ಗೌಡ್ರು ಇರೋ ತನಕ ನಿಯತ್ತು ಜೆಡಿಎಸ್ ಮೇಲೆ: ಆಫರ್ ತಿರಸ್ಕರಿಸಿದ ವೈಎಸ್ ವಿ ದತ್ತ
ಬೆಂಗಳೂರು, ಸೆ 30: "ದೇವೇಗೌಡ್ರು ಇರುವ ತನಕ ಜೆಡಿಎಸ್ ಬಿಡುವ ಪ್ರಶ್ನೆಯೇ ಇಲ್ಲ"ಎಂದು ಮಾಜಿ ಶಾಸಕ, ಜೆಡಿಎಸ್ ಮುಖಂಡ ವೈ.ಎಸ್.ವಿ ದತ್ತ ಸ್ಪಷ್ಟವಾಗಿ ಹೇಳುವ ಮೂಲಕ, ಆಮ್ ಆದ್ಮಿ ಪಾರ್ಟಿ ನೀಡಿದ ಆಫರ್ ಅನ್ನು ತಿರಸ್ಕರಿಸಿದ್ದಾರೆ.
Recommended Video
ಆಮ್ ಆದ್ಮಿ ಪಕ್ಷದ ನೂತನ ಉಸ್ತುವಾರಿಯಾಗಿರುವ ರೋಮಿ ಭಾಟಿ, ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಹಾಗೂ ರಾಜ್ಯ ಕಾರ್ಯದರ್ಶಿ ಸಂಚಿತ್ ಸಹಾನಿ ಜೊತೆಗೆ, ದತ್ತ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದರು.
ರೈತ ವಿರೋಧಿ ಕಾಯ್ದೆ, ಯಡಿಯೂರಪ್ಪ ಮುಂದೆ 7 ಪ್ರಶ್ನೆಗಳು
ಸುಮಾರು ಎರಡು ತಾಸು ಸುಧೀರ್ಘ ಚರ್ಚೆ ನಡೆಸಿದ ಆಮ್ ಆದ್ಮಿ ಮುಖಂಡರು, ದತ್ತ ಅವರನ್ನು ಆಪ್ ಸೇರುವಂತೆ ಮನವಿ ಮಾಡಿದ್ದಾರೆ. ಸದ್ಯದ ರಾಜ್ಯದ ರಾಜಕೀಯ ಸನ್ನಿವೇಶ, ಮುಂದಾಗಬಹುದಾದ ಸ್ಥಿತ್ಯಂತರಗಳ ಬಗ್ಗೆ ವಿಸ್ಕೃತವಾಗಿ ಮುಖಂಡರು ಚರ್ಚಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸೂಚನೆಯ ಮೇರೆಗೆ ನಿಮ್ಮನ್ನು ಪಕ್ಷಕ್ಕೆ ಆಹ್ವಾನಿಸಲು ಬಂದಿದ್ದೇನೆ ಎಂದು ರೋಮಿ ಭಾಟಿ, ದತ್ತ ಅವರ ಬಳಿ ಹೇಳಿ, ಅವರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.
ಆದರೆ, ಆಮ್ ಆದ್ಮಿ ಪಕ್ಷದ ಆಫರ್ ಅನ್ನು ನಯವಾಗಿ ತಿರಸ್ಕರಿಸಿರುವ ದತ್ತ, ಜೆಡಿಎಸ್ ಪಕ್ಷ ಬಿಡುವ ಬಗ್ಗೆ ಯಾವುದೇ ಆಲೋಚನೆಯನ್ನು ಮಾಡಿಲ್ಲ. ನನ್ನ ಬಾಸ್ ಏನಿದ್ದರೂ ದೇವೇಗೌಡ್ರು ಎಂದು ಹೇಳಿದ್ದಾರೆ.
ಜೆಡಿಎಸ್ ನಲ್ಲಿನ ಇತ್ತೀಚಿನ ಬೆಳವಣಿಗೆಯಿಂದ ಬೇಸತ್ತು ವೈ.ಎಸ್.ವಿ ದತ್ತ ಪಕ್ಷ ತೊರೆಯಲಿದ್ದಾರೆ ಎನ್ನುವ ಗುಸುಗುಸು ಸುದ್ದಿ ಹರಿದಾಡುತ್ತಿದ್ದವು. ಇದರ ಮಧ್ಯೆ, ಆಮ್ ಆದ್ಮಿ ಪಕ್ಷದ ಮುಖಂಡರು, ದತ್ತ ಅವರನ್ನು ಭೇಟಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿತ್ತು.