ಥಿಯೇಟರಲ್ಲಿ ಚಪ್ಪಾಳೆ ಹೊಡೆಯುವ ಜನ ಉಪ್ಪಿಗೆ ಮತ ಹಾಕ್ತಾರಾ?
ಬೆಂಗಳೂರು, ಆಗಸ್ಟ್ 12 : ಅಯ್ಯೋ ರಾಜಕೀಯ ಅಂದ್ರೆ ಎಂಥದ್ದು ಅಂತ ಗೊತ್ತಿಲ್ವಾ? ಮೀಸೆ ತಿರುವುತ್ತ ಬಂದ ಎಂಥೆಂಥವ್ರೋ ಮಣ್ಣಾಗಿದ್ದಾರೆ, ಇಲ್ಲ ಮೂಲೆಗುಂಪಾಗಿದ್ದಾರೆ. ಇವ್ರು ಬಂದ್ರೂ ಅಷ್ಟೇ, ನೋಡ್ತಿರಿ ಒಂದೇ ಅಟೆಂಪ್ಟಲ್ಲಿ ಸೋತುಹೋಗ್ತಾರೆ ಅಥವಾ ಬೇರೆ ಯಾವುದೋ ಪಕ್ಷದೊಡನೆ 'ಹೊಂದಾಣಿಕೆ' ಮಾಡಿಕೊಂಡು ಹತ್ತರಲ್ಲಿ ಹನ್ನೊಂದನೆಯವರಾಗ್ತಾರೆ.
ಯಾರಾದ್ರೂ ಆದರ್ಶ, ಕನಸು, ಭ್ರಷ್ಟಾಚಾರದ ವಿರುದ್ಧ ಹೋರಾಟ, ಅಭಿವೃದ್ಧಿಯ ಮಂತ್ರ ಹೇಳಿಕೊಂಡು ರಾಜಕೀಯಕ್ಕೆ ಬರುತ್ತೇನೆಂದರೆ ಬಹುತೇಕ ಜನರಲ್ಲಿ ಬರುವ ಮಾತುಗಳೇ ಇಂಥವು. ಇದರಲ್ಲಿ ಸುಳ್ಳಂತೂ ಇಲ್ಲವೇ ಇಲ್ಲ. ಏಕೆಂದರೆ, ಕನಿಷ್ಠಪಕ್ಷ ಕರ್ನಾಟಕದ ಮಟ್ಟಿಗೆ ಮೌಲ್ಯಯುತ ರಾಜಕೀಯ ಎಂದೋ ಸತ್ತುಹೋಗಿದೆ, ರಾಜಕಾರಣ ಕೆಟ್ಟು ಕೆರ ಹಿಡಿದುಹೋಗಿದೆ.
ನಟ ಉಪೇಂದ್ರ ಅವರನ್ನು ರಾಜಕೀಯಕ್ಕೆ ಸ್ವಾಗತಿಸಿದ ಡಿಕೆಶಿ
ಇದೇ ರೀತಿ ಕರ್ನಾಟಕದ ಘನವೆತ್ತ ನಾಗರಿಕ ಮನಸ್ಥಿತಿಯೂ ಅಷ್ಟೇ ಭ್ರಷ್ಟವಾಗಿದೆ. ಏನೋ ಹೊಸ ಗಾಳಿ ಬೀಸುತ್ತಿದೆಯೆಂದರೆ, ಅದಕ್ಕೆ ತದ್ವಿರುದ್ಧದ, ಕೊಂಕು ಮಾತುಗಳನ್ನು ಆಡುವವರೇ ಹೆಚ್ಚು. ಇಲ್ಲ, ಇಂಥ ಹೊಸತನದ ಬಿರುಗಾಳಿಯಲ್ಲಿ ನಾನೂ ತೂರಿಕೊಂಡು ಹೋಗುತ್ತೇನೆ, ಬದಲಾವಣೆಗೆ ನಾನೂ ಕಾರಣನಾಗುತ್ತೇನೆ, ಏನೇ ಬರಲಿ ಭ್ರಷ್ಟಾಚಾರದ ವಿರುದ್ಧ ತಿರುಗಿ ನಿಲ್ಲುತ್ತೇನೆ ಎಂದು ಸೆಡ್ಡು ಹೊಡೆದು ನಿಲ್ಲುವವರು ಬೆರಣೆಣಿಕೆಯಷ್ಟು.
ತುಂಬು ಪ್ರೀತಿಯಿಂದ ನಮ್ಮ ಉಪೇಂದ್ರರಿಗೊಂದು ಪತ್ರ...
ರಿಯಲ್ ಸ್ಟಾರ್ ಉಪೇಂದ್ರ ಅವರು ರಾಜಕೀಯಕ್ಕೆ ಬರುತ್ತೇನೆ, ಹೊಸದೊಂದು ಪಕ್ಷ ಕಟ್ಟುತ್ತೇನೆ, ಭ್ರಷ್ಟ ದುಡ್ಡಿನ, ಜಾತಿಯ ಹಂಗಿಲ್ಲದೆ ಜನರ ಮತಕ್ಕೆ ಕೈಚಾಚುತ್ತೇನೆ, ಸಮಾಜದಲ್ಲಿ ಬದಲಾವಣೆಯ ಪರಿವರ್ತನೆ ತರುತ್ತೇನೆ, ಭ್ರಷ್ಟಾಚಾರ ಸಾಕಾಗಿಹೋಗಿದೆ ಏನಾದರೂ ಮಾಡಲೇಬೇಕು ಎಂದು 'ರಿಯಲ್' ಆಗಿ ಹೇಳಿದರೂ ಅದನ್ನು ಸಿನೆಮಾ ಡೈಲಾಗ್ ಎಂದೇ ತಿಳಿಯುವವರೇ ಹೆಚ್ಚು.
ಹಲ ನಟನಟಿಯರು ಧುಮುಕಿದ್ದಾರೆ
ಕರ್ನಾಟಕದಲ್ಲಿ ಹಲವಾರು ಜನಪ್ರಿಯ ಚಿತ್ರನಟನಟಿಯರು ರಾಜಕೀಯಕ್ಕೆ ಧುಮುಕಿದ್ದಾರಾದರೂ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ತಾರೆಗಳಂತೆ ಗೆದ್ದವರು, ರಾಜಕೀಯದಲ್ಲಿ ಗಟ್ಟಿಯಾಗಿ ನೆಲೆಯೂರಿ ನಿಂತವರು ಇಲ್ಲವೇ ಇಲ್ಲ ಎಂದು ಹೇಳಬೇಕು. ಇದ್ದವರೂ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಏನೇನೋ ಕಸರತ್ತು ಮಾಡುತ್ತಿರುತ್ತಾರೆ. ಮುಖ್ಯಮಂತ್ರಿ ಚಂದ್ರು ಎಲ್ಲಿದ್ದಾರೆ, ಅಂಬಿ ಏನು ಮಾಡುತ್ತಿದ್ದಾರೆ?
ಆ.18ಕ್ಕೆ ಕರ್ಕಕ್ಕೆ ರಾಹು- ಮಕರಕ್ಕೆ ಕೇತು ಪ್ರವೇಶ, ಏನು ಪ್ರಭಾವ?
ಹೆಚ್ಚಿನ ಸಿದ್ಧತೆ ಮಾಡದೆ ರಾಜಕೀಯಕ್ಕೆ ಉಪ್ಪಿ
ಕರ್ನಾಟಕದಲ್ಲಿ ರಾಜಕೀಯ ಕನಸುಹೊತ್ತು ಬಂದವರ ಪರಿಸ್ಥಿತಿ ಹೀಗಿರುವಾಗ, ಸಿಕ್ಕಾಪಟ್ಟೆ ದುಡ್ಡು ಸುರಿಯದೆ, ಯಾವ ಪಕ್ಷದೊಡನೆಯೂ ಹೊಂದಾಣಿಕೆ ಮಾಡಿಕೊಳ್ಳದೆ, ಎಲ್ಲರೂ ಗಮನಿಸುವಂಥ ಸಿದ್ದತೆಯನ್ನೂ ಮಾಡಿಕೊಳ್ಳದೆ, ಕನಿಷ್ಠಪಕ್ಷ ಯಾವುದೊಂದು ಪಕ್ಷದೊಡನೆ ಅಲ್ಪಕಾಲಕ್ಕೆ ಕೆಲಸವನ್ನೂ ಮಾಡದೆ ರಾಜಕೀಯ ಮಾಡುತ್ತೇನೆ ಎಂದು ಹೊರಟಿರುವ ಉಪೇಂದ್ರ ಗೆಲ್ಲುತ್ತಾರಾ?
ಉಪ್ಪಿ ರಾಜಕೀಯಕ್ಕೆ ಬರುವುದು ತಡವಾಯಿತಾ?
ಈ ಪ್ರಶ್ನೆಗೆ ಕಾಲವೇ ಉತ್ತರ ನೀಡಬೇಕು. ಆದರೆ, ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಇನ್ನು ಕೆಲವೇ ತಿಂಗಳು ಬಾಕಿಯಿರುವಾಗ ರಾಜಕೀಯಕ್ಕೆ ಧುಮುಕುತ್ತೇನೆ ಎಂದು ಉಪೇಂದ್ರ ಹೇಳಿರುವುದು ಸ್ವಲ್ಪ ತಡವಾಯಿತೆಂದೇ ಹೇಳಬೇಕು. ಹಿಂದೆ ಅವರು ರಾಜಕೀಯದ ಬಗ್ಗೆ ಮಾತಾಡಿಲ್ಲ ಎಂದು ಹೇಳಲಾಗುವುದಿಲ್ಲ. ಹಲವಾರು ಬಾರಿ ಅವರು ಸುಳಿವನ್ನೂ ಕೊಟ್ಟಿದ್ದರು.
ನದಿ ನೀರಿನ ಬಳಕೆಗೆ ಉಪ್ಪಿ ಉಪಯುಕ್ತ ಸಲಹೆ
ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಎರಡು ವರ್ಷಗಳ ಹಿಂದೆ ಕಾವೇರಿ ಗಲಭೆ ಭುಗಿಲೆದ್ದಿದ್ದಾಗ, ರಾಜ್ಯದ ನದಿ ನೀರನ್ನು ಹೇಗೆ ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂದು ಉಪೇಂದ್ರ ಅವರು ಸುದೀರ್ಘ ಪರಿಹಾರವನ್ನು ನೀಡಿದ್ದರು. ಅದನ್ನು ಯಾರು ಕೂಡ ಅಷ್ಟೊಂದು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ನಿಜಕ್ಕೂ ವಿಪರ್ಯಾಸದ ಸಂಗತಿ.
ನೀರು ಹಂಚಿಕೆ ವಿವಾದಕ್ಕೆ ರಿಯಲ್ ಸ್ಟಾರ್ ಉಪ್ಪಿಯಿಂದ ಪರಿಹಾರ
ಒಂದೇ ಪ್ರಯತ್ನದಲ್ಲಿ ಯಾರೂ ಗೆಲ್ಲವುದಿಲ್ಲ
ಕರ್ನಾಟಕದ ರಾಜಕೀಯದ ಬಗ್ಗೆ ಜನರಲ್ಲಿ ಏನೇ ಪರಿಕಲ್ಪನೆಗಳಿದ್ದರೂ, ಅದೆಲ್ಲಕ್ಕೂ ತದ್ವಿರುದ್ಧವಾಗಿ ಉಪೇಂದ್ರ ಮಾತಾಡಿರುವುದನ್ನು ನಾವು ಮೆಚ್ಚಿಕೊಳ್ಳಬೇಕು. ಒಂದೇ ಪ್ರಯತ್ನದಲ್ಲಿ ಯಾರೂ ಗೆಲ್ಲವುದಿಲ್ಲ. ಯಡಿಯೂರಪ್ಪನಂಥವರೇ ಕರ್ನಾಟಕ ಜನತಾ ಪಕ್ಷ ಕಟ್ಟಿ ಸೋತು ಬಿಳಿಮೀಸೆ ಮಣ್ಣು ಮಾಡಿಕೊಂಡರು. ಆದರೆ, ಅವರು ಎರಡನೇ ಪ್ರಯತ್ನ ಮಾಡಲೇ ಇಲ್ಲ.
ಕೆಜೆಪಿ ಕೊನೆ ಸಭೆಯಲ್ಲಿ ಯಡಿಯೂರಪ್ಪ ಹೇಳಿದ್ದೇನು?
ಸೋತು 'Suಮ್ಮನೆ' ಸೇರಿಕೊಳ್ಳುತ್ತಾರೋ
ಉಪೇಂದ್ರ ಅವರು ಹೊಸಪಕ್ಷ ಕಟ್ಟುತ್ತಾರೋ, ಕಟ್ಟಿ ಜನಮನೋಬಲದೊಂದಿಗೆ ಗೆಲ್ಲುತ್ತಾರೋ, ಗೆದ್ದು ಕರ್ನಾಟಕದಲ್ಲಿ ಕ್ರಾಂತಿ ಎಬ್ಬಿಸುತ್ತಾರೋ, ಇನ್ನಾವುದೋ ಪಕ್ಷದೊಡನೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ, ಅಥವಾ ಸೋತು 'Suಮ್ಮನೆ' ಸೇರಿಕೊಳ್ಳುತ್ತಾರೋ ಕಾಲವೇ ನಿರ್ಧರಿಸಲಿದೆ. ಆದರೆ, ಇಂಥದೊಂದು ಉದ್ದೇಶದಿಂದ ರಾಜಕೀಯಕ್ಕೆ ಕಾಲಿಡುತ್ತಿರುವ ಉಪೇಂದ್ರರಿಗೆ ಭವ್ಯ ಸ್ವಾಗತ ಕೋರೋಣ.
ರಜನಿ, ಕಮಲ್ ಮೀನಮೇಷ ಎಣಿಸುತ್ತಿದ್ದಾರೆ
ಏನೇ ಆಗಲಿ, ರಾಜಕೀಯದ ಬಗ್ಗೆ ಮಾತನಾಡಿ ಉಪೇಂದ್ರ ಭಾರೀ ಬಿರುಗಾಳಿ ಎಬ್ಬಿಸಿದ್ದಾರೆ. ತಮಿಳುನಾಡಿನಲ್ಲಿ ರಜನಿಕಾಂತ್ ಮತ್ತು ಕಮಲ್ ಹಾಸನ್ ರಾಜಕೀಯಕ್ಕೆ ಧುಮುಕುವ ಬಗ್ಗೆ ಇನ್ನೂ ಮೀನಮೇಷ ಎಣಿಸುತ್ತಿರುವಾಗ, ಉಪೇಂದ್ರ ನೇರವಾಗಿ ಕಣಕ್ಕಿಳಿಸಿದ್ದಾರೆ. ಇತರ ಪಕ್ಷಗಳು ಕೂಡ ಅವರು ಎಬ್ಬಿಸಿರುವ ಹವಾಕ್ಕೆ ಬೆಕ್ಕಸಬೆರಗಾಗಿ ಅವರತ್ತ ನೋಡುವಂತಾಗಿದೆ.
ಜನ ಉಪ್ಪಿಗೆ ಮತ ಹಾಕ್ತಾರಾ?
'ಸತ್ಯಮೇವ ಜಯತೆ' ಎಂದು ಘೋಷಣೆ ಇಟ್ಟುಕೊಂಡು ಉಪೇಂದ್ರ ಅವರು ಒಂದು ವೇಳೆ ಹೊಸಪಕ್ಷ ಕಟ್ಟಿದರೆ ಅದಕ್ಕೆ ಏನು ಹೆಸರಿಡ್ತಾರೆ, ಏನು ಚಿಹ್ನೆ ಇಟ್ಟುಕೊಳ್ಳುತ್ತಾರೆ, ಯಾರ್ಯಾರು ಸೇರಿಕೊಳ್ಳುತ್ತಾರೆ... ಸದ್ಯಕ್ಕೆ ಎಲ್ಲವೂ ಗುಟ್ಟುಗುಟ್ಟು. ಭ್ರಷ್ಟಾಚಾರದ ವಿರುದ್ಧ ದನಿಯೆತ್ತಿಕ್ಕಾದರೂ ಉಪ್ಪಿ ಗೆಲ್ಲಲಿ, ಭ್ರಷ್ಟ ರಾಜಕೀಯ ಪಕ್ಷಗಳು ಧೂಳೀಪಟವಾಗಲಿ, ಸತ್ಯಕ್ಕೆ ಜಯವಾಗಲಿ ಎಂದು ಆಶಿಸೋಣ. ಥಿಯೇಟರಲ್ಲಿ ಚಪ್ಪಾಳೆ ಹೊಡೆಯುವ ಜನ ಉಪ್ಪಿಗೆ ಮತ ಹಾಕ್ತಾರಾ?