ಒಂದೆಡೆ ಸುರ್ಜೇವಾಲ, ಇನ್ನೊಂದೆಡೆ ಡಿಕೆಶಿ: ಕಾಂಗ್ರೆಸ್ ಭವಿಷ್ಯಕ್ಕೆ ಹೊಸ 'ಭಾಷ್ಯ'!
ಕರ್ನಾಟಕ ಕಾಂಗ್ರೆಸ್ಸಿನ ಹಲವು ಮುಖಂಡರ ಮತ್ತು ಅಸಂಖ್ಯಾತ ಕಾರ್ಯಕರ್ತರ ಒಕ್ಕೂರಿಲಿನ ಒತ್ತಾಸೆಯಾಗಿದ್ದ ಕೆಪಿಸಿಸಿ ಉಸ್ತುವಾರಿ ಬದಲಾವಣೆ ಕೊನೆಗೂ ಕೈಗೂಡಿದೆ. ಇಷ್ಟು ದಿನ ಉಸ್ತುವಾರಿಯಾಗಿದ್ದ ಕೆ.ಸಿ.ವೇಣುಗೋಪಾಲ್ ಜಾಗಕ್ಕೆ ಇನ್ನೂಬ್ಬರನ್ನು ಸೋನಿಯಾ ನೇಮಿಸಿ, ಆರೋಗ್ಯ ತಪಾಸಣೆಗಾಗಿ ವಿದೇಶಕ್ಕೆ ಹೋಗಿದ್ದಾರೆ.
Recommended Video
ಈಗ ಉಸ್ತುವಾರಿಯಾಗಿರುವ ಎಐಸಿಸಿನ ವಕ್ತಾರರೂ ಆಗಿರುವ ರಣದೀಪ್ ಸುರ್ಜೇವಾಲ, ವಾರಾಂತ್ಯದಲ್ಲಿ ಬೆಂಗಳೂರಿಗೆ ಬರುವ ನಿರೀಕ್ಷೆಯಿದೆ. ಹೊಸ ಉಸ್ತುವಾರಿಯವರಿಂದ ಬೆಟ್ಟದಷ್ಟು ನಿರೀಕ್ಷೆಯನ್ನು ರಾಜ್ಯ ಮುಖಂಡರು ಹೊಂದಿದ್ದಾರೆ.
ಸೋನಿಯಾ, ರಾಹುಲ್ ವಿದೇಶಕ್ಕೆ: ಸದ್ಯಕ್ಕಂತೂ ಮಲ್ಲಿಕಾರ್ಜುನ ಖರ್ಗೆ 'ಕೈ' ಖಾಲಿ
ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರಾದ ನಂತರ, ರಾಜ್ಯ ಕಾಂಗ್ರೆಸ್ಸಿನಲ್ಲಿ ಹೊಸ ಹುರುಪು ಕಾಣಿಸಿಕೊಂಡಿದ್ದಂತೂ ಹೌದು. ಕೊರೊನಾ ನಿರ್ವಹಣೆ, ನೆರೆ ವಿಚಾರದಲ್ಲಿ ಸಮರ್ಥವಾಗಿ ವಿರೋಧ ಪಕ್ಷದ ಕೆಲಸವನ್ನು ಡಿಕೆಶಿ ಮತ್ತು ಸಿದ್ದರಾಮಯ್ಯ ನೇತೃತ್ವದಲ್ಲಿ ಮಾಡಿದ್ದರು ಎಂದೇ ಹೇಳಬಹುದಾಗಿದೆ.
ಎಐಸಿಸಿಯಲ್ಲಿ ಆಮೂಲಾಗ್ರ ಬದಲಾವಣೆಯಾಗಿರುವುದು ರಾಜ್ಯ ಕಾಂಗ್ರೆಸ್ಸಿನಲ್ಲಿ ಸಂಚಲನ ಮೂಡಿಸಿದೆ. ಹಿಂದಿನ ಉಸ್ತುವಾರಿಯು, ಒಬ್ಬರು ಪರವಾಗಿ ಕೆಲಸ ಮಾಡುತ್ತಿದ್ದರು ಎನ್ನುವುದು ಹಲವು ದಿನಗಳ, ಹಲವು ಮುಖಂಡರ ಕೂಗಾಗಿತ್ತು. ಈಗ, ಡಿಕೆಶಿ/ಸುರ್ಜೇವಾಲ ಜೋಡಿ, ಯಾವ ರೀತಿ, ಕಾಂಗ್ರೆಸ್ಸಿನಲ್ಲಿ ಬದಲಾವಣೆಯನ್ನು ತರಲಿದೆ ಎಂದು ನೋಡಬೇಕಿದೆ. ಮುಂದೆ..
ಕರ್ನಾಟಕ ಕಾಂಗ್ರೆಸ್ಗೆ ಹೊಸ ಉಸ್ತುವಾರಿ: ದಿನೇಶ್, ಕೃಷ್ಣ ಬೈರೇಗೌಡಗೆ ಬಡ್ತಿ
ಕೆಪಿಸಿಸಿ ಉಸ್ತುವಾರಿಯಗಿ ರಣದೀಪ್ ಸಿಂಗ್ ಸುರ್ಜೇವಾಲ
ಕೆಪಿಸಿಸಿ ಉಸ್ತುವಾರಿಯಗಿ ರಣದೀಪ್ ಸಿಂಗ್ ಸುರ್ಜೇವಾಲ ಒಮ್ಮೆಯೂ ಕರ್ನಾಟಕಕ್ಕೆ ಭೇಟಿ ನೀಡದಿದ್ದರೂ, ರಾಜ್ಯದ ಕೆಪಿಸಿಸಿ ಆಗುಹೋಗುಗಳ ಮೇಲೆ ಕಣ್ಣಿಟ್ಟಿದ್ದಾರೆಂದು ಹೇಳಲಾಗುತ್ತಿದೆ. ಬೆಂಗಳೂರಿಗೆ ಬಂದ ನಂತರ ಎಲ್ಲಾ ನಾಯಕರನ್ನು ಭೇಟಿಯಾಗಿ, ಮುಂದಿನ ತಿಂಗಳಿನಿಂದ ಸಂಘಟನಾ ಪ್ರಕ್ರಿಯೆ ಮತ್ತು ಬಿಜೆಪಿ ವಿರುದ್ದದ ಹೋರಾಟಕ್ಕೆ ಸ್ಪಷ್ಟ ರೂಪುರೇಷೆಯನ್ನು ಎಳೆಯಲಿದ್ದಾರೆ.
ಸ್ಥಳೀಯ ನಾಯಕರನ್ನು ಕರೆಸಿ ಮಾತನಾಡಿಸುತ್ತಿದ್ದಾರೆ
ಇತ್ತ, ಡಿ.ಕೆ.ಶಿವಕುಮಾರ್ ಕೊರೊನಾದಿಂದ ಗುಣಮುಖರಾಗಿದ್ದು ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಶಿರಾ ಉಪಚುನಾವಣೆ ಕೂಡಾ ಮುಂದೆ ಬರುತ್ತಿರುವುದರಿಂದ, ಸ್ಥಳೀಯ ನಾಯಕರನ್ನು ಕರೆಸಿ ಮಾತನಾಡಿಸುತ್ತಿದ್ದಾರೆ. ಈಗಾಗಲೇ ಹಲವು ಬಾರಿ ಡಿಕೆಶಿ ಹೇಳಿರುವ ಹಾಗೇ, ಬೇರುಮಟ್ಟದಲ್ಲಿ ಕೆಲಸ ಮಾಡುವ ಕಾರ್ಯಕರ್ತರಿಗೆ ಹೆಚ್ಚಿನ ಆದ್ಯತೆ ಸಿಗುವ ಸಾಧ್ಯತೆ ದಟ್ಟವಾಗಿದೆ.
ಲೆಟೆರ್ ಹೆಡ್ ಸಂಸ್ಕೃತಿಗೆ ತಿಲಾಂಜಲಿ
ಲೆಟೆರ್ ಹೆಡ್ ಸಂಸ್ಕೃತಿಗೆ ತಿಲಾಂಜಲಿ ನೀಡಲಾಗುವುದು ಎಂದು ಡಿಕೆಶಿ ಸ್ಪಷ್ಟ ಪಡಿಸಿದ್ದಾರೆ. ಪದಾಧಿಕಾರಿಗಳ ಪಟ್ಟಿಯಲ್ಲೂ ಮಹತ್ವದ ಬದಲಾವಣೆಯಾಗಲಿದೆ ಮತ್ತು ಈಗಾಗಲೇ ಸಿದ್ದವಾಗಿರುವ ಮೊದಲ ಹಂತದ ಪಟ್ಟಿಯೂ ಸ್ವಲ್ಪ ಕಡಿತಗೊಳ್ಳಲಿದೆ ಎಂದು ಕೆಪಿಸಿಸಿ ಮೂಲದಿಂದ ತಿಳಿದುಬಂದಿದೆ. ನಿಯತ್ತಿನ ಕಾರ್ಯಕರ್ತರಿಗೆ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಲಾಗಿದೆ.
ಒಂದೆಡೆ ಸುರ್ಜೇವಾಲ, ಇನ್ನೊಂದೆಡೆ ಡಿ.ಕೆ.ಶಿವಕುಮಾರ್
ಇನ್ನು, ಸುರ್ಜೇವಾಲ ತಮ್ಮ ವಿಶಿಷ್ಟ ಕಾರ್ಯಶೈಲಿಗೆ ಹೆಸರುವಾಸಿಯಾದವರು. ಈಗಾಗಲೇ, ಹರ್ಯಾಣ, ಕಾಂಗ್ರೆಸ್ ಘಟಕದಲ್ಲಿ ಉತ್ತಮ ಹೆಸರನ್ನು ಹೊಂದಿರುವ ಸುರ್ಜೇವಾಲ, ಕಾರ್ಯಕರ್ತರೇ ಎಲ್ಲಾ ಎಂದು ನಂಬುವವರು ಎನ್ನುವುದು ಅಲ್ಲಿನ ಮುಖಂಡರ ಮಾತು. ಹಾಗಾಗಿ, ಹುಮ್ಮಸ್ಸಿನಲ್ಲಿರುವ ಡಿಕೆಶಿ ಮತ್ತು ಸುರ್ಜೇವಾಲ, ಕರ್ನಾಟಕ ಕಾಂಗ್ರೆಸ್ಸಿನ ಮುಂದಿನ ಭವಿಷ್ಯಕ್ಕೆ ಗೆ ಹೊಸ ಭಾಷ್ಯ ಬರೆಯಲಿದ್ದಾರೆಯೇ ಎನ್ನುವುದು ಸದ್ಯದಲ್ಲೇ ಗೊತ್ತಾಗಲಿದೆ.