ಮೇ ತಿಂಗಳಲ್ಲಿ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಡುತ್ತೇನೆ: ಎಸ್.ಎಂ. ಕೃಷ್ಣ
ಮದ್ದೂರು (ಮಂಡ್ಯ), ಜನವರಿ 19: "ರಾಜ್ಯದಲ್ಲಿ ಯಾರು ಅಧಿಕಾರಕ್ಕೆ ಬರುತ್ತಾರೆ ಎನ್ನುವುದನ್ನು ಕಾಲವೇ ನಿರ್ಧರಿಸಲಿದೆ," ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಮಾಜಿ ವಿದೇಶಾಂಗ ಸಚಿವ, ಬಿಜೆಪಿ ಮುಖಂಡ ಎಸ್.ಎಂ.ಕೃಷ್ಣ ಹರಿಹಾಯ್ದರು.
ಇದೇ ಪ್ರಥಮ ಬಾರಿಗೆ ಪರಿವರ್ತನಾ ಯಾತ್ರೆಯಲ್ಲಿ ಪ್ರತ್ಯಕ್ಷವಾದ ಎಸ್.ಎಂ.ಕೃಷ್ಣ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು. "ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಎಲ್ಲಾ ಮುಖ್ಯಮಂತ್ರಿಗಳು ಹೇಳುತ್ತಾರೆ. ನಾನೂ ಮುಖ್ಯಮಂತ್ರಿಯಾಗಿದ್ದಾಗಲೂ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದ್ದೆ. ಆದರೆ, ಅದು ಆಯ್ತೇ?" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.
ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿಕೊಳ್ಳಿ: ಎಸ್ಎಂ ಕೃಷ್ಣ ಕರೆ
"ಇಂದಿನ ಮುಖ್ಯಮಂತ್ರಿಗಳು ಆಡಳಿತ ನಡೆಸುತ್ತಿರುವುದನ್ನು ರಾಜ್ಯದ ಜನತೆ ನೋಡಿದ್ದಾರೆ. ಎಲ್ಲಿದೆ ಆಡಳಿತ ಇಲ್ಲಿ? ಆಡಳಿತ ಎಂದು ಹುಡುಕಬೇಕಿದೆ. ಸರ್ಕಾರದ ಅಭಿವೃದ್ಧಿ ಬಗ್ಗೆ ಇನ್ನು ಮೂರು ತಿಂಗಳಲ್ಲಿ ಜನರೇ ನಿರ್ಣಯ ಕೊಡಲಿದ್ದಾರೆ," ಎಂದು ಕೃಷ್ಣ ಹೇಳಿದರು.
ದೊಡ್ಡ ಮನ್ವಂತರ ನಡೆಯಲಿದೆ
"ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ದೊಡ್ಡ ಮನ್ವಂತರ ನಡೆಯಲಿದೆ. ಜಿಲ್ಲೆಯಲ್ಲಿ ಪ್ರಬಲವಾಗಿ ಬಿಜೆಪಿ ಪಕ್ಷ ಕಟ್ಟುತ್ತೇವೆ. ಊಹಾಪೋಹ ಹರಡುವವರಿಗೆ ಒಳ್ಳೆಯ ಬುದ್ಧಿ ಕೊಡಲಿ. ಸತ್ಯಾ ಸತ್ಯತೆ ನೋಡಲಿ," ಎಂದು ಕೃಷ್ಣಾ ತಿಳಿಸಿದರು.
"ನರೇಂದ್ರ ಮೋದಿ ಅವರು ನಿಷ್ಕಂಳಕ ಆಡಳಿತ ನಡೆಸುತ್ತಿದ್ದಾರೆ. ಆ ಆಡಳಿತದ ಪ್ರತಿಬಿಂಬವನ್ನು ಮುಂದಿನ ಬಿಜೆಪಿ ಸರ್ಕಾರದಲ್ಲಿ ನೋಡಲು ಸನ್ನದ್ಧರಾಗಿದ್ದೇವೆ . ಮೂರೂವರೆ ವರ್ಷದ ಆಡಳಿತದಲ್ಲಿ ಕಳಂಕಿತ ಕೆಲಸವನ್ನು ಮೋದಿ ಮಾಡಿಲ್ಲ. ಹಿಂದಿನ ಯುಪಿಎ ಸರ್ಕಾರಕ್ಕೆ ಹೋಲಿಕೆ ಮಾಡಿದರೆ ಈ ಸರ್ಕಾರದಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆ ಎದ್ದು ಕಾಣುತ್ತದೆ. ದೇಶಕ್ಕೆ ಒಳ್ಳೆಯದು ಮಾಡಬೇಕು ಎನ್ನುವ ಬದ್ಧತೆ ಅವರಲ್ಲಿದೆ," ಎಂದು ಮೋದಿಯವರನ್ನು ಕೃಷ್ಣಾ ಕೊಂಡಾಡಿದರು.
ಬಿಜೆಪಿ ಆಡಳಿತದ ರಾಜ್ಯಗಳ ಸಂಖ್ಯೆ 22ಕ್ಕೆ ಏರಿಕೆ ಆಗಲಿದೆ: ಬಿಎಸ್ವೈ
ಕಾಂಗ್ರೆಸ್ನಲ್ಲಿ ಯಾರು ಬೇಕಾದರೂ ಅಧ್ಯಕ್ಷರಾಗಬಹುದು
"ಕಾಂಗ್ರೆಸ್ ಪಕ್ಷದಲ್ಲಿ ಯಾರು ಬೇಕಾದರೂ ಅಧ್ಯಕ್ಷರಾಗಬಹುದು. ಅಂತಹ ಪರಿಸ್ಥಿತಿ ಅಲ್ಲಿದೆ," ಎಂದು ಹೇಳುವ ಮೂಲಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಕೃಷ್ಣ ವ್ಯಂಗ್ಯವಾಡಿದ್ದಾರೆ.
"ನಾನು ವಂಶ ಪಾರಂಪರ್ಯ ರಾಜಕೀಯಕ್ಕೆ ವಿರೋಧಿ. ನಾನು ಕಾಂಗ್ರೆಸ್ ಬಿಡಲು ಅದೂ ಒಂದು ಮೂಲಭೂತ ಕಾರಣ. ಮುಂದಿನ ಚುನಾವಣೆಯಲ್ಲಿ ನನ್ನ ಮಗಳು ಶಾಂಭವಿ ಸೇರಿದಂತೆ ನಾನೂ ಸ್ಪರ್ಧೆ ಮಾಡುವುದಿಲ್ಲ," ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
"ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವುದು ನನಗೆ ಬಹಳ ಸಂತೋಷ ಆಗಿದೆ. ನಮ್ಮೂರ ಯಾತ್ರೆಯಲ್ಲಿ ಸೇರಿರುವುದು ವಿಶೇಷವಾಗಿ ಸಂತೋಷ ತಂದಿದೆ. ಹೋಗಬೇಕಾದ ಸ್ಥಳಗಳು ಸಾಕಷ್ಟಿವೆ. ಬಿಜೆಪಿಗೆ ಸೇರುವ ನನ್ನ ಅನುಯಾಯಿಗಳು ಸಾಕಷ್ಟು ಮಂದಿ ಇದ್ದಾರೆ. ನನ್ನ ನಡೆ ಬಗ್ಗೆ ಒಂದು ಕಾಲದಲ್ಲಿ ಊಹಾಪೋಹಗಳಿದ್ದವು. ಈಗ ಅವೆಲ್ಲಾ ನಿವಾರಣೆಯಾಗಿವೆ," ಎಂದು ಮಾಜಿ ಮುಖ್ಯಮಂತ್ರಿಗಳು ವಿವರಣೆ ನೀಡಿದರು.