ಡ್ರಗ್ಸ್ ಮಾಫಿಯಾ ಬಗ್ಗೆ ಕಾವೇರಿದ ಚರ್ಚೆ, ಗೂಂಡಾ ಕಾಯ್ದೆಗೆ ಚಿಂತನೆ
ಬೆಂಗಳೂರು, ಜುಲೈ 13 : ಕರ್ನಾಟಕ ಬಜೆಟ್ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಡ್ರಗ್ಸ್ ಮಾಫಿಯಾ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ನಡೆಯಿತು. 'ಡ್ರಗ್ಸ್ ಮಾರಾಟ ಮಾಡುವವರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುತ್ತದೆ' ಎಂದು ಗೃಹ ಸಚಿವರು ಸದನಕ್ಕೆ ಭರವಸೆ ನೀಡಿದರು.
ಶುಕ್ರವಾರದ ವಿಧಾನಸಭೆ ಕಲಾಪ ಆರಂಭವಾದಾಗ ಬಿಜೆಪಿ ಸದಸ್ಯ ಆರ್.ಅಶೋಕ್ ಅವರು ನಿಯಮ 69ರ ಅಡಿ (ವಿವರವಾದ ಚರ್ಚೆ) ರಾಜ್ಯದಲ್ಲಿ ಮಾದಕ ದ್ರವ್ಯ ಮಾರಾಟ ಜಾಲದ ಬಗ್ಗೆ ವಿಷಯವನ್ನು ಪ್ರಸ್ತಾಪಿಸಿದರು.
ಮಾದಕ ದ್ರವ್ಯ ಮಾರಾಟ ಮಾಡಿದರೆ ಹುಷಾರ್, ಗೂಂಡಾ ಕಾಯ್ದೆ ಹಾಕ್ತಾರೆ
ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಾದಕ ದ್ರವ್ಯದ ಮಾರಾಟ ನಡೆಯುತ್ತಿದೆ. ಇದಕ್ಕೆ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಬೆಂಗಳೂರು ನಗರದಲ್ಲಿ ಡ್ರಗ್ಸ್ ಮಾಫಿಯಾ ಹೆಚ್ಚಾಗುತ್ತಿದೆ. ಕೂಡಿಗೆಹಳ್ಳಿ, ವಿಮಾನ ನಿಲ್ದಾಣದ ಸುತ್ತಮತ್ತಲಿನ ಪ್ರದೇಶದಲ್ಲಿ ಮನೆಗೆ ಮಾದಕ ವಸ್ತುಗಳನ್ನು ತಂದು ಕೊಡುತ್ತಾರೆ. ಇವುಗಳಿಗೆ ಕಡಿವಾಣ ಹಾಕಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಕರ್ನಾಟಕದಲ್ಲಿ ಮಾದಕ ದ್ರವ್ಯ ಜಾಲ ಅವ್ಯಾಹತ : ಬೆಚ್ಚಿಬೀಳುವ ಅಂಕಿಅಂಶಗಳು
ಆರ್.ಅಶೋಕ್ ಮಾತಿಗೆ ಧ್ವನಿಗೂಡಿಸಿದ ಶಾಂತಿ ನಗರ ಕ್ಷೇತ್ರದ ಶಾಸಕ ಎನ್.ಎ.ಹ್ಯಾರೀಸ್, 'ನನ್ನ ಕ್ಷೇತ್ರದಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗಿದೆ' ಎಂದು ಆತಂಕ ವ್ಯಕ್ತಪಡಿಸಿದರು.
ಪರಮೇಶ್ವರ ಉತ್ತರ : ಸದನದಲ್ಲಿ ಹಾಜರಿದ್ದ ಗೃಹ ಸಚಿವ ಮತ್ತು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಅವರು, 'ರಾಜ್ಯದಲ್ಲಿ ಮಾದಕ ದ್ರವ್ಯಗಳ ಮಾರಾಟ ತೆಡೆಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ಮಂಗಳೂರು, ಗೋವಾ, ಪಾಂಡಿಚೇರಿ ಮುಂತಾದ ಕರಾವಳಿ ಭಾಗದದಲ್ಲಿ ಹೆಚ್ಚಿನ ವ್ಯಾಪಾರ ನಡೆಯುತ್ತಿದೆ' ಎಂದು ಹೇಳಿದರು.
ಗೂಂಡಾ ಕಾಯ್ದೆ ಏನಿದು? ಈಗ ಸುದ್ದಿಯಲ್ಲೇಕಿದೆ?
'ರಾಜ್ಯವನ್ನು ಉಡ್ತಾ ಪಂಜಾಬ್ ಹಾದಿಯಲ್ಲಿ ಸಾಗಲು ಬಿಡುವುದಿಲ್ಲ. ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಮಾದಕ ದ್ರವ್ಯ ಸಾಗಾಟ ತಡೆಯಲು ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ಮಾದಕ ದ್ರವ್ಯ ಮಾರುವವರ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಲು ಚಿಂತನೆ ನಡೆಸಲಾಗಿದೆ' ಎಂದು ಪರಮೇಶ್ವರ ಉತ್ತರ ನೀಡಿದರು.