ತು.
ನಳಿನ್ ಕಟೀಲ್ ರಾಜ್ಯಾಧ್ಯಕ್ಷ
ಇನ್ನು, ನಳಿನ್ ಕಟೀಲ್ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ, ಮಲ್ಲೇಶ್ವರದ ಕೇಂದ್ರ ಕಚೇರಿಯಲ್ಲೂ ಹಲವು ಬದಲಾವಣೆಯನ್ನು ಮಾಡಿದ್ದರು. ಬಿಎಸ್ವೈ ಪುತ್ರ ವಿಜಯೇಂದ್ರ ಪರವಾಗಿ ಗುರುತಿಸಿಕೊಂಡಿದ್ದವರಿಗೆ ಗೇಟ್ ಪಾಸ್ ನೀಡಿದ್ದು, ಬಿಜೆಪಿ ಆಂತರಿಕ ವಲಯದಲ್ಲಿ ಭಾರೀ ಸದ್ದನ್ನು ಮಾಡಿತ್ತು.
ಬಿ.ವೈ.ವಿಜಯೇಂದ್ರಗೆ ಉಪಾಧ್ಯಕ್ಷ ಸ್ಥಾನ
ಇದಲ್ಲದೇ, ಕೇಂದ್ರ ಪದಾಧಿಕಾರಿಗಳ ಪಟ್ಟಿಯಲ್ಲಿ ಬಿ.ವೈ.ವಿಜಯೇಂದ್ರಗೆ ಉಪಾಧ್ಯಕ್ಷ ಸ್ಥಾನವನ್ನು ನೀಡಲಾಗಿತ್ತು. ಪ್ರಧಾನ ಕಾರ್ಯದರ್ಶಿ ಹುದ್ದೆ ಅವರು ಬಯಸಿದ್ದರು ಎನ್ನುವ ಸುದ್ದಿಯ ನಡುವೆ, ಬಿಎಸ್ವೈ ಕುಟುಂಬಕ್ಕಾದ ಹಿನ್ನಡೆ ಇದೆಂದು ವ್ಯಾಖ್ಯಾನಿಸಲಾಗಿತ್ತು. ಆಡಳಿತದಲ್ಲಿ ವಿಜಯೇಂದ್ರ ಹಸ್ತಕ್ಷೇಪದ ಬಗ್ಗೆಯೂ ವರಿಷ್ಥರಿಗೆ ದೂರು ಹೋಗಿತ್ತು ಎನ್ನುವ ಸುದ್ದಿ ಹರಿದಾಡುತ್ತಿತ್ತು.
ಬಿ.ಎಲ್. ಸಂತೋಷ್ ಬ್ಯಾಕ್ ಅಪ್ ಇರುವ ನಳಿನ್ ಕಟೀಲ್
ಅಲ್ಲಿಗೆ, ಬಿಜೆಪಿ ರಾಜ್ಯ ಘಟಕದಲ್ಲಿ ಬಿ.ಎಲ್. ಸಂತೋಷ್ ಬ್ಯಾಕ್ ಅಪ್ ಇರುವ ನಳಿನ್ ಕಟೀಲ್ ಮತ್ತು ಸಿಎಂ ಯಡಿಯೂರಪ್ಪ ಎನ್ನುವ ಎರಡು ಶಕ್ತಿ ಕೇಂದ್ರಗಳಿವೆ ಎನ್ನುವುದು ಕಣ್ಣಿಗೆ ರಾಚುವ ಸತ್ಯ. ಅದಕ್ಕೆ, ಈಗ ಇನ್ನೊಂದು ಸೇರ್ಪಡೆಯಾಗಿದೆ. ಅದುವೇ, ನೂತನ ಉಸ್ತುವಾರಿಯಾಗಿ ಆಯ್ಕೆಯಾಗಿರುವ ಸಿ.ಟಿ.ರವಿ. ಇಲ್ಲಿ ರವಿಗಿರುವ ಒಂದು ತೊಡಕು ಏನಂದರೆ, ಇಂಗ್ಲಿಷ್ ಮತ್ತು ಹಿಂದಿಯ ಮೇಲೆ ಹಿಡಿತ ಇಲ್ಲದಿರುವುದು.
