ಮುಂದಿನ ಚುನಾವಣೆಗೆ ಸ್ಪರ್ಧಿಸಲ್ಲ; ಜೆಡಿಎಸ್ ಶಾಸಕನ ಘೋಷಣೆ!
ಬೆಂಗಳೂರು, ಅಕ್ಟೋಬರ್ 07; ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಬಯಸಿದ್ದಾರೆ. ಅದಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಘೋಷಣೆ ಮಾಡುತ್ತಿದ್ದಾರೆ.
ಜೆಡಿಎಸ್ ಪಕ್ಷದ ಅನೇಕ ಹಾಲಿ ಶಾಸಕರು ಪಕ್ಷ ತೊರೆಯುವ ಸೂಚನೆ ಸಿಕ್ಕಿದೆ. ಈಗ ಪಕ್ಷದ ಶಾಸಕರೊಬ್ಬರು ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಈ ಮೂಲಕ ಜೆಡಿಎಸ್ ಪಕ್ಷಕ್ಕೆ ತುಮಕೂರು ಭಾಗದಲ್ಲಿ ಹಿನ್ನಡೆ ಉಂಟಾಗಿದೆ.
ಬಿಆರ್ಎಸ್ ಜೊತೆ ಮೈತ್ರಿ; ಜೆಡಿಎಸ್ ಲೆಕ್ಕಾಚಾರವೇನು?
ತುಮಕೂರು ಜಿಲ್ಲೆಯ ಮಧುಗಿರಿ ಕ್ಷೇತ್ರದ ಜೆಡಿಎಸ್ ಶಾಸಕ ಎಂ. ವಿ. ವೀರಭದ್ರಯ್ಯ ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಈಗಾಗಲೇ ಜಿಲ್ಲೆಯ ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್. ಆರ್. ಶ್ರೀನಿವಾಸ್ ಪಕ್ಷದಿಂದ ದೂರವಾಗುತ್ತಿದ್ದಾರೆ.
Breaking; ಅನರ್ಹತೆ ದೂರು, ಜೆಡಿಎಸ್ನ ಇಬ್ಬರು ಶಾಸಕರಿಗೆ ನೋಟಿಸ್
"ರಾಜಕೀಯ ಹೊರತುಪಡಿಸಿ ನಿಮ್ಮೊಂದಿಗೆ ಇದ್ದೇ ಇರುತ್ತೇನೆ. ಈ ಕುರಿತು ಎಚ್. ಡಿ. ಕುಮಾರಸ್ವಾಮಿ ಮತ್ತು ಜೆಡಿಎಸ್ ಹಿರಿಯ ನಾಯಕರಿಗೆ ಮಾಹಿತಿ ನೀಡಿದ್ದೇನೆ" ಎಂದು ಎಂ. ವಿ. ವೀರಭದ್ರಯ್ಯ ಅಭಿಮಾನಿಗಳಿಗೆ ಮತ್ತು ಕಾರ್ಯಕರ್ತರಿಗೆ ಹೇಳಿದ್ದಾರೆ.
ಮೋಸಕ್ಕೆ ಬೇಸತ್ತು ಜೆಡಿಎಸ್ ಗೂಡು ಬಿಡುವರೇ ಗುಬ್ಬಿ ವಾಸಣ್ಣ !
ಮಧುಗಿರಿಯಲ್ಲಿ ಶಾಸಕರ ಹೇಳಿಕೆ
ಮಧುಗಿರಿ ತಾಲೂಕಿನ ಸಿದ್ದಾಪುರ ಬಳಿಯ ವೇಣುಗೋಪಾಲ ದೇವಾಲಯದ ಬಳಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಶಾಸಕ ಎಂ. ವಿ. ವೀರಭದ್ರಯ್ಯ ಮಾತನಾಡಿದರು.
"ನನಗೆ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿವೆ. ಆ ಕಾರಣದಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ಕುಟುಂಬದವರು ಒತ್ತಡ ಹೇರುತ್ತಿದ್ದಾರೆ. ಈ ಎಲ್ಲಾ ಕಾರಣದಿಂದ ಚುನಾವಣೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ" ಎಂದು ಶಾಸಕರು ಹೇಳಿದರು.
ಅಭಿಮಾನಕ್ಕೆ ಬೆಲೆ ಕೊಡುತ್ತೇನೆ
ಶಾಸಕರ ಮಾತಿನ ಬಳಿಕ ಅಭಿಮಾನಿಗಳು ಮತ್ತು ಕಾರ್ಯಕರ್ತರು ಶಾಸಕ ಎಂ. ವಿ. ವೀರಭದ್ರಯ್ಯಗೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಒತ್ತಾಯಿಸಿದರು.
ಆಗ ಮಾತನಾಡಿದ ಶಾಸಕರು, "ಕಾರ್ಯಕರ್ತರ ಪ್ರೀತಿ, ಅಭಿಮಾನಕ್ಕೆ ಬೆಲೆ ಕೊಡುತ್ತೇನೆ. ನಿಮ್ಮ ಶಕ್ತಿಯ ಬಗ್ಗೆ ನನಗೆ ಅರಿವಿದೆ. ನಿಮ್ಮ ಪ್ರೀತಿಗೆ ಚಿರ ಋಣಿಯಾಗಿದ್ದೇನೆ. ಆರೋಗ್ಯ ಸಮಸ್ಯೆ ಹೆಚ್ಚಾಗಿರುವುದರಿಂದ ಚುನಾವಣಾ ರಾಜಕಾರಣದಿಂದ ನಿವೃತ್ತಿ ಪಡೆಯಲು ಬಯಸಿದ್ದೇನೆ. ರಾಜಕೀಯ ಹೊರತುಪಡಿಸಿ ನಿಮ್ಮೊಂದಿಗೆ ಇದ್ದೇ ಇರುತ್ತೇನೆ" ಎಂದರು.
ಟೀಕೆಗಳಿಗೆ ಉತ್ತರ ಕೊಡುವುದಿಲ್ಲ
ಶಾಸಕ ಎಂ. ವಿ. ವೀರಭದ್ರಯ್ಯ ಮಾತನಾಡಿ, "ನಾನು ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟಿಸುತ್ತಿಲ್ಲ ಎಂದು ಕೆಲವರು ದೂರಿದ್ದಾರೆ. ಆದರೆ ಇದು ಸಂಪೂರ್ಣ ಸುಳ್ಳು. ಪಕ್ಷದ ಕೆಲಸದಲ್ಲಿ ತೊಡಗಿದ್ದೇನೆ. ಈ ಬಗ್ಗೆ ಯಾರಿಂದಲೂ ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ನಾನು ರಾಜಣ್ಣನವರ ಟೀಕೆಗಳಿಗೆ ಉತ್ತರ ಕೊಡುವುದಿಲ್ಲ. ರಾಜಣ್ಣ ನನ್ನ ಬಗ್ಗೆ ವೈಯಕ್ತಿಕ ಟೀಕೆ ಮಾಡಿಲ್ಲ. ಆದರೆ ಎಚ್. ಡಿ. ದೇವೇಗೌಡರ ವಿರುದ್ಧ ಮಾತನಾಡಿದಾಗ ಪ್ರತಿಭಟನೆ ನಡೆಸಿದ್ದೇನೆ" ಎಂದು ಸ್ಪಷ್ಟಪಡಿಸಿದರು.
ಐಎಎಸ್ ಅಧಿಕಾರಿಯಾಗಿದ್ದರು
ಐಎಎಸ್ ಅಧಿಕಾರಿಯಾಗಿದ್ದ ಎಂ. ವಿ. ವೀರಭದ್ರಯ್ಯ 2013ರ ವಿಧಾನಸಭೆ ಚುನಾವಣೆ ಸಮಯದಲ್ಲಿ ರಾಜೀನಾಮೆ ನೀಡಿ ಮಧುಗಿರಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ 60,659 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ಕೆ. ಎನ್. ರಾಜಣ್ಣ (75,086) ವಿರುದ್ಧ ಸೋಲು ಕಂಡಿದ್ದರು.
2018ರ ಚುನಾವಣೆಯಲ್ಲಿ ಮತ್ತೆ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಎಂ. ವಿ. ವೀರಭದ್ರಯ್ಯ 88,521 ಮತಗಳನ್ನು ಪಡೆದು ಜಯಗಳಿಸಿದರು. ಕಾಂಗ್ರೆಸ್ ಅಭ್ಯರ್ಥಿ ಕೆ. ಎನ್. ರಾಜಣ್ಣ (69,947) ಸೋಲು ಕಂಡರು.
ಜೆಡಿಎಸ್ ಅಭ್ಯರ್ಥಿ ಯಾರು?
ಎಂ. ವಿ. ವೀರಭದ್ರಯ್ಯ ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಈಗಾಗಲೇ ಎಚ್. ಡಿ. ಕುಮಾರಸ್ವಾಮಿ ಅವರಿಗೂ ಮಾಹಿತಿ ನೀಡಿದ್ದಾರೆ. ಜೆಡಿಎಸ್ ಪಕ್ಷ ಕ್ಷೇತ್ರದಿಂದ ಮುಂದಿನ ಚುನಾವಣೆಗೆ ಎಲ್. ಸಿ. ನಾಗರಾಜುರನ್ನು ಕಣಕ್ಕಿಳಿಸಲಿದೆ ಎಂಬ ಸುದ್ದಿಗಳು ಹಬ್ಬಿವೆ.
ಮತ್ತೊಂದು ಕಡೆ ಕಾಂಗ್ರೆಸ್ನ ಕೆ. ಎನ್. ರಾಜಣ್ಣ ಇದು ನನ್ನ ಕೊನೆ ಚುನಾವಣೆ, ನಾನು ಶಾಸಕನಾದರೆ ನೀವು ಶಾಸಕನಾದಂತೆ ಎಂದು ಕಾರ್ಯಕ್ರಮಗಳಲ್ಲಿ ಹೇಳುತ್ತಿದ್ದಾರೆ.