ವಿಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ದುಡಿಯುವೆ : ರಾವ್
ಬೆಂಗಳೂರು, ಜೂ.19: ವಿಜ್ಞಾನ ಕ್ಷೇತ್ರದ ಅಭಿವೃದ್ಧಿಗಾಗಿ ಕೊನೆಯ ಉಸಿರು ಇರುವವರೆಗೂ ದುಡಿಯುತ್ತೇನೆ. ಕಳೆದ 63 ವರ್ಷಗಳಿಂದ ವಿಜ್ಞಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ಇದೇ ಜೂನ್ 30ಕ್ಕೆ 80 ವರ್ಷ ತುಂಬಲಿದ್ದು, ಇನ್ನು ಎಷ್ಟು ವರ್ಷ ಬದುಕುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ. ಮುಂದೆ ಇರುವಷ್ಟು ದಿನ ವಿಜ್ಞಾನ ಕ್ಷೇತ್ರದ ಏಳಿಗೆಗಾಗಿ ಶ್ರಮಿಸುತ್ತೇನೆ ಎಂದು ಭಾರತ ರತ್ನ ಪ್ರೊ ಸಿ ಎನ್ ಆರ್ ರಾವ್ ಅವರು ಹೇಳಿದ್ದಾರೆ.
ರಾಜ್ಯ ಸರ್ಕಾರ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.[ಭಾರತ ರತ್ನ ಸಿಎನ್ಆರ್ ರಾವ್ ವ್ಯಕ್ತಿ ಚಿತ್ರ]
ಯಾವುದೇ ದೇಶ ಅಭಿವೃದ್ಧಿ ಹೊಂದಬೇಕಾದರೆ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯಾಗಬೇಕು. ಇನ್ನು 15 ವರ್ಷಗಳಲ್ಲಿ ಭಾರತ ಸಾಕಷ್ಟು ಬೆಳೆಯಬೇಕಿದೆ. ಭಾರತ ವಿಜ್ಞಾನ ಕ್ಷೇತ್ರದಲ್ಲಿ ಮುಂದೆ ಬರಬೇಕು ಎನ್ನುವುದು ತಮ್ಮ ಜೀವಿತಾವಧಿಯಲ್ಲಿನ ಮಹದಾಸೆಯಾಗಿದೆ. ತಮ್ಮ ಈ ಕನಸು ಮುಂದಿನ ಹತ್ತು ವರ್ಷಗಳೊಳಗಾದರೂ ನನಸಾಗಲೇ ಬೇಕು. ಅದನ್ನು ನೋಡುವ ಸೌಭಾಗ್ಯ ನನಗೆ ದೊರೆಯಬೇಕು ಎಂದು ಭಾವುಕರಾಗಿ ಹೇಳಿದರು.[ಚುನಾವಣೆ ಬಗ್ಗೆ ಭಾರತ ರತ್ನ ಸಿಎನ್ಆರ್ ರಾವ್ ಏನಂತಾರೆ?]
ಕೇವಲ ಶೇ.2 ರಷ್ಟು ಮೊತ್ತ ಶಿಕ್ಷಣಕ್ಕೆ ಮೀಸಲು:
ಭಾರತದಲ್ಲಿ ಶಿಕ್ಷಣ ಕ್ಷೇತ್ರಕ್ಕೆ, ಅದರಲ್ಲೂ ವಿಶೇಷವಾಗಿ ವಿಜ್ಞಾನ ಕ್ಷೇತ್ರಕ್ಕೆ ಆದ್ಯತೆ ನೀಡಿದರೆ ಕೇವಲ ಭಾರತಕ್ಕೆ ಮಾತ್ರವಲ್ಲ, ವಿಶ್ವಕ್ಕೆ ಒಳಿತಾಗುತ್ತದೆ. ಅಮೆರಿಕ ಹಾಗೂ ಚೀನಾದಂತಹ ಮುಂದುವರೆದ ರಾಷ್ಟ್ರಗಳು ತಮ್ಮ ಒಟ್ಟು ದೇಶೀಯ ಉತ್ಪನ್ನದ ಕನಿಷ್ಠ ಶೇ.6 ರಷ್ಟು ಮೊತ್ತವನ್ನು ಶಿಕ್ಷಣ ರಂಗಕ್ಕೆ ಮೀಸಲಿಡುತ್ತವೆ. ನಮ್ಮಲ್ಲಿ ಶೇ. 2 ರಷ್ಟು ಮೊತ್ತವನ್ನೂ ವೆಚ್ಚ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಮಕ್ಕಳಿಗೆ ಸ್ವಾತಂತ್ರ್ಯ ನೀಡಿ:
ಬಾಲ್ಯದಲ್ಲಿ ನನನ್ನ ತಂದೆತಾಯಿ ನೀಡಿದ ಪ್ರೋತ್ಸಾಹದಿಂದಾಗಿ ನಾನು ಈ ಹಂತಕ್ಕೆ ಬಂದಿದ್ದೇನೆ. ಹೀಗಾಗಿ ಮಕ್ಕಳ ಮನಸ್ಸಿನ ಮೇಲೆ ಒತ್ತಡ ಹಾಕದೇ ಅವರ ಇಚ್ಛೆಗೆ ಅನುಗುಣವಾಗಿ ವ್ಯಾಸಂಗ ಮಾಡುವ ಸ್ವಾತಂತ್ರ್ಯ ನೀಡಬೇಕೆಂದು ಪಾಲಕ ಪೋಷಕರಿಗೆ ಸಿ.ಎನ್.ರಾವ್ ಸಲಹೆ ನೀಡಿದರು.
ಸಾಧನೆಯಲ್ಲಿ ತಮ್ಮ ಅರ್ಧಾಂಗಿಯದ್ದೇ ಸಿಂಹ ಪಾಲು !
ಗೃಹ ಖಾತೆ ಮತ್ತು ಆಹಾರ ಖಾತೆ ಮಾತ್ರವಲ್ಲ, ಹಣಕಾಸು ಖಾತೆಯನ್ನೂ ಆಕೆಯೇ ಯಶಸ್ವಿಯಾಗಿ ನಿಭಾಯಿಸಿಕೊಂಡು ಬರುತ್ತಿದ್ದಾಳೆ. ಹೆಂಡತಿಯೊಂದಿಗೆ ಸದಾ ಜಗಳವಾಡುತ್ತಿದ್ದರೆ ಏನನ್ನೂ ಸಾಧಿಸಲಾಗದು. ಅದರಲ್ಲೂ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಛಲವಿದ್ದರೆ ಸಂಸಾರದಲ್ಲಿ ಸಾಮರಸ್ಯ ಇರಬೇಕು ಎಂದು ತಿಳಿಸಿದ ಪ್ರೊ ರಾವ್ ಅವರು ಮನದಾಳದಿಂದಲೇ ತಮ್ಮ ಮಡದಿ ಇಂದುಮತಿ ರಾವ್ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಿಸ್ವಾರ್ಥ ಮನೋಭಾವ ಬೇಕು:
ವಿಜ್ಞಾನ ಕ್ಷೇತ್ರದಲ್ಲಿ ಶ್ರಮಿಸುವವರಲ್ಲಿ ನಿಸ್ವಾರ್ಥ ಮನೋಭಾವವಿರಬೇಕು. ದುಡ್ಡು ಮಾಡುವ ಆಲೋಚನೆ ಇರುವವರು ವಿಜ್ಞಾನ ಕ್ಷೇತ್ರದಿಂದ ದೂರ ಉಳಿಯಬೇಕು ಎಂದು ಪ್ರೊ ರಾವ್ ಅವರು ಹಿತ ನುಡಿದರು.
ಟಿವಿ ಮಾಧ್ಯಮಗಳಿಂದ ಮೌಢ್ಯದ ಪ್ರಚಾರ:
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳವಣಿಗೆಯಾಗಿದ್ದರೂ ಇಂದಿಗೂ ಪಂಚಾಗ, ಜ್ಯೋತಿಷ್ಯ, ರಾಶಿ ಭವಿಷ್ಯವನ್ನು ನಂಬಿ ಅನುಸರಿಸುವುದನ್ನು ನೋಡಿ ಅಚ್ಚರಿಯಾಗುತ್ತದೆ. ಇದು ಯಾವ ಮಟ್ಟಕ್ಕೆ ಹೋಗಿದೆ ಎಂದರೆ ಕ್ರಿಕೆಟ್ ಮ್ಯಾಚ್ನಲ್ಲಿ ಆಟಗಾರರ ರಾಶಿ ಫಲ ಕುರಿತು ಚರ್ಚಿಸಿ ಇಂತಿಷ್ಟೇ ರನ್ ಗಳಿಸುತ್ತಾರೆ ಎಂದು ಊಹಿಸಲಾಗುತ್ತದೆ. ದೃಶ್ಯ ಮಾಧ್ಯಮಗಳಲ್ಲಿ ಗಂಟೆ ಗಟ್ಟಲೇ ರಾಶಿ ಫಲಗಳನ್ನು ಪ್ರಸಾರ ಮಾಡಲಾಗುತ್ತದೆ. ದೇಶದ ಬೆಳವಣಿಗೆ ವಿಜ್ಞಾನದಿಂದ ಮಾತ್ರ ಸಾಧ್ಯ ಎಂದು ನಾವೆಲ್ಲ ತಿಳಿದುಕೊಳ್ಳಬೇಕಿದೆ ಎಂದರು.
ಕನ್ನಡ ಮಾಧ್ಯಮದಲ್ಲಿ ಓದಿ ಸಾಧನೆ:
"ಅವಿಭಜಿತ
ಕೋಲಾರ
ಜಿಲ್ಲೆಯಲ್ಲಿ,
ಇಂದಿನ
ಚಿಕ್ಕಬಳ್ಳಾಪುರ
ಜಿಲ್ಲೆಯಲ್ಲಿ
ಜನಿಸಿದ
ಸರ್
ಎಂ
ವಿಶ್ವೇಶ್ವರಯ್ಯ
ಹಾಗೂ
ಪ್ರೊ
ಸಿ
ಎನ್
ಆರ್
ರಾವ್
ಇಬ್ಬರೂ
ಸರ್ಕಾರಿ
ಶಾಲೆಯಲ್ಲೇ
ಕಲಿತವರು,
ಕನ್ನಡ
ಮಾಧ್ಯಮದಲ್ಲೇ
ವ್ಯಾಸಂಗ
ಮಾಡಿದವರು.
ಇಬ್ಬರೂ
ಭಾರತ
ರತ್ನ
ಪ್ರಶಸ್ತಿಗೆ
ಪಾತ್ರರಾಗಿದ್ದಾರೆ.
ಈ
ಇಬ್ಬರು
ಮಹನೀಯರು
ವಿಜ್ಞಾನ
ಕ್ಷೇತ್ರದಲ್ಲಿನ
ಸಾಧನೆ
ಮಾಡಿ
ವಿಶ್ವ
ಮಾನ್ಯತೆ
ಗಳಿಸಿದ್ದಾರೆ.
ಕನ್ನಡದಲ್ಲಿ
ವ್ಯಾಸಂಗ
ಮಾಡಿದವರೂ
ವಿಶ್ವ
ಮಾನ್ಯತೆ
ಗಳಿಸಬಹುದು
ಎಂಬುದನ್ನು
ಸಾಬೀತುಪಡಿಸಿದ್ದಾರೆ.
ಇದನ್ನು
ಗಮನಿಸಿಯಾದರೂ
ಬದುಕಿನಲ್ಲಿ
ಉನ್ನತ
ಸ್ಥಾನ
ಗಳಿಸಲು
ನಮ್ಮ
ಕನ್ನಡ
ಭಾಷೆಯಿಂದ
ಸಾಧ್ಯ
ಎಂಬುದನ್ನು
ಪೋಷಕರು
ಅರ್ಥ
ಮಾಡಿಕೊಂಡು
ಆಂಗ್ಲ
ಭಾಷಾ
ವ್ಯಾಮೋಹ
ಮತ್ತು
ಭ್ರಮಾ
ಲೋಕದಿಂದ
ದೂರ
ಉಳಿಯಬೇಕು"
-
ಮುಖ್ಯಮಂತ್ರಿ
ಸಿದ್ಧರಾಮಯ್ಯ
ಕೃತಿ,ಸಿ.ಡಿ ಹಾಗೂ ಇ-ಪುಸ್ತಕ ಬಿಡುಗಡೆ:
ಪ್ರೊ.ಸಿಎನ್ಆರ್ ರಾವ್ ಅವರ ಜೀವನ ಹಾಗೂ ಸಾಧನೆ ಕುರಿತ ಕೃತಿ, ಸಿ.ಡಿ ಹಾಗೂ ಇ-ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಮೇಯರ್ ಬಿ.ಎಸ್.ಸತ್ಯನಾರಾಯಣ ಬಿಬಿಎಂಪಿ ವತಿಯಿಂದ ಅಭಿನಂದಿಸಿದರು. ಸಿಎನ್ಆರ್ ರಾವ್ ಅವರ ಪತ್ನಿ ಇಂದುಮತಿ ರಾವ್, ಬಾಹ್ಯಾಕಾಶ ವಿಜ್ಞಾನಿ ಡಾ.ಕೆ.ಕಸ್ತೂರಿರಂಗನ್,ಯು. ಆರ್. ರಾವ್ ಅವರೂ ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.