ಚುರುಕಾಗಿ ಪಕ್ಷ ಸಂಘಟೆನೆ ಮಾಡುವ ಶಕ್ತಿಯಿರುವ ಸಿ.ಟಿ.ರವಿ
ಉತ್ತಮ ವಾಗ್ಮಿ, ವಿರೋಧಿಗಳಿಗೆ ತನ್ನದೇ ಶೈಲಿಯಲ್ಲಿ ಉತ್ತರಿಸುವ ರೀತಿ, ಮಾತಿನಲ್ಲಿ ಹಿಡಿತ, ಚುರುಕಾಗಿ ಪಕ್ಷ ಸಂಘಟೆನೆ ಮಾಡುವ ಶಕ್ತಿಯಿರುವ ಸಿ.ಟಿ.ರವಿಯನ್ನು ಉಸ್ತುವಾರಿಯನ್ನಾಗಿ ನೇಮಿಸುವ ಮೂಲಕ, ಅಮಿತ್ ಶಾ, ರಾಜ್ಯದಲ್ಲಿ ಮೂರನೇ ಶಕ್ತಿಕೇಂದ್ರವನ್ನು ಹುಟ್ಟುಹಾಕಲು ಹೊರಟಿದ್ದಾರಾ ಎನ್ನುವ ಪ್ರಶ್ನೆ ಉದ್ಭವಿಸುವುದು ಸ್ವಾಭಾವಿಕ. ಯಾಕೆಂದರೆ, ರವಿ, ಸಿಎಂ ಬಿಎಸ್ವೈ ಕ್ಯಾಂಪ್ ನಲ್ಲಿ ಹೆಚ್ಚಾಗಿ ಗುರುತಿಸಿಕೊಂಡವರಲ್ಲ.
Recommended Video
ಇನ್ನು ಮುಂದೆ ಕರ್ನಾಟಕ ಬಿಜೆಪಿಯಲ್ಲಿ ಮೂರು ಶಕ್ತಿ ಕೇಂದ್ರಗಳು
ಈ ಹಿಂದೆಯೂ, ಸಂಸದೆ ಶೋಭಾ ಕರಂದ್ಲಾಜೆ ಹಸ್ತಕ್ಷೇಪ ಹೆಚ್ಚಾದಾಗ, ರವಿ ವಿರೋಧ ವ್ಯಕ್ತ ಪಡಿಸಿದ್ದು ಗೌಪ್ಯವಾಗಿಯೇನೂ ಉಳಿದಿರಲಿಲ್ಲ. ಇನ್ನು, ಆಯಕಟ್ಟಿನ ಕೆಲವು ಸಚಿವರಿಂದಲೇ, ವಿರೋಧ ಪಕ್ಷಗಳಿಗೆ ಮಾಹಿತಿ ರವಾನೆಯಾಗುತ್ತಿದೆ ಎನ್ನುವ ಸುದ್ದಿಯೂ ಏನು ಹೊಸದಲ್ಲ. ಹಾಗಾಗಿ, ಪಕ್ಷ ಮತ್ತು ಸರಕಾರದಲ್ಲಿ ಪ್ರಮುಖರ ಪಾರುಪತ್ಯವನ್ನು ಮೆಟ್ಟಿ ನಿಲ್ಲಲು, ಸಿ.ಟಿ.ರವಿ ಮೂಲಕ, ಕೇಂದ್ರದ ಬಿಜೆಪಿ ವರಿಷ್ಠರು ಇನ್ನೊಂದು ಶಕ್ತಿಕೇಂದ್ರವನ್ನು ಹುಟ್ಟುಹಾಕಿದ್ದಾರಾ ಎನ್ನುವುದೇ ಇಲ್ಲಿ ಪ್ರಶ್ನೆ.