ಬರಗಾಲ: 28% ಮಳೆ ಕೊರತೆಗೆ ಕರಟಿ ಹೋಯ್ತು 50% ಬೆಳೆ
ಮುಂಗಾರು ಮಳೆಯ ಕೊರತೆ ಮತ್ತು ಬರಗಾಲ ಕರ್ನಾಟಕ ರೈತರನ್ನು ಬರ್ಬಾದ್ ಮಾಡಿ ಹಾಕಿದೆ. ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಬಂದೊದಗಿದ್ದರೆ, ಗ್ರಾಮಗಳ ಜನ ಬರಗಾಲದಿಂದ ಕಂಗೆಟ್ಟಿದ್ದಾರೆ.
ಬೆಂಗಳೂರು, ಮಾರ್ಚ್ 7: ಮುಂಗಾರು ಮಳೆಯ ಕೊರತೆ ಮತ್ತು ಬರಗಾಲ ಕರ್ನಾಟಕ ರೈತರನ್ನು ಬರ್ಬಾದ್ ಮಾಡಿ ಹಾಕಿದೆ. ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಬಂದೊದಗಿದ್ದರೆ, ಗ್ರಾಮಗಳ ಜನ ಬರಗಾಲದಿಂದ ಕಂಗೆಟ್ಟಿದ್ದಾರೆ. ಅತ್ತ ರೈತರು ಬೆಳೆ ನಷ್ಟದ ಹೊರೆ ತಾಳಲಾಗದೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.
ಅಂಕಿ ಸಂಖ್ಯೆಗಳ ವಿಚಾರಕ್ಕೆ ಬಂದರೆ ಕರ್ನಾಟಕದಲ್ಲಿ 2016ರಲ್ಲಿ 831 ಮಿಮಿ ಮಳೆ ಬಿದ್ದಿದೆ. ಇದು ಸರಾಸರಿ ಮಳೆ ಪ್ರಮಾಣ 1155ಮಿಮಿ ಗಿಂತ ಶೇಕಡಾ 28ರಷ್ಟು ಕಡಿಮೆಯಾಗಿದೆ. ಅದರಲ್ಲೂ ಆಗಸ್ಟ್ ನಿಂದ ಡಿಸೆಂಬರ್ ಮಧ್ಯದಲ್ಲಿ ಬಿದ್ದ ಮಳೆಯ ಪ್ರಮಾಣ ಶೇಕಡಾ 50 ರಿಂದ 70 ರಷ್ಟು ಇಳಿಕೆಯಾಗಿದೆ.[ಬೆಂಗಳೂರಿಗರ ಕುಡಿಯುವ ನೀರಿಗೆ ಕಾದಿದೆ ಗಂಡಾಂತರ]
ಬೆಳೆ ಉತ್ಪಾದನೆಯಲ್ಲಿ ಖೋತಾ
ಶೇಕಡಾ 28 ಮಳೆ ಕಡಿಮೆಯಾಗಿದ್ದಕ್ಕೆ ಬೆಳೆಗಳ ಉತ್ಪಾದನೆ ದೊಡ್ಡ ಮಟ್ಟಕ್ಕೆ ಕುಸಿತವಾಗಿದ್ದು ಶೇಕಡಾ 50 ರಷ್ಟು ಕಡಿಮೆಯಾಗಿದೆ. ಬೇಸಿಗೆಯ ಆರಂಭದಲ್ಲಿ ತರಕಾರಿ, ಹಣ್ಣು ಹಂಪಲಿನ ಕೊರತೆ ಕಾಣಿಸುತ್ತಿದೆ.
160 ತಾಲೂಕು ಬರ ಪೀಡಿತ
170 ತಾಲೂಕುಗಳಲ್ಲಿ 160ತಾಲೂಕನ್ನು ಬರಪೀಡಿತ ಎಂದು ಕರ್ನಾಟಕ ಸರಕಾರ ಘೋಷಿಸಿದೆ. ಈಗಾಗಲೆ ಎಲ್ಲಾ ಜಲಾಶಯ, ಅಣೆಕಟ್ಟುಗಳ ನೆಲ ಕಾಣಿಸುತ್ತಿದ್ದು ತಳ ಮುಟ್ಟಿದೆ.[ಮೇ ಅಂತ್ಯದವರೆಗೆ ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲ]
ಬರ ಪರಿಹಾರಕ್ಕೆ ಮೊರೆ
ಕರ್ನಾಟಕ ಈಗಾಗಲೇ ಕೇಂದ್ರದಿಂದ 4700 ಕೋಟಿ ರೂಪಾಯಿ ಪರಿಹಾರ ಕೇಳಿದೆ. ಆದರೆ ಕೇಂದ್ರ ಸರಕಾರ ಕರ್ನಾಟಕಕ್ಕೆ ಕೊಟ್ಟಿದ್ದು ಕೇವಲ 1782 ಕೋಟಿ ಮಾತ್ರ. 1782 ಕೋಟಿ ಬಿಡುಗಡೆಯಾಗಿದ್ದರೂ ಕರ್ನಾಟಕದ ಕೈಗೆ ಬಂದು ತಲುಪಿದ್ದು ಕೇವಲ 450 ಕೋಟಿ ಮಾತ್ರ.
ಖಾರಿಫ್ ಮತ್ತು ರಾಬಿ ಬೆಳೆ ಕುಸಿತ
2016ರಲ್ಲಿ ಮುಂಗಾರು ಮಳೆ ಕುಸಿತವಾಗಿದ್ದರಿಂದ ಖಾರಿಫ್ ಬೆಳೆಗಳು ದೊಡ್ಡ ಮಟ್ಟಕ್ಕೆ ಕುಸಿತವಾಗಿವೆ. ಇನ್ನು ಸಾಮಾನ್ಯವಾಗಿ 32,000 ಹೆಕ್ಟೇರುಗಳಲ್ಲಿ ರಾಬಿ ಬೆಳೆ ಬೆಳೆದರೆ ಈ ಬಾರಿ ಈ ಪ್ರಮಾಣ 25,000 ಹೆಕ್ಟೇರುಗಳಿಗೆ ಇಳಿಕೆಯಾಗಿದೆ.
ಮೇವು ಬ್ಯಾಂಕ್
ಈಗಾಗಲೇ ಬೇಸಿಗೆ ಎನ್ನುವುದು ಜನರಿಗೆ ದುಃಸ್ವಪ್ನವಾಗಿ ಕಾಡುತ್ತಿದೆ. ಅದರಲ್ಲೂ ರೈತರ ಪಾಲಿಗಂತೂ ಇದು ಕರಾಳ ಬೇಸಿಗೆಯಾಗಲಿದೆ. ಕರ್ನಾಟಕ ಸರಕಾರ ಈಗಾಗಲೇ ರೈತರ ಉಪಯೋಗಕ್ಕಾಗಿ 90 ಮೇವು ಬ್ಯಾಂಕ್ ಗಳನ್ನು ತೆರೆದಿದೆ.
ಧಾನ್ಯಗಳ ಉತ್ಪಾದನೆಯಲ್ಲಿ ಭಾರೀ ಇಳಿಕೆ
ಕರ್ನಾಟಕದಲ್ಲಿ ಸಾಮಾನ್ಯವಾಗಿ 130 ಲಕ್ಷ ಟನ್ ಧಾನ್ಯಗಳನ್ನು ಬೆಳೆಯಲಾಗುತ್ತದೆ. ಆದರೆ ಈ ಬಾರಿ ಮಳೆ ಕೊರತೆಯಿಂದಾಗಿ ಕೇವಲ 90 ಲಕ್ಷ ಟನ್ ಧಾನ್ಯಗಳನ್ನಷ್ಟೇ ಬೆಳೆಯುವಲ್ಲಿ ರೈತರು ಸಫಲವಾಗಿದ್ದಾರೆ. (ಒನ್ ಇಂಡಿಯಾ ಸುದ್ದಿ)
(ಚಿತ್ರ ಕೃಪೆ: ಪಿಟಿಐ)