ಜಾತ್ಯತೀತ ನಾಯಕ ಜಾತಿವಾರು ಸಮಾವೇಶ ಮಾಡಿದ್ದು ಯಾಕೆ ? ಕುಮಾರಸ್ವಾಮಿ
ಬೆಂಗಳೂರು, ಮೇ 24: ನಮ್ಮ ಪಕ್ಷದ ಬಗ್ಗೆ ಆರೇಳು ವರ್ಷಗಳಿಂದ ಸುಳ್ಳು ಪ್ರಚಾರ ಮಾಡುತ್ತಿರುವ ಕಾಂಗ್ರೆಸ್ ಪಕ್ಷದ ಡೋಂಗಿ ಜ್ಯಾತ್ಯತೀತ ನಾಯಕರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದರು.
ವಿಧಾನ ಪರಿಷತ್ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಟಿ.ಎ.ಶರವಣ ನಾಮಪತ್ರ ಸಲ್ಲಿಸಿದ ನಂತರ ವಿಧಾನಸೌಧದಲ್ಲಿರುವ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಜೆಡಿಎಸ್ ಪಕ್ಷವನ್ನು ಬಿಜೆಪಿ ಬಿ ಟೀಂ ಎಂದು ಬಿಂಬಿಸಲು ಪ್ರಯತ್ನ ಮಾಡಿದ್ದಾರೆ. ಅದನ್ನು ಇನ್ನೂ ಮುಂದುವರಿಸುತ್ತಿದ್ದಾರೆ. ಇತ್ತೀಚೆಗೆ ತುಮಕೂರಿನಲ್ಲೂ ಕಾಂಗ್ರೆಸ್ ನಾಯಕರು ನಮ್ಮ ಪಕ್ಷದ ಬಗ್ಗೆ ಲಘುವಾಗಿ ಮಾತಾಡಿದ್ದಾರೆ. ಅವರೇ ಜಾತಿವಾರು ಸಮಾವೇಶ ಮಾಡಿಕೊಂಡು ನಾವು ಜಾತ್ಯತೀತರು ಎಂದು ಭಂಡತನ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ಬಿಜೆಪಿ ಜತೆ ಸರಕಾರ ಮಾಡಿದಾಗಲೂ ಸಹ ಕೋಮು ಸಂಘರ್ಷಕ್ಕೆ ಅವಕಾಶ ಕೊಡಲಿಲ್ಲ. ಸಣ್ಣ ಕೋಮು ಸಂಘರ್ಷ ಘಟನೆ ನಡೆಯಲಿಲ್ಲ. ಆದರೆ ಈಗ ಏನಾಗಿದೆ? ಅನೇಕ ತಿಂಗಳಿನಿಂದ ಸಮಾಜವನ್ನು ಒಡೆಯುವ ಘಟನೆಗಳು ನಡೆಯುತ್ತಿವೆ. ಇದಕ್ಕೆ ಕಾರಣ ಯಾರು? ಇಂಥ ಸರಕಾರ ಬರಲು ಕಾರಣ ಯಾರು? ಎನ್ನುವುದು ಜನತೆಗೆ ಗೊತ್ತಿದೆ ಎಂದು ಅವರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಪಕ್ಷಕ್ಕಾಗಿ ಕಾಂಗ್ರೆಸ್ ಕೈ ಹಿಡಿದೆ: ಎಚ್ಡಿಕೆ
ಪಕ್ಷ ಉಳಿಸುವುದಕ್ಕೆ ನಾನು ಬಿಜೆಪಿ ಜತೆ ಸೇರಿ ಸರಕಾರ ಮಾಡಿದೆ. ಅದೇ ರೀತಿ ಕಾಂಗ್ರೆಸ್ ಜತೆಯಲ್ಲೂ ಸೇರಿ ಸರಕಾರ ಮಾಡಿದೆ. ಆದರೆ ಇವತ್ತಿಗೂ ಕಾಂಗ್ರೆಸ್ ನವರು ಇವತ್ತಿಗೂ ನಮ್ಮ ಪಕ್ಷವನ್ನು ಬಿಜೆಪಿ ಬಿ ಟೀಂ ಅಂತಾರೆ. ಹಿಂದೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿ ಸರಕಾರದಲ್ಲಿ ಮಂತ್ರಿ ಆಗಿದ್ದರು. ಈಗ ಕಾಂಗ್ರೆಸ್ ಪಕ್ಷವೇ ಮಹಾರಾಷ್ಟ್ರದಲ್ಲಿ ಶಿವಸೇನೆ ಜತೆ ಸರಕಾರ ಮಾಡಿದೆ. ಇದಕ್ಕೆ ಏನೆಂದು ಹೇಳಬೇಕು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಸಿದ್ದುಗೆ ಟಾಂಗ್ ಕೊಟ್ಟ ಕುಮಾರಸ್ವಾಮಿ
ನೀವು, ರಾಜಕಾರಣ ಮಾಡುತ್ತಿರುವುದು ಯಾರ ಹೆಸರಲ್ಲಿ? ಮಡಿವಾಳ, ಅಲ್ಪಸಂಖ್ಯಾತ ಸಮಾವೇಶ ಮಾಡ್ತೀರಾ? ಹಾಗಾದರೆ ಅದು ಏನು? ಐದು ವರ್ಷ ಸರ್ಕಾರ ನಡೆಸಿದಾಗ ಈ ಸಮುದಾಯದವರಿಗೆ ಏನು ಮಾಡಿದಿರಿ? ಕಾಂಗ್ರೆಸ್ ನವರು ಜ್ಯಾತ್ಯಾತೀತತೆ ಬಗ್ಗೆ ಚರ್ಚೆ ಮಾಡಲು ನೈತಿಕತೆ ಉಳಿಸಿಕೊಂಡಿಲ್ಲ ಎಂದು ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು. ನಾನು ಯಾವ ಪಕ್ಷದ ಬಿ ಟೀಂ ಅಲ್ಲ. ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮ ವಹಿಸುತ್ತೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಕಾಂಗ್ರೆಸ್ ಗೆ ಸದನದಲ್ಲಿ ಮಂಗಳಾರತಿ:
ಬಿಜೆಪಿ ಸಾಮರಸ್ಯ ಹಾಳು ಮಾಡಲು ಸಂಘಟನೆಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಆ ಸಂಘಟನೆಗಳನ್ನು ಎದುರು ಹಾಕಿಕೊಂಡು ಹೋರಾಟ ನಡೆಸುತ್ತಿರುವವರು ನಾವು. ಸದನದಲ್ಲಿ ಮತಾಂತರ ನಿಷೇಧ ಕಾಯ್ದೆ ಬಂದಾಗ ಕಾಂಗ್ರೆಸ್ ನವರು ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡರು. ಆದರೂ ಪದೆಪದೇ ನಮ್ಮ ಪಕ್ಷದ ಬಗ್ಗೆ ಇವರು ಮಾತನಾಡುತ್ತಾರೆ. ಸಿ.ಎಂ.ಇಬ್ರಾಹಿಂ ಪಕ್ಷ ಬಿಟ್ಟ ಮೇಲೆ ನಮ್ಮ ಪಕ್ಷವನ್ನೇ ಮುಗಿಸಲು ಹೊರಟಿರಿ. ಆದರೂ ನಾವು ಸಾಯಲು ಬಿಡಲಿಲ್ಲ. ಮತ್ತೆ ಇಬ್ರಾಹಿಂ ವಾಪಸ್ ಬಂದ ಮೇಲೆ ಅಲ್ಲಿ ಡೌನ್ ಫಾಲ್ ಆಗ್ತಿದೆ. ಇಬ್ರಾಹಿಂ ಅವರ ಕಾಲ್ಗುಣವೇ ಅಂತಹದ್ದು ಎಂದರು.
ನಾಲ್ಕನೇ ಅಭ್ಯರ್ಥಿಗೆ ಮೂರು ಪಕ್ಷಗಳಿಗೂ ನಂಬರ್ ಇಲ್ಲ:
ಮೂರು ಪಕ್ಷಕ್ಕೆ ಹೋಲಿಕೆ ಮಾಡಿದರೆ ನಮ್ಮ ಮತಗಳು ಹೆಚ್ಚಿವೆ. ನಾವು ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತೇವೆ. ಆ ಪಕ್ಷಗಳು ಕೂಡ ಒಂದಿಷ್ಟು ಲೆಕ್ಕಾಚಾರ ಮಾಡುತ್ತಿದ್ದು, ನಾವು ಇಲ್ಲಿಯವರೆಗೆ ಯಾವುದೇ ಚರ್ಚೆಯನ್ನು ಯಾರ ಜೊತೆಯೂ ಮಾಡಿಲ್ಲ. ನಾಲ್ಕನೇ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಮತ ಅವರಿಗೂ ಇಲ್ಲ ರಾಜ್ಯಸಭೆ ಚುನಾವಣಾ ಗೆಲುವಿನ ಲೆಕ್ಕಾಚಾರ ಪ್ರಸ್ತುತಪಡಿಸಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ, ಮುಖ್ಯ ಸಚೇತಕ ವೆಂಕಟರಾವ್ ನಾಡಗೌಡ, ಪಕ್ಷದ ಅಭ್ಯರ್ಥಿ ಟಿ. ಎ.ಶರವಣ, ಮಾಜಿ ಸಚಿವ ಸಾ.ರಾ.ಮಹೇಶ್ ಸೇರಿದಂತೆ ಪಕ್ಷದ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಜರಿದ್ದರು